Wednesday 12 September 2018

*ಕರುನಾಡ ಹಣತೆ*

ಸದಾ ಬೆಳಗುತಿರಲಿ ಈ ಹಣತೆ
ನಮ್ಮ ನಿಮ್ಮ ಕರುನಾಡ ಹಣತೆ ||ಪ||

ಒಡೆಯುವವರ ಮೂಢ
ಮನದ ಕತ್ತಲೆಯ ತೊಡೆಯುತ
ತನು ತನಗಳಲಡಗಿಕೊಂಡ
ಬೇಧ ಭಾವ ತಡೆಯುತ
ಸನ್ಮಂಗಳ ಸಂಕೇತವೆ ಈ ಹಣತೆ
ಬಲ್ಲವರ ಜ್ಞಾನತೈಲದಾ ಹಣತೆ||ಅ.ಪ|


ರಾಶಿ ಜೋಳಕೆ ಹೊಂಬಣ್ಣವ ನೀಡುತ
ರಾಗಿ ಗದ್ದೆಯ ತೆನೆಹಾಂಗೆ ಬಳುಕುತ
ದಕ್ಷಿಣೋತ್ತರಗಳನು ಅಖಂಡ ಎನ್ನುತ
ಸದ್ವಿಚಾರ ಸೂಸುವ ಈ ಹಣತೆ
ಬಲ್ಲವರ ಜ್ಞಾನತೈಲದಾ ಹಣತೆ||೧||


ಕಾವೇರಿ ಮಡಿಲಲಿ ಮುದ್ದಾಗಿ ನಗುತ
ಕೃಷ್ಣೆಯಲೆಯಲಿ ಮುದದಿಂದ ತೇಲುತ
ಸಹ್ಯಾದ್ರಿ ರಂಗವಲ್ಲಿ ಚಿತ್ತಾರ ತೋರುತ
ಸದ್ವಿಕಾಸ ತುಂಬಿಹ ಈ ಹಣತೆ
ಬಲ್ಲವರ ಜ್ಞಾನತೈಲದಾ ಹಣತೆ||೨||


ಜಾತಿಮತಗಳನೆಲ್ಲ ಒಂದಾಗಿ ಬೆರೆಸುತ
ಸಂತರ ಶರಣರ ತತ್ವಗಳನು ಸ್ಪುರಿಸುತ
ಎಲ್ಲೆಡೆ ಕನ್ನಡದ ನುಡಿಕಿರಣ ಹರಿಸುತ
ಸಹೃದಯತೆ ಕಾಂತಿಯ ಈ ಹಣತೆ
ಬಲ್ಲವರ ಜ್ಞಾನತೈಲದಾ ಹಣತೆ||೩||
      ......................

ತ್ರಿನೇತ್ರಜ್

ಶಿವಕುಮಾರ ಹಿರೇಮಠ

No comments:

Post a Comment