Wednesday 24 June 2020

Poem

Enlighten O Teacher

Enlighten O Teacher with kindness
Like the sun, shine our life in
Brightness

Tie the wings of the words to cross the sky
Teach us to ask the doubt out of the shy
Make us be strong enough to fight the lie
Build us so un to death we mustn't die

Lead to the path of the fair and justice
Feed with the nectar for the feel of suffice
Inspire for the brotherhood we must entice
Stretch our hearts so that it shouldn't concise

Wash from brain as the rain all evils and hate
Plough the minds,sow the seeds grow us literate
Cut down the selfish thorns with no hesitate 
Carve the logs so nice that world go jubilate

SHIVAKUMAR HIREMATH
Asst.Teacher
G.H.S. K.R. market
 Davanagere-N
9945915780

Sunday 31 May 2020

ಕವನ ಅವಲೋಕನ



         *ಅವಲೋಕನ*
           
ಕಡಲನೆ ಸೀಳುತ ಚುಕ್ಕಿಯ ಕುಕ್ಕುತ
ಸಾಗಿದೆ ಮನುಕುಲ ದಿಗಂತದೆಡೆ
ಇಂದ್ರಪದವಿಯ ಭ್ರಾಂತಿಯ ಹೊತ್ತು
ನುಗ್ಗಿದೆ ಮಾಯಾಲೋಕದೆಡೆ
  
ಮಹಡಿ ಮಹಲುಗಳು ಮತ್ತು ರತ್ನಗಳು
ರಂಭೋರ್ವಶಿಯರ ವೈಯ್ಯಾರ
ಅಂತರ್ಜಾಲದೊಳು ಜಗವೇ ಕೈಯಲಿ
ದಿನದಿನವೂ ನವೀನ ಅವಿಷ್ಕಾರ

ಭೂಗರ್ಭದ ಗತ ಜೈವಿಕ ದ್ರವವನು
ಹೀರಿ ಉರಿಸುತಾ ಯಂತ್ರದಲಿ
ಜಲವನೆ ಧಣಿಸಿ ಮಿಂಚು ಮಾಲೆಯ
ಹೊಂಚಿ ಹರಿಸುತ ತಂತಿಯಲಿ

ಪ್ರೀತಿಯ ಮಾರುತ ಸ್ನೇಹವ ತೂರುತ 
ಮರೆತು ಮಾನವತೆಯ ಬೇರನ್ನು
ಛೇದಿಸಿ ಅಣುವನೆ ಆಸ್ಪೋಟಿಸುತಲಿ
ಬೆಂಬತ್ತಿದೆ ಮಾಯಾ ಜಿಂಕೆಯನು

ಏನಿದು ಏನಿದು ತಾಂತ್ರಿಕ ಮಾಯೆ
ವಿಷವನು ಉಕ್ಕಿಸೋ ಆವೇಗ !
ನಶಿಸುತ ಕುಸಿದಿದೆ ಹಸಿರಿನ ಲೋಕ
ಬುವಿಗೆ ಹೆಚ್ಚಿದೆಯೋ ಉದ್ವೇಗ

ಬೇಡವೋ ಬೇಡವೋ ದುಸ್ಸಾಹಸವು
ಪ್ರಗತಿಯ ನೆಪದೊಳು ಅವಸಾನ
ಇರುವುದೊಂದೆಯೆ ಉಸಿರಿನ ಲೋಕ
ಉಳಿಸಲು ಹರಿಸೋಣ ವ್ಯವಧಾನ

*ಶಿವಕುಮಾರ ಹಿರೇಮಠ*
ದಾವಣಗೆರೆ
9945915780

Wednesday 27 May 2020

*ಉಕ್ಕಿನ ಕೋಟೆ*

           *ಉಕ್ಕಿನ ಕೋಟೆ*


 *ಉಕ್ಕಿನ ಕೋಟೆ*
ಪ್ರಬಲತೆ ಸಂಕೇತವು ಅದೋ ನಿಂದಿಹುದು 
ಬಂಡೆಗಳ ಚಿತ್ತಾರದ ಉಕ್ಕಿನ ದುರ್ಗವಿದು ||೨||
ಏಳು ಸುತ್ತು ಸುತ್ತಿಹುದು ಘಟಸರ್ಪದ ತೆರದಿ
ಬರಿದೆ ಕೋಟೆಯಲ್ಲ,ಇದು ಚರಿತೆಯ ಹಾದಿ||೪||

ಮಹಾ ಭಾರತದ ಆ  ಹಿಡಿಂಬ ವನವಿದು 
ಅಷ್ಟಾದಶಾಲಯಗಳ ದೈವ ಸನ್ನಿಧಿಯಿದು||೬||
ಗಜಾಶ್ವಗಳ ಹೆಜ್ಜೆ ಗುರುತು,ಅಂದ ಚಂದವಳ್ಳಿ
ಮಿನುಗುತಿವೆ ಪಾಳೆಗಾರಿಕೆಗೆ ಬೆಳಕ ಚೆಲ್ಲಿ||೮||

ಗಾಳಿ ಸೂಸುತಲಿತ್ತು‌ ಕೆಂಡ ಸಂಪಿಗೆ ಕಂಪು  
ಸಿದ್ಧನಾಥಲಿಂಗೇಶನ ಮುಡಿಗೆರೆದು ತಂಪು||೧೦||
ಮುರುಘರಾಜೇಂದ್ರರ ಬೃಹನ್ಮಠಕೆ ಮೂಲ
ಬಿಚ್ಚುಗತ್ತಿ ಭರಮಣ್ಣನು ಕಟ್ಟಿಸಿಹನು ಕೇಳ||೧೨||

ಮಳೆ ಬಿಸಿಲಿಗೆದೆಯುಬ್ಬಿಸಿ ನಿಂತಿಹವು ಸ್ಥಂಭ
ಸುಭದ್ರವಾದ ನವಿಲು ಉಯ್ಯಾಲೆಗಳ ಕಂಬ||೧೪||
ಪಟ್ಟ ಮಹೋತ್ಸವಕೆ ಹೊನ್ನ ಸರಪಳಿಯ ಧರಿಸಿ
ಸಿದ್ದೇಶನ ತೂಗಿದ್ದವು ಮಂಟಪದಲ್ಲಿರಿಸಿ||೧೬||

ಕಲ್ಲುಗಳೆ ಅರಳಿ ಕಮಲವಾಗಿರುವ ತೆರದಲಿ
ಗಾಳಿಗೋಪುರಗಳೆರಡು ಕಣ್ಣ ಸೆಳೆವವಿಲ್ಲಿ||೧೮||
ಉಕ್ಕಿನ ಕೋಟೆಯಿದು ಗತ ವೈಭವದಾ ಭಿತ್ತಿ
ಓಬವ್ವಳ ಸಾಹಸವು ಸರ್ವರಿಗೂ ಸ್ಪೂರ್ತಿ||೨೦||

 *ಶಿವಕುಮಾರ ಹಿರೇಮಠ*
ದಾವಣಗೆರೆ

27-5-2020

Sunday 29 March 2020

ನೆನೆ ಶಿವನ

*ನೆನೆ ಶಿವನ*

ಚಿಂತೆಯಾ ಬಿಡು ಮನವೇ
ನೆನೆಯುತಿರು ಶಿವನನ್ನು
ಕಷ್ಟಗಳ ಕರಗಿಸುವ
ವಿಷಕಂಠನವನು ||ಪ||

ಹಸಿವಾದರೆ ಹೆದರದಿರು
ಹುಲ್ಲು ಮೇಯಿಸನವನು
ಇಟ್ಟಿಹನು ಅನ್ನವನು
ನಿತ್ಯ ಬಂಡಿ ನೂಕಲು ||೧||

ಬಾಯಾರೆ ಭಯಬೇಡ
ಜಿಹ್ವೆ ಒಣಗಿಸನವನು
ಬಿಟ್ಟಿಹನು ಜಡೆಯೊಳಾ
ಗಂಗೆಯನು ಹರಿಯಲು||೨||

ಸೂರಿಗಾಗಿ ಕೊರಗದಿರು
ಕೈಲಾಸವಾಸಿಯವನು
ಧರೆಯ ಹಾಸಿಗೆಮಾಡಿ
ಬಾನನೆ ಶಿವ ಹೊದ್ದಿರಲು||೩||

ಆಡಂಬರಕಾಶಿಸದಿರು
ಭಸ್ಮಧರ ಆ ಶಂಕರನು
ನಾಗಾಭರಣ ತಾನಾಗಿ
ಗಜಚರ್ಮ ಧರಿಸಿರಲು||೪||

    *ತ್ರಿನೇತ್ರಜ್*

Thursday 2 May 2019


ಹಾಸ್ಯ ಕವನ

       #ಹೀಗೊಂದುಸಾರಿ...
               
           ಕವಿ - ಶಿವಕುಮಾರ ಹಿರೇಮಠ

ಚೌತಿಯ ದಿನದಿ ಗಣಪನ ಪೂಜೆ
ಮನೆಯಲಿ ನಡೆದಿತ್ತು
ಸಿಂಗಾರ ಮಾಡಿದ ಮಾಡಲಿ ಮೂರ್ತಿ ಕೂಡಿಸಲಾಗಿತ್ತು
ವಿದ್ಯುತ್ ಲೈಟು ಪಟಾಕಿ ಘಾಟು
ಸಂಭ್ರಮ ಹೆಚ್ಚಿತ್ತು
ಗರಿಕೆ ಹೂವನು ಹಿಡಿದ ಅಣ್ಣನ
ಪೂಜೆ ಸಾಗಿತ್ತು

ಅಕ್ಕನ ಕೈಯಲಿ ಸುರುಸುರು ಬತ್ತಿ
ಫಳಫಳ ಬೆಳಗಿತ್ತು
ಕಣ್ಣರಳಿಸಿದ ತಂಗಿಯ ಮುಖದಲಿ
ಕಿಲಕಿಲ ನಗುವಿತ್ತು
ಅಡಿಗೆಮನೆಯ ಮೋದಕ ವಾಸನೆ
ನನ್ನನು ಸೆಳೆದಿತ್ತು
ನೈವೇದ್ಯಕೆಂದು ತಟ್ಟೆಯು ಬರಲು
ಆಸೆಯು ಹೆಚ್ಚಿತ್ತು

ಎಲ್ಲರ ಧ್ಯಾನವು ಭಕ್ತಿಭಾವದಲಿ
ಮುಳುಗಿ ಹೋಗಿತ್ತು
ನನ್ನಯ ಚಿತ್ತವು ಮೋದಕದತ್ತಲೆ
ಪದೆ ಪದೆ ಹರಿದಿತ್ತು
ಲಗುಬಗೆಯಿಂದ ಮೋದಕ ಸವಿಯೊ
ಆತುರ ಮೂಡಿತ್ತು
ಸಮಯವ ನೋಡಿ ತಟ್ಟೆಗೆ ನನ್ನಯ
ಕೈಯದು ಚಾಚಿತ್ತು

ಎಲ್ಲಿತ್ತೇನೋ ಇಲಿಯೊಂದಾಗಲೆ
ತಟ್ಟೆಗೆ ನುಗ್ಗಿತ್ತು
ಮೋದಕದಿಂದ ಘಮಘಮ ಗಂಧ
ಅದಕೂ ತಲುಪಿತ್ತು
ಚಿಟ್ಟನೆ ಚೀರಲು ಅಕ್ಕನ ಮೇಲೆ
ಇಲಿಯು ಎಗರಿತ್ತು
ಅವಳೆಗರಾಟಕೆ ಅಕ್ಷತೆ ಮೋದಕ
ಚೆಲ್ಲಾಪಿಲ್ಲಿಯಾಯ್ತು

ಹೆದರಿದ ತಂಗಿ ಅಣ್ಣನ ಹಿಡಿಯಲು
ಪಂಚೆಯು ಉದುರಿತ್ತು
ತೀರ್ಥವು ಹಾರಿ ಅಕ್ಕನ ಮುಖಕೆ
ಅಭಿಷೇಕ ಮಾಡಿತ್ತು
ಗಲಾಟೆಯಿಂದ ಮೂಷಿಕರಾಜ
ತಪ್ಪಿಸಿಕೊಂಡಿತ್ತು
ಅಕ್ಕ-ಅಣ್ಣನ ಸ್ಥಿತಿ ನೋಡಿ ನಮಗೆ
ಮುಸಿ ಮುಸಿ ನಗುಬಂತು
.... .... .... .... .... .... .... ....

*ತ್ರಿನೇತ್ರಜ್*

Tuesday 19 February 2019

ಹೊಂಚು

        ಹೊಂಚು
ಬಾನಾಡಿಯ ಸಾಂಗತ್ಯ ಬಯಸೆ
ಬಾನ ಮುಟ್ಟಬಹುದೇನು ಕೂರ್ಮವು
ಎತ್ತರೆತ್ತರಕೇರಬಯಸುವ ಹುಚ್ಚು!
ತಪ್ಪೀತೆ ಮರಳಿ ಮಣ್ಣಿಗಿಳಿವ ಕರ್ಮವು

ಕಾದಿವೆ ಅದೋ,ರಣಹದ್ದುಗಳು
ಹಸಿ ಮಾಂಸ ಬಿಸಿ ನೆತ್ತರಿನ ಊಟಕೆ
ಬರಿ ಮೂಳೆಗಳಾಗಿ ಬಿತ್ತು ಬದುಕು
ಬಲಿಯಾದವರದೆಷ್ಟೋ ಈ ಕೂಟಕೆ

ಮುಖದಲ್ಲೇನು ಕಂಡೀತು ಕ್ರೌರ್ಯ
ಸಣ್ಣ ಕಣ್ಣುಗಳೊಡನೊಂದು ಚುಂಚು
ಬಳ್ಳಿಯಂತೆ ಬಳಕುವ ಕೊರಳಿನಡಿ
ಒರಟಾದ ನಖಗಳು ಹಾಕಿವೆ ಹೊಂಚು

ಅಡವಿ ನ್ಯಾಯದ ಕೊಡೆಯಡಿಯಲ್ಲಿ
ಅಸಹ್ಯ ಆಸೆಗಂಟಿನಿಂತ ಖೂಳರ ದಂಡು
ಬದುಕ ದಾರಿ ಅರಸಿ ಬರುವ ಮುಗುದ
ಜೀವಗಳ ಬಲಿಗೆ ಕುಳಿತಿದೆ ಕಾದುಕೊಂಡು

  *ತ್ರಿನೇತ್ರಜ್*

Sunday 3 February 2019

*ಅಪ್ಸರೆ*

ಭಾವಗೀತೆ
-----------
 

    *ಅಪ್ಸರೆ*

ನಾ ಕಂಡ ಚೆಲುವೆಯರಲ್ಲಿ
ನೀನೋರ್ವಳೆ ಅಪ್ಸರೆ.
ಎನ್ನ ಹೃದಯ ಬೆಳಗುವುದು
ನೀ ಬಳಿ ಬಂದರೆ.
ಅಪ್ಸರೆ... ಪ್ರೇಮ ಧಾರೆ..|ಪ|

ಆ ನಿನ್ನ ಸುಂದರ
ಕಣ್ಣಿನ ಹಣತೆಯೊಳು
ಬಿಂಬತೈಲ ನಾನಾಗಿ
ನೆಲೆಸುವ ಆಸೆ,
ನೋಟದ ಕುಡಿಯಿಂದ
ಒಲವದೀಪ ಹೊತ್ತಿಸಿ
ನಿಸ್ಸಂಕೋಚದಿ
ತೋರು ನಿನ್ನಾಸೆ.
ಭಾವಶೃಂಗದ ಉತ್ತುಂಗವ
ಏರಿ ನಿಲುವ ಆಸೆ.
ಅಪ್ಸರೆ... ಪ್ರೇಮ ಧಾರೆ..|೧|

ಮನದ ಬಯಕೆ ಬೆತ್ತಲು,
ಎದೆಯಲಿ ಬರಿ ಕತ್ತಲು
ಕಾಣಲಾರದಾಗಿದೆ
ಎನೊಂದು.
ಪ್ರೇಮ ದೀಪ ಹೊತ್ತಿಸು
ಆಸೆಗಳು ಕಾಣುವವು
ಒಂದೂ ಬಿಡದೆ ಈಡೇರಿಸು
ಬಳಿ ಬಂದು
ಪ್ರೇಮಲೋಕದಲಿ ನೆಲೆಸೋಣ ಎಂದೆಂದೂ.
ಅಪ್ಸರೆ... ಪ್ರೇಮ ಧಾರೆ..|೨|
------------------...✒ *ತ್ರಿನೇತ್ರಜ.*

Wednesday 30 January 2019

      *ದುಂಕಾರ*

ಏತಕಾದೆನೋ ಅರಿಯೆ
ನಾನಾಗಬಾರದಿತ್ತು ದುಂಬಿ
ಏಗಲಾರದ ಬದುಕಲೆಲ್ಲ
ಬರಿ ವಿಫಲತೆಗಳದೆ ದೊಂಬಿ

ಬಣ್ಣ ಬಣ್ಣದ ಹೂವುಗಳ
ಕಂಡರೇನೋ ಭಯವೆನಗೆ
ಅಂದ ಚಂದ ಕಣ್ಸೆಳೆದರೂ
ನಡುಕದೇಕೋ ಮೈಯೊಳಗೆ
ಮಧುರ ಮಧುವ ನೆನೆದಾಗ
ತನುವ ಹಸಿವು ಜೋರು
ಅಭಿಮಾನವ ಬಿಡಲೊಪ್ಪದೆ
ಕುಡಿವೆ ಒರತೆಯ ನೀರು

ಹಾರಬಲ್ಲೆನಾದರೇನು
ಎಂದೂ ಹಕ್ಕಿಯಾಗೆನೋ
ಹಾಡಬಲ್ಲೆನಾದರೇನು
ಕೋಕಿಲಕೆ ಸಮನಾಗೆನೊ
ವಿಷಕೊಂಡಿ ಅಡಿಗಿದ್ದರು
ವೃಶ್ಚಿಕವಾಗುವೆನೇನೋ
ಎಲ್ಲವಿದ್ದೂ ಗೆಲುವಿಲ್ಲದ ದುಂಬಿಯೇತಕಾದೆನೋ

    ತ್ರಿನೇತ್ರಜ

        *ಮಿಲನ*
ಹೃದಯ ಮೈತ್ರಿಯ ಸಿಹಿ ಮಿಲನ
ಸುಖ ಶೃಂಗದ ಹಿತಕರ ಮಿಥುನ

ತನ್ನ ಮಡಿಲನೆ ಮಂಚವಾಗಿಸಿ
ನಿಶೆ ಕೆಣಕಿಹಳು ಕರೆದೆಮ್ಮನು
ಸುಪ್ತ ಚೆಲುವ ನವಿರು ತಾಗುತ
ತುಂಬಿತಂತು ಮನಕೆ ಮತ್ತನ್ನು

ದೀಪವಾರೊ ಮುನ್ನ ನಯನ
ಮಧುರ ನುಡಿಗಳನಾಡಿಹವು
ಬೆಳಕ ಮುಚ್ಚುತ ಅಧರಗಳು
ಮಧುವರಸಿ ಹೊಸೆದಾಡಿಹವು

ಧುತ್ತನೆರಗೆ ರತಿಪತಿ ಜೋಡಿ
ಅಂತರಂಗದಿ ಶೃಂಗಾರ ಲೀಲೆ
ಶರಣಾಗಿಸಲೆ ಮೊದಲಿಟ್ಟಿರಲು
ಓಡಿಹುದು ನಾಚಿಕೆ,ಇಲ್ಲದೆ ನೆಲೆ.

ತನುವ ತಾಳ ಆವೇಗಕೆ ಸಿಲುಕಿ
ನಲಿದುಲಿಯಿತು ಉಸಿರಾಟ
ಗೆಲುವಿಗಾಗಿ ಕಾದು ಕಾಯ್ದು
ಸೋಲಿಗೆ ಶರಣಾಯಿತು ಕೂಟ

   ತ್ರಿನೇತ್ರಜ.
( ಶಿವಕುಮಾರ ಹಿರೇಮಠ)
           *ಪ್ರಳಯ ಮುನ್ನ*
         
ಎನೀ ವಿಪ್ಲವ ತಲ್ಲಣಿಸಿದೆ ಭಾವ
ಅರವಿಗೆಟುಕದ ಘೋರ ಸಂಭವ||
ಧರಣಿ ಎದೆಯೊಳೆನೋ ಕಂಪನ
ಪ್ರಳಯಾಗಮನ ಮುನ್ಸೂಚನ ||ಪ||

ಕತ್ತಲ ರಾತ್ರಿಯ ಬಾಗಿದ ಕತ್ತು
ಬೆವರುತ ಬೆಚ್ಚುತ ಸಾಗುತಿದೆ
ಚಂದ್ರನಿಲ್ಲದ ಕರಿಬಾನಿನಲಿ
ಧೂಮಕೇತುವು ಕಾಣಿಸಿದೆ
ಸಂಚಲನ ಮರೆತ ಸಾಗರ
ಮೌನದ ಮನೆಯ ಸೇರಿದೆ ||೧||

ಕಡಿದು ಸುಟ್ಟ ಮರದ ಆತ್ಮಗಳು
ಕಣ್ಣರಳಿಸಿ ಕೂತಿವೆ ದಿಟ್ಟಿಸಿ
ಕೊಂದ ಬೆಂದ ಮೂಕಜೀವಿಗಳ
ಪ್ರೇತಗಳು ಕಾಯ್ದಿವೆ ಕಾತರಿಸಿ
ಬಂದಿತೆ ಅಂತ್ಯವು ಮಾನವಾ?
ತಂದುಕೊಂಡೆಯಾ ಹಂಬಲಿಸಿ.||೨||
        -------------
          *ತ್ರಿನೇತ್ರಜ*
(ಶಿವಕುಮಾರ ಹಿರೇಮಠ)

             *ನಿವೇದನೆ*

ಉಸಿರಾಗು ಬಾ ನನ್ನೆದೆಗೆ
ಹಸಿರಾಗು ಬಾ ಬದುಕಿಗೆ
ನಿನ್ನ ಕಾಣದ ನನ್ನ ಕಂಗಳು
ತೊರೆದಂತೆ ನೀರನು ಮೀನಿಗೆ || ಪ ||

ನೀ ಬಂದರೆ ಈ ಜೀವಕೆ
ಅನುರಾಗ ಶುಭಯೋಗ
ನಿನಗಾಗಿ ನನ್ನದೆಲ್ಲವೂ
ಮಾಡವೆನು ಎಲ್ಲಾ ತ್ಯಾಗ
ಜೊತೆಯಾಗು ಬಾ ಚೆಲುವೆ
ಆವರಿಸು ಹೃದಯವನೀಗ||೧||

ಉಸಿರಿರದೆ ಮಿಡಿಯುವುದೇ
ಎದೆಯೊಳಗಿನ ತಕಧಿಮವು
ಪ್ರೇಮವಿರದೆ ನುಡಿಯುವುದೇ
ಹೃದಯದೊಳಗೆ ಸರಿಗಮವು
ಜೊತೆ ನೀನು ಹೆಜ್ಜೆಹಾಕದೇ
ಸಾಗದೀ ಬಾಳ  ಪಯಣವು||೨||

             ** ** ** **
     ತ್ರಿನೇತ್ರಜ್
(ಶಿವಕುಮಾರ. ಹಿರೇಮಠ)
   
          *ಬೇಡಿಕೆ*
ಹಾಡಾಗಲು ಹಂಬಲಿಸುವ
ಪದಗಳಿಗೆ ದನಿ ಬೇಕಿದೆ
ಹೊಸ ಪಲ್ಲವಿ ನವ ಭಾವಕೆ
ಸಹಯೋಗ ರಾಗ ಬೇಕಿದೆ||ಪ||

ಮನದ ನೋವು ಕಕ್ಕುವ
ಕಹಿ ಭಾವದ ಪದಗಳಿವೆ
ಕಾಲ್ತುಳಿತಕೆ ಘಾಸಿಗೊಂಡ
ರಕ್ತಸಿಕ್ತವಾದ ಪದಗಳಿವೆ
ದೌರ್ಜನ್ಯವ ಜಗದಗಲಕು
ಸಾರಿ ಸಾರಿ ಹೇಳಬೇಕಿದೆ||೧||

ಪ್ರೀತಿ ಕಾಣದೆ ಸೊರಗಿಹ
ಭಾವ ವಿಹೀನ ಪದಗಳಿವೆ
ಭೇದ ಭಾವಕೆ ನೊಂದಿಹ
ಬೆಂದಿಹೋದ ಪದಗಳಿವೆ
ಅವಿವೇಕದ ಭ್ರಾಂತಿಯನ್ನ
ಅಳಿಸಹಾಕಲೇಬೇಕಾಗಿದೆ ||೨||
..... ..... ..... .... ‌.....
ತ್ರಿನೇತ್ರಜ್.


 *ಒಲವಗೀತೆ*

ಬರೆದೆನು ನಿನಗಾಗಿ
ಈ ಒಲವ ಕವಿತೆ
ಹಾಡಲೆ ಪಂಚಮದಿ
ಓ ಪ್ರಾಣ ಕಾಂತೆ||ಪ||

ಎಂಥ ಮುದದಿಂದ
ಎಷ್ಟೋ ನಯದಿಂದ
ಪದಗಳ ನಾ ಬೆಸೆದೆ
ಕಮಲದ ದಳವಿರಿಸಿ
ಕಾಮನ ಬಿಲ್ಲ ಬಳಸಿ
ನವಿರಾಗಿ ರಚಿಸಿದೆ||೧||

ಹೃದಯ ಹೂವಿಂದ
ಭಾವ ಮಕರಂದ
ಸುಗಂಧವ ಸುರಿದೆ.
ಶಶಿಯ ನಗುವಂತ
ಜಾಜಿಯ ಹೂವಂತ
ನಿನ್ನಂದವ ತುಂಬಿದೆ||೨||

ಝರಿಯು ಗಿರಿಯಿಂದ
ತಾರೆ ಅಂಬರದಿಂದ
ಬಳಕು ಬೆಳಕನಿತ್ತಿವೆ.
ಸೆಳೆಯಿತು ನಿನ್ನಂದ
ದೇವರ ದಯೆಯಿಂದ
ಹೃದಯಗಳು ಬೆಸೆದಿವೆ||೩||

*ತ್ರಿನೇತ್ರಜ್*



*ಯೋಗಾಭ್ಯಾಸ*

(೨೧-೬-೧೮. ವಿಶ್ವ ಯೋಗ ದಿನಾಚರಣೆ ಪ್ರಯುಕ್ತ)

ಬೆಳಗೆದ್ದು ದಿನವೂ
ಸೂರ್ಯೋದಯಕೆ
ಮಾಡುವ ಬನ್ನಿ ಯೋಗ
ಗಡಿಬಿಡಿ ಬದುಕಲಿ 
ಸ್ವಾಸ್ಥ್ಯಕೆ ಮಾಡುವ 
ಅಲ್ಪ ಸಮಯದ ತ್ಯಾಗ

ಸ್ವಚ್ಛ ಬಯಲಿನಲಿ
ನಿರ್ಮಲ ಭಾವದಿ
ಜೋಡಿಸಿ ನಮ್ಮ ಕರ
ಚಿಂತೆ ಮರೆಯುವ
ಏಕಚಿತ್ತದಿ ಮಾಡುತ
ಸೂರ್ಯ ನಮಸ್ಕಾರ 

ಒತ್ತಡ ತೊರೆಯಲು
ಯೋಗ ಮಾಡುವ
ಅಂತಃಶಕ್ತಿ ವೃದ್ದಿಗೆ
ಚೈತನ್ಯಶೀಲ ಅಂಗ
ಹೊಂದುತ ಹೇಳುವ
ವಿದಾಯ ಮದ್ದಿಗೆ
--- ---- --- --- ---
ತ್ರಿನೇತ್ರಜ್

( ಶಿವಕುಮಾರ. ಹಿರೇಮಠ)


    *ಅತ್ತೆ ಅವತಾರಗಳು*
ಅಯ್ಯೊ ಅತ್ತೆ! ನನ್ನತ್ತೆ
ನಿನ್ನವತಾರಕೆ ನಾ ಬೇಸತ್ತೆ.

ಐದನೇ ವಯಸಲಿ
ಅಂದು ಕೇಳಿದ್ದೆ
ಅತ್ತೆ ಅತ್ತೆ ಆಸೆ ಆಗ್ತಿದೆ
ಲಡ್ಡು ಕೊಡು ಅತ್ತೆ.
ಕೆನ್ನೆ ಊದಿಸಿ ಗದರಿದಳತ್ತೆ
ಲಡ್ಡುನು ಇಲ್ಲ ಪಡ್ಡುನು ಇಲ್ಲ
ತಂಗಳನ್ನವನೆ ತಿಂದು
ತೊಲಗಲೋ ಕತ್ತೆ.

ಹತ್ತನೆ ವಯಸಲಿ
ಮೆತ್ತಗೆ ನಾ ಕೇಳಿದ್ದೆ
ಅತ್ತೆ ಅತ್ತೆ ಪುಸ್ತಕ ಬೇಕಿದೆ
ಹಣವನು ಕೊಡು ಅತ್ತೆ.
ಕಣ್ಣು ಕೆಕ್ಕರಿಸಿ ನುಡಿದಳತ್ತೆ
ಹಣಾನು ಇಲ್ಲ ಹೆಣಾನೂ ಇಲ್ಲ
ಇನ್ನೊಂದ್ಸಾರಿ ದುಡ್ಡು ಕೇಳಿ
ಬಂದರೆ ನೀ ಸತ್ತೆ

ಹದಿನೈದನೆ ವಯಸಲಿ
ದೈನದಿಂದ ಕೇಳಿದ್ದೆ
ಅತ್ತೆ ಅತ್ತೆ ಶಾಲೆ ದೂರ
ಸೈಕಲ್ ಕೊಡು ಅತ್ತೆ.
ಅಬ್ಬರಿಸಿ ಇಂತೆಂದಳತ್ತೆ
ಸೈಕಲ್ಲೂ ಇಲ್ಲ ಗುಂಡ್ಕಲ್ಲು ಇಲ್ಲ
ಸುಮ್ಮನೆ ನಮ್ಮನೆ ಹತ್ರಕೆ
ಸುಳಿಬೇಡವೋ ಮತ್ತೆ

ಇಪ್ಪತ್ತನೆ ವಯಸಲಿ
ಅಳಕುತ್ತ ಕೇಳಿದೆ
ಅತ್ತೆ ಅತ್ತೆ ಸುತ್ತಾಡಲೆಂದು
ಬೈಕ್‌ನು ಕೊಡಿಸತ್ತೆ
ಹುಬ್ಬೇರಿಸಿ ಹೇಳಿದಳತ್ತೆ
ಬೈಕೂ ಇಲ್ಲ ನೀ ಲೈಕೂ ಇಲ್ಲ
ಶೋಕಿಗಾಗಿ ಕಾಸುಗಳೇನು
ಮರದಿಂದುದುರುತ್ತೇ?

ಇಪ್ಪತ್ತೈದನೆ ವಯಸಲಿ
ಸುಮ್ಮನೆ ಕೇಳಿದೆ
ಅತ್ತೆ ಅತ್ತೆ ಮದುವೆಗಾಗಿ
ಹೆಣ್ಣೊಂದ ನೋಡತ್ತೆ.
ಮುಖವರಳಿಸಿಬಿಟ್ಟಳತ್ತೆ
ಹೆಣ್ಣೂ ಇದೆ ಹೊನ್ನೂ ಇದೆ
ನಿನಗಾಗಿ ಕೊಡಲೆಂದಲೆ
ನಾನು ಮಗಳ ಹೆತ್ತೆ.

ತ್ರಿನೇತ್ರಜ್.

Sunday 2 December 2018

ಉತ್ಪಲ ಮಾಲಾ ವೃತ್ತದಲ್ಲಿ *ಕಿಚ್ಚನು ನುಗ್ಗಿದಾರ್ಭಟಕೆ*


  ಉತ್ಪಲ ಮಾಲಾ ವೃತ್ತದಲ್ಲಿ


*ಕಿಚ್ಚನು ನುಗ್ಗಿದಾರ್ಭಟಕೆ*

ಸಾಗರನುಬ್ಬರಬ್ಬರಕೆ ಸೊಕ್ಕುತ ತೀರವ ಮುಟ್ಟಿ ಮುತ್ತನಿ|
ಕ್ಕೋಘಿನಲೆತ್ತರೆತ್ತರಕೆ ಹಾಲ್ದೆರೆ ನುಗ್ಗುವ ಆಟವಿಟ್ಟಿರಲ್|
ಮೆಚ್ಚದೆ ಕೋಪದೊಳ್ ಉರಿವ ಕೇಸರಿಯಾ ತೆರದಿಂ ಸಮುದ್ರ ದೊಳ್|
ಕಿಚ್ಚನು ನುಗ್ಗಿದಾರ್ಭಟಕೆ ಹಕ್ಕಿಗಳೆಲ್ಲವು ಬಚ್ಚಿಕೊಂಡವೋ|

ಮೋಡಗಳಾಚೆಯಿಂ ಹೊಳೆವ ಚುಕ್ಕಿಗಳುಕ್ಕುತ ನಕ್ಕು ನಿಂದಿರಲ್|
ಮೂಡಿದ ಚಂದ್ರ ತಾಂ ರಜತ ಚಂದ್ರಿಕೆ ಚೆಲ್ವನು ಚೆಲ್ಲಿ ಸರ್ವ ಭೂ|
ಮಂಡಲದೆಲ್ಲೆಡೆ ಭ್ರಮಿತ ಜೀವಿಗಳೆಲ್ಲಕು ಧೈರ್ಯವಿತ್ತು ಪಾ|
ಲ್ಹೊಂಡದ ತಂಪಕಲ್ಪಿಸುತ ಸಾಗರನಾಸೆಗೆ ಇಂಬನಿತ್ತನೋ|

ಎಂತಹ ಚಂದವೀ ನಭವು ಎಂದೆನುತಾ ನಿಶೆ ರಂಗು ಬಿತ್ತಿದಂ|
ಕಂಡು ನರ ತ್ರಿನೇತ್ರಜನು ಅಚ್ಚರಿಗೊಳ್ಳುತ ಲಾಸ್ಯವಾಡುತಾ|
ಉಕ್ಕಿಹ ಭಾವದಾ ಎಳೆಗೆ ಕನ್ನಡ ಭಾಷೆಯ ಶಬ್ದವಿಕ್ಕುತಾ|
ಅಕ್ಕರೆ ತುಂಬಿ ತಾ ಬರೆದ ಪದ್ಯವ ಉತ್ಪಲ ಮಾಲೆ ವೃತ್ತದೊಳ್|

    *ತ್ರಿನೇತ್ರಜ್*

Saturday 24 November 2018

ರಗಳೆ


            *ಜ್ಞಾನೋದಯ*
                    ರಗಳೆ
     
ಆದಿಯೋಳ್ ನಮಿಸುತಾ ಗಣೇಶಂಗೆ ಮನದಲಿ
ಮೊದಲಕ್ಷರ ಕಲಿಸಿಹ ಅಮ್ಮಗೂ ನಮಿಸುತಲಿ
ರಚಿಸಿದೆನಿದ ನಿಮಗಾಗಿ ರಗಳೆಯ ನಿಯಮದೊಳ್
ವಾಚಿಸಿ ಖುಷಿ ಪಡಲೆಂದ್ಸವಿಗನ್ನಡ ನುಡಿಯೋಳ್ ||೪||

ಅರಸುತಲಿ ತಾ ಜ್ಞಾನವನು ಬೋಧಿಸಲು ಜಗಕೆ
ಅರಮನೆಯ ತೊರೆದು ಬಂದನೀತ ಜಗದ ಹಿತಕೆ
ಹಲವರೆಡೆಗೆ ಅಲೆದಲೆದಾ ಗೌತಮನು ಕೊನೆಗೆ
ಬಳಲಿ ಬಂದು ಕುಳಿತನು ಬೋಧಿ ವೃಕ್ಷದ ಕೆಳಗೆ ||೮||

ಒಡನೆ ಮೂಡಿ ನಿಂದಿಹ ತನ್ನ ರೂಪವ ಕಂಡು
ನೋಡುತಲೆವೆಯಿಕ್ಕದೆ ಬಹಳೆ ಅಚ್ಚರಿಗೊಂಡು
ಕೇಳಿದನು ತವಕದಲಿ ನೀನ್ ಅದಾರೆಂದು ಪೇಳ್
ಉಲಿಯಿತದು ಅರಿವು ನಾ ನಿನ್ನಂತರಾತ್ಮದೋಳ್ ||೧೨||

ಅರಿಯದೆಯೆ ನಿನ್ನ ನೀಂ ಹೊರಟೆಯೋ ಹುಡುಕಿ ಬರಿ
ಗುರಿಯನೊಂದೆ ಅರಸುತ ನೊಂದೆ ನೀನು ಈ ಪರಿ
ನಿನ್ನೊಳವನರಿ ಅರಿವ ಮುನ್ನವೀ ಲೋಕವನು
ನಿನ್ನರಿವು ನಾ ತೋರ್ವೆ ಬೆಳಕಿನೆಡೆ ದಾರಿಯನು ||೧೬||

ಅರಿವಾಯಿತಾಗವಗೆ ತಾನೇನನೋ ಅರಸಿ
ತಿರುತಿರುಗಿ ಪಡೆಯಲೇ ಬೇಕೆಂದು ಬಯಬಯಸಿ
ಗಸಣಿಗೊಳಗಾದೆ ಅಃ ನನ್ನೆ ನಾನು ಅರಿಯದೆ
ಆಸೆಯನು ತೊರೆಯದೆ ಸರಿ  ಮಾರ್ಗವನು ತಿಳಿಯದೆ  ||೧೮||

ಎಂದು ನಕ್ಕನು ಮನದಿ ಗೌತಮನು ಹರ್ಷದೋಳ್
ಮಿಂದು ತೇಲಿತಣಿದನು ತಿಳಿವಿನ ತಿಳಿಗೊಳದೋಳ್
ನೀಡಿದನು ಬೆಳಕ ಅಷ್ಟಾಂಗ ಬೋಧಿಸುತ
ಜಗದ ದೃಷ್ಟಿಯೊಳು ಗೌತಮನಾದ ತಥಾಗತ. ||೨೦||
     
         **************

 *ತ್ರಿನೇತ್ರಜ್*




Thursday 22 November 2018

ಕಂದ ಪದ್ಯ

   
    ∆ ಕಂದ ಪದ್ಯ ∆

       *ಭಿಕ್ಷಾಟನೆ*

ಭಿಕ್ಷುಕ ನಾ ಭಗವಂತನ|
ಸಾಕ್ಷಿಯಲಿ ಕರವನು ಮುಗಿದು ಕೇಳೆ ಕೊಡುವಿರಾ||
ಅಕ್ಷಿಯೊಳು ನಲುಮೆ ತುಳುಕಿಸಿ|
ಭಿಕ್ಷೆಯ ರೂಪದಲಿ ಮಾನವತೆ ನೀಡುವಿರಾ||೧

ಒಲವಿನ ಜಲವ ಹುಡುಕುತಲಿ|
ಅಲೆದೆನ್ನೆಡೆ ಕೊಂಚ ಬೊಗಸೆಯೊಳು ಹುಯ್ಯುವಿರಾ||
ಜೋಳಿಗೆಗೆ ಒಂದಿನಿತು ಹಿಡಿ|
ಕಲಿತ ಜ್ಞಾನವೆನಗೂ ಸುರಿದು ಹರಸುವಿರಾ||೨

ಲಕ್ಷ ವರಹವನು ಒಪ್ಪೆನು|
ವಕ್ಷದೊಳಗಣ ಸಿಹಿ ಮಮತೆಯನು ಹನಿಸುವಿರಾ||
ರಕ್ಷಕ ನೇಮಿಪ ನೀತಿಯ|
ಕಕ್ಷೆಯೊಳು ಗಳಿಸಿದ ಸುಕೃತವ ತುಸು  ಎರೆವಿರಾ||೩

ಬಲ್ಲಿದರಾದೊಡೆ ಭಿಕ್ಷುಕ|
ನಲ್ಲಿ ಅರಿವಿನ ನುಡಿದಾನವ ಕರುಣಿಸುವಿರಾ||
ಇಲ್ಲದಿರೆ ಜೊತೆಗೆ ಬನ್ನಿರಿ|
ಎಲ್ಲಿದೊರೆವುದೆಂದು ಕಾಣ್ವ ಜೊತೆಯಾಗುವಿರಾ||೪


    *ತ್ರಿನೇತ್ರಜ್*









Sunday 18 November 2018


    *ಹೊಯ್ದಾಟ*
ಏನೋ ತಳಮಳ
ಮನವೆಲ್ಲ ವಿಲ ವಿಲ
ಗೆಳೆಯ ನಿನ್ನ ಇಲವ ಬಲ್ಲೆ
ಹೇಗೆ ಹೇಳಲಿ ಕಳವಳ

ನನ್ನ ಜೀವ ಜನುಮದಾತ
ಬಾಲ್ಯದ ಒಡನಾಡಿ
ಬಯಸಿದ್ದ ಪಡೆದೆನು ನಾ
ಅಪ್ಪನ ಕಾಡಿ ಬೇಡಿ
ಹೇಗಿಂದು ಕಾಡಲಿ
ಏನೆಂದು ಬೇಡಲಿ
ಹೃದಯವು ಬಯಸಿಹ ಜೋಡಿ

ಕನಸು ನೂರು ಅರಳುತಿವೆ
ನಿನ್ನೆಡೆ ಒಲವ ತೋರಿ
ವಾತ್ಸಲ್ಯವು ತಡೆಯೊಡ್ಡುತಿದೆ
ಮೂಡಿಹ ಆಸೆ ಮೀರಿ
ಅರಿತಿರುವೆ ನಿನ್ನನು
ನೀಡಿರುವೆ ಮನವನು
ಹೇಗೆ ಹೇಳಲೆನ್ನ ಬಯಕೆಯನು

*ತ್ರಿನೇತ್ರಜ್*
೧೮-೧೧-೧೮. ೯-೦೦pm


Wednesday 17 October 2018

*ಸ್ವಾಮಿ ಅಯ್ಯಪ್ಪ*
   
ಶಬರಿಮಲೆಯ ಸ್ವಾಮಿಯೆ
ಶರಣಂ ಅಯ್ಯಪ್ಪ
ಹೆಣ್ಣ ಕಂಡರೆ ನಿನಗಾಗದಂತೆ
ಇದು ನಿಜವೇನಪ್ಪ?

ಹೆಣ್ಣಿಂದ ಕಳೆಗುಂದದೆಂದೂ
ನಿನ್ನ ಅಮರ ಶಕ್ತಿ
ಹೆಣ್ಣು ತಾನೇ ಸೃಷ್ಟಿಮೂಲ
ಅವಳೇ ಆದಿಶಕ್ತಿ

ತಾಯಿಯಿಲ್ಲದೆಯೆ ಹುಟ್ಟಿಹರೆ
ನಿನ್ನ ಪ್ರೀಯ ಭಕ್ತರು?
ಜಗದ ಧರ್ಮ ಪ್ರಕೃತಿ ಪುರುಷ
ಎಂಬುದೇಕೆ ಮರೆತರು!

ನ್ಯಾಯ ಧರ್ಮ ಮೀರಿನಿಂತ
ಜನ ತಗೆದಿಹರು ತಂಟೆ
ನಿನ್ನ ನಂಬಿ ಬರುವ ಭಕ್ತರಲ್ಲಿ
ಲಿಂಗಭೇದ ಉಂಟೆ!

ನಿನ್ನ ಭಕ್ತರಿಗೆ ಒಂದು ಸ್ವಲ್ಪ
ಸಹನೆ ಬುದ್ಧಿ ಕೊಡಪ್ಪ
ಸ್ತ್ರೀಯರಿಗೂ ದರ್ಶನ ನೀಡಿ
ಪುಣ್ಯವ ಕಟ್ಟಿಕೊಳ್ಳಪ್ಪ

ಸ್ವಾಮಿ ಶರಣಂ ಅಯ್ಯಪ್ಪ ಶರಣಂ


*ತ್ರಿನೇತ್ರಜ್*

Friday 28 September 2018


         *ಕೊಡಗು ನೆನೆದ ಮನ*
         

ಕೋಗಿಲೆ ಹಾರಿ ಹಾಡ ಬಂದಿಹುದು
ಕೊಂಚ ಕೂಡ ಉತ್ಸಾಹ ಕಾಣಲಿಲ್ಲ
ಕೊರಳನಾದಕೆ ಕರೆವ ಆ ಮರವೆಲ್ಲಿ?
ಕೊಡಗಿನ ಆ ಕಳೆ ಈಗ ಉಳಿದಿಲ್ಲ

ವರ್ಷನೇನೊ ಬಂದ ಸಡಗರದಿ
ವನಸಿರಿಗೊ, ಹೊಸಕಳೆ ಕಟ್ಟಲಿಲ್ಲ
ವರುಣನಿಗದೇನೋ ಅತ್ಯುತ್ಸಾಹ
ವಸುಂಧರೆಗೆ ಸಂಯಮ ಬತ್ತಿತಲ್ಲ!

ಸ್ವರ್ಗವೆ ಧರೆಗಿಳಿದಂತಿದ್ದ ಮಲೆಗಳು
ಸ್ವರೂಪವ ಬದಲಾಯಿಸಿವೆಯಲ್ಲ!
ಸ್ವತಂತ್ರ ಬಯಸಿ ಗುಡ್ಡ ಜರುಗಿದವೋ
ಸ್ವಯಂಕೃತ ಕರ್ಮ ಶಾಪವಾಯ್ತಲ್ಲ

ಕಾಫಿ ತೋಟಗಳು ತರೆದಂತಾಗಿವೆ
ಕಾಜಾಣಕೆ ತಂಬೆಲರು ಹಿಡಿಸುತ್ತಿಲ್ಲ
ಕಾಲನಾಟಕೆ ಕಮರಿವೆ ಬದುಕುಗಳು
ಕಾದ ವೀರರೆದೆ ನೋವ ತಾಳಲಿಲ್ಲ

       *ತ್ರಿನೇತ್ರಜ್*

   ಶಿವಕುಮಾರ ಹಿರೇಮಠ.
ಆಗಸ್ಟ್‌. 2018.

Wednesday 12 September 2018

*ಕರುನಾಡ ಹಣತೆ*

ಸದಾ ಬೆಳಗುತಿರಲಿ ಈ ಹಣತೆ
ನಮ್ಮ ನಿಮ್ಮ ಕರುನಾಡ ಹಣತೆ ||ಪ||

ಒಡೆಯುವವರ ಮೂಢ
ಮನದ ಕತ್ತಲೆಯ ತೊಡೆಯುತ
ತನು ತನಗಳಲಡಗಿಕೊಂಡ
ಬೇಧ ಭಾವ ತಡೆಯುತ
ಸನ್ಮಂಗಳ ಸಂಕೇತವೆ ಈ ಹಣತೆ
ಬಲ್ಲವರ ಜ್ಞಾನತೈಲದಾ ಹಣತೆ||ಅ.ಪ|


ರಾಶಿ ಜೋಳಕೆ ಹೊಂಬಣ್ಣವ ನೀಡುತ
ರಾಗಿ ಗದ್ದೆಯ ತೆನೆಹಾಂಗೆ ಬಳುಕುತ
ದಕ್ಷಿಣೋತ್ತರಗಳನು ಅಖಂಡ ಎನ್ನುತ
ಸದ್ವಿಚಾರ ಸೂಸುವ ಈ ಹಣತೆ
ಬಲ್ಲವರ ಜ್ಞಾನತೈಲದಾ ಹಣತೆ||೧||


ಕಾವೇರಿ ಮಡಿಲಲಿ ಮುದ್ದಾಗಿ ನಗುತ
ಕೃಷ್ಣೆಯಲೆಯಲಿ ಮುದದಿಂದ ತೇಲುತ
ಸಹ್ಯಾದ್ರಿ ರಂಗವಲ್ಲಿ ಚಿತ್ತಾರ ತೋರುತ
ಸದ್ವಿಕಾಸ ತುಂಬಿಹ ಈ ಹಣತೆ
ಬಲ್ಲವರ ಜ್ಞಾನತೈಲದಾ ಹಣತೆ||೨||


ಜಾತಿಮತಗಳನೆಲ್ಲ ಒಂದಾಗಿ ಬೆರೆಸುತ
ಸಂತರ ಶರಣರ ತತ್ವಗಳನು ಸ್ಪುರಿಸುತ
ಎಲ್ಲೆಡೆ ಕನ್ನಡದ ನುಡಿಕಿರಣ ಹರಿಸುತ
ಸಹೃದಯತೆ ಕಾಂತಿಯ ಈ ಹಣತೆ
ಬಲ್ಲವರ ಜ್ಞಾನತೈಲದಾ ಹಣತೆ||೩||
      ......................

ತ್ರಿನೇತ್ರಜ್

ಶಿವಕುಮಾರ ಹಿರೇಮಠ

Wednesday 4 July 2018



    *ವಿಷಾದ*
ಕುತೂಹಲ ಭರಿತ
ನಿನ್ನ ನೋಟದ ಹಿಂದೆ
ಸಾವಿರಾಸಕ್ತಿ ಮಗುವೆ
ಜಗವರಿವ ಧಾವಂತ
ನಿನಗಾಗಿದೆ ತಾನೆ?
ಜಗವಿದು ಬಲು ಚಂದ
ಭಗವಂತನಾನಂದ
ಹುಳುಕು ಹೆಚ್ಚಿದ್ದು
ನನ್ನಂತಹ ಹುಚ್ಚು
ಸ್ವಾರ್ಥಿಗಳಿಂದೇನೆ.

ಮಂದಹಾಸ ಸೂಸುವ
ಹಾಲ್ಗೆನ್ನೆಗಳ ಹಿಂದೆ
ಬೊಚ್ಚುಬಾಯಿಯಲಿ
ಸಹಜಾತಿಸಹಜವಾದ
ಮುಗ್ದನಗುವರಳಿದೆ.
ಬಾಡದಿರಲಿ ನಗೆಹೂವು
ಇದುವೆ ನನ್ನಾಸೆ ಕಂದ
ಜಗದೊಳ ನಗುವಲಿ
ಮೋಸ,ಕಪಟ,ಅಪಹಾಸ್ಯ
ಕೃತಕತೆಯು ತುಂಬಿದೆ
_______      _______
       ತ್ರಿನೇತ್ರಜ್.


*ಆಪತ್ತಿನ ಕರೆ ಗಂಟೆ*
(ವಿಶ್ವ ಜನಸಂಖ್ಯೆ
 ದಿನದ ಪ್ರಯುಕ್ತ)
----------------

ಕಳೆದ ಶತಮಾನದ
ಎಂಬತ್ತೇಳರಲ್ಲಿ
ಪಂಚ ಬಿಲಿಯನ್
ತಲುಪಿತು ವಿಶ್ವದ
ಮನುಕುಲ ಸಂಖ್ಯೆ

ಏಳುವರೆ ಬಿಲಿಯನ್
ದಾಟಿಹೆವು ವೇಗದಲಿ
ವಿಶ್ವ ವಿನಾಶ ತಡೆಗೆ
ಎಚ್ಚರದಿ ಹಾಕಬೇಕಿದೆ
ಜನಸಂಖ್ಯೆಗೆ ಅಂಕೆ

ಚೀನಾ ರಾಷ್ಟ್ರವು
ಗಜಗಾತ್ರ ದೇಶ
ಪ್ರಥಮವಾಗಿದೆ
ಜನಸಂಖ್ಯೆಗಿದು
ಮುಂಚೂಣಿಯಲ್ಲಿ

ನಮ್ಮ ಭಾರತವೇನು
ಹಿಂದೆಬಿದ್ದಿಲ್ಲ ಬಿಡಿ
ಕ್ಷೇತ್ರ ಕಮ್ಮಿಯಾದ್ರೂ
ಜನಸಂಖ್ಯೆಯಲ್ಲಿದೆ
ದ್ವಿತೀಯ ಸ್ಥಾನದಲ್ಲಿ

ಕಾಡು ಕಿರಿದಾಗಿ
ಒಡಲು ಬರಿದಾಗಿ
ಮಾಲಿನ್ಯ ಹೆಚ್ಚಾಗಿ
ಬಿಸಿಯಿಂದ ಬೆಚ್ಚಿಹಳು
ನೊಂದ  ವಸುಂಧರೆ

ಯೊಚಿಸದಿದ್ದರೆ
ಮುಂದೆ ಧರೆಗೆ
ಗಂಡಾತರ ತಪ್ಪದು
ಬೇಡವೇ ಬೇಡಿದಕೆ
ಎಳ್ಳಷ್ಟೂ ಶಂಖೆ
____________
  # ಶಿವಕುಮಾರ. ಹಿರೇಮಠ.
 (ತ್ರಿನೇತ್ರಜ್)

Sunday 1 July 2018



    
*ಅತ್ತೆ ಅವತಾರಗಳು*
ಅಯ್ಯೊ ಅತ್ತೆ! ನನ್ನತ್ತೆ
ನಿನ್ನವತಾರಕೆ ನಾ ಬೇಸತ್ತೆ.

ಐದನೇ ವಯಸಲಿ
ಅಂದು ಕೇಳಿದ್ದೆ
ಅತ್ತೆ ಅತ್ತೆ ಆಸೆ ಆಗ್ತಿದೆ
ಲಡ್ಡು ಕೊಡು ಅತ್ತೆ.
ಕೆನ್ನೆ ಊದಿಸಿ ಗದರಿದಳತ್ತೆ
ಲಡ್ಡುನು ಇಲ್ಲ ಪಡ್ಡುನು ಇಲ್ಲ
ತಂಗಳನ್ನವನೆ ತಿಂದು
ತೊಲಗಲೋ ಕತ್ತೆ.

ಹತ್ತನೆ ವಯಸಲಿ
ಮೆತ್ತಗೆ ನಾ ಕೇಳಿದ್ದೆ
ಅತ್ತೆ ಅತ್ತೆ ಪುಸ್ತಕ ಬೇಕಿದೆ
ಹಣವನು ಕೊಡು ಅತ್ತೆ.
ಕಣ್ಣು ಕೆಕ್ಕರಿಸಿ ನುಡಿದಳತ್ತೆ
ಹಣಾನು ಇಲ್ಲ ಹೆಣಾನೂ ಇಲ್ಲ
ಇನ್ನೊಂದ್ಸಾರಿ ದುಡ್ಡು ಕೇಳಿ
ಬಂದರೆ ನೀ ಸತ್ತೆ

ಹದಿನೈದನೆ ವಯಸಲಿ
ದೈನದಿಂದ ಕೇಳಿದ್ದೆ
ಅತ್ತೆ ಅತ್ತೆ ಶಾಲೆ ದೂರ
ಸೈಕಲ್ ಕೊಡು ಅತ್ತೆ.
ಅಬ್ಬರಿಸಿ ಇಂತೆಂದಳತ್ತೆ
ಸೈಕಲ್ಲೂ ಇಲ್ಲ ಗುಂಡ್ಕಲ್ಲು ಇಲ್ಲ
ಸುಮ್ಮನೆ ನಮ್ಮನೆ ಹತ್ರಕೆ
ಸುಳಿಬೇಡವೋ ಮತ್ತೆ

ಇಪ್ಪತ್ತನೆ ವಯಸಲಿ
ಅಳಕುತ್ತ ಕೇಳಿದೆ
ಅತ್ತೆ ಅತ್ತೆ ಸುತ್ತಾಡಲೆಂದು
ಬೈಕ್‌ನು ಕೊಡಿಸತ್ತೆ
ಹುಬ್ಬೇರಿಸಿ ಹೇಳಿದಳತ್ತೆ
ಬೈಕೂ ಇಲ್ಲ ನೀ ಲೈಕೂ ಇಲ್ಲ
ಶೋಕಿಗಾಗಿ ಕಾಸುಗಳೇನು
ಮರದಿಂದುದುರುತ್ತೇ?

ಇಪ್ಪತ್ತೈದನೆ ವಯಸಲಿ
ಸುಮ್ಮನೆ ಕೇಳಿದೆ
ಅತ್ತೆ ಅತ್ತೆ ಮದುವೆಗಾಗಿ
ಹೆಣ್ಣೊಂದ ನೋಡತ್ತೆ.
ಮುಖವರಳಿಸಿಬಿಟ್ಟಳತ್ತೆ
ಹೆಣ್ಣೂ ಇದೆ ಹೊನ್ನೂ ಇದೆ
ನಿನಗಾಗಿ ಕೊಡಲೆಂದಲೆ
ನಾನು ಮಗಳ ಹೆತ್ತೆ.

ತ್ರಿನೇತ್ರಜ್.

Wednesday 27 June 2018

           *ಪ್ರಳಯ ಮುನ್ನ*
         
ಎನೀ ವಿಪ್ಲವ ತಲ್ಲಣಿಸಿದೆ ಭಾವ
ಅರವಿಗೆಟುಕದ ಘೋರ ಸಂಭವ||
ಧರಣಿ ಎದೆಯೊಳೆನೋ ಕಂಪನ
ಪ್ರಳಯಾಗಮನ ಮುನ್ಸೂಚನ ||ಪ||

ಕತ್ತಲ ರಾತ್ರಿಯ ಬಾಗಿದ ಕತ್ತು
ಬೆವರುತ ಬೆಚ್ಚುತ ಸಾಗುತಿದೆ
ಚಂದ್ರನಿಲ್ಲದ ಕರಿಬಾನಿನಲಿ
ಧೂಮಕೇತುವು ಕಾಣಿಸಿದೆ
ಸಂಚಲನ ಮರೆತ ಸಾಗರ
ಮೌನದ ಮನೆಯ ಸೇರಿದೆ ||೧||

ಕಡಿದು ಸುಟ್ಟ ಮರದ ಆತ್ಮಗಳು
ಕಣ್ಣರಳಿಸಿ ಕೂತಿವೆ ದಿಟ್ಟಿಸಿ
ಕೊಂದ ಬೆಂದ ಮೂಕಜೀವಿಗಳ
ಪ್ರೇತಗಳು ಕಾಯ್ದಿವೆ ಕಾತರಿಸಿ
ಬಂದಿತೆ ಅಂತ್ಯವು ಮಾನವಾ?
ತಂದುಕೊಂಡೆಯಾ ಹಂಬಲಿಸಿ.||೨||
        -------------
          *ತ್ರಿನೇತ್ರಜ*
(ಶಿವಕುಮಾರ ಹಿರೇಮಠ)



*ಯೋಗಾಭ್ಯಾಸ*

(೨೧-೬-೧೮. ವಿಶ್ವ ಯೋಗ ದಿನಾಚರಣೆ ಪ್ರಯುಕ್ತ)

ಬೆಳಗೆದ್ದು ದಿನವೂ
ಸೂರ್ಯೋದಯಕೆ
ಮಾಡುವ ಬನ್ನಿ ಯೋಗ
ಗಡಿಬಿಡಿ ಬದುಕಲಿ
ಸ್ವಾಸ್ಥ್ಯಕೆ ಮಾಡುವ
ಅಲ್ಪ ಸಮಯದ ತ್ಯಾಗ

ಸ್ವಚ್ಛ ಬಯಲಿನಲಿ
ನಿರ್ಮಲ ಭಾವದಿ
ಜೋಡಿಸಿ ನಮ್ಮ ಕರ
ಚಿಂತೆ ಮರೆಯುವ
ಏಕಚಿತ್ತದಿ ಮಾಡುತ
ಸೂರ್ಯ ನಮಸ್ಕಾರ

ಒತ್ತಡ ತೊರೆಯಲು
ಯೋಗ ಮಾಡುವ
ಅಂತಃಶಕ್ತಿ ವೃದ್ದಿಗೆ
ಚೈತನ್ಯಶೀಲ ಅಂಗ
ಹೊಂದುತ ಹೇಳುವ
ವಿದಾಯ ಮದ್ದಿಗೆ
--- ---- --- --- ---
ತ್ರಿನೇತ್ರಜ್
( ಶಿವಕುಮಾರ. ಹಿರೇಮಠ)

     ಕನ್ನಡ ಜ್ಯೋತಿ

ಕನ್ನಡದ ಜ್ಯೋತಿಯ ಬೆಳಗಿಸುವ
ಕರುನಾಡು ಹಣತೆ
ಅಭಿಮಾನ ತೈಲ
ಸಾಹಿತ್ಯ ಬತ್ತಿಯ ಅದ್ದಿ

ಗಡಿ ಗುಡಿಗಳಲ್ಲಿ ನೆರೆಭಾಷೆ ನುಗ್ಗಿ
ಕನ್ನಡಕೆ ಕಂಟಕವ ತರಲು ಬಿಡೆವು
ನಮ್ಮ ನೆಲ ನಮ್ಮ ಜಲ ಆಪೋಷಿಸೊ
ಪರಭಾಷೆ ಕಳೆಯನ್ನು ಕಿತ್ತೊಗೆವೆವು
ಭುವನೇಶ್ವರಿಯ ಭವ್ಯದೇಗುಲವ
ಜನ ಮನಗಳಲ್ಲಿ ನಿರ್ಮಿಸುವೆವು
ನುಡಿಯನ್ನು ಬಳಸಿ ಬರಹವನು ಕಲಿಸಿ
ಮಗು ಮಗುವಿಗಕ್ಷರವ ತುಂಬುವೆವು
ಗಣಿಪುರಗಳಾದರೂ ಬೆಳಗಾವೇ ಆದರೂ
ಪರಭಾಷೆಯಾ ಗರವ ಓಡಿಸುತ
ಕನ್ನಡದ ಜ್ಯೋತಿಯ ಬೆಳಗಿಸುವ

ನಾಡ ಕೈಂಕರ್ಯ ಆದ್ಯತೆಯ ಕಾರ್ಯ
ಕಂಕಣವ ಕಟ್ಟಿ ನಾವ್ ಮುನ್ನಡೆವೆವು
ಮಲೆನಾಡೆ ಇರಲಿ ತುಳುನಾಡೆ ಇರಲಿ
ಬಯಲು ಸೀಮೆ ಇರಲಿ ಕೂಡಿರುವೆವು
ತಾಯ ಕಿರೀಟದಿ ಜ್ಞಾನ ಪೀಠದೆಂಟು
ರತ್ನಗಳು ಹೊಳೆದು ಮಿಂಚುತಿಹವು
ಕಬ್ಬಿಗರ ಒಡಲಿದು ಕಾವ್ಯದ ಕಡಲಿದು
ನುಡಿಯೆ ಐಸಿರಿಎಮಗೆ ಅನವರತ
ಸಾಹಿತ್ಯ ಕೃಷಿಗೈದು ಅಕ್ಷರಗಳ ಬಿತ್ತುತ
ಜಗದೊಳಗೆ ಕನ್ನಡವ ಬೆಳಗುವ
ಕನ್ನಡದ ಜ್ಯೋತಿಯ ಬೆಳಗಿಸುವ

ಎದೆಯೊಳಗೆ ಉಲಿವ ಹೃದಯಕೂಡ
ಕನ್ನಡದ ನುಡಿಯನ್ನೆ ಜಪಿಸುತಿಹುದು
ಧಮನಿ ಧಮನಿಗಳಲ್ಲಿ ಹರಿವ ರಕ್ತ
ನಲ್ನುಡಿಯ ಮಿಂಚನ್ನ ಹರಿಸಿರುವುದು
ಜನ್ನುಡಿ ಕನ್ನಡ ರನ್ನುಡಿ ಕನ್ನಡ
ಪಂಪನುಡಿದಾಡಿದ ಪೊನ್ನುಡಿಯಿದು
ಕುಮಾರವ್ಯಾಸ, ಕವಿ ಕನಕದಾಸ
ಬಸವಣ್ಣ ಮಹಾದೇವೀ ವಚನವಿದು
ಹಿಂದೆಯೂ ಕನ್ನಡ ಇಂದಿಗೂ ಜನ್ನಡ
ಎಂದೆಂದೂ ಕನ್ನಡವ ಮೆರೆಸುವ
ಕನ್ನಡದ ಜ್ಯೋತಿಯ ಬೆಳಗಿಸುವ


ತ್ರಿನೇತ್ರಜ

(ಶಿವಕುಮಾರ ಹಿರೇಮಠ)
      *ದುಂಕಾರ*

ಏತಕಾದೆನೋ ಅರಿಯೆ
ನಾನಾಗಬಾರದಿತ್ತು ದುಂಬಿ
ಏಗಲಾರದ ಬದುಕಲೆಲ್ಲ
ಬರಿ ವಿಫಲತೆಗಳದೆ ದೊಂಬಿ

ಬಣ್ಣ ಬಣ್ಣದ ಹೂವುಗಳ
ಕಂಡರೇನೋ ಭಯವೆನಗೆ
ಅಂದ ಚಂದ ಕಣ್ಸೆಳೆದರೂ
ನಡುಕದೇಕೋ ಮೈಯೊಳಗೆ
ಮಧುರ ಮಧುವ ನೆನೆದಾಗ
ತನುವ ಹಸಿವು ಜೋರು
ಅಭಿಮಾನವ ಬಿಡಲೊಪ್ಪದೆ
ಕುಡಿವೆ ಒರತೆಯ ನೀರು

ಹಾರಬಲ್ಲೆನಾದರೇನು
ಎಂದೂ ಹಕ್ಕಿಯಾಗೆನೋ
ಹಾಡಬಲ್ಲೆನಾದರೇನು
ಕೋಕಿಲಕೆ ಸಮನಾಗೆನೊ
ವಿಷಕೊಂಡಿ ಅಡಿಗಿದ್ದರು
ವೃಶ್ಚಿಕವಾಗುವೆನೇನೋ
ಎಲ್ಲವಿದ್ದೂ ಗೆಲುವಿಲ್ಲದ ದುಂಬಿಯೇತಕಾದೆನೋ

    ತ್ರಿನೇತ್ರಜ

      ಎಚ್ಚೆತ್ತುಕೋ ಮತದಾರ

ಒಬ್ಬಟ್ಟಿನಲ್ಲಿಹುದು ಸಿಹಿಯು ಕಾಣ
ಒಗ್ಗಟ್ಟಿನಲ್ಲೇ ಇಹುದು ಬಲವೊ ಜಾಣ
ಒಂದಾಗದಿರೆ ದೇಶದೇಳ್ಗೆಯಾದೀತೆ?
ಮತ ಮಾರಿದರೆ ಮಾನ ಉಳಿದೀತೆ?

ಮತಕೊಳ್ಳುವವನೇನು ತನ್ನ
ಮನೆಯಲ್ಲಿ ನೋಟುಗಳ
ಜನಹಿತಕೆ ಅಚ್ಚೊತ್ತಿ ತರುವನೇ?
ಹಣವನ್ನು ಚೆಲ್ಲುತ್ತ ತಾ ಗೆದ್ದು
ಸೌಧವನು ಸೇರಿ ಹೂಡಿದುದಕ್ಕೆ
ಚಕ್ರಬಡ್ಡಿಕೂಡಿ ಮರಳಿ ಪಡೆಯನೇ?

ಜಾತಿ ಕಿತ್ತೊಗೆವ ನೀತಿಯ ಹೇಳುತ್ತ
ಜಾತಿ ನೋಡಿ ನೀ ಮತವ ಹಾಕಿದರೆ ಜಾತಿಗಳು ದೇಶದಿಂದಳಿವವೇನೋ?
ಜಾತಿ ಹೆಂಡವ ಕುಡಿದ ಕೋತಿ ತಾ
ಜನರನ್ನು ಜಾತಿ ಹೆಸರಲೆ ಒಡೆದು
ಬಳಗದ ಮರದಿ ಜೋತಾಡದೇನೊ?

ಸರಕಾರವೆಂಬುದು ದರ್ಪವ ತೋರಿ
ನಮ್ಮನ್ನಾಳುವ ದರ್ಬಾರಿಕೆಯಲ್ಲ,
ಮತದಾರರ ಹಿತ ಸೇವೆಗೆಂತಾಗಲಿ.
ಸೇವೆಗೈಯದೆ ತಾನು ಸ್ವಾರ್ಥವನೆ
ಸಾಧಿಸುವ ನಾಯಕನಿಗೆ ಮತದಾರ
ಕೊರಳ್ಪಟ್ಟಿ ಹಿಡಿದು ಕೇಳುವಂತಾಗಲಿ.

      ತ್ರಿನೇತ್ರಜ

( ಶಿವಕುಮಾರ ಹಿರೇಮಠ)
     



ಹನಿಗವನ

  ೧. ಒಂಟೆಯಾನ

ಹಸಿರಿಲ್ಲದ ಕಾಡಿನಲಿ
ಮರಳಿನ ಒಣಸಾಗರ
ಬೆವರೂ ಆವಿಯಾಯ್ತು
ಇಲ್ಲಿ ನೀರು ಬಂಗಾರ
ಉರಿರಾಜನಿಗಂಜದಿರು
ಜೊತೆಗಿರೆ ಒಂಟೆಗಳಾಧಾರ
ಮರೀಚಿಕೆಯ ಮಡಿಲಲ್ಲಿ
ಸಾಗಲಿ ನಿಲ್ಲದೆ ಸಂಚಾರ

೨.*ಕಾರಣರಾರು?*

ಹೊಲ ಬಂಜರಾದರೂ ಬಾಡಿಗೆಗೆ
ಕೇಳುವವರ ಸಂಖ್ಯೆ ಕಮ್ಮಿಯಿಲ್ಲ.
ಬೀದಿ ಕೊನೆಯ ಮನೆ ಆಕೆಯದು
ಬಾಗಿಲ ತಟ್ಟಿದರೆ ತೆರೆಯದಿರೊಲ್ಲ.

ಹನಿಗವನ ಸ್ಪರ್ಧೆ
   ೩-- *ಶರಣಾಗತ*

ಮನಕ್ಕಿತ್ತು ಗೆಲ್ಲುವ ಆತುರ,
ಆಳಬಹುದಾಗಿತ್ತು ಗತ್ತಿಂದ
ಮಣಿಸಿ ಮೂರೂ ಪುರ.
ಸುಳಿದಾಡಿ ನನ್ನ ಹತ್ತಿರ,
ದಿಕ್ಕೆಡಿಸಿ ಸಮ್ಮೋಹನದಿ
ಬಸವಳಿಸಿತೆ ನಿನ್ನ ನೂಪುರ.

############

೪-- *ಸಾಕಾರ*

ಕಿಲಕಿಲ ಕಲರವ
ಮಧುರ ಇಂಚರ
ಮೊಹಕ ನಗುವೇ
ಮನೆಗೆ ಮಂದಾರ

ಚಮ್ ಛನನವೆನ್ನೊ
ಕಾಲ್ಗಳ ಈ ನೂಪುರ
ಕಂದ ನಿನ್ನಾಟವೆಲ್ಲ
ಮುಕುಂದನ ಸಾಕಾರ.

      ಹಾಸ್ಯ ಹನಿ
     ೫ . *ಜೋಕೆ*
ಎದುರು ಮನೆ ಬಾಡಿಗೆಗೆ
ಹೊಸಬರು ಬಂದಿಹರು
ನೋಡೆ! ಎಷ್ಟು ಚಂದ ಆಕೆ.
ಅಡುಗೆ ಮನೆಯಿಂದಲೆ
ನನ್ನ ಮಡದಿ ನುಡಿದಳು
ಪೋಲಿಸ್ ಇನ್ಸ್ಪೆಕ್ಟರಂತೆ
ನಿಮ್ಮ ಮೂಳೆ ಜೋಕೆ!!

   ೬.  *ಬುದ್ದಿ ಬಂದಾಗ*
ಆಕೆ ಅಂದ್ರೆ ಪ್ರಾಣ
ಎನ್ನುತ್ತಿದ್ದ ಜಾಣ
ಮದುವೆಯಾದಮೇಲೆ
ಈಗ ಹೇಳುತಿಹನು
ತಾ ಎತ್ತು ಅವಳು ಕೋಣ.

*ತ್ರಿನೇತ್ರಜ*

############





ನ್ಯಾನೋಕಥೆ

   ತೇಲುವವರು

         ಇಬ್ಬರು ಕುಡುಕರು ಕುಡಿದ ಮತ್ತಲ್ಲಿ ಪಾಳುಬಿದ್ದ ದೇವಸ್ಥಾನದ ಕಟ್ಟೆ ಮೇಲೆ ಮಲ್ಗಿದ್ರು. ಅಲ್ಗೆ ತೂರಾಡ್ತಾ ಬಂದ ಮತ್ತೊಬ್ಬ ಕುಡುಕ ಹೇಳ್ದ "ನಗರದಾಗೆ ಕರ್ಫ್ಯೂ ಐತಂತೆ,ಇಬ್ಬರಿಗಿಂತ ಹೆಚ್ಚು ಜನ ಇದ್ದರೆ ಕಂಡಲ್ಲಿ ಗುಂಡು ಇಕ್ಕತಾರಂತೆ ಪೋಲಿಸ್ನೋರು. ನನ್ಜೊತೆ ಇಬ್ಬರೂ ಬರ್ತಿರೇನ್ರೋ"?
ಆಗ ಒಬ್ಬ ಎದ್ಬಿಟ್ಟು, " ಈ ಪೋಲಿಸ್ ನೋರ್ನ ನಂಬಕ್ಕಾಗಲ್ಲ ಬಿಡ್ಲಾ,ಗುಂಡು ಇಕ್ಕಿದ್ರೆ ಆಯ್ತಾ?ತುಂಡು ಯಾವನ್ನಿಕ್ತಾನೆ?ನಿಮ್ ತಾತಾನಾ?" ಅಂದು ಮಲ್ಕೊಂಬಿಟ್ಟ!

ತ್ರಿನೇತ್ರಜ

ಶಾಯರಿಗಳು

ಶಾಯರಿ--೧

ಗಡಿಯಾಚೆ ದೇಶದವಳಾದರೇನು? ನಾನು ನಿನ್ನನ್ನೇ ಪ್ರೀತಿಸುವೆ
ದೇಶದ್ವೇಶಗಳ ಮೀರಿ ಪ್ರೀತಿ ನಗಲಾರದೆ?
ಮಸಣದ ತುಂಬ ಗೋರಿಗಳಿದ್ದರೇನು?
ಭಯಭೀತಿ ಬಿಟ್ಟು ಹೂವು ಅರಳಲಾರದೆ?

ಶಾಯರಿ--೨

ಪ್ರಾಣದ ಮೇಲೆ ಸಾವಿಗೆ ಹಕ್ಕಿದೆ,
ನಿನಗೆ ಕೊಟ್ಟ ಮನಸಿನ ಮೇಲಲ್ಲ.
ಮಸಣವು ದೇಹವನ್ನು ಬಂಧಿಸಿಡಬಹುದು,
ನಮ್ಮಿಬ್ಬರ ಅಮರ ಪ್ರೇಮವನ್ನಲ್ಲ.

ತ್ರಿನೇತ್ರಜ

*ಒಲವಗೀತೆ*

 _*ಭಾವಗೀತೆ*_


 *ಒಲವಗೀತೆ*

ಬರೆದೆನು ನಿನಗಾಗಿ
ಈ ಒಲವ ಕವಿತೆ
ಹಾಡಲೆ ಪಂಚಮದಿ
ಓ ಪ್ರಾಣ ಕಾಂತೆ||ಪ||

ಎಂಥ ಮುದದಿಂದ
ಎಷ್ಟೋ ನಯದಿಂದ
ಪದಗಳ ನಾ ಬೆಸೆದೆ
ಕಮಲದ ದಳವಿರಿಸಿ
ಮಳೆ ಬಿಲ್ಲನು ಬಳಸಿ
ನವಿರಾಗಿ ರಚಿಸಿದೆ||೧||

ಹೃದಯ ಹೂವಿಂದ
ಭಾವ ಮಕರಂದ
ಸುಗಂಧವ ಸುರಿದೆ.
ಶಶಿಯ ನಗುವಂತ
ಜಾಜಿಯ ಹೂವಂತ
ನಿನ್ನಂದವ ತುಂಬಿದೆ||೨||

ಝರಿಯು ಗಿರಿಯಿಂದ
ತಾರೆ ಅಂಬರದಿಂದ
ಬಳಕು ಬೆಳಕನಿತ್ತಿವೆ.
ಸೆಳೆಯಿತು ನಿನ್ನಂದ
ದೇವರ ದಯೆಯಿಂದ
ಹೃದಯಗಳು ಬೆಸೆದಿವೆ||೩||

*ತ್ರಿನೇತ್ರಜ್*


 ಶಿವಕುಮಾರ. ಹಿರೇಮಠ
[02/03, 12:01 p.m.] Shivakumara Hiremath: skeditorblr@gmail.com

Thursday 3 May 2018

ಎಚ್ಚೆತ್ತುಕೋ ಮತದಾರ ( ಕವನ)

 
         
       ಎಚ್ಚೆತ್ತುಕೋ ಮತದಾರ
 
ಒಬ್ಬಟ್ಟಿನಲ್ಲಿಹುದು ಸಿಹಿಯು ಕಾಣ
ಒಗ್ಗಟ್ಟಿನಲ್ಲೇ ಇಹುದು ಬಲವೊ ಜಾಣ
ಒಂದಾಗದಿರೆ ದೇಶದೇಳ್ಗೆಯಾದೀತೆ?
ಮತವ ಮಾರಿದರೆ ಮಾನ ಉಳಿದೀತೆ?

ಮತಕೊಳ್ಳುವವನೇನು ತನ್ನ
ಮನೆಯಲ್ಲಿ ನೋಟುಗಳ
ಜನಹಿತಕೆ ಅಚ್ಚೊತ್ತಿ ತರುವನೇ?
ಹಣವನ್ನು ಚೆಲ್ಲುತ್ತ ತಾ ಗೆದ್ದು
ಸೌಧವನು ಸೇರಿ ಹೂಡಿದುದಕ್ಕೆ
ಚಕ್ರಬಡ್ಡಿಕೂಡಿ ಮರಳಿ ಪಡೆಯನೇ?

ಜಾತಿ ಕಿತ್ತೊಗೆವ ನೀತಿಯ ಹೇಳುತ್ತ
ಜಾತಿ ನೋಡಿ ನೀ ಮತವ ಹಾಕಿದರೆ
ಜಾತಿಗಳು ದೇಶದಿಂದಳಿವವೇನೋ?
ಜಾತಿ ಹೆಂಡವ ಕುಡಿದ ಕೋತಿ ತಾ
ಜನರನ್ನು ಜಾತಿ ಹೆಸರಲೆ ಒಡೆದು
ಬಳಗದ ಮರದಿ ಜೋತಾಡದೇನೊ?

ಸರಕಾರವೆಂಬುದು ದರ್ಪವ ತೋರಿ
ನಮ್ಮನ್ನಾಳುವ ದರ್ಬಾರಿಕೆಯಲ್ಲ,
ಮತದಾರರ ಹಿತ ಸೇವೆಗೆಂತಾಗಲಿ.
ಸೇವೆಗೈಯದೆ ತಾನು ಸ್ವಾರ್ಥವನೆ
ಸಾಧಿಸುವ ನಾಯಕನಿಗೆ ಮತದಾರ
ಕೊರಳ್ಪಟ್ಟಿ ಹಿಡಿದು ಕೇಳುವಂತಾಗಲಿ.

ತ್ರಿನೇತ್ರಜ




Sunday 15 April 2018

ಮನಃಶಾಂತಿ ಅರಸಿ

[03/04, 10:49 p.m.]

     *ಮನಃಶಾಂತಿ ಅರಸಿ*
ಸದ್ದು ಗದ್ದಲದ ಜಗದಲ್ಲಿ
ಏಕೋ ನೆಮ್ಮದಿ ಕಾಣೆ
ಎಲ್ಲೆಡೆ ಎಲ್ಲರ ಪೂತ್ಕಾರ
ಚೀತ್ಕಾರ ಹಾಹಾಕಾರ
ಕೆಲವೆಡೆ ಕೆಲವರಿಗೆ
ಜೈಕಾರ ,ಮಣ ಹಾರ:
ಎದುರಾಡಿ ವಿರೋಧವ
ಕಟ್ಟಿಕೊಂಡರೆ ದಿಕ್ಕಾರ!
ಇಲ್ಲ ,ಇಲ್ಲೆಲ್ಲೂ ಸಿಗುತ್ತಿಲ್ಲ
ಸಹನೆಯ ಮಂದಾರ
ಹಿಡಿಯಷ್ಟು ಹೃದಯಕ್ಕೆ
ತಂಪೆರೆವ ಮಮಕಾರ
ಮಾನವತೆಯ ಮರೆತಲ್ಲಿ
ಸ್ವಾರ್ಥದ ಸಾಕ್ಷಾತ್ಕಾರ
ಹೊರಟೇ ಹೋಯಿತು
ಆತ್ಮ ವು ಕೂಗಿ ದಿಕ್ಕಾರ
ಮನಶಾಂತಿಯ ಹುಡುಕಿ
ಈ ಜಗದಿಂದಲೇ ದೂರ
✍ ತ್ರಿನೇತ್ರಜ
ಶಿವಕುಮಾರ. ಹಿರೇಮಠ.
,,....,
[04/04, 10:05 a.m.] 
ಕೂರ್ಮಪುತ್ರಿ
ಟೈಟಾನಿಕ್
ಹಿರೋಯಿನ್?
ಅಲ್ಲ, ಕೈಟಾಗಿ
ಕ್ಲೌಡಿನ ಮಡಿಲ
ಸೇರಬಯಸುವ
ಕೂರ್ಮಪುತ್ರಿ
ಟಾರ್ಟಾಯಿನ್.
ತ್ರಿನೇತ್ರಜ

Sunday 1 April 2018

ಸಿದ್ದಗಂಗಾ ಕಣ್ಮಣಿ




ಸಿದ್ದಗಂಗಾ  ಡಾ.ಶಿವಕುಮಾರ ಸ್ವಾಮಿಜಿಯವರ 111ನೇ ಜನ್ಮದಿನಾಚರಣೆ ನಿಮಿತ್ಯ

*ಸಿದ್ದಗಂಗಾ ಕಣ್ಮಣಿ*

ಗಂಧದ ಗುಡಿಯಲಿ
ನೆಲೆಸಿಹ ಶರಣರು
ಸಿದ್ದಗಂಗಾ ಶ್ರೀ ಗಳು
ನಡೆದಾಡುವ ದೇವರು ||ಪ||

ತ್ರಿವಿಧ ದಾಸೋಹ
ನಡೆಸುತ ಸಾಗಿಹ
ಕನ್ನಡ ನಾಡಿನ ಹಿರಿಮೆಯೆ
ಧರ್ಮ ಸಾರುವ
ಶಿಕ್ಷಣ ಬೀರುವ
ಸಿದ್ದಗಂಗೆಯ ಕಣ್ಮಣಿಯೆ
ಭಕ್ತರ ಪಾಲಿಗೆ
ಕರುಣಾಂಬುದಿಯೆ ||೧||

ಕಾಯಕದಲೆ
ಕೈಲಾಸವೆಂಬುದು
ಸಿದ್ದಗಂಗೆಯಲಿ ಕಾಣುವುದು
ಶತಾಯುಷಿಗಳ
ಪಾದ ಸ್ಪರ್ಷವೇ
ಧನ್ಯ ಭಾವವ ತುಂಬುವುದು
ಅಹಂ ಭಾವವು
ಕಳೆಯುವುದು ||೨||

ಕರ್ನಾಟಕ ರತ್ನ
ಪದ್ಮಭೂಷಣ
ಶ್ರೀ ಗಳ ಮುಕುಟ ಮಣಿಗಳು
ಭಾರತ ದೇಶದ
ಅನುಪಮ ರತುನ
ಶ್ರೀ ಶಿವಕುಮಾರ ಗುರುಗಳು
ತಮಗೆ ಸಾವಿರದ
ನಮನಗಳು||೩||

✍🏼 ತ್ರಿನೇತ್ರಜ್.

ಶ್ರೀ. ಶಿವಕುಮಾರ. ಹಿರೇಮಠ.

*ಎಲ್ಲರಂತೆ ನಾನು*



 *ಎಲ್ಲರಂತೆ ನಾನು*

ಎಲ್ಲರೊಳೊಂದಾಗುವುದು
ಈ ಜಗದ ಧರ್ಮ
ಧರ್ಮದಂತೆ ನಡೆಯೋದೆ
ಇಲ್ಲಿ ನನ್ನ ಕರ್ಮ
ನಿಸ್ವಾರ್ಥ ಜಗದೊಳು ಸ್ವಾರ್ಥಿಯಾಗಲಾರೆ
ನಿಷ್ಕಪಟ ಜನರ ಮಧ್ಯೆ
ಕಪಟಿ ನಾನಾಗಲಾರೆ ||ಪ||

ತೇಯ್ದಷ್ಟು ಕಂಪನು
ಬೀರುವುದು ಗಂಧ
ದೇವನ ನೊಸಲನು
ಸೇರೇ ಇನ್ನೂ ಚಂದ
ಗಂಧ ನಿರ್ಜೀವಿ ತಾನು
ಮನುಜ ಜೀವಿ ನಾನು ||೧||

ಪರರಿತ್ತ ನಾತಹೊತ್ತು
ಸಾಗುತಿಹುದು ಗಾಳಿ
ಬೀಸದಿರೆ ತಾ ಜಗಕೆಲ್ಲ
ತಪ್ಪಲಾರದು ಕವಳಿ
ನೋವು ನಲಿವು ಗಾಳಿಗಿಲ್ಲ
ಮನುಜ ನಾ ಗಾಳಿಯಲ್ಲ||೨||

✍🏼 ತ್ರಿನೇತ್ರಜ್

ಶಿವಕುಮಾರ ಹಿರೇಮಠ

Tuesday 20 March 2018

ಗಝಲ್ ೨೨

ಗಝಲ್-೨೨

ನರಮನ್ಸಾ ಶಾನೆ ಬೆಳ್ಕೊಂಡ್ಬಿಟ್ಟೆ ಪಾಪಿ , ಹದ್ಮೀರಿದ್ ನಿನ್ ದುಷ್ಟ್ಬುದ್ದಿಗೆಂದೂ ಕೊನೆಯಿಲ್ಲ
ಪರಪಂಚಾನೆ ಹಾಳಾಗ್ಹೊ ದ್ರು ಯೊಚ್ನೆ ಗೀಚ್ನೆ ಯಾವ್ದುಇಲ್ಲ ,ನಿನ್ ಹುಚ್ಚಾಟಕ್ಕೆಂದೂ ಕೊನೆಯಿಲ್ಲ

ಹುಯ್ಯೋ ಮಳೆನೀರೆಲ್ಲಾ ಸೇರ್ಕೊಂಡ ತಗ್ಗಿಗ್ಹರಿಯೋದ ನಿಯಮ,ಇನ್ನೇನ್ ದಿನ್ನೆ ಹತ್ತತ್ತಾ.
ಕೆರೆಗಳ್ನುಂಗಿ ಮನೆ ಕಟ್ಕೊಂಡೆ, ನೀರ್ನುಗ್ಗಿದ್ಕೆ ಬಾಯ್ ಬಡ್ಕಳ್ಳೊ ನಾಟ್ಕಕ್ಕೆಂದೂ ಕೊನೆಯಿಲ್ಲ.

ಮರಗಳ್ನೆಲ್ಲ ಕಡ್ದಹಾಕ್ಬಿಟ್ಟೆ,ಕಾಡಿದ್ರೇನೆ ಮಳೆ ಸುರಿಯೋದು, ಇನ್ನೇನ್ ನಿನ್ ಮುಸುಡಿ ನೋಡ್ಕೊಂಡಾ
ಭೂಮಿ ಬಗ್ದು ನೀರ್ ತೆಗ್ದಾಯ್ತು ,ಕುಡಿಯೋ ನೀರ್ಗೆ ಬಡದಾಡ್ಕೊಳ್ಳೊ ದುರ್ಗತಿಗೆಂದೂ ಕೊನೆಯಿಲ್ಲ

ಕಷ್ಟಪಟ್ಟು ಸ್ವತಂತ್ರ ತಂದಿದ್ ಈ ದೇಶ ಬೇಳಸ್ಬೇಕಂತಾ, ಇನ್ನೇನ್ ಬಡವರ್ನ ಸುಲಿಯೋಕಂತಾನಾ.
ಬದುಕೊಕ್ ಲಂಚ ಸತ್ತ್ರೂ ಲಂಚ ,ದೇವ್ರ ದರ್ಷ್ನನೂ ಕಷ್ಟಾಗೋಯ್ತು ಬ್ರಷ್ಟಾಚಾರಕೆಂದೂ ಕೊನೆಯಿಲ್ಲ

ತ್ರಿನೇತ್ರಜ ಇಷ್ಟೆಲ್ಲ ಅಕ್ಷ್ರ ಗೀಚೋದು ವಸಿ ಎಚ್ರ ಮೂಡ್ಲಿ ಅಂತಾ, ಇನ್ನೆನ್ ಕೆಲ್ಸ ಇಲ್ಲಂತಾನಾ.
ಇರೊಳೊಬ್ಳೆ ಭೂಮ್ತಾಯಿ, ನಾಶಕ್ಮೊದ್ಲೆ ಎಚ್ಚೆತ್ಗೊಂಡ್ರೆ ನನ್ ಸಂತೋಷಕ್ಕೆಂದೂ ಕೊನೆಯಿಲ್ಲ.
----------------------
✍🏼 ತ್ರಿನೇತ್ರಜ್

 ಶಿವಕುಮಾರ. ಹಿರೇಮಠ.

Sunday 18 March 2018

ಬಾರಯ್ಯಾ ಯುಗಾದಿ ಬಾ

ಕವನ
*ಬಾಯ್ಯಾ ಯುಗಾದಿ ಬಾ*




ನೆನಪಾಯಿತೇನು ಮತ್ತೆ
ಬುವಿಯತ್ತಣದ ಹಾದಿ
ಇಳೆಗೆ ಹಸಿರ ತುಂಬಲು
ಬಂದೆಯಾ ಯುಗಾದಿ

ಗಂಧ ಪೂಸೆ ಬಂದೆಯಾ
ಮಾವು ತೋಪಿನ ತುಂಬ?
ಮಕರಂದವ ಸುರಿದೆಯಾ
ದುಂಬಿಗಳಿಗದೇನು ಜಂಭ!

ವಧುವಾದಳು ಇಳೆಯು
ಶುಭದೊಸಗೆ ಎಂದಳು
ನಿಮ್ಮಾಟಕೆ ಕುಪಿತ ರವಿ
ಉರಿದರೆಮಗೆ ಗೋಳು

ಮುನಿಸಿನಿಂದ ಹಾಗೆಂದೆ
ಇರಲಿ ಬಾ ಇದ್ದದ್ದೆ ಇದೆಲ್ಲ
ನಿನಗಾಗಿಯೇ ಕಾದಿಹೆವು
ಅಭಿಮಾನದಿಂದ ನಾವೆಲ್ಲ

ತಳಿರು ತೋರಣಗಳಿಂದ
ಮನೆಯ ಸಿಂಗರಿಸಿಹೆವು
ಅಭ್ಯಂಜನಗೈದು ನವವಸ್ತ್ರ
ಧರಿಸಿ ಸ್ವಾಗತ ಕೋರಿಹೆವು

ನುಸುಳಿ ಬರಲಿ ಸುಳಿಗಾಳಿ
ಹೊಂಗೆ ನೆರಳಲಿ ತಂಪಾಗಿ
ಸಿಹಿಯುಂಡು ಮಧ್ಯಾಹ್ನ
ನಿದ್ರಿಸುವೆವು ಸೊಂಪಾಗಿ

ಬರದು ಬಾರದು ಬಯಸೆ
ಬರುವುದಂತೂ ತಪ್ಪದು
ಬೇವು ಬೆಲ್ಲ ಸೇರಿದ ಸವಿ
ಬದುಕಿಗೆ ರುಚಿ ತರುವುದು
🌳🌴🌳🌱🌿☘🌳🌴🌳
✍🏼 ತ್ರಿನೇತ್ರಜ್.

Saturday 17 March 2018

ಯುಗಾದಿಯಾಗಮನ

ಯುಗಾದಿಯಾಗಮನ

ಮತ್ತೆ ಬಂತು ಯುಗಾದಿ
ನವ ಸಂವತ್ಸರದಾದಿ ||ಪ||

ಚೈತ್ರನಿತ್ತ ಉಡುಗೊರೆ
ವನಸಿರಿಗೆ ಹೊಸಸೀರೆ
ವರುಷದಷ್ಟು ಹಳೆ ಎಲೆಗಳ
ಕಳೆದು ನಿಂತಳು ಇಳೆ
ಮತ್ತೆ ಜವ್ವನದ ಕಳೆ||೧||
ಶುಕ ಪಿಕಗಳ ಹಿಮ್ಮೇಳ

ಉಸಿರೇರಿಸುವ ಝಳ
ವಸಂತ ಬಂದ ಸಂಭ್ರಮಿಸಿ
ಚಿಗುರೆಲೆಗಳ ಚುಂಬಿಸಿ
ತರುಲತೆ ಮೈ ಪುಳಕಿಸಿ||೨||

ಪ್ರತಿ ವರುಷ ಹೊಸ ಹರುಷ
ತೊಡೆವುದು ಹಳೆ ಕಲ್ಮಷ
ಕಹಿಯ ಮರೆವ ನಾವೆಲ್ಲ
ಭವಿತವನು ಬಲ್ಲವರಿಲ್ಲ
ಬೇವುಬೆಲ್ಲ ಸಮ ಎಲ್ಲ||೩||

✍ ತ್ರಿನೇತ್ರಜ

ಶಿವಕುಮಾರ. ಹಿರೇಮಠ.

ಮರೆತೆಯಾ?

ಭಾವಗೀತೆ


      *ಮರೆತೆಯಾ?*
ತಾಯ ಮಮತೆ ಪ್ರೀತಿಯನ್ನೆ
ಮರೆತು ಹೋದೆಯಾ.
ಮಡದಿ ಸೆರಗ ಹಿಡಿದು ಅಲೆವ ದಾಸನಾದೆಯಾ.
ಹೊತ್ತು ಹೆತ್ತ ದೇವತೆಯ
ಕಾಲೊತ್ತಲೆಲ್ಲಿದೆ ಸಮಯ
ಅಂದ ಚಂದ ತುಂಬಿ ನಿಂತ
ಅಮ್ಮಾವ್ರಗಂಡ ಆದೆಯಾ
ತೆರೆಯೊ ಒಳಗಿನಾ ಕಣ್ಣು
ಅವ್ವ ಜೀವ ಕೊಟ್ಟ ಹೆಣ್ಣು||೧||
ಸಂಸಾರ ಒಂದು ತಕ್ಕಡಿ
ಸಮದೂಗಿಸಿ ನೀ ಹಿಡಿ
ಹೆತ್ತಮ್ಮಗೆ ನೋವ ನೀಡಿ
ನರಕ ಬೇಡಬೇಡಾ ಕೋಡಿ‌
ಮನದ ಹಿಡಿತ ಸಾಧಿಸು
ಅರಿತು ಬಾಳ ಸಾಗಿಸು ||೨||
********************
✍ ತ್ರಿನೇತ್ರಜ್.
ಶಿವಕುಮಾರ. ಹಿರೇಮಠ.

ಗುಟ್ಟು ರಟ್ಟಾದಾಗ

ನೀಳ್ಗತೆ ಸ್ಪರ್ಧೆಗೆ

*ಗುಟ್ಟು ರಟ್ಟಾದಾಗ*
    ಬೆಳಿಗ್ಗೆಯೇ ಪಟ್ಟಣಕ್ಕೆ ಬಂದ ರಾಮಣ್ಣ ಮಗಳ ಮನೆ ತಲುಪುವಷ್ಟರಲ್ಲಿ ಗಂಟೆ ಹನ್ನೊಂದಾಗಿತ್ತು. ಕುಡಿಯಲು ಕಾಫಿ ಕೊಟ್ಟ ಮಗಳು ನೇರವಾಗಿ ಕೇಳಿಯೇ ಬಿಟ್ಟಳು 
   "ಏನಪ್ಪಾ , ಈಗ ಬಂದ ವಿಷಯ "
           ಕೊಂಚ ಇರುಸು ಮುರುಸಾದರೂ ಅನಿವಾರ್ಯವಾಗಿದ್ದರಿಂದ ಸಾವರಿಸಿಕೊಂಡ ರಾಮಣ್ಣ ಮೆಲು ಧ್ವನಿಯಲ್ಲೇ ಹೇಳಿದ." ನಿಮ್ಮ ಅಮ್ಮನಿಗೆ ಹುಷಾರಿಲ್ಲಮ್ಮ , ತುರ್ತಾಗಿ ಆಪರೇಷನ್ ಮಾಡಿಸಬೇಕಾಗಿದೆ. ಸ್ವಲ್ಪ ಹಣ ಕಡಿಮೆಯಾಗಿತ್ತು. ಅದಕ್ಕೆ ,ಅಳಿಯಂದಿರ ಹತ್ತಿರ.."
         ಅರ್ಧಕ್ಕೆ ಬಾಯಿ ಹಾಕಿದ ಮಗಳು "ಅಯ್ಯೋ ಅಪ್ಪ! ನಮ್ ಹತ್ರ ಈಗ ಎಲ್ಲಿ ಹಣವಿದೆ? ಅಪ್ಪ ,ನಮ್ಮ ಮನೆ ಆಲ್ಟ್ರೇಷನ್  ಮಾಡಿಸೋದಿದೆ. ನಮಗೇ ನೂರಾರು ತಾಪತ್ರಯಗಳಿವೆ. ಅಲ್ಲದೇ, ಬೀಗರ ಹತ್ತಿರ ಹಣ ಕೇಳಿದರೆ ಏನು ಚೆನ್ನ ನೀನೇ ಯೋಚ್ನೆ ಮಾಡು. ನನ್ನ ಪುಣ್ಯ, ನಮ್ಮ ಯಜಮಾನ್ರು ವರದಕ್ಷಿಣೆ  ಗಿರದಕ್ಷಿಣೆ ಅಂತ ಪೀಡಿಸಿ ನನ್ನ ತವರು ಮನೆಗೆ ದಬ್ಬೋದಿಲ್ಲ.ಹಾಗಂತ ಅವರ ಹತ್ತಿರ ಹಣ ಕೇಳುವುದು ಎಷ್ಟು ಸರಿ"? ಎಂದುಬಿಟ್ಟಳು.
            ರಾಮಣ್ಣನ ಬಾಯಲ್ಲಿ ತೇವ ಆರಿತು. ‍"ಹಾಗೇನಿಲ್ಲ ತಾಯಿ, ಬೇರೆ ಕಡೆಗೂ ಪ್ರಯತ್ನ ಮಾಡಿದ್ದೇನೆ. ಏನೋ, ಒಂದು ಮಾತು ಇರಲಿ ಅಂತ ನಿನ್ನ ಹತ್ತಿರ ಕೇಳಿದೆ ಅಷ್ಟೇ.ಬೇಜಾರಾಗ್ಬೇಡಮ್ಮ" ಎಂದು ಹೇಳಿ ಹೊರಡಲು ಅನುವಾದ.
     "ಇರಪ್ಪ , ಸ್ವಲ್ಪ ತಿಂಡಿ ತಿಂದು ಹೋಗುವಿಯಂತೆ" ಎಂದು ಮಗಳು ಅಡುಗೆ ಮನೆಯತ್ತ ನಡೆದಳು. ತಿಂಡಿಯ ತಟ್ಟೆಯೊಂದಿಗೆ ಹೊರಬರುವಷ್ಟರಲ್ಲಿ ರಾಮಣ್ಣ ಅಲ್ಲಿರಲಿಲ್ಲ.
      "ಸುಕನ್ಯಾ" , ಹೆಸರಿಗೆ ತಕ್ಕಂತೆ ಸುಂದರ ಹೆಣ್ಣಾಗಿದ್ದಳು. ರಾಮಣ್ಣ- ಪುಟ್ಟಮ್ಮ ದಂಪತಿಗಳ ಒಬ್ಬಳೇ ಮಗಳು. ಬಣ್ಣದ ಲ್ಲಾಗಲಿ ಹೋಲಿಕೆ ಯಲ್ಲಾಗಲಿ ಇವಳು ಅವರಿಬ್ಬರಲ್ಲಿ ಯಾರನ್ನೂ ಹೋಲುತ್ತಿರಲಿಲ್ಲ. ರೈತನಾಗಿದ್ದ ರಾಮಣ್ಣನು ಇದ್ದ ಎರಡು ಎಕರೆ ಜಮೀನಿನಲ್ಲಿ  ಒಣ ಬೇಸಾಯ ಮಾಡಿಕೊಂಡು ಬಂದುದರಲ್ಲೇ ಅಚ್ಚುಕಟ್ಟಾಗಿ ಸಂಸಾರ ಸಾಗಿಸುತ್ತಿದ್ದನು. ಇದ್ದೂರಲ್ಲಿ ಮಗಳನ್ನು ಶಾಲೆಗೆ ಕಳುಹಿಸಿ, ಓದಲು ಪ್ರೋತ್ಸಾಹ ನೀಡಿದ್ದ. ನಂತರ ಅವಳು ,ಪಟ್ಟಣದ ಕಾಲೇಜಿಗೆ ಸೇರಲು ಬಯಸಿದಾಗ ಪುಟ್ಟಮ್ಮನ ವಿರೋಧವ ಲೆಕ್ಕಿಸದೆ ಅದಕ್ಕೂ ಒಪ್ಪಿದ್ದ. ಕಂಪ್ಯೂಟರ್ ಕೋರ್ಸ್‌ ಮಾಡುತ್ತೇನೆ ಎಂದಾಗಲೂ ಬೇಡವೆನ್ನಲಿಲ್ಲ. ಮಗಳ ಮೇಲೆ ಅಷ್ಟೊಂದು ಅಕ್ಕರತೆ ಅವನಿಗೆ.
      ಕಂಪ್ಯೂಟರ್ ಕೋರ್ಸ್‌ಗೆ ಸೇರಿದ ಮೇಲೆ ಸುಕನ್ಯಾಳ ಜೀವನದಲ್ಲಿ ಮಹತ್ತರವಾದ ಬದಲಾವಣೆಯ ಗಾಳಿ ಬೀಸಿತು. ಆ ಕಂಪ್ಯೂಟರ್  ತರಬೇತಿ ಕೇಂದ್ರ ನಡೆಸುತ್ತಿದ್ದವನು ಮನೋಹರ ಎಂಬ ಅವಿವಾಹಿತ,ಸ್ಪುರದ್ರೂಪಿ ಯುವಕ. ಬುದ್ಧಿವಂತಳೂ, ಸುಂದರಿಯೂ ಆಗಿದ್ದ ಸುಕನ್ಯಾ ಅವನಿಗೆ ತುಂಬಾ  ಇಷ್ಟವಾಗಿದ್ದಳು.ಕ್ರಮೇಣ ಅವಳ ಸ್ನೇಹ ಸಂಪಾದಿಸಿ  ಸಲುಗೆ ಬೆಳೆಸಿ ಹತ್ತಿರವಾದ. ಒಂದು ವರ್ಷದ ನಂತರ ಧೈರ್ಯ ಮಾಡಿ ಒಂದು ದಿನ "ಸುಕನ್ಯಾ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ. ನೀನು ಒಪ್ಪಿದರೆ ಮದುವೆಯಾಗಬೇಕೆಂದಿರುವೆ" ಎಂದು ಅವಳ ಮುಂದೆ ಹೇಳಿದಾಗ ಸುಕನ್ಯಾ ನಾಚಿ  ನೀರಾಗಿದ್ದಳು.    ಸದಾಕಾಲ ಶ್ರೀಮಂತಿಕೆಯ ‌‌‌ಕನಸು ಕಾಣುತ್ತಿದ್ದ ಅವಳಿಗೆ,'ಬಯಸಿದ ಬಳ್ಳಿ ಕಾಲಿಗೆ ತೊಡರಿದಂತೆ' ಎನಿಸಿತ್ತು.ಮುಂದಾರು ತಿಂಗಳುಗಳು ಪ್ರೀತಿ ಪ್ರಣಯದಲ್ಲಿ ಕಳೆದು ಹೋದವು. ಅವರಿವರಿಂದ ರಾಮಣ್ಣನ ಕಿವಿಗೆ ಈ ವಿಷಯ ತಲುಪುವಷ್ಟರಲ್ಲಿ ತುಂಬಾ ತಡವಾಗಿತ್ತು.
       "ನಾವು ಬಡವರಮ್ಮ ; ಶ್ರೀಮಂತರ ಮನೆತನದ ಸಂಬಂಧ ನಮ್ಮಿಂದ ಆಗದ ಮಾತು ತಾಯೆ.  ನಮ್ಮ ಗೌರವ ಗಾಳಿಗೆ ತೂರಬೇಡಮ್ಮ" ಎಂದು ಮಗಳಿಗೆ ಬುದ್ದಿ ಹೇಳಿದ್ದು 'ನೀರಲ್ಲಿ ಹೋಮ ಮಾಡಿದಂಗೆ' ಆಗಿತ್ತು.ಅವಳು ಮನೋಹರನ ಧ್ಯಾನ ನಿಲ್ಲಿಸಲಿಲ್ಲ. ಕಾಲೇಜಿಗೆ ಹೋಗದಂತೆ ಪುಟ್ಟಮ್ಮನೂ ಮಗಳಿಗೆ ತಾಕೀತು ಮಾಡಿ ಮನೆಯಲ್ಲೇ ಉಳಿಸಿಕೊಂಡಳು. ಪರೀಕ್ಷೆಗೆ, ಮಗಳ ಬೆಂಗಾವಲಾಗಿ ತಾನೂ ಹೋಗಿ ಬಂದಳು. ಪರಿಣಾಮ ಮಾತ್ರ ಉತ್ತಮವಾಗಿರಲಿಲ್ಲ‌. ಪರೀಕ್ಷೆಯಲ್ಲಿ ಎರಡು ವಿಷಯಗಳಷ್ಟೇ ಪಾಸಾದವು.
          ಸುಕನ್ಯಾಳ ಅದೃಷ್ಟ ಗಟ್ಟಿಯಾಗಿತ್ತು.ಮನೋಹರನ ಮನೆಯಿಂದ ಇವರ ಮದುವೆಗೆ ಗ್ರೀನ್ ಸಿಗ್ನಲ್ ಸಿಕ್ಕಿಬಿಟ್ಟಿತ್ತು. ಹತ್ತಾರು ಜನ ಸೇರಿ ರಾಮಣ್ಣನನ್ನು ಒಪ್ಪಿಸಿಯೇಬಿಟ್ಟರು.
          ಶ್ರೀಮಂತರ ಸಂಬಂಧ ಬಂದಿದ್ದಕ್ಕೆ ರಾಮಣ್ಣನಿಗೆ ಒಂದು ಕಡೆ ಸಂತೋಷವಾದರೂ, ಅವರಿಗೆ ತಕ್ಕಂತೆ ಮದುವೆ ಮಾಡಿಕೊಡಲು ಆಗುವ ಖರ್ಚು ವೆಚ್ಚದ ಚಿಂತೆ ಕಾಡತೊಡಗಿತು.ಜಮೀನಿನ ಮೇಲಿನ ಸಾಲ ತೀರದೆ, ಸರ್ಕಾರ ಸಾಲ ಮನ್ನಾ ಮಾಡೀತೆಂದು ಕಾಯುತ್ತಿದ್ದವನಿಗೆ ಮಗಳ ಮದುವೆ ಹೇಗೆ ಮಾಡಬೇಕೆಂಬುದೇ ಹಗಲು-ರಾತ್ರಿಯ ಆಲೋಚನೆಯಾಗಿಬಿಟ್ಟಿತ್ತು.
    
        ಗಂಡನಿಗೆ ಧೈರ್ಯ ತುಂಬಿದ ಪುಟ್ಟಮ್ಮ,  "ಬೇಕಾದರೆ ಮನೆ ಅಡವಿಟ್ಟು ಮಗಳ ಮದುವೆ ಮಾಡಿ ಬಿಡೋಣ.ನಮ್ಮ ಅದೃಷ್ಟಕ್ಕೆ ಒಳ್ಳೆಯ ಸಂಬಂಧವೇ ಮನೆ ಬಾಗಿಲಿಗೆ ಬಂದಿದೆ. ಎಲ್ಲಾ ಆ ದೇವರ ಕೃಪೆ.ನಾಳೆಯೇ ಬ್ಯಾಂಕಿಗೆ ಹೋಗಿ ವಿಚಾರಿಸಿ" ಎಂದು ಹುರುದುಂಬಿಸಿದಳು.  
         ಮನೆಯನ್ನು ಅಡವಿಟ್ಟು , ಹಲವೆಡೆ ಸಾಲ ಸೋಲ ಮಾಡಿದ, ದಂಪತಿಗಳು , ಪಟ್ಟಣದ ಕಲ್ಯಾಣ ಮಂಟಪವೊಂದರಲ್ಲಿ ಚೆಂದವಾಗಿ ಮದುವೆ ಮಾಡಿಕೊಟ್ಟರು.ಕನ್ಯಾದಾನ ಮಾಡಿದ ತೃಪ್ತಿ ಯಾಯಿತು ಆ ಎರಡೂ ಹಿರಿಯ ಜೀವಗಳಿಗೆ.
      ಗಂಡನ ಮನೆ ಸೇರಿದ ಸುಕನ್ಯಾ ತುಂಬಾ ಬದಲಾಗಿ ಹೋದಳು. ದೀಪಾವಳಿ ಹಬ್ಬಕ್ಕೆ ತವರು ಮನೆಗೆ ಬರಲೂ ನಿರಾಕರಿಸಿಬಿಟ್ಟಳು.
     ಇತ್ತ ಪುಟ್ಟಮ್ಮನ ಆರೋಗ್ಯ ದಿನೇದಿನೇ ಕ್ಷೀಣಿಸತೊಡಗಿತು. ಸಣ್ಣಪುಟ್ಟ ಚಿಕಿತ್ಸೆಗಳಿಂದ ಏನೂ ಪ್ರಯೋಜನವಾಗಲಿಲ್ಲ. ಅಲ್ಪಸ್ವಲ್ಪ ಹಣ ಜೋಡಿಸಿ ದೊಡ್ಡ ಆಸ್ಪತ್ರೆಗೆ ತೋರಿಸಿದಾಗ ರಾಮಣ್ಣನಿಗೆ ಆಘಾತ ಕಾದಿತ್ತು. ವೈದ್ಯರು "ಗರ್ಭಕೋಶ ಕ್ಯಾನ್ಸರ್ ಆಗಿದೆ. ಆದಷ್ಟು ಬೇಗ ಆಪರೇಷನ್ ಮಾಡಿಸದಿದ್ದರೆ ಅಪಾಯವಿದೆ" ಎಂದಿದ್ದರು. ಹಳೆಯ ಸಾಲವೇ ತೀರದಿರುವಾಗ ಈಗ ಎಲ್ಲಿಂದ ಹಣ ತರುವುದೆಂದು ರಾಮಣ್ಣನಿಗೆ ತಿಳಿಯದಾಗಿತ್ತು.ಅದಕ್ಕೆ ಇಂದು ಮಗಳ ಮನೆ ಬಾಗಿಲು ತಟ್ಟಿದ್ದ.ಮುಂದೆ ಜಮೀನು ಮಾರಿ ಹಣ ತೀರಿಸಿದರಾಯಿತು ಎಂದುಕೊಂಡಿದ್ದ.
       ನಿರಾಶೆಯಿಂದ ಬಸ್ ನಿಲ್ದಾಣದತ್ತ ಬರುತ್ತಿರುವಾಗ ಎದುರಿಗೆ ಬಂದ ರಾಮಣ್ಣನ ಆಪ್ತ ನಾಗಣ್ಣ ,ಇವನ ಸಪ್ಪೆ ಮೋರೆ ನೋಡಿ, ವಿಷಯ ಏನೆಂದು ವಿಚಾರಿಸಿದ. 
     ದುಃಖ ತಾಳಲಾಗದೆ ರಾಮಣ್ಣ ಎಲ್ಲವನ್ನು ಅರುಹಿ ಅತ್ತುಬಿಟ್ಟ. ಅವನನ್ನು ಸಮಾಧಾನ ಪಡಿಸಿದ ನಾಗಣ್ಣ , "ದೇವರಿದ್ದಾನೆ ,ಎಲ್ಲ ಸರಿ ಹೋಗುತ್ತೆ; ಚಿಂತಿಸಬೇಡ. ನೀನೀಗ ಊರಿಗೆ ಹೋಗು.ನಾನು ಸಂಜೆಗೆ ಭೇಟಿಯಾಗುತ್ತೇನೆ.ಏನಾದರೂ ಮಾಡಿದರಾಯಿತು.ಧೈರ್ಯವಾಗಿರು" ಎಂದು ಕಳುಹಿಸಿಕೊಟ್ಟ.
      ಅಲ್ಲಿಂದ ನಾಗಣ್ಣ ನೇರವಾಗಿ ಸೌಜನ್ಯಾಳ ಮನೆಗೆ ಬಂದ.
"ಓಹೋ! ಅಪ್ಪ ಈಗ ಹಣ ಕೇಳಲೆಂದು  ನಿನ್ನನ್ನು ಕಳಿಸಿದರೇನು?" ಎಂದು ಸುಕನ್ಯಾ ಖಾರವಾಗಿಯೇ  ಕೇಳಿದಳು.
         "ಅದಕ್ಕಲ್ಲಮ್ಮ , ನಿನಗೊಂದು ವಿಷಯ ಹೇಳುವುದಿತ್ತು. ಅದಕ್ಕೆ ಬಂದೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬರಗಾಲ ಬಂದು ನಮ್ಮ ಊರಿನ ಅನೇಕರು ಗೋವಾಕ್ಕೆ ದುಡಿಯಲೆಂದು ಗುಳೆ ಹೋಗಿದ್ದೆವು.ಕೆಲವು ತಿಂಗಳ ನಂತರ ಉಳಿದವರು ಊರಿಗೆ ಮರಳಿದರು. ಆದರೆ ನಾನು , ನನ್ನ ಹೆಂಡತಿ, ನಿಮ್ಮ ಅಪ್ಪ-ಅಮ್ಮ ಅಲ್ಲಿಯೇ ದುಡಿದರಾಯಿತು ಎಂದು ಉಳಿದುಕೊಂಡೆವು. ಒಂದು ರಾತ್ರಿ ನಾವು ಗುಡಿಸಲಿನಲ್ಲಿ ಮಲಗಿದ್ದಾಗ ಜೋರಾಗಿ ಅಳುತ್ತಿರುವ ಮಗುವಿನ ಧ್ವನಿ ಕೇಳಿಸಿತು. ನಾನು  ಹೊರಗೆ ಬಂದು ನಿಮ್ಮಪ್ಪನನ್ನ ಕರೆದೆ.ಇಬ್ಬರು ಬಂದು  ನೋಡಿದಾಗ, ಯಾರೋ ಮಗುವನ್ನು ಕಸದ ತೊಟ್ಟಿಯಲ್ಲಿ ಹಾಕಿ ಹೋಗಿದ್ದರು. ಮಗುವನ್ನೆತ್ತಿಕೊಂಡ ನಿಮ್ಮಪ್ಪ ಗುಡಿಸಲಿಗೆ ತಂದಾಗ,ಮಕ್ಕಳಿಲ್ಲದ ಪುಟ್ಟಮ್ಮ ತಾನೇ ಸಾಕುತ್ತೇನೆಂದಳು. ಒಂದು ವರ್ಷ ಅಲ್ಲೇ ಕಳೆದು ಊರಿಗೆ ಬಂದೆವು. ಈ ವಿಷಯ ನಮ್ಮನ್ನು ಬಿಟ್ಟು ಇನ್ನಾರಿಗೂ ಗೊತ್ತಿಲ್ಲ.ಆ ಅನಾಥ ಮಗು ನೀನೇ ಕಣಮ್ಮ .ಇಂದು ನೀನು ರಾಮಣ್ಣನ ಮನಸ್ಸು ನೋಯಿಸಿದ್ದು ನನಗೆ ತುಂಬಾ ಬೇಸರ ತರಿಸಿತು. ಹಣವಿಲ್ಲದಿದ್ದರೂ ಒಂದೆರಡು ಒಳ್ಳೆಯ ಮಾತು ಮಾತಾದರೂ ನಿನ್ನ ಬಳಿ ಇಲ್ಲವಲ್ಲ. ನಿನ್ನ ತಪ್ಪಿಗೆ ಮೊದಲು ಅವರ ಕಾಲಿಗೆ ಬಿದ್ದು ಕ್ಷಮೆ ಕೇಳು"   ಎಂದು ನಾಗಣ್ಣ ಮಾತು ಮುಗಿಸಿದಾಗ ಸೌಜನ್ಯಾಳಿಗೆ ನೂರು ಸಿಡಿಲು ಒಂದೇ ಬಾರಿಗೆ ಬಡಿದಂತಾಗಿತ್ತು.
.....................................
✍ ಶಿವಕುಮಾರ. ಹಿರೇಮಠ.
ಗೌರಿಬಿದನೂರು.

*ಸಾಗರೋಲ್ಲಂಘನ*

*ಸಾಗರೋಲ್ಲಂಘನ*
[04/02, 1:59 p.m.]


ಲಂಕೆಯ ತಲುಪುವ ಯತ್ನಕೆ
ಸಾಗರನಾದನು ಅಡ್ಡಿ
ವಾನರ ಬಳಗ ಮಂಕಾಯಿತು
ಮನದಿ ಶಂಕೆಯು ಮೂಡಿ

ರಾಮನ ಸೇವೆಗೆ ಆತುರ ಮನದಿ
ದೃಷ್ಟಿಗೆ ನಿಲುಕದೆ ಹರಡಿದೆ ಶರಧಿ
ಸಂಶಯ ಮೂಡಿತು ಮೋಡದ ತೆರದಿ
ಯೋಚಿಸಿ ನಿಂತನು ಸಾಗರ ತಟದಿ

ಜಾಬವಂತನು ತುಂಬಲು ಧೈರ್ಯ
ನೆನಪಿಸಿಕೊಂಡನು ಬಾಲ್ಯದ ಶೌರ್ಯ
ಬೆಳೆದು ನಿಂತನು ವೀರ ಕಪಿವರ್ಯ
ಅಣಿಯಾದ ನೆನೆದು ಸ್ವಾಮಿಕಾರ್ಯ

ಛಾಂಗನೆ ಹಾರಿದ ಹನುಮಂತ
ಸೀಮೋಲಂಘಿಸಿ ಧೀಮಂತ
ಸೀತೆಯ ಅರಸಲು ಶರವೇಗದಲಿ
ಬಾನಿಗೆ ಚಿಮ್ಮಿದ ಬಲವಂತ

✍🏼 ತ್ರಿನೇತ್ರಜ

 ಶಿವಕುಮಾರ. ಹಿರೇಮಠ.

ನೀಡೆನಗೆ ಅಭಯ




*ನೀಡೆನಗೆ ಅಭಯ*

ಇದೆಂತ ಮೋಹ
ನಿನ್ನ ಮನದಲಿ
ಮುದ್ರೆಯಾಯಿತು
ಅದೆಂತ ಶಕ್ತಿ
ನಿನ್ನ ಎದೆಯಲಿ
ಹಚ್ಚೆಯಾಯಿತು||ಪ||

ಸೀತಾ ರಾಮರ
ಇರುವ ತೋರಿದೆ
ಎದೆಯನೆ ತೋಡಿ
ರಾಮ ನಾಮವೆ
ಸಾಕೆಂದೆನುವೆ
ಅದೇನು ಮೋಡಿ||೧||
ನಿನ್ನಂತೆನಗೆ
ಆಗಲಾಸೆಯು
ನೀಡೆನಗೆ ಅಭಯ
ಮನ ನಿನ್ನನ್ನೆ
ತುಂಬಿಕೊಳ್ಳಲು
ಹರಸು ಆಂಜನೇಯ||೨||
✍ ತ್ರಿನೇತ್ರಜ್
ಶಿವಕುಮಾರ ಹಿರೇಮಠ

Tuesday 13 March 2018

*ಅವಸರಿಸು ನೇಸರ *


*ಅವಸರಿಸು ನೇಸರ*
[17/12/2017, 8:17 p.m.]

ಅವಸರಿಸು ನೇಸರ
ಏಕಿಷ್ಟು ನಿಧಾನ..
ಸುಸ್ತಾಗಿಹರೆಲ್ಲ ಅಲ್ಲಿ
ದುಡಿದು ಹರಿಸಿ ಬೆವರ.
ನಿಂತಿದೆ ನಭದಲಿ
ಹಕ್ಕಿಗಳ ಸಂಚಾರ..

ಮರೆಯಾಗು, ಬೇಗನಡಿ
ನಿನ್ನಿಂದಾಗಿ ಬೆನ್ನು ಸುಟ್ಟಿದೆ.
ಉರಿದೆಯಲ್ಲ ಬೆಂಕಿಯಂದದಿ,
ನಿನ್ನಿಂದ ಬುವಿ ಬಿರಿದಿದೆ.
ಕಪ್ಪಿಟ್ಟ ಬಡ ಚರುಮದಿಂದ
ಕಷ್ಟದ ಬೆವರು ಹರಿದಿದೆ.

ಹಾರದೆ ಕುಂತಿವೆ ಪಕ್ಷಿಗಳು
ತೊರೆದು ಬದುಕ ಬಾನನೆ.
ಕತ್ತಲೆ ಬರಲಿ ದಾರಿ ಬಿಡು
ಹೊಳೆಯಲಿ ಚುಕ್ಕಿ ಒಡನೆ.
ಆವಿಯಾಯ್ತು ಬೆಂದ ನೀರು
ಹೋಗು ಭಾಸ್ಕರ ಬೇಗನೆ.

ಶಪಿಸಿ ನಿಲ್ಲದಿರು ಬೇಸರದಿ
ತಂಪಾದಿತು ನೀನಿಲ್ಲದಾಗಸವು.
ನೀ ಹೊರಡೆ ಬಂದು ಚಂದ್ರ
ತಡೆವ ದುಡಿವವರ ಅಳುವು
ವೈಶಾಖದ ಮೂಢತೆಗೆ
ಜಲಚರದಳಿವು
ಬೇಗ ಜಾರು ಹುಡುಕಬೇಕಿದೆ
ಗಾಳಿಯ ಸುಳಿವು


✍🏼 ತ್ರಿನೇತ್ರಜ.

ಶಿವಕುಮಾರ. ಹಿರೇಮಠ.

Monday 12 March 2018

*ಅವಳ ಕೆಣಕು*


*ಅವಳ ಕೆಣಕು*

ನನ್ನ ಕಾಲ್ಗೆಜ್ಜೆಯ
ನಾದಕೆ ಕಿವಿಗೊಡದ
ಒಲವಿನರಿವೇ ಇಲ್ಲದ
ಅರಸಿಕ ನೀನಾರೋ?
ತುಂಬಿದ ಹರೆಯವ
ಕಣ್ಣಂಚಲೂ ಅಳೆಯದೆ
ಕಲ್ಲುಮನದ ಅಲ್ಪ
ಅಮಾಯಕ ನೀನಾರೋ?
ನವ ವಸಂತನ ಸೆಳೆಯಲು
ಹಸಿರ ಹೊದ್ದು ನಿಂತ ಇಳೆ
ನನ್ನನೊಮ್ಮೆ ನೋಡಿ
ಅಸೂಯೆಯಲಿ ಬೆಂದಳು
ನೈದಿಲೆಯ ನಾಚಿಸುವ
ನನ್ನ ಮುಖಾರವಿಂದಕೆ
ಸಮವಾಗದೆ ಮಂಕಾಯ್ತು
ಚಂದಿರನ ಬೆಳದಿಂಗಳು.
ಲತೆಯನು ಹೋಲುವ 
ಮೈ ಮಾಟದ ಬಳುಕು
ನಾಗವೇಣಿಯ ಥಳುಕು
ಪ್ರೇಮ ಸೂಸಿಹ ಕಂಗಳು
ರುಚಿಸದೆ ನಿನಗೀ ಉಕ್ಕುವ
ಅನುಪಮ ರೂಪರಾಶಿ?
ನಿಸ್ಸಂದೇಹವಾಗಿ ಹೇಳುವೆ
ನೀನದಾರೋ ಸ್ತ್ರೀ ದ್ವೇಷಿ.
✍ ತ್ರಿನೇತ್ರಜ್.

Wednesday 7 March 2018

*ಬೇಕು ಮೌನ*


    *ಬೇಕು ಮೌನ*



ಇಳಿಹೊತ್ತಲಿ ಏಕಾಂತದಿ
ನಿನ್ನ ಸಂಗಡವಿರಲು
ಬೇಡವಾಯ್ತು ಎನಗೆ
ಹೊತ್ತುಕಳೆವ ಮಾತು||

ಕತ್ತಲಾಗುವವರೆಗೂ
ಕಣ್ಣಲ್ಲಿ ಕಣ್ಣಿಟ್ಟು
ನಿನ್ನೊಳು ಕಾಣುವೆನು
ನನ್ನೆ ನಾ ಮೈಮರೆತು||

ಕಾಲ ಕಟ್ಟಳೆ ದಬ್ಬಿ
ಪ್ರೇಮ ಲತೆಯು ಹಬ್ಬಿ
ಮೌನದಲಿ ಬೆಸೆದಿದೆ
ನಮ್ಮಿಬ್ಬರನು ತಬ್ಬಿ||

ಒಲವು ಅರಳುವ ಹೊತ್ತು
ಅಧರ ಕೇಳಲು ಮುತ್ತು
ಮೌನಕೆ ಶರಣಾಗುವ ಬಾ
ಇನ್ನು ನಮಗೇಕೀ ಮಾತು||

✍🏼 ತ್ರಿನೇತ್ರಜ್

 ಶಿವಕುಮಾರ ಹಿರೇಮಠ

Monday 5 March 2018

ಆಸೆ ನಿರಾಸೆ


ಆಸೆ ನಿರಾಸೆ

06/12/2017, 8:49 p.m.*
....... ..... ..... ..... ....
ಎತ್ತರ ಎತ್ತರವೆಂದರೆ
ಅದೇನೊ ಆಸೆ ನನಗೆ.
ಏರಿ ಏರಿ,ಕಂಬ ಸೇತುವೆ
ಮಧ್ಯ ಕುಳಿತೆ, ಸುಸ್ತಾಗೆ.

ಮುತ್ತಿಕೊಂಡಿವೆ ಮೋಡ
ರವಿಯ ಓಟವ ತಡೆದು.
ಓಕುಳಿಯಾಡಲು ಭಾನು
ಬಾನೆಲ್ಲ ರಂಗಾಗಿಹುದು.

ಬಣ್ಣದಾಸೆಗೆ ಹಾರಿಹವು
ಖಗಗಳು ರೆಕ್ಕೆಬಡಿದು.
ಗಗನದತ್ತ ಹಾರುವಾಸೆ
ಮನದಲಿ ಬಂದಿಹುದು.

ಕೈಗಳೆರಡ ಬೀಸುತಲಿ
ಒಮ್ಮೆಲೆ ಪುಟಿನೆಗೆದು,
ಬಳಿಸಾರಿ ರಂಗಿನಾಟವ
ನೋಡುವಾಸೆ ನಿಲ್ಲದು.

ತಾತನ ತಲೆಯಂತಹ
ಬೆಟ್ಟ ಮೂಗುಮುರಿದು,
'ನಿನ್ನ ಕೈಲಿ ಇಷ್ಟೇ ಸಾಧ್ಯ'
ಎಂದಂತೆ ಅನಿಸಿಹುದು.
...... ...... ..... ..... .....
..✍🏼 *ತ್ರಿನೇತ್ರಜ.*
ಶಿವಕುಮಾರ. ಹಿರೇಮಠ.

ದೋಣಿಯಾಟ



 _*ದೋಣಿಯಾಟ*_


ಬೆಳ್ಳಿ ಮೋಡ ಮೆಲ್ಲನೆ ಕರಗಿ
ಮುತ್ತಿನಾ ಮಳೆ ಸುರಿಸಲು
ನೆಲವ ನೆನೆಸಿ ನೆರೆದ ಹನಿಗಳು
ಕೂಡಿ ಕಿರುತೊರೆ ಹರಿಯಲು

ಪುಟ್ಟ ಕಂದನ ಮನದಿ ಹುಟ್ಟಿತು
ಮಳೆಯಲಾಡುವ ಆಸೆಯು
ಅಪ್ಪನ ಕೈಯಲಿ ಮೂಡಿಬಂತು
ಕಾಗದದ ಪುಟ್ಟ ದೋಣಿಯು

ಮರ್ಸಾನ್ ಎಲೆ ಛತ್ರಿ ಹಿಡಿದು
ಮಳೆಯ ತುಂತುರು ನಡುವಲಿ
ಬಯಲ ನೀರಲಿ ದೋಣಿ ಬಿಡೆ
ಹರುಷ ಹರಿಯಿತು ಮೊಗದಲಿ.

ಬಾಲ್ಯದಾ ಸಿಹಿ ನೆನಪು ಮರಳಿ
ಅಪ್ಪನು ಮತ್ತೆ ಮಗುವಾದರು
ಅಮ್ಮ ನೋಡಿ ಕೋಪತಾಳಲು
ಇಬ್ಬರೂ ನಟಿಸುತ ನಕ್ಕರು.

.... ... ... .... .... ....
✍🏼 ತ್ರಿನೇತ್ರಜ್
5-3-18
ಶಿವಕುಮಾರ. ಹಿರೇಮಠ.

Friday 2 March 2018

*ಚುನಾವಣೆ*


[02/03, 5:46 p.m.]
ಕವನ

 
*ಚುನಾವಣೆ*

ಬಂತು ಚುನಾವಣೆ ಮತ್ತೆ
ಸ್ವಾಗತ ಸುಸ್ವಾಗತ
ನಾಸಿಕಕೆ ನವನೀತ ನಾತ
ಇದು ಅವರಿಗೆ ಕರಗತ

ಮನ ಮನೆಗಳ ಒಡೆಯುವ
ಧ್ವಜಗಳ ಹಾರಾಟ
ಜಿದ್ದಾಜಿದ್ದಿಗೆ ಬಲಿಎಷ್ಟೋ
ಅಧಿಕಾರಕ್ಕೆ ಹೊರಾಟ

ಹಳ್ಳಿ ಹಳ್ಳಿಗೂ ಸಾಂಕ್ರಾಮಿಕ
ಬಾಂಧವ್ಯದ ಬಿರುಕು
ಪಾರ್ಟಿಗಳ ಪೈಪೋಟಿಗೆ
ಸಂಬಂಧದಿ ಒಡಕು

ಜನಸೇವಕರಿವರು ಅದ್ಹೇಗೆ
ನಾಯಕರಾಗಿ ನಿಂತರು?
ಜನಬಲಕೆ ಕಣಕ್ಕಿಳಿದರು
ಕೋಟಿಗಳ ಸಿರಿವಂತರು

ಪ್ರಜಾಸೇವೆಗೆಂದೇ ಹಾಕಿ
ನಿಷ್ಠೆಯ ಮುಖವಾಡ
ತೋರುವರು ಗೆದ್ದಮೇಲೆ
ಸ್ವಾಭಿವೃದ್ಧಿಯ ಪವಾಡ

ಪ್ರಜೆಯನ್ನು ಪ್ರಭು ಎನ್ನುವ
ಕಾಲವೂ ಬಂದೀತೆ?
ಮುಗಿಯಲೊಮ್ಮೆ ಚುನಾವಣೆ
ನಮ್ಮ ಬವಣೆ ತಪ್ಪೀತೆ?
.... .... ..... .... ....
✍🏼  ತ್ರಿನೇತ್ರಜ್

ಶಿವಕುಮಾರ. ಹಿರೇಮಠ


Tuesday 27 February 2018

*ಹುಸಿಕೋಪ*

   

*ಹುಸಿಕೋಪ*
[06/12/2017, 8:50 p.m.]
.... .... .... .... ....
ಕೆಲ ತಿಂಗ್ಳು ಸುಮ್ಮ್ನಿದ್ದೆ,
ಇದ್ದಂತೆ ಮಾತಿನಲ್ಲಿ ಓಟೆ.
ಜಾಸ್ತಿಯಾಗಿದೆ ಇತ್ತೀಚೆಗೆ
ಅದೇಕೊ ನಿನ್ನ ಗಲಾಟೆ!!

ಊಟಕೆ ತಡವಾದರಷ್ಟೇ!
ಶುರು ಮಾಡುವೆ ಗಲಾಟೆ.
ನನ್ನ ಊಟವಾಗೋತನಕ
ನಿಲ್ಲಲಾರದು ನಿನ್ನ ತಂಟೆ.

ಎನೇನೋ ಬೇಕೆಂಬ ನಿನ್ನ
ಉದ್ದುದ್ದದ ಆಸೆ,ಬೇಡಿಕೆ.
ನಿನ್ನಿಂದ ನನಗೆ ಹೆಚ್ಚುತ್ತಿವೆ
ದಿನವೂ ನೂರು ಬಯಕೆ.

ಆಟವಂತೆ ಆಟ! ಆಡುತ್ತ
ಕೊಡುತ್ತೀಯ ಈ ಒದಿಕೆ.
ಮುದ್ದಿಕ್ಕಿ ಗುದ್ದು ಕೊಡುವೆ
ಬಾ ಮೊದಲು ಹೊರಕ್ಕೆ.
..... .... ..... ..... ..... ...
..✍🏼 ತ್ರಿನೇತ್ರಜ.
ಶಿವಕುಮಾರ. ಹಿರೇಮಠ.

ಪ್ರಾಣಸಖಿ


     
       ಪ್ರಾಣಸಖಿ
      ---------------
ಬಾಲ್ಯದಲಿ ಜೊತೆಯಾದೆ,
ಪ್ರಾಣಸಖಿ ಎನಗಾದೆ .
ಏಕಾಂಗಿತನವನು ನೀ
ಬಂದು ನೀಗಿದೆ.
ಎನ್ನಯ ಒಡನಾಡಿಯಾದೆ.
ನೆಚ್ಚಿನ ಒಡನಾಡಿಯಾದೆ.|ಪ|

ಪಾಠದಲಿ ಜೊತೆಯಾದೆ,
ಆಟದಲೂ ಬಲವಾದೆ;
ರಂಗೋಲಿ ಕಲಿಸಿದೆ,
ಜೋಕಾಲಿ ಜೀಕಿದೆ.
ನನ್ನಮ್ಮ ಬೈದಾಗ
ಬೆನ್ನಸವರಿ ರಮಿಸಿದೆ.
ಕೈಗೆನಗೆ ಮದರಂಗಿಯ
ಹಾಕಿ ನೀ ಸಂಭ್ರಮಿಸಿದ್ದೆ.|೧|

ನನ್ನ ಮದುವೆಯಲ್ಲಿ
ಕುಣಿದು,ದಣಿದು;
ನನ್ನ ಸಿಂಗರಿಸಿ,
ನಕ್ಕೂ ನಲಿದು;
ಪತಿಮನೆಗೆ ಹೊರಟಾಗ
ಇಲ್ಲದ ನಗುತಂದು,
ಮನದಲ್ಲೆ ಅಳುವ ನುಂಗಿದೆ.
ಬಿಟ್ಟಿರಲು ನಾನೂ ನೊಂದೆ.|೨|

ಉಸಿರಿರುವ ವರೆಗೂ
ನಿನ್ನನೆಂದೂ ಮರೆಯೆ.
ಸಾಯುವ ಮುನ್ನ
ನಿನ್ನಕಾಣ ಬಯಸುವೆ.
ಮತ್ತೊಂದು ಜನ್ಮದಲೂ
ಮನ ನಿನ್ನ ಬಯಸಿದೆ.
ಈ ಜೀವದ ಗೆಳತಿಯಾದೆ.|೩|

... ... ... ... ... ... ... ... ...
✍...ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

ಸಬಲೆ


 
         ಸಬಲೆ
ನವಭಾವಗಳ ಬೆನ್ನೇರಿ,
ಸದಾ ನನ್ನ ಕಾಡಿಬೇಡಿ;
ಪ್ರೀತಿಯ ಸೂರೆಗೈದು
ಹಚ್ಚಿಟ್ಟೆ ಒಡಲಲಿ ಕಿಡಿ.

ಕನಸ ನೂರು ತೋರಿ,
ಮನದಣಿಯೆ ಈಜಾಡಿ;
ಈಗೆನ್ನ ತೊರೆದು ನೀ
ಹೊರಟೆಯಾ? ಹೇಡಿ!

ಜಾರದಿರು ನೀ ನೇಸರ.
ಬಂದು ಬೆಳಗೀ ಬಾಳು.
ಮುನಿದು ಸಾಗೆ ದೂರ.
ನನ್ನಂತೆ ಭುವಿ ನೂಂದಾಳು.

ಪ್ರೀತಿಕೊಂದವ ಇವನು,
ಛೀ! ಅಲ್ಲೆನಗೆ ಸರಿಜೋಡಿ
ಕಡಲೇ ಬಾ ಮೇಲೇರಿ.
ಬರುವೆ ನಿನ್ನೊಡಗೂಡಿ.

ಛೇ! ಛೇ!ನಾನೆಂಥ ಕ್ರೂರಿ?
ಜನಿಸಬೇಕು ನನ್ನೊಡಲಕುಡಿ.
ದಿಟ್ಟೆ ನಾ; ಸಾಧಿಸಿತೋರುವೆ.
ಜಗ ನಗುವುದು ನಿನ್ನ ನೋಡಿ.
    .... .... ..... .... ..... ....
 ✍.. ತ್ರಿನೇತ್ರಜ.
        ಶಿವಕುಮಾರ.ಹಿರೇಮಠ.

ಹತ್ತು ಹನಿಗವನಗಳು-೧

ಹನಿಗವನ-1

 ಸಮರಸ
----'''''----
ಪತಿತೆಯೊಡನೆ ಸರಸಕ್ಕಿಂತ
ಸತಿಯೊಡನೆ ವಿರಸ
ಸಮರವೇ ಲೇಸು.
ಸೋತರೂ ಗೆದ್ದರೂ
ಸಮರಸವೇ ಆಗುವುದು ಬಾಳು.
..... ...... ....... .......

ಹನಿಗವನ-2

          ಬಂಧಿ
-------'''-----
ಸರಸವನ್ನರಸಿ ನಿನ್ನ
ತೋಳಸೆರೆಯಲಿ ಸೇರಿದ
ಸಮಯದಿಂದ ನಾ
ಸದ್ದಿಲ್ಲದೆ ನನ್ನ ಸ್ವಂತಿಕೆಗೆ
ತೋರಿದೆ ಸಾವಿನೂರ.
ತಾಯಿಯಾದಳು ದೂರ,
ಬದುಕೀಗ ಬಲುಬೇಸರ.
...... ..... ..... .... .....
✍..ತ್ರಿನೇತ್ರಜ.

ಹನಿಗವನ -3

[19/11, 6:59 p.m.]
       ಸತ್ಯ ಕಹಿ
..... ...... ..... ......
'ಮುಖ ಪುಸ್ತಕ'ದಲ್ಲಿನ  
ಭಾವಚಿತ್ರಕೆ ಸೋತು👩🏻
'ಪ್ರೀತ್ಸೊಣ ಬಾ' ಎಂದ್ಬುಟ್ಟೆ.
ಮನೆಗ್ಬಂದ್ಬುಟ್ಟು, ನಿನ್ನ  👧🏾
ಮುಖತೋರ್ಸಿ ನನ್ನ
ಹೃದಯಾನೇ ಒಡದ್ಬುಟ್ಟೆ.😳🤢😭

ಹನಿಗವನ -4
[19/11, 8:46 p.m.]

     ಏಕೆ ಹೀಗಾಯ್ತೊ?
...........................

ಪ್ರೇಮಿಗಳ ದಿನ ಅವಳೆಂದಳು
'ಸೆಲ್ ಒಂದು ತಂದುಕೊಡಿ'.
ಒಂದೇ ಏಕೆಂದು ಎರಡು
ಎವರೆಡಿ ತಂದು ಕೊಟ್ಟೆ ನೋಡಿ.
ಅಂದಿನಿಂದ ದೂರಾದಳಲ್ಲ! ನನ್ನ ಹೃದಯವಾಯ್ತು ಒಡೆದ ಕನ್ನಡಿ.
...   ...   ...   ...   ...   ...   ... ...
✍..ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

ಹನಿಗವನ -5
[20/11, 8:45 p.m.]
.... ... ... .... .... .... ... ....
         ಅರ್ಥ ಆಯ್ತು ಬಿಡಿ!!    
        ----------------
ಜಪಾನ್ ಅಲ್ಲ ಇದು ನಮ್ಮ  ಭಾರತ.
ಮತ್ಯಾಕೆ ಇವರಿಗೆ ಈ ಧಾವಂತ?
ತಾಲೀಮು ನಡೆಸಿ ಸಜ್ಜಾಗುತ್ತಿದ್ದಾರೆ  ಇವರುಗಳು.
ಆಗಲು ನಮ್ಮ ದೇಶದ ಭಾವಿ
ಅಧಿಕಾರಿಗಳು!!
ತಪ್ಪಿದ್ರೆ ದೇಶೊದ್ಧಾರಕ ಭಾವಿ
ರಾಜಕಾರಣಿಗಳು!!!
 ...   ...   ...   ...   ...   ...   ... ...
✍..ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

ಹನಿಗವನ -6
[26/11, 8:42 p.m.]
........................
    ಪರಿಸರ ಬಂಧು
..........................
"ದುಡ್ಡೇ ದೊಡ್ಡಪ್ಪ" ಎಂಬ
ಮಾತೀಗ ಹಳತಾಯ್ತು.
ಪರಿಸರವೇ ಪ್ರಾಣಮೂಲ
ಎಂಬುದು ಮನನವಾಯ್ತು.
ತಿಮ್ಮಕ್ಕನ ಕಾರ್ಯಕ್ಕೆ
ತಲೆಬಾಗುವಂತಾಯ್ತು.
ಖಗಕೆ ನೆಲೆ,ಮೃಗಕೆ ಛಾಯೆ;
ಕೀರ್ತಿ ಅಜರಾಮರವಾಯ್ತು.
... ..  ...  ...  ...  ... ...
✍.. ತ್ರಿನೇತ್ರಜ.

ಹನಿಗವನ -7
[27/11, 7:08 p.m.]

  ಕನ್ನಡಿಗನಾಸೆ

ಹೆಸರಾಯಿತು, ಉಸಿರಾಯಿತು;
ಜಗದ ಹಸಿರಾಗಲಿ ನಮ್ಮ ಕನ್ನಡ.
ನುಡಿಯಾಯ್ತು,ಬರಹವಾಯ್ತು;
ಹಾಸುಹೊಕ್ಕಾಗಬೇಕಿದೆ ಕನ್ನಡ.
............................
✍..ತ್ರಿನೇತ್ರಜ.


[27/11, 9:00 p.m.]
ಹನಿಗವನ -8
ಕ್ಷಮಿಸಿಸಲ್ಲ.
................
ಕನ್ನಡ ಎನೆ ಎದೆ ಉಬ್ಬುವುದಿಲ್ಲ?
ಕನ್ನಡ ಎನೆ ಕಿವಿ ನಿಮಿರುವುದಿಲ್ಲ?
ನಿನ್ನದೊಂದು ಜನ್ಮವೇ ಅಲ್ಲ.
ಅನ್ಯಭಾಷೆಯ
ದಾಸ್ಯಕೆ ಜಾರಿಹರನ್ನ
ಕನ್ನಡಾಂಬೆ ಕ್ಷಮಿಸುವುದೂ ಇಲ್ಲ.
................
✍..ತ್ರಿನೇತ್ರಜ

ಹನಿಗವನ -9

 *ಪರೀಕ್ಷೆ* 
ಕಾದೆ, ಕಾದು ಸಾಕಾದೆ
ಆದರೂ ಇದೆ ನಿರೀಕ್ಷೆ
ಜಿಡ್ಡುಗಟ್ಟಿದೀ ಮನಕೆ
ನೀಡು ಕೊಂಚ ದೀಕ್ಷೆ
ಈಜಿ ಸಾಧಿಸಲೇಬೇಕು
ದೇವರಿಟ್ಟ ಈ ಪರೀಕ್ಷೆ
        ............
✍🏼 ತ್ರಿನೇತ್ರಜ್

 ಶಿವಕುಮಾರ. ಹಿರೇಮಠ

ಹನಿಗವನ -10
ಆಹಾ!   ಕನ್ನಡ..
......................
ಹೃದಯಕ್ಕೆ ಹಗುರ,
ಅಧರಕ್ಕೆ ಮಧುರ,
ಕನ್ನಡದ ನುಡಿಸಾರ,
ಹೀರೇ; ಪಂಡಿತನಂತೆ
ಈ ಪಾಮರ!

ಬರೆದರೆ ಬಂಗಾರ,
ಜ್ಞಾನಪೀಠ ಹಂದರ,
ಕರುನಾಡ ಶೃಂಗಾರ,
ಕನ್ನಡ ಸವಿನುಡಿಯು
ಸವಿ ನಾದಸ್ವರ.
.....................
✍..ತ್ರಿನೇತ್ರಜ
ಶಿವಕುಮಾರ.ಹಿರೇಮಠ.

Wednesday 21 February 2018

*ಯಾರಿಗಾಗಿ?*


*ಯಾರಿಗಾಗಿ?*
09/12/2017, 1:57 p.m.

   

ದೇಶದ ಬೆನ್ನೆಲುಬುಗಳ
ಏಣಿಮಾಡಿ ಏರುತಿರುವವರೆ
ಯಾರಿಗಾಗಿ? ನಿಮ್ಮಾಟ
ಯಾರಿಗಾಗಿ?

ಚಿಂತೆಯಿಲ್ಲದ ನಾಯಕರು
ಮತ ಹಬ್ಬಗಳು ಬಂದಾಗ,
ಮೊಸಳೆ ಕಣ್ಣೀರಿಂದ ಖಾಲಿ
ನಡೆಸುವ ಸಂವಾದ ಯಾರಿಗಾಗಿ?

ಒಣಗಿದ ತೆಳು ಮೋಡಗಳು
ನೋಡಿ ನೋಡದಂತೆ ಸಾಗುವಾಗ ,
ತಾಸುಗಟ್ಟಲೆ ಅರಚುವ
ಚಿಂತಕರ ಸಂವಾದ ಯಾರಿಗಾಗಿ?

ಸೆಟೆದುಹೋದ ಪೈರನು
ನೋಡಲಾಗದ ಬಡದೇಹ
ಒಣಮರಕೆ ನೇತಾಡುವಾಗ,
ಬುದ್ಧಿಗಳ ಸಂವಾದ ಯಾರಿಗಾಗಿ?
----------------
..✍🏼 ತ್ರಿನೇತ್ರಜ.
ಶಿವಕುಮಾರ. ಹಿರೇಮಠ.

*ದಾಹ*

‌‌‌‌ಭಾವಗೀತೆ
       *ದಾಹ*
[12/12/2017, 7:24 p.m.] 
ದಾಹವೆಂಬ ಭಾವನಾದವು
ತುಂಬಿಕೊಂಡು ತನುಮನ
ತಣಿಯದಂತ ತುಡಿತದಿಂದ ತಳಮಳಿಸಿಹುದು ಜೀವನ.

ತೋಟದಲ್ಲಿ ತುಂಬಿದೆ
ಅಗಣಿತಕಲ್ಪ ಸಿಹಿ ಫಲ.
ಕೈಗೆಟುಕದ ಎತ್ತರಕ್ಕಿದೆ!
ಯತ್ನಿಸದಿರೆ ಏನುಫಲ?

ಹಸಿವ ನೀಗಲು ಕುಡಿದೆನು
ಮನದಣಿಯೇ ಜ್ಞಾನ ಜಲ.
ಎತ್ತರೆತ್ತರಕ್ಕೆ ಏರಲು ಎನಗೆ
ಕೂಡಿಬರಲಿ ಬೇಗನೆ ಕಾಲ.

ಶ್ರೇಷ್ಠರು ನೀಡಿಹೋಗಿಹ
ಜ್ಞಾನಕಣಜವೇ ಬೆನ್ನಿಗಿದೆ.
ಸಾಧಕರ ಶಿಖರವನೇರೊ
ಆಸೆ ಎದೆಯ ತುಂಬಿದೆ.

ಹಾರೈಕೆ ಹೆತ್ತವರದು
ಸದಾ ರಕ್ಷೆಯ ನೀಡಿದೆ.
ಗುರಿಯು ಬಲು ಎತ್ತರ
ಸಾಧಿಸುವೆ ಛಲಬಿಡದೆ.
~~~~~~~~~~~~~~
..✍🏼 ತ್ರಿನೇತ್ರಜ.
ಶಿವಕುಮಾರ. ಹಿರೇಮಠ.

*ಬನ್ನಿರೆಲ್ಲ ಶಾಲೆಗೆ*


 *ಬನ್ನಿರೆಲ್ಲ ಶಾಲೆಗೆ*
[29/5/2017, 10:54 a.m.]
   

ವಿದ್ಯೆಯೆ ಬಾಳಿನ ಬೆಳಕು
ಸಾಕ್ಷರರಾಗಿ ಜಗದೊಡನೆ ಮುನ್ನಡೆಯಬೇಕು.
ಬನ್ನಿರಿ ಬನ್ನಿರಿ ಶಾಲೆಯ ಕಡೆಗೆ
ಸಾಗೋಣ ಒಟ್ಟಾಗಿ ಬೆಳಕಿನ ಕಡೆಗೆ.|ಪ|

ವಿದ್ಯೆಯಿಲ್ಲದ ಬಾಳು ಹದ್ದಿಗಿಂತಕಡೆ.
ಕಲಿಯೋಣ ಅಕ್ಷರವ ಶಾಲೆಯೆಡೆಗೆ ನಡೆ.
ಸಾಕಿನ್ನು ಮೋಸಹೋಗೊ
ದಡ್ಡತನದ ಬಾಳು.
ಜ್ಞಾನವಂತರಾದರೆ ಇರದು
ಇಂಥ ಗೋಳು.|೧|

ಶಾಲೆಯಿದು ಸರ್ವಧರ್ಮ ದೇವಾಲಯವಣ್ಣ
ಶ್ರದ್ಧೆಯಿಂದ ವಿದ್ಯೆಯ ಕೃಪೆ ಪಡೆಯೋಣವಣ್ಣ
ನಲಿಯೋಣ ಕಲಿಯೋಣ
ಎಲ್ಲ ಬನ್ನಿರಿಲ್ಲಿ
ಸುಶಿಕ್ಷಿತರಾದರೆ ಕಷ್ಟಗಳಿನ್ನೆಲ್ಲಿ.|೨|

✍🏼 _ತ್ರಿನೇತ್ರಜ_

ಶಿವಕುಮಾರ.ಹಿರೇಮಠ.

ಕನ್ನಡವೆಮ್ಮ ನುಡಿಸಿರಿ

29/12/2017, 10:34 p.m.
 ಭಾವಗೀತೆ

ಕನ್ನಡವೆಮ್ಮನುಡಿಸಿರಿ


ಕನ್ನಡವೆಮ್ಮ ನುಡಿಸಿರಿ
ಕರುನಾಡೆ ನಮ್ಮ ಐಸಿರಿ|ಪ|

ಮಲೆನಾಡಿನ ಮಧುರ ಕನ್ನಡ

ಮಂಜುಳ ಗಾನದಂತೆ.
ಬಯಲುಸೀವೆಯ ಗಟ್ಟಿ ಕನ್ನಡ
ಫಿರಂಗಿ ಗುಂಡಿನಂತೆ.
ಮೈಸೂರಿನ ಮುದ್ದು ಕನ್ನಡ
ಮಲ್ಲಿಗೆಯು ಅರಳಿದಂತೆ.
ಗಡಿನಾಡಿನಲಿ ಉಲಿವ ಕನ್ನಡ
ಜೇನ್ ಬೆರೆತ ಹಾಲಿನಂತೆ...|೧|

ರನ್ನ,ಪೊನ್ನರ,ಪಂಪ ಜನ್ನರ
ಜೀವವಾಣಿ ಈ ನುಡಿಯು.
ಕುಮಾರವ್ಯಾಸರು ರಾಘವಾಂಕರು 
ಹಾಡಿಹ ರಸಝರಿಯು.
ಶರಣರ ವಚನ ದಾಸರ ಪದಗಳ, 
ಜನಪದ ಸಾಹಿತ್ಯದ ಬೀಡು
ಅಷ್ಟ ಜ್ಞಾನಪೀಠ ಗೌರವ ಪಡೆದಿಹ 
ಭುವನೇಶ್ವರಿಯ  ಹೊನ್ನಾಡು.|೨|

✍🏼 _ತ್ರಿನೇತ್ರಜ_

ಶಿವಕುಮಾರ.ಹಿರೇಮಠ.




✍🏼 ತ್ರಿನೇತ್ರಜ


ಶ್ರೀ ಶಿವಕುಮಾರ. ಹಿರೇಮಠ.
ಬಾಗಲಕೋಟೆ.
shivakumarh13 @gmail.com

*ಏಕಾಂಗಿನಿ*


      *ಏಕಾಂಗಿನಿ*
02/01, 8:42 p.m.
     

ದೂರತೀರವು ಆಸೆ ತೋರುತ
ದಿನವೂ ನನ್ನ ಸೆಳೆದಿದೆ.
ನೀರ ತೊರೆದು ಬಾನಿನೊಡನೆ
ಬೆರೆತ ಹಾಗೆ ತೋರಿದೆ.

ಬಂಧನದ ಬದುಕೇಕೊ
ಉಸಿರ ಕಿತ್ತುಕೊಳುತಿದೆ.
ಬತ್ತುತಿರುವ ಲಜ್ಜೆಯೇಕೊ
ದೂರದೂರ ಬಯಸಿದೆ.

ನಿಂತ ನೀರು ಈಜಲೆನಗೆ
ಒತ್ತಾಸೆಯ ತುಂಬಿದೆ.
ಕಂಬಿಕಿತ್ತ ಕಿಟಕಿಯೊಂದು
ಪರದೆ ಸರಿಸಿ ಕರೆದಿದೆ.

ವಿರಹದಿರಿತ ಸಹಿಸಲೆಂತು
ಮನಕೆ ತಿಳಿಯದಾಗಿದೆ.
ಹೃದಯಾಳದ ಸುಪ್ತ ಪ್ರಜ್ಞೆ
ದುಡುಕದಂತೆ ತಡೆದಿದೆ.

✍🏼 ತ್ರಿನೇತ್ರಜ

 ಶಿವಕುಮಾರ. ಹಿರೇಮಠ.

*ಮೂಕವೇದನೆ*



      *ಮೂಕವೇದನೆ* 
   
ಎಳಸು ಎಸಳುಗಳುಗಳಿಗೆ
ಚೀತ್ಕಾರ ತರುವ ನೋವು
ಎದೆ ಮೇಲೆ ಕ್ಷಣ ಕ್ಷಣವೂ
ಬಂದೆರಗಿದಂತೆಯೆ ಸಾವು

ದುಷ್ಟ ಹಾಸಿಗೆಯ ನಗು
ಹುಚ್ಚಾಟ ಹೊರಳಾಟ
ನಲುಗುವ ದಿಂಬುಗಳು
ಹೊಸಕಾಟ ಗೋಳಾಟ

ಸುಕೊಮಲ ಕುಸುಮಕೆ
ಏಕಿಂಥ ಈಟಿಯ ತಿವಿತ
ಕುದಿವ ಎದೆಯ ಬಿಸಿಗೆ
ಬೆಂದ ಮೈ ಬೆವರ ನಾತ

ಆಯಾಸದ ನಿದ್ರೆಯಲ್ಲೂ
ಮತ್ತದೇ ಕೆಟ್ಟ ಕೆಟ್ಟ ಕನಸು
ಕನಸೋ ಇಲ್ಲ ನಿಜವೋ
ಅರಿಯದಂತಹ ವಯಸು

ಬಾನಾಡಿಯಾಗಿ ಹಾರುವ
ಕನಸುಗಳೆಲ್ಲ ಸುಟ್ಟವು
ಬೇಡವಾದ ಬವಣೆಗಳ
ಭಾರಕ್ಕೆ ಕಾಲು ಕುಸಿದವು

ಗಿಡುಗನಿಗೆ ಸಿಕ್ಕ ಗುಬ್ಬಚ್ಚಿ
ಒದ್ದಾಡುವಂತಹ ಹಿಡಿತ
ತಿಂಗಳಾದರೂ ನೆತ್ತರು
ಕಾಣದಿರೆ ಭಯ ಆಘಾತ

ಹದಿನಾರರ ಹರಯಕೆ
ಬೇಡವಮ್ಮ ನರಕ ಶಿಕ್ಷೆ
ಕೇಳದೆ ಕೊರಳಿಗೆಬಿದ್ದ
ಭಿಕ್ಷೆ ಮಾಂಗಲ್ಯದ ರಕ್ಷೆ

✍🏼 ತ್ರಿನೇತ್ರಜ್

 ಶಿವಕುಮಾರ ಹಿರೇಮಠ

Monday 19 February 2018

ಓ ನನ್ನ ನಲ್ಲೆ

ಓ ನನ್ನ ನಲ್ಲೆ

         
💗💗💗💖💗💗💗
     
ಕುಣಿವಾ ಬಾ ಎನ್ನ ಚೆಲುವೆ.
ಬೇಡ, ನಮಗ್ಯಾರ ಪರಿವೆ.
ಸೆಳೆದಿದೆ ನಿನ್ನಯ ಒಲವು .
ಸೋತಿದೆ ಪ್ರಕೃತಿಗೆ ಮನವು.

ಇಳೆಗೆ ಮನಸೋತ ಭಾನು,
ಬಾನಲಿ ಚಿತ್ರ ಬಳಿದಿಹನು.
ಆ ನೇರಳೆ, ತಿಳಿಹಸಿರನ್ನು
ಹರಡಿ ಹಿನ್ನೆಲೆ ನೀಡಿಹನು.
'ಮಿಲನಕೆ ಮುನ್ನುಡಿಯಂತಿದೆ ನೋಡು, ಲಾಸ್ಯವಾಡು' ಎನುತಿಹನು.

ಮನದ ದುಗುಡನು ತೊರೆದು,
ಚಿಂತೆಯ ಕಾರ್ಮೋಡ ಕಳೆದು,
ಜಗವೆದುರಿಸೋ ಛಲವ ತಳೆದು
ನರ್ತನ ಗೈಯೋಣ ಬಾ ಇಂದು.
ಜೊತೆಯಲೆ ಸಾಗುವೆ ಓ ನನ್ನ ನಲ್ಲೆಯೆ
ನಿನ್ನ ಕೈಹಿಡಿದು ಎಂದೆದು.
..... .... .... .... ..... ..... ....
✍..ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

*ಗಮನೆ *

*ಗಮನೆ *
          
[09/02, 11:09 a.m.]
     
ತಾಳದೆ,ತೋಳಲಾಡಿದೆ
ಆಸೆಭರಿತ ಭಾವನೆ
ಕಲ್ಪಿಸಲಾಗದ ಕಲ್ಪನೆ
ಸರಿದೂಗದಾ ಸ್ಪಷ್ಟಣೆ
ಹರೆಯವು ಮೈದುಂಬಿ
ಬಂದೆ ನಾ ದೈವವ ನಂಬಿ

ಜನನಕಾಲದಿಂ ಎದೆಯ ಗೂಡಲಿ
ಮೂಡಿಹುದಿದೊಂದು ಹೆಬ್ಬಯಕೆ
ಅದಮ್ಯವಾದ ಆಸೆಯು ಎದ್ದಿದೆ
ತಾಳ್ಮೆಯೆ ಬೇಡ ಈ ಮನಕೆ
ಈಡೇರುವುದೆಂದೋ ನಾ ಕಾಣೆ
ಈ ವೇದನೆಗೆ ಯಾರು ಹೊಣೆ
ನರನಾಡಿಯೊಳೆಲ್ಲ ನುಡಿದಿದೆ
ಝೇಂಕರಿಸುತಾ ರುದ್ರ ವೀಣೆ

ಇಳಿದೆ, ಇಳೆಯ ಸೆರಗಲಾಡಿ
ತೊರೆದೆ ತವರನು ಓಡಿದೆ
ತಂದೆ ಸುರಿದ ಪ್ರೀತಿಯ ಮಳೆಗೆ
ಉಬ್ಬಿದೆ ಹಬ್ಬಿದೆ ತುಳುಕಾಡಿ
ಸೊರಗಿದೆ ಸಣ್ಣಾದೆ
ರವಿಯ ಸುಡುತಾಪಕೆ
ಬೆಂದುಹೋದೆ ಬತ್ತಿಹೋದೆ
ಆಸೆಯ ಮಾತ್ರ ಬಿಡದಾದೆ

ಬೇರುಗಳ ಸವಿ ಹೀರುತ ಬನದಲಿ
ಬಳುಕಿದೆ ಬಂಡೆಗಳ ಸವೆಸುತಲಿ
ಕಾರ್ಗತ್ತಲಲಿ ಬೆಚ್ಚಿದೆ ನಾ ಭಯದಿ
ಅವಡುಗಚ್ಚಿ ಸಾಗಿದೆ ಮೌನದಲಿ
ಹುಡುಕುವೆ ಹೊಸಹಾದಿ
ಹೇಗಿದ್ದರೂ ನಾ ನದಿ
ಸಾಗುತಿರುವೆ ಅರಸಿ ಭರದಿ
ಹುಡುಕಿ ಬೆರೆಯವೇ ಸಾಗರದಿ
*** *** **** **** ****
✍🏼 ತ್ರಿನೇತ್ರಜ್

 ಶಿವಕುಮಾರ. ಹಿರೇಮಠ.

Sunday 18 February 2018

ಲಾಲಿ ಹಾಡು

ಲಾಲಿ ಹಾಡು
         
ನಯವಾಗಿ ಕಣ್ಸೇರಲು
ನಿದಿರಾದೇವಿ ಬಂದಿಹಳು|
ಹೊಂಗನಸ ತೋರಲು
ನಿನ್ನ ಕರೆದೊಯ್ಯುವಳು|

ಮಲಗೆನ್ನ ಮಗುವೆ,
ನಾ ಲಾಲಿ ಹಾಡುವೆ.
ಲಾಲಿ ಜೊ ಜೊ ಲಾಲಿ||ಪ||

ಗೆಜ್ಜೆಕಾಲು ಕುಣಿದು ಸುಸ್ತಾಗಿವೆ.
ನೋಟವಾಡಿ ನಯನ ದಣಿದಿವೆ.
ಅಮೃತವ ಹೀರಿದ ಅಧರಗಳು
ವಿಶ್ರಾಂತಿಯನ್ನು ಬಯಸಿವೆ.
ಮಲಗೆನ್ನ ಸಿರಿಯೆ, ತಾರೆಗಳ
ದೊರೆಯೆ||೧||

ಪರಿಪೂರ್ಣ ಜೀವನ ನಾಕಂಡೆ.
ತಾಯ್ತನ ಸುಖವ ನಾನುಂಡೆ.
ನಿನ್ನ ಮುಗುಳುನಗೆಯೊಂದೆ
ಹಿಗ್ಗಿನ ಹೊನಲೆಂದು ಮನಗಂಡೆ.
ತೆಕ್ಕೆಯೊಳು ಹಾಯಾಗಿರು ಒಲವಿನ ಗಿಣಿಯೆ||೨||

ನಿನ್ನಿಂದ ಮನೆ ಸಗ್ಗಾಯಿತು,
ಹಗ್ಗಿನ ಹೊನಲು ಹರಿದಾಡಿತು.
ಮನೆಯ ಕೀರ್ತಿ ಕಲಶ ನೀನಾಗು
ಈ ಜಗಕೆ ನೀ ಮಾಡು ಒಳಿತು.
ಮನೆಗೆ ನಂದಾದೀಪ  ಓ ಕಂದ
ನಿನ್ನೀ ರೂಪ||೩||
.... ..... .... .... .... ... ....
..✍ತ್ರಿನೇತ್ರಜ.

ಅನುಬಂಧ

 ಕವನ
ಅನುಬಂಧ
             


ಊರುತಾ ಬೇರುಗಳ
ನನ್ನೆದೆಯ ಅಂತರಾಳಕೆ,
ಚಿಗುರೊಡೆದು ಬೆಳೆಯಲು
ನಿನ್ನ ಹೊಸ ನೂರಾಸೆ;
ಆಸರೆಯಾಗುವೆ ನಾನು,
ಭರವಸೆಯು ನನ್ನ ಮೇಲಿರಲಿ.

ಪ್ರೇಮದಿಂದಲಿ ನೀ ನೀಡಿದ
ಕೈ ಹಿಡಿದಿರುವೆ,ಅಳುಕದಿರು.
ಚಾಚುತ್ತ ಬೆಳೆ ನವಿರಾಗಿ
ಹಚ್ಚ ಹಸಿರಿನ ಕನಸುಗಳ
ಆ ನೀಲಿಯ ಬಾನೆತ್ತರಕೆ;
ನಿನಗೆನ್ನದೆಲ್ಲವೂ ಮೀಸಲಿರಲಿ.

ಸುರಿವ ಮಳೆ ನೀರನು
ಹೀರಿ ಒಡಲಾಳದೊಳು
ಕಾಯ್ದಿರಿಸುವೆ ಎಂದಿಗೂ,
ಬಾಡದಿರು ನೀನು ತೃಷೆಗೆ.
ಅಂಜದಿರು ಗಾಳಿ ರಭಸಕ್ಕೆ
ನಂಬಿಕೆಯು ಭದ್ರವಾಗಿರಲಿ.

ನಿನ್ನ ಹೂವೊಳು ಅರಳಿ
ಫಲಗಳಲಿ ಸಿಹಿರಸವಾಗಿ
ಬೆರೆತು ಒಂದಾಗುವೆನು.
ನನ್ನ ತೋಳಿಗೆ ಬಂದಿಳಿವ
ನಿನ್ನರೂಪಗಳ ಬಚ್ಚಿಡುವೆ;
ಇಂಥ ಕೈಸೇರಿ ನಿನ್ನಂತಾಗಲಿ.
 ... .... .... .... .... ...
✍..ತ್ರಿನೇತ್ರಜ.

ಬಾ ಹೋಗೋಣ ಶಾಲೆಗೆ


         
     ಬಾ ಹೋಗೋಣ ಶಾಲೆಗೆ

'ಅಕ್ಕ ನೋಡೆ ಶಾಲೆದಿರಿಸಲಿ
ಹೇಗೆ ಒನಪಾಗಿ ಹೋರಟಿಹರು!
ಅವರು ನಮ್ಮಯ ಸ್ಥಿತಿ ನೋಡಿ
ಗೇಲಿಯ ಮಾಡಿ ನಕ್ಕಾರು'..?

ಸಂತೈಸಲು ತಮ್ಮನಿಗೆಂದಳು,
'ಅವರತ್ತ ನೀ ನೋಡದಿರು.
ನಮ್ಮ ಭಾಗ್ಯವಿರುವುದಿಷ್ಟೇ,
ತರುವ ಬಾ ಕೆರೆಯ ನೀರು.

ಇವರ ಕಂಡು ಮರುಕಗೊಂಡು
ಬಾಲೆಯರು ಇವರ ತಡೆದರು.
'ಶಾಲೆಬಿಟ್ಟು ಎತ್ತ ಹೊರಟಿರಿ'?
ಎಂದವರನು ಕೇಳಿದರು.

ಅಕ್ಕ ತಮ್ಮ ಮುಖನೋಡಿಕೊಂಡು
ಬೇಸರದಿಂದಲೆ ನುಡಿದರು.
'ಶಾಲೆಗೆ ಎಂದೂ ಹೋಗೇ ಇಲ್ಲ.
ನಾವು ಕೂಲಿಮಾಡೋ ಬಡವರು'.

ಚಿಂತಿಸದಿರಿ ನಿಮ್ಮವರಿಗೆ
ತಿಳಿಹೇಳ್ವೆವೆಂದರಾ ಬಾಲೆಯರು.
ಶಾಲೆಗಾಗಿ ನಾವು ನೀವು;
ನಿಮ್ಮ ಹಕ್ಕು ಕೊಡೆಸುವೆಂದರು.

ಶಾಲೆಗೆ ಸೇರಿಸುವರೆಂದು ಅರಿತು
ಮಕ್ಕಳು ಸಂತಸಗೊಂಡರು.
ಕೂಲಿ ತೊರೆದು ಶಾಲೆ ಸೇರಿ
ಓದಲು ಉತ್ಸುಕರಾದರು.
..... ...... ...... ...... ..... ...
✍... ತ್ರಿನೇತ್ರಜ.
        ಶಿವಕುಮಾರ. ಹಿರೇಮಠ.


ಕಾಯಕಯೋಗಿ


          ಕಾಯಕಯೋಗಿ
            
ಹಚ್ಚಿದ ದೀಪ
ಹೆಚ್ಚೊತ್ತು ಇರದೆ
ತಿಳಿಗಾಳಿಯನೂ
ತಾ ತಾಳದೆ ಆರಿದೆ.

ಕತ್ತಲೇನಿಲ್ಲ ದೀಪದ
ಕೆಳಗೂ, ಸುತ್ತಲೂ;
ಸ್ಪಷ್ಟ ಬೆಳಕಿದೆಯಲ್ಲಾ
ಅತ್ತ-ಇತ್ತ ಎತ್ತೆತ್ತಲೂ!

ಆದರೂ ಹತ್ತುವೆ
ಮತ್ತೆ ಮತ್ತೆ ಹಚ್ಚಲು.
ಅದು ಬೆಳಗಬೇಕೆಂದು,
ಬೆಳಕನಿನ್ನೂ ಹೆಚ್ಚಿಸಲು.

'ಮೆದು-ಮೇಣದಬತ್ತಿ'
ಎಂಬುದದರ ಹೆಸರು.
ತಲೆ ಇರುವ ನನಗೆ
'ದೀಪದಕಡ್ಡಿ'ಎನ್ನುವರು.

ನನ್ನಂಥವರೆ ನನ್ನ
ಹತ್ತಿಸಿ ಉತ್ತೇಜಿಸಿದ್ದು.
ನನ್ನವರ ಕೊಡುಗೆಯೇ
ನನಗೆ ಏಣಿಯಾಗಿದ್ದು.

ದೀಪಗಳ ಹಚ್ಚುವುದೇ
ಸದಾ ನನ್ನ ಕಾಯಕ.
ಜ್ಞಾನದ ಬೆಳಕಿಗಾಗಿಯೇ
ಹುಟ್ಟಿ-ಸಾಯ್ವ ಶಿಕ್ಷಕ.
...   ...   ...   ...   ...   ...   ... ...
✍..ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

*ಕವಿಭಾವ*


*ಕವಿಭಾವ*
[30/01, 8:55 p.m.]

ಮರಳುತಿಹನದೋ ರವಿ
ಮಾಡಿ ಜಗದ ಯಾತ್ರೆಯ
ಮರಳಿದೆವು ನಾವೂ ಸಹ
ಮುಗಿಸಿ ದೇವರ ಜಾತ್ರೆಯ

ಸೂರ್ಯ ರಂಗು ಹರಡಲು
ನಾಚಿ ನಿಂತಿಹುದು ಬಾನು
ಹೃದಯದೊಳು ಬಂಧಿಸಲು
ಹವಣಿಸುತಿತ್ತು ಬಲೂನು

ಮೆಲ್ಲಗೆ ಆಡಿಹವು ಅಲೆಗಳು
ಗಗನದ ಅಂದವ ಮೆಚ್ಚುತ
ನಮ್ಮ ಹೊತ್ತು ಸಾಗಿದೆ ದೋಣಿ
ಅಲೆಗಳೊಡನೆ ಸರಸವಾಡುತ

ಜಗದಂದವನೆಲ್ಲ ನೋಟದಿ
ಸೂರೆಗೊಂಡೆನೆಂದ ರವಿ
ರವಿ ಕಾಣದುದನೂ ಸಹ
ತಾನು ಕಂಡಿಹೆನೆಂದನು ಕವಿ
✍🏼 ತ್ರಿನೇತ್ರಜ



ಈ ಕ್ಷಣವನು ಬದುಕಿಕೊ

ಕವನ
               
 *ಈ ಕ್ಷಣವನು ಬದುಕಿಕೊ.*

[17/02, 11:32 a.m.]

ಹಣೆಬರಹವನು ಬಲ್ಲವರಿಲ್ಲ
ನಾಳೇನೆಂಬುದ ಕಂಡವರಿಲ್ಲ
ಕಾಣದ ಭವಿತವ
ಚಿಂತಿಸಿ ಚಿಂತಿಸಿ ಇಂದನು
ಸವೆಸುವ ಹುಚ್ಚೇಕೆ?
ನೆಮ್ಮದಿಯಿಂದ ನೆಮ್ಮದಿಗಾಗಿ
ಜಗಕ್ಕೆ ನೆಮ್ಮದಿ ನೀಡಲು
ಯೋಚನೆ ನಿಲ್ಲಿಸು ಮನುಜ.
ಈ ಕ್ಷಣವನು ಬದುಕಿಕೊ

ಅವರಿವರೊಂದಿಗೆ ನಿನ್ನ
ಅಳೆಯುವೆಯೇಕೆ
ನೀನು ನೀನೆ ಎಂಬುದ
ಮರೆಯುವೆಯೇಕೆ
ಮರುಳಾಗದಿರು ಪರರ
ಸತ್ತು ಹೊತ್ತೊಯ್ಯದ
ಸ್ವತ್ತು ಆಡಂಬರಕೆ,
ಯೋಚನೆ ನಿಲ್ಲಿಸು ಮನುಜ.
ಈ ಕ್ಷಣವನು ಬದುಕಿಕೊ.

ಯೋಚಸಲೇಬೇಕೆಂದರೆ
ದೀನ ದುರ್ಬಲರ ಏಳ್ಗೆಗೆ,
ಖಗ ಮೃಗಗಳ ಬಾಳಿಗೆ
ಹಸಿರು ಸೊರಗಿಹ ಭೂಮಿಗೆ
ಮನಕುಲದ ಉಳಿವಿಗೆ
ನೀನೇನು ಮಾಡಬಲ್ಲೆಯೆಂದು ಯೋಚಿಸು.ಅದಾಗದಿರೆ
ಯೋಚನೆ ನಿಲ್ಲಿಸು ಮನುಜ.
ಈ ಕ್ಷಣವನು ಬದುಕಿಕೊ.

ಬದುಕು ಚಿಕ್ಕ ಯಾತ್ರೆ
ಸ್ವಾರ್ಥ ಚಿಂತನೆಗಳ ಬಿಡು
ದುಡಿದು ಉಂಡುಟ್ಟು
ಬದುಕು,ಅದನೆ
ಮಕ್ಕಳಿಗೂ ಕಲಿಸು
ಆತ್ಮ ಸುಡುವ ಚಿಂತೆಯನಟ್ಟಿ
ಪರಮಾತ್ಮನೆಡೆಗೆ ಮನವಿಡು
ಯೋಚನೆ ನಿಲ್ಲಿಸು ಮನುಜ.
ಈ ಕ್ಷಣವನು ಬದುಕಿಕೊ.
🤘🏼🤘🏼🤘🏼🤘🏼🤘🏼🤘🏼🤘🏼🤘🏼🤘🏼
✍🏼 ತ್ರಿನೇತ್ರಜ

 ಶಿವಕುಮಾರ. ಹಿರೇಮಠ

*ಶಿವಾರಾಧನೆ*

*ಶಿವಾರಾಧನೆ*
[13/02, 3:06 p.m.]
       
ಜಟಾಧಾರಿ ನೀಲಕಂಠ
ಜಯ ಜಯ ಶಿವ ಶಂಕರ
ಕೈಲಾಸಪ್ರಿಯ ಜಯ ತ್ರಿನೇಶ್ವರ
ಪಾಪಹರ ಕರುಣಾಕರ

ಅಭಿಷೇಕ ಪ್ರಿಯ ನಂದಿಸವಾರ
ಕರುಣಾಸಾಗರ ತ್ರಿಶೂಲ ಧರ
ಬಿಲ್ವಾರ್ಪಣೆಗೆ ಸಂತಸಪಡುವ
ನಿರಾಡಂಬರ ನಾಗಧರ ||೧||

ರುದ್ರಾಕ್ಷಿ ಪ್ರಿಯ ಗಜಚರ್ಮಾಂಬರ
ಧ್ಯಾನ ಪ್ರೀಯ ಗೌರೀವರ
ಢೀಂಢೀಂ ಡಮರುಗ ನಾದಪ್ರಿಯ
ಶ್ರೀ ಚಂದ್ರಮೌಳಿ ಘೃಷ್ಣೇಶ್ವರ ||೨||

ಸಾಂಬಸದಾಶಿವ ಶಂಭೋ ಹರಹರ
ಮಹಾದೇವ ಪ್ರಳಯಾಂತಕರ
ಸರ್ವಾಭಿಷ್ಟವನೀಡೇರಿಸುವವ
ಮೃತ್ಯುಂಜಯ ಅಭಯಂಕರ ||೩||

ಲಿಂಗ ರೂಪಧರ ಓಂಕಾರೇಶ್ವರ
ಮಹಾರುದ್ರ ಜಗದೀಶ್ವರ
ಬಕುತಿಗೆ ಒಲಿವ ಬಸ್ಮಧರ
ಪಾರ್ವತಿ ಪತಿ ಗಂಗಾಧರ ||೪||
🕉🕉🕉🕉🕉🕉🕉🕉🕉
✍🏼.. ತ್ರಿನೇತ್ರಜ

 ಶಿವಕುಮಾರ. ಹಿರೇಮಠ.

*ಚಂದದ ಮೂನು*

*ಚಂದದ ಮೂನು*
[01/02, 6:46 p.m.]
🌔🌓🌒🌑🌘🌗🌖🌕
ಜನವರಿ ಮೂವತ್ತೊಂದು
ಹದಿನೆಂಟನೆ ಇಸ್ವಿಯಂದು

ನಭ ನೀಡಿ ವಿಸ್ಮಯವನು
ತಂತು ಚಂದ್ರ ಗ್ರಹಣವನು

ಚಂದ್ರಂಗಂದು ಗ್ರಸ್ತೋದಯ
ನಾಲ್ಕು ರಾಶಿಗೆ ಕೊಂಚ ಭಯ

ಗಗನದಿ ಕಾಣುತ ಬ್ಲಡ್ಮೂನು
ಬಲು ಚಕಿತಗೊಂಡೆನು ನಾನು

ಮಾಸದಿ ದ್ವಿ ಹುಣ್ಣಿಮೆ ಈಸಾರಿ
ಬ್ಲೂಮೂನ್ಗೆ ಆದೆ ನಾ ಆಭಾರಿ

ತೋರಿ ಜಗಕೆ ಸೂಪರ್ ಮೂನು
ಎಲ್ಲರ ಗಮನ ಸೆಳೆಯಿತು ಬಾನು


✍🏼 ತ್ರಿನೇತ್ರಜ

ಶಿವಕುಮಾರ.ಹಿರೇಮಠ

*ರವಿ ಸ್ತುತಿ*

ಭಕ್ತಿ ಗೀತೆ
[25/01, 9:59 a.m.]
 🌞🌞 *ರವಿ ಸ್ತುತಿ* 🌞🌞
ಭಾಗ್ಯವ ನೀಡೋ ಭಾಸ್ಕರ
ದಿನಕರ
ಶಕ್ತಿಯ ಆಕರ ಪ್ರಭಾಕರ ||ಪ||

ಸಂದ್ಯಾ ಛಾಯೆಯ ಅನುರೂಪದವರ
ಅಂಧಕಾರವ ಕಳೆಯುವ ನೇಸರ
ಹನುಮಗೆ ಗುರುವಾದ ಕರುಣಾಸಾಗರ
ಮೂಡಿಸೋ ಎನ್ನಲಿ ಜ್ಞಾನದ ಸಾಕಾರ ||೧||

ಯಮ ಯಮಿ ಶನಿಗೆ ಜನುಮದಾತನೆ
ಅಶ್ವಿನಿ ಕುಮಾರರ ಸೃಜಿಸಿದವನೆ
ಸಪ್ತಾಶ್ವದ ರಥಾರೂಢ ಪ್ರಖರನೆ
ಬಾಳನು ಬೆಳಗು ಬಾ ಆದಿತ್ಯನೇ||೨||
☀☀☀☀☀☀☀☀☀
✍🏼 ತ್ರಿನೇತ್ರಜ್

*ಕಾಲನಿಗೆ ಮನವಿ*

*ಕಾಲನಿಗೆ ಮನವಿ*
[23/01, 8:18 p.m.]

ಓಡು ಓಡು ಓಡು
ಓ ಸಮಯವೇ
ನಿಲ್ಲದಿರು ಎಂದಿಗೂ
ನಿನ್ನೊಡನೆ ಬರುವೆ

ಏನೇ ಆಗಲಿ ನೀ
ಚಲಿಸದಿರು ಹಿಂದೆ
ಕಾಲನ ನಿಯಮವ
ಮರಿಬೇಡ ಮೌನದೆ

ಮೇಲೇರುತ ಇರು
ನೀ ಎಂದಿನಂತೆಯೆ
ನಾನೂ ಮೇಲೆರುವೆ
ನೋಡು ನಿನ್ನಂತೆಯೆ

ಒಮ್ಮೆ ನೀ ಕೆಳಗಿಳಿದರೆ
ಈ ಲೊಕಕೆಲ್ಲಾ ಫಜೀತಿ
ನನ್ನ ಪಾಡಂತೂ ಅಷ್ಟೇ
ಇನ್ನೇನು ದೇವರೇ ಗತಿ!

✍🏼.. ತ್ರಿನೇತ್ರಜ್