Wednesday 30 January 2019

      *ದುಂಕಾರ*

ಏತಕಾದೆನೋ ಅರಿಯೆ
ನಾನಾಗಬಾರದಿತ್ತು ದುಂಬಿ
ಏಗಲಾರದ ಬದುಕಲೆಲ್ಲ
ಬರಿ ವಿಫಲತೆಗಳದೆ ದೊಂಬಿ

ಬಣ್ಣ ಬಣ್ಣದ ಹೂವುಗಳ
ಕಂಡರೇನೋ ಭಯವೆನಗೆ
ಅಂದ ಚಂದ ಕಣ್ಸೆಳೆದರೂ
ನಡುಕದೇಕೋ ಮೈಯೊಳಗೆ
ಮಧುರ ಮಧುವ ನೆನೆದಾಗ
ತನುವ ಹಸಿವು ಜೋರು
ಅಭಿಮಾನವ ಬಿಡಲೊಪ್ಪದೆ
ಕುಡಿವೆ ಒರತೆಯ ನೀರು

ಹಾರಬಲ್ಲೆನಾದರೇನು
ಎಂದೂ ಹಕ್ಕಿಯಾಗೆನೋ
ಹಾಡಬಲ್ಲೆನಾದರೇನು
ಕೋಕಿಲಕೆ ಸಮನಾಗೆನೊ
ವಿಷಕೊಂಡಿ ಅಡಿಗಿದ್ದರು
ವೃಶ್ಚಿಕವಾಗುವೆನೇನೋ
ಎಲ್ಲವಿದ್ದೂ ಗೆಲುವಿಲ್ಲದ ದುಂಬಿಯೇತಕಾದೆನೋ

    ತ್ರಿನೇತ್ರಜ

        *ಮಿಲನ*
ಹೃದಯ ಮೈತ್ರಿಯ ಸಿಹಿ ಮಿಲನ
ಸುಖ ಶೃಂಗದ ಹಿತಕರ ಮಿಥುನ

ತನ್ನ ಮಡಿಲನೆ ಮಂಚವಾಗಿಸಿ
ನಿಶೆ ಕೆಣಕಿಹಳು ಕರೆದೆಮ್ಮನು
ಸುಪ್ತ ಚೆಲುವ ನವಿರು ತಾಗುತ
ತುಂಬಿತಂತು ಮನಕೆ ಮತ್ತನ್ನು

ದೀಪವಾರೊ ಮುನ್ನ ನಯನ
ಮಧುರ ನುಡಿಗಳನಾಡಿಹವು
ಬೆಳಕ ಮುಚ್ಚುತ ಅಧರಗಳು
ಮಧುವರಸಿ ಹೊಸೆದಾಡಿಹವು

ಧುತ್ತನೆರಗೆ ರತಿಪತಿ ಜೋಡಿ
ಅಂತರಂಗದಿ ಶೃಂಗಾರ ಲೀಲೆ
ಶರಣಾಗಿಸಲೆ ಮೊದಲಿಟ್ಟಿರಲು
ಓಡಿಹುದು ನಾಚಿಕೆ,ಇಲ್ಲದೆ ನೆಲೆ.

ತನುವ ತಾಳ ಆವೇಗಕೆ ಸಿಲುಕಿ
ನಲಿದುಲಿಯಿತು ಉಸಿರಾಟ
ಗೆಲುವಿಗಾಗಿ ಕಾದು ಕಾಯ್ದು
ಸೋಲಿಗೆ ಶರಣಾಯಿತು ಕೂಟ

   ತ್ರಿನೇತ್ರಜ.
( ಶಿವಕುಮಾರ ಹಿರೇಮಠ)
           *ಪ್ರಳಯ ಮುನ್ನ*
         
ಎನೀ ವಿಪ್ಲವ ತಲ್ಲಣಿಸಿದೆ ಭಾವ
ಅರವಿಗೆಟುಕದ ಘೋರ ಸಂಭವ||
ಧರಣಿ ಎದೆಯೊಳೆನೋ ಕಂಪನ
ಪ್ರಳಯಾಗಮನ ಮುನ್ಸೂಚನ ||ಪ||

ಕತ್ತಲ ರಾತ್ರಿಯ ಬಾಗಿದ ಕತ್ತು
ಬೆವರುತ ಬೆಚ್ಚುತ ಸಾಗುತಿದೆ
ಚಂದ್ರನಿಲ್ಲದ ಕರಿಬಾನಿನಲಿ
ಧೂಮಕೇತುವು ಕಾಣಿಸಿದೆ
ಸಂಚಲನ ಮರೆತ ಸಾಗರ
ಮೌನದ ಮನೆಯ ಸೇರಿದೆ ||೧||

ಕಡಿದು ಸುಟ್ಟ ಮರದ ಆತ್ಮಗಳು
ಕಣ್ಣರಳಿಸಿ ಕೂತಿವೆ ದಿಟ್ಟಿಸಿ
ಕೊಂದ ಬೆಂದ ಮೂಕಜೀವಿಗಳ
ಪ್ರೇತಗಳು ಕಾಯ್ದಿವೆ ಕಾತರಿಸಿ
ಬಂದಿತೆ ಅಂತ್ಯವು ಮಾನವಾ?
ತಂದುಕೊಂಡೆಯಾ ಹಂಬಲಿಸಿ.||೨||
        -------------
          *ತ್ರಿನೇತ್ರಜ*
(ಶಿವಕುಮಾರ ಹಿರೇಮಠ)

             *ನಿವೇದನೆ*

ಉಸಿರಾಗು ಬಾ ನನ್ನೆದೆಗೆ
ಹಸಿರಾಗು ಬಾ ಬದುಕಿಗೆ
ನಿನ್ನ ಕಾಣದ ನನ್ನ ಕಂಗಳು
ತೊರೆದಂತೆ ನೀರನು ಮೀನಿಗೆ || ಪ ||

ನೀ ಬಂದರೆ ಈ ಜೀವಕೆ
ಅನುರಾಗ ಶುಭಯೋಗ
ನಿನಗಾಗಿ ನನ್ನದೆಲ್ಲವೂ
ಮಾಡವೆನು ಎಲ್ಲಾ ತ್ಯಾಗ
ಜೊತೆಯಾಗು ಬಾ ಚೆಲುವೆ
ಆವರಿಸು ಹೃದಯವನೀಗ||೧||

ಉಸಿರಿರದೆ ಮಿಡಿಯುವುದೇ
ಎದೆಯೊಳಗಿನ ತಕಧಿಮವು
ಪ್ರೇಮವಿರದೆ ನುಡಿಯುವುದೇ
ಹೃದಯದೊಳಗೆ ಸರಿಗಮವು
ಜೊತೆ ನೀನು ಹೆಜ್ಜೆಹಾಕದೇ
ಸಾಗದೀ ಬಾಳ  ಪಯಣವು||೨||

             ** ** ** **
     ತ್ರಿನೇತ್ರಜ್
(ಶಿವಕುಮಾರ. ಹಿರೇಮಠ)
   
          *ಬೇಡಿಕೆ*
ಹಾಡಾಗಲು ಹಂಬಲಿಸುವ
ಪದಗಳಿಗೆ ದನಿ ಬೇಕಿದೆ
ಹೊಸ ಪಲ್ಲವಿ ನವ ಭಾವಕೆ
ಸಹಯೋಗ ರಾಗ ಬೇಕಿದೆ||ಪ||

ಮನದ ನೋವು ಕಕ್ಕುವ
ಕಹಿ ಭಾವದ ಪದಗಳಿವೆ
ಕಾಲ್ತುಳಿತಕೆ ಘಾಸಿಗೊಂಡ
ರಕ್ತಸಿಕ್ತವಾದ ಪದಗಳಿವೆ
ದೌರ್ಜನ್ಯವ ಜಗದಗಲಕು
ಸಾರಿ ಸಾರಿ ಹೇಳಬೇಕಿದೆ||೧||

ಪ್ರೀತಿ ಕಾಣದೆ ಸೊರಗಿಹ
ಭಾವ ವಿಹೀನ ಪದಗಳಿವೆ
ಭೇದ ಭಾವಕೆ ನೊಂದಿಹ
ಬೆಂದಿಹೋದ ಪದಗಳಿವೆ
ಅವಿವೇಕದ ಭ್ರಾಂತಿಯನ್ನ
ಅಳಿಸಹಾಕಲೇಬೇಕಾಗಿದೆ ||೨||
..... ..... ..... .... ‌.....
ತ್ರಿನೇತ್ರಜ್.


 *ಒಲವಗೀತೆ*

ಬರೆದೆನು ನಿನಗಾಗಿ
ಈ ಒಲವ ಕವಿತೆ
ಹಾಡಲೆ ಪಂಚಮದಿ
ಓ ಪ್ರಾಣ ಕಾಂತೆ||ಪ||

ಎಂಥ ಮುದದಿಂದ
ಎಷ್ಟೋ ನಯದಿಂದ
ಪದಗಳ ನಾ ಬೆಸೆದೆ
ಕಮಲದ ದಳವಿರಿಸಿ
ಕಾಮನ ಬಿಲ್ಲ ಬಳಸಿ
ನವಿರಾಗಿ ರಚಿಸಿದೆ||೧||

ಹೃದಯ ಹೂವಿಂದ
ಭಾವ ಮಕರಂದ
ಸುಗಂಧವ ಸುರಿದೆ.
ಶಶಿಯ ನಗುವಂತ
ಜಾಜಿಯ ಹೂವಂತ
ನಿನ್ನಂದವ ತುಂಬಿದೆ||೨||

ಝರಿಯು ಗಿರಿಯಿಂದ
ತಾರೆ ಅಂಬರದಿಂದ
ಬಳಕು ಬೆಳಕನಿತ್ತಿವೆ.
ಸೆಳೆಯಿತು ನಿನ್ನಂದ
ದೇವರ ದಯೆಯಿಂದ
ಹೃದಯಗಳು ಬೆಸೆದಿವೆ||೩||

*ತ್ರಿನೇತ್ರಜ್*



*ಯೋಗಾಭ್ಯಾಸ*

(೨೧-೬-೧೮. ವಿಶ್ವ ಯೋಗ ದಿನಾಚರಣೆ ಪ್ರಯುಕ್ತ)

ಬೆಳಗೆದ್ದು ದಿನವೂ
ಸೂರ್ಯೋದಯಕೆ
ಮಾಡುವ ಬನ್ನಿ ಯೋಗ
ಗಡಿಬಿಡಿ ಬದುಕಲಿ 
ಸ್ವಾಸ್ಥ್ಯಕೆ ಮಾಡುವ 
ಅಲ್ಪ ಸಮಯದ ತ್ಯಾಗ

ಸ್ವಚ್ಛ ಬಯಲಿನಲಿ
ನಿರ್ಮಲ ಭಾವದಿ
ಜೋಡಿಸಿ ನಮ್ಮ ಕರ
ಚಿಂತೆ ಮರೆಯುವ
ಏಕಚಿತ್ತದಿ ಮಾಡುತ
ಸೂರ್ಯ ನಮಸ್ಕಾರ 

ಒತ್ತಡ ತೊರೆಯಲು
ಯೋಗ ಮಾಡುವ
ಅಂತಃಶಕ್ತಿ ವೃದ್ದಿಗೆ
ಚೈತನ್ಯಶೀಲ ಅಂಗ
ಹೊಂದುತ ಹೇಳುವ
ವಿದಾಯ ಮದ್ದಿಗೆ
--- ---- --- --- ---
ತ್ರಿನೇತ್ರಜ್

( ಶಿವಕುಮಾರ. ಹಿರೇಮಠ)


    *ಅತ್ತೆ ಅವತಾರಗಳು*
ಅಯ್ಯೊ ಅತ್ತೆ! ನನ್ನತ್ತೆ
ನಿನ್ನವತಾರಕೆ ನಾ ಬೇಸತ್ತೆ.

ಐದನೇ ವಯಸಲಿ
ಅಂದು ಕೇಳಿದ್ದೆ
ಅತ್ತೆ ಅತ್ತೆ ಆಸೆ ಆಗ್ತಿದೆ
ಲಡ್ಡು ಕೊಡು ಅತ್ತೆ.
ಕೆನ್ನೆ ಊದಿಸಿ ಗದರಿದಳತ್ತೆ
ಲಡ್ಡುನು ಇಲ್ಲ ಪಡ್ಡುನು ಇಲ್ಲ
ತಂಗಳನ್ನವನೆ ತಿಂದು
ತೊಲಗಲೋ ಕತ್ತೆ.

ಹತ್ತನೆ ವಯಸಲಿ
ಮೆತ್ತಗೆ ನಾ ಕೇಳಿದ್ದೆ
ಅತ್ತೆ ಅತ್ತೆ ಪುಸ್ತಕ ಬೇಕಿದೆ
ಹಣವನು ಕೊಡು ಅತ್ತೆ.
ಕಣ್ಣು ಕೆಕ್ಕರಿಸಿ ನುಡಿದಳತ್ತೆ
ಹಣಾನು ಇಲ್ಲ ಹೆಣಾನೂ ಇಲ್ಲ
ಇನ್ನೊಂದ್ಸಾರಿ ದುಡ್ಡು ಕೇಳಿ
ಬಂದರೆ ನೀ ಸತ್ತೆ

ಹದಿನೈದನೆ ವಯಸಲಿ
ದೈನದಿಂದ ಕೇಳಿದ್ದೆ
ಅತ್ತೆ ಅತ್ತೆ ಶಾಲೆ ದೂರ
ಸೈಕಲ್ ಕೊಡು ಅತ್ತೆ.
ಅಬ್ಬರಿಸಿ ಇಂತೆಂದಳತ್ತೆ
ಸೈಕಲ್ಲೂ ಇಲ್ಲ ಗುಂಡ್ಕಲ್ಲು ಇಲ್ಲ
ಸುಮ್ಮನೆ ನಮ್ಮನೆ ಹತ್ರಕೆ
ಸುಳಿಬೇಡವೋ ಮತ್ತೆ

ಇಪ್ಪತ್ತನೆ ವಯಸಲಿ
ಅಳಕುತ್ತ ಕೇಳಿದೆ
ಅತ್ತೆ ಅತ್ತೆ ಸುತ್ತಾಡಲೆಂದು
ಬೈಕ್‌ನು ಕೊಡಿಸತ್ತೆ
ಹುಬ್ಬೇರಿಸಿ ಹೇಳಿದಳತ್ತೆ
ಬೈಕೂ ಇಲ್ಲ ನೀ ಲೈಕೂ ಇಲ್ಲ
ಶೋಕಿಗಾಗಿ ಕಾಸುಗಳೇನು
ಮರದಿಂದುದುರುತ್ತೇ?

ಇಪ್ಪತ್ತೈದನೆ ವಯಸಲಿ
ಸುಮ್ಮನೆ ಕೇಳಿದೆ
ಅತ್ತೆ ಅತ್ತೆ ಮದುವೆಗಾಗಿ
ಹೆಣ್ಣೊಂದ ನೋಡತ್ತೆ.
ಮುಖವರಳಿಸಿಬಿಟ್ಟಳತ್ತೆ
ಹೆಣ್ಣೂ ಇದೆ ಹೊನ್ನೂ ಇದೆ
ನಿನಗಾಗಿ ಕೊಡಲೆಂದಲೆ
ನಾನು ಮಗಳ ಹೆತ್ತೆ.

ತ್ರಿನೇತ್ರಜ್.