Tuesday 31 October 2017

ಕವನ 'ಪ್ರಾಪ್ತೆಯ ಅಂತ್ಯೋಕ್ತಿ'


ಪ್ರಾಪ್ತೆಯ ಅಂತ್ಯೋಕ್ತಿ 


ಎದೆಯೂಳು ಬೆಂಕಿಯ ಕಡಲು;
ಉರಿಯೊಳು ಬೆಂದಿದೆ ಒಡಲು.
ಬಾಳುವ ಬಯಕೆ ಇನ್ನೆಲ್ಲಿ? 
ಹರೆಯದ ಕನಸು ಹರಿದಿರಲು;
ದುರುಳರು ದುಃಸ್ವಪ್ನ ರಾಚಿರಲು
ಕಾಣಲೇನುಳಿದಿಲ್ಲ ಜೀವನದಲ್ಲಿ. 

ವಾಂಛೆಗಳಿಗೆ ಮನ ಜಾರಿತ್ತು.
ನಂಬಿಕೆಯೇ ಮೋಸಗೈದಿತ್ತು.
ಮಾಸದ ಗಾಯ ಹೃದಯದಲ್ಲಿ.
ಇದೋ ವಿದಾಯ ಪರ್ವತವೇ,
ಧನ್ಯವಾದಗಳು ಪವನವೇ,
ಹರಸಿ; ಪ್ರಾಪ್ತೆಯ ಅಂತ್ಯದಲ್ಲಿ.

ಬಾಡಿ ಬರಡಾಗಿಹೆನು ನಾನು.
ಮಲಗಲು ಬರುತಿರುವೆನು
ಚಿರನಿದ್ರೆಗೆ ನಿನ್ನ ಭೂಮಡಿಲಲ್ಲಿ.
ಎದೆಗಪ್ಪಿಕೊಂಡು ಸಂತೈಸು;
ಮುಕುತಿಯನ್ನು ಕರುಣಿಸು.
ಹುದುಗಿಸೆನ್ನನು ನಿನ್ನೆದೆಯಲ್ಲಿ.
     .....     ......    .....
ತ್ರಿನೇತ್ರಜ.
ಶಿವಕುಮಾರ.ಹಿರೇಮಠ.


Friday 27 October 2017

ಕವನ "ದಾರಿ ತೋರುಬಾ ಬೆಳಕೆ"



 ದಾರಿತೋರು ಬಾ  ಬೆಳಕೆ

ಕವಿಯುತಿಹ ಕತ್ತಲೆಯು
ಕಣ್ಣ ಕುರುಡಾಗಿಸಿಹುದು
ನನ್ನನ್ನು ಭಯಪಡಿಸುತಲಿ.
ದಣಿದ ರವಿಯದೋ
ಅತ್ತ ಮರೆಯಾಗುತಿಹನು
ವಿರಾಮವನು ಬಯಸುತಲಿ.

ಹರೆಯದ ಮರುಳ ಮಬ್ಬು
ಮೈದುಂಬಿರಲು, ರಾತ್ರಿಯ
ಆತಂಕ ನನ್ನಾವರಿಸುತ್ತಿದೆ.
ಸಂಸ್ಕಾರದ ನಂದಾದೀಪವೇ,
ಇರುಳೆಲ್ಲಾ ನೀನುರಿಯುತ
ಬೆಳಕೆನಗೆ ತೋರಬೇಕಿದೆ.

ನನ್ನ ಪುಟ್ಟ ಮನೆಯೊಳು,
ಮುಗುದತೆಯ ಹೊಸಕಲು
ನಿಶೆಯ ನಶೆ ನುಸುಳಬಹುದು.
ನಿನ್ನಯ ಸಾಂಗತ್ಯವಿರಲು
ನನಗದೆಷ್ಟೋ ನೆಮ್ಮದಿಯು,
ನಾ ಸುಖನಿದ್ರೆಗೈಯಬಹದು.

ನನ್ನ ಜೊತೆಯಾಗಿರು ಸಾಕು,
ನಿನ್ನನ್ನೇ ನಾ ನಂಬಿಹೆನು.
ನೀನಿರದೆ ನಾನು ಬದುಕೆ.
ಅಂಧಕಾರವನು ಅಳಿಸಿ,
ನೆಮ್ಮದಿಯನು ಕರುಣಿಸಿ,
ದಾರಿತೋರು ಬಾ ಬೆಳಕೆ.
  ..... ..... ..... ..... .....
✍  ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

Thursday 26 October 2017

"ಕವನವಿಶೇಷ"

            . ಕಾವ್ಯ ವಿಶೇಷ. 

ಕವನವು ಕಂಡ ಕಂಡವರು
ಗೀಚಬಲ್ಲ ಸಾಲುಗಳಲ್ಲ.
ಕವಿಋಷಿಯು ಭಾವದಲಿ
ಕಂಡ ಅನುಭವ ಜ್ಞಾನಫಲ.

ಅವರಿವರು ಬಯಸಿದಾಗ

ಗೆರೆಗಳ ಎಳೆವ ಚಿತ್ರವಲ್ಲ. 
ಕವಿ ಪದಗಳಲ್ಲುಕ್ಕಿಸೋ
ಆ ಕ್ಷಣದ ಭಾವನೆಗಳ ಜಲ

ಕವಿ ಬರೆದು ಮುಂದಿಟ್ಟರೆ
ಸಾಕೇ? ಇಲ್ಲ. ಶುದ್ಧ ತಪ್ಪು. 
ವಿಮರ್ಶೆಯ ಮೂಸೆಯಲದ್ದಿ
ಓದುಗ ಹೇಳಬೇಕು ತಪ್ಪು ಓಪ್ಪು.
          ..... ...... ...... ......
✍  ತ್ರಿನೇತ್ರಜ.

Tuesday 24 October 2017

ಕವನ "ಸಂಕಲ್ಪಿತ".

        ಸಂಕಲ್ಪಿತ

ಕಾಲೊಂದಿಲ್ಲದಿರೆ ಏನಂತೆ? ನಾನಿನ್ನ ಕಾಪಾಡುವೆ.
ಕಾಡುವ ಬಡತನವ ಎದುರಿಸಿ ಬಡಿದೋಡಿಸುವೆ.
ಕಾಲವಾದರು ಹೆತ್ತವರು ನಿನ್ನೆನಗೆ ಕರುಣಿಸಿ.
ಕಾಣಿಕೆ ಎಂದೇ ಭಾವಿಸಿ, ಬೆಳೆಸುವೆ ಬೆವರಿಳಿಸಿ.

ಅಂಗವೊಂದಿಲ್ಲದಿರೆ ಏನಂತೆ? ಆತ್ಮವಿಶ್ವಾಸವಿದೆ.
ಅಂಜಿಕೆಯ ಅಂಜಿಸುವ ಬಲವಾದ ಛಲವಿದೆ.
ಅಂಬೆಯು ತುಂಬಿರುವ ಅಕ್ಕರತೆಯ ಒರತೆಯಿದೆ.
ಅಂಕುರಿಸೋ ನಿನ್ನಾಸೆಗಳ ನನಸಾಗಿಸೊ ಆಸೆ ಇದೆ. 

ಕಾಲಿಲ್ಲದಿರೆ ಏನಂತೆ? ಇದ್ದವರ ನಾ ಮೀರಿಸುವೆ.

ಕಾಲ ಉರುಳಿದಂತೆ ನೀನು ಎನ್ನ ಬಲವಾಗುವೆ.
ಅನಂತಕಾಲ ನಿನ್ನ ಜೊತೆ ನೆರಳಾಗಿ ನಾ ಬಾಳುವೆ.
ಅಂತೆಯೇ ಹಣ್ಣುಮಾರಿ ಹಣ ಸಂಪಾದಿಸುತಿರುವೆ.
              .......   ........    ........   ........
    ✍  ತ್ರಿನೇತ್ರಜ.

Sunday 22 October 2017

Poem " Frustration".

                     Frustration     

Cut the trees; burn the forest.
Don't leave them for the rest.     
Dig the ground ; blast the hills. 
It's granted for vicious wills.

Run the mills; pollute the sky.
Next generation? Let them cry.  
Chemicalize all fruit & grain.
But you can't pure them again.
  
Drain the water; spoil the river;
Keep nothing good for future.
Sail the seas; kill my marine; 
Shout aloud,"Earth is mine".

Don't take me just as a treasure.
And only for your lustful desire
Not even just as rocks & mud.
All lives are my heart & blood.

No any feeling, except patience.
Waiting for your big ignorance.
Many Giants rumbled & extinct.
Beware; you're not so distinct.
           .....     .....     ......    ......
                ✍ Thrinethraja.


Shivakumara.Hiremath.

Saturday 21 October 2017

Poem ''To Centipede''

   
      

        To Centipede

I want now to count your feet,
But how?,you are too speed.
I'm not dangerous or a threat,
Are you shy or really worried? 
I wanted to catch you for play
when I was kid- just three.
Grandpa stopped and told me,
I shouldn't ever touch thee. 
Asked the reason to my mom,
And learnt;'you're venomous'.
I told the same to my chum.
He showed me your fangs. 
Now I dare to count your legs.
Stand before me centipede.
Don't go so quick you moron;
Where ever you hide,I'll find.
      ✍ Thrinethraja.
           (Shivakumara Hiremath)

Friday 20 October 2017

ಹನಿಗವನಗಳು.

               ಹನಿಗವನಗಳು

 *ಹನಿಯಿಂದ ಹಾನಿ*      
ಹೊಸದರಲ್ಲಿ ಈಕೆ ಎಂದರೆ    
ನನಗೋ ಸಿಹಿಜೇನ ಹನಿ.
ವರುಷ ಉರುಳಿದಂತೆ
ಬದಲಾದಳು ನನ್ನ ಹನಿ.
ಬೇಡಿಕೆಗಳಿಟ್ಟು, ಒಪ್ಪದಿರೆ
ಸುರಿಸುವಳು ಕಣ್ಣೀರ ಹನಿ
ಕರಗಿ ನಾನು ಒಪ್ಪಲು
ಜೇಬಿಗೆ ಭಾರೀ ಹಾನಿ.
✍🏼ತ್ರಿನೇತ್ರಜ.
----     ----     ----    ----    ----     ----
          ನದಿ
ಮೇಘಗಳಾವರಿಸಿದ
ಮೇರುಪರ್ವತದಲ್ಲುದಯಿಸಿ,
ಇಳೆಯ ಇಳಿಜಾರಲಿ ಇಳಿದು,
ಸಾಗರ ಸಖನ ಸೇರಲು,
ಹಾತೋರೆದು ಹರಿವವಳು.
       -------     ------      ------
          ವೈಷ್ಣವಿ
   ಆಂಗ್ಲ ದಲಿ ತನ್ನ ಹೆಸರು
   ಬರೆಯೆಂದಳು ವೈಷ್ಣವಿ.
   ಅಮೇರಿಕಾ ಗಂಡ ಬರೆದು
   ಕೊಟ್ಟ -whysnowwe.
----    ----     ----   ---   ---   ----
       ✍ತ್ರಿನೇತ್ರಜ
                 (ಶಿವಕುಮಾರ.ಹಿರೇಮಠ)

Wednesday 18 October 2017

ಕನ್ನಡ ಕವನ 'ದೀಪಾವಳಿ ಆಶಯ'

              ದೀಪಾವಳಿ  ಆಶಯ                         


ಹಣತೆಯ ಹಚ್ಚುತ ತಮಸ್ಸನು ತೊರೆವಾ 
ಬನ್ನಿ ಭಾರತದ ಬಂಧುಗಳೆ.
ಸಮತೆ ಸಾರುತ ಸಿಹಿಯನು ಹಂಚುವಾ;
ಸುರಿಸಿ ಪ್ರೀತಿಯ ಹೂಮಳೆ.

ಮತ್ತೇಕೆ ತಡವಿನ್ನು? ತನ್ನಿರಿ ಹಣತೆಗಳನು,
ಮನಸಿಚ್ಚೆ ಬೆಳಗಿ ಮನೆ-ಮನಗಳನು.
ಮನವಿಟ್ಟು ಕೋರುವೆ ನರಕ ಚತುರ್ದಶಿಗೆ, 
ಮತ್ತೆ ದೀಪಾವಳಿಗೆ ಶುಭಾಶಯಗಳನು.

ಸದ್ದನು ಮಾಡುತಾ ಸುಡದಿರಿ ಮದ್ದನು
ಸಾಕೆಮಗೆ ದೀಪದ ಹೊಂಬೆಳಕು.
ಸಡಗರದ ನೆಪದಿ ಪರಿಸರವ ಕೆಡಿಸದಿರಿ.
ಸದ್ದುಗದ್ದಲ ನಾವು ತಡೆಯಬೇಕು.

ತ್ರಿನೇತ್ರಜ.
............ಶಿವಕುಮಾರ.ಹಿರೇಮಠ.
               ಸರ್ಕಾರಿ ಪ್ರೌಢಶಾಲಾ ಶಿಕ್ಷಕರು.




Tuesday 17 October 2017

ಕನ್ನಡ ಕವನ 'ಮರಳಲ್ಲಿ ಮುರಳಿ '

ಮರಳಲಿ ಮುರಳಿ

ಮರಳಲಿ ಮೂಡಿಹ ಮುರಳಿಯ 
ಮಧುರವಾದ ಜೋಗುಳ.
ಮರಳಿ ತೋರಿ ನಂದಗೋಕುಲವ;
ಮಾಧವ ಕರೆದಿಹ ಗೋವುಗಳ.

ಮರಳಲ್ಲವೋ ಇದು ಮರುಳ,
ದ್ವಾಪರದ ತಿರುಳೋ;
ಮರಳಿ ಕಲಿಯುಗಕೆ ಬಂದಿಹ
ಮುಕುಂದನ ಮೋಡಿಗಳೋ.

ಮರಳೇ ನೀನು ಮರಳದಿರು,
ಸಾಗರನಲಿ ಸೇರದಿರು.
ಮತ್ತೆ ಬೃಂದಾವನದ ತೆರದಿ
ಮೋಹನನ ತೋರುತಿರು.

ಮರಳ ಕಣಕಣದಿ ಕಂಡಿದೆ 
ಮನ್ವಂತರದ ಕುರುಹು.
ಮರಳಿ ಅಲೆ ದಡವೇರದೆ?
   ಮರಳುಗಾರ ನೀ ಅರುಹು.
👁()👁
ತ್ರಿನೇತ್ರಜ.

ಶಿವಕುಮಾರ.ಹಿರೇಮಠ.
ಸರ್ಕಾರಿ ಪ್ರೌಢಶಾಲಾ ಶಿಕ್ಷಕರು.



Sunday 15 October 2017

ಕನ್ನಡ ಕವನ 'ಉತ್ತರ ಪಿನಾಕಿನಿ' .

              ಉತ್ತರ  ಪಿನಾಕಿನಿ

             

ಅಂತರ್ಜಲವೆಲ್ಲ ಸಾವಿರಾರು ಅಡಿಕುಸಿದಿದ.    ಆವಲ-ನಂದಿಬೆಟ್ಟಗಳ ನಾಡು ಕಾತರಿಸುತಿದೆ.  ಇತ್ತ ಆ ಎತ್ತಿನಹೊಳೆ ನಿಧಾನಗತಿ ತೋರುತಿದೆ.   ಊಹೆ ಮೀರಿ  ಈ ಬಾರಿ ಹಿಂಗಾರು ಹಾರೈಸಿದೆ.     ಹಲ ವರ್ಷಗಳಿಂದ ನಿನ್ನ ರಹದಾರಿ ಬಣಬಣ.    ನೀನುಕ್ಕಿಹರಿದರೆ  ಶ್ರೀನಿವಾಸ ಸಾಗರವು ಗೌಣ.     ಈ  ಬಾರಿ ದಾಟಿಬರಲು ತೊಡು ನೀನಿನ್ನು ಪಣ.        ಹರಸಲು ಕಾಯುತಿದೆ ವಿಧುರಾಶ್ವತ್ಥ ದೈವತಾಣ.      ಹರಿದು ಬಾರೆ ನೀ ಗಾಮಿನಿ. ಗಜಗಾಮಿನಿ.    ಅತಿ ಅಪರೂಪದ ಉತ್ತರ ಪಿನಾಕಿನಿ.                                ......                          ಶಿವಕುಮಾರ. ಹಿರೇಮಠ.                          ಸರ್ಕಾರಿ ಪ್ರೌಢಶಾಲಾ ಶಿಕ್ಷಕರು.

Saturday 14 October 2017

ಕನ್ನಡ ಕವನ 'ಮರೆಯಲಾರೆ '.


ಮರೆಯಲಾರೆ 

ಆ  ಹರೆಯದ ದಿನಗಳ 
ಮಧುರ ರೋಮಾಂಚನಗಳ 
ಹೊಸ ಬಗೆಯ ಅನುಭವಗಳ
ನಾ ಮರೆಯಲಾರೆ. 

ಜಗವ ನೋಡುವ ಪರಿ,
ತಪ್ಪದ ಹರಟೆ ಕಟ್ಟೆ ಹಾಜರಿ,
ಕಣ್ಮನ ಸೆಳೆಯುತಿದ್ದ ಪೋರಿ,
ನಾ ಮರೆಯಲಾರೆ.

ಸ್ಪರ್ಧೆಗೆ ಸಿದ್ದವಾಗುತ್ತಿದ್ದ ರೀತಿ 
ಪ್ರೋತ್ಸಾಹಿಸಿದ ಗೆಳೆಯರ ಪ್ರೀತಿ
ಗೆದ್ದ ಹಲವು ಬಹುಮಾನ, ಪ್ರಶಸ್ತಿ
ನಾ ಮರೆಯಲಾರೆ. 

ಚಿತ್ರಮಂಜರಿಗಾಗಿ ಕಾತರ
'ಮಹಾಭಾರತ'ಕ್ಕಾಗಿ ಆತುರ
ಕ್ರಿಕೆಟ್, ಸಿನಿಮಾ ಲೋಕವಿಹಾರ
ನಾ ಮರೆಯಲಾರೆ. 

ಪರೀಕ್ಷೆಗೆ ಪಟ್ಟ ಪ್ರಯಾಸ
ದೇವರುಗಳ ಮೇಲಿಟ್ಟ ವಿಶ್ವಾಸ 
ಫಲಿತಾಂಶದಿಂದುಂಟಾದ ಸಂತಸ
ನಾ ಮರೆಯಲಾರೆ. 

ಇತಿಹಾಸಕ್ಕಿಳಿದ ಪುಟಗಳು 
ಆ ಅಚ್ಚಳಿಯದ ನೆನಪುಗಳು.
ಬಣ್ಣ ಮಾಸಿದ ಅಂದದ ಚಿತ್ರಗಳು  
ಆ  ಹರೆಯದ ದಿನಗಳು.

ಶಿವಕುಮಾರ. ಹಿರೇಮಠ.
ಸರ್ಕಾರಿ ಪ್ರೌಢಶಾಲಾ ಶಿಕ್ಷಕರು.



Thursday 12 October 2017

ಕನ್ನಡ ಕವನ "ಬಾ ಬಾಲ್ಯವೇ".

                      

                  ಬಾ ಬಾಲ್ಯವೇ


        ಕೇಳಿದ್ದನ್ನು ಕೊಡುವೆ ನಾ
        ಬಾ ಮರಳಿ ಬಾಲ್ಯವೇ; 
        ಮನಸುಮಾಡೊಮ್ಮೆ,ನಿನ್ನ 
        ಮರಳಿ ಹೊಂದಬಯಸುವೆ.

        ಹದವಾಗಿ, ಮುದವಾಗಿ, ಬಲು 
        ಮೋಜು ಮಜವಾಗಿ ಜೊತೆಗಿದ್ದೆ.
        ಹಿತ್ತಲ ಗಿಡವೆಂಬಂತೆ ನಾ ಅಂದು
        ನಿನಗೆ  ನಿರ್ಲಕ್ಷ್ಯವ ತೋರಿದ್ದೆ.

       ಬೆಳೆಯಬೇಕು, ಕಲಿಯಬೇಕು;
       ಕಾಣದ ಗುರಿಯ ನಾ ಬೆಂಬತ್ತಿದ್ದೆ.
       ಬೇಗ ದೊಡ್ಡವ ನಾನಾಗಬೇಕು
       ಎಂದೆಲ್ಲಾ  ಆಗ ಹಂಬಲಿಸುತ್ತಿದ್ದೆ.

        ಓದಿ ಪದವಿಗಳ ನಾ ಗೆದ್ದು
       ಉದ್ಯೋಗ ಹೊಂದಿ ಬೀಗಿದೆ.
       ಸಂಸಾರಸಾಗರಕೆ ಆಸೆಬಿದ್ದು 
       ಮಡದಿ ಮಕ್ಕಳನೂ ಪಡೆದೆ.   

       ಒತ್ತಡ-ಖಿನ್ನತೆ,ಆತಂಕಾದಿಯಾಗಿ;
       ನುಗ್ಗುತಿವೆ ನನ್ನ ಸೋಲಿಸೋಕೆ.
       ಎದುರಿಸಿ ಗೆಲ್ಲುವೆ; ಬಳಲಿರುವೆ;
        ಜಗದ ಓಟಕೆ, ನಿತ್ಯ ಜಂಜಾಟಕೆ.

       ಮಕ್ಕಳ ಬಾಲ್ಯವ ನೋಡುತಲಿ
       ಮತ್ತೆ ನಾ ಮಗುವಾಗಬಯಸುವೆ.
       ಮನದ ಆಸೆ ತಣಿಸಲಿನ್ನೊಮ್ಮೆ,
       ಮರಳಿ ಬರಲಾರೆಯಾ ಬಾಲ್ಯವೆ?

                                     ಶಿವಕುಮಾರ. ಹಿರೇಮಠ.
                                           ಸರ್ಕಾರಿ ಪ್ರೌಢಶಾಲಾ  ಶಿಕ್ಷಕರು.




       

     



       






Saturday 7 October 2017

ಕನ್ನಡ ಕವನ "ಬೆಂ ಮಳೆ"

            ಬೆಂಮಳೆ             

       ನದಿ ಹರಿಯದೂರಲ್ಲಿ
      ರಸ್ತೆಯಲ್ಲೇ ನೀರಹೊಳೆ,
      ಲೆಕ್ಕತಪ್ಪಿ ಸುರಿಯುತ್ತಿದೆ 
       ಕುಂಭದ್ರೋಣ ಮಳೆ.

             ಕಾಂಕ್ರೀಟ್ ಬೆಂಗಳೂರಲ್ಲಿ 
             ಕೆರೆಗಳು ಕಳವು ಆಗುತಿರೆ;
             ಭೂಮಿಗೆ ಬರೆ ಎಳೆದಂತೆ
             ಟಾರು ರಸ್ತೆಗಳು ಹರಡಿರೆ;

      ಕೊಚ್ಚೆನೀರು ಹುಚ್ಚೆದ್ದು
      ನೊರೆಯುಕ್ಕಿ ಹರಿಯುತಿರೆ,
      ಕಾಣದ ಗುಂಡಿಹೊಂಡಗಳು
      ಬಲಿಗಾಗಿ ಬಾಯ್ತೆರೆದಿರೆ,

            ಕಾರು,ಬಾರು ಪ್ರೀಯರೇ,
            ಹುಷಾರು, ಪಾದಚಾರಿಗಳೇ.
            ಎಚ್ಚರ! ಎರಡ್ಗಾಲಿಯವರೆ.
            ಆಯತಪ್ಪೆ, ಬಾಳುಗೋಳೇ. 

      ಗುಡಿ - ಮನೆಗಳೆನ್ನದೆ 
      ಓಳ ನುಗ್ಗತ್ತಿದೆ ನೀರು.
      ಹಟ ಬಿಡು ಮಳೆರಾಯ,
      ಸುಸ್ತಾಗಿಹರು ಜನರು.
                    
                 ಶಿವಕುಮಾರ್.ಹಿರೇಮಠ್.
                   ಪ್ರೌಢ ಶಾಲಾ ಶಿಕ್ಷಕರು.

                                      
                           

             








Tuesday 3 October 2017

ಕನ್ನಡ ಕವನ 'ಕರಿಮಾಯಿ'.

                    ಕರಿಮಾಯಿ 


      ಕಾಳಧನವೆಂಬ ಕರಿಮಾಯಿ,
      ಖೂಳರ ಶಿರವನೇರಿರಲು;
      ಶ್ವೇತಲಕ್ಷ್ಮೀ ಕಠಿಣಾಮಯಿ,
      ಬಡವನ ಬೆವರಿಳಿಸುತಿರಲು;
      ಬಡರಾಜ ಪರಿತಪಿಸಿ ಭಜಿಸುತಿಹ
      'ನಮೋನಮೋ'  'ನಮೋನಮೋ'.

           ಸ್ವಂತತೆಯ ಬಲ ಬಂದೊದಗಿ
           ಸಪ್ತ ದಶಕಗಳು ಕಳೆದಿರಲು;
           ಗಲ್ಲಿಗಲ್ಲಿಗೂ ಕರಿಮಾಯಿ ನುಗ್ಗಿ, 
           ಭ್ರಷ್ಟ ಬಾಹುಗಳ ಚಾಚಿರಲು;
           ಮತದಾರ ದೀನನಾಗಿ ಕೂಗಿಹ
           'ನಮೋನಮೋ'  'ನಮೋನಮೋ'.

     ಸ್ವೇಚ್ಛೆಯು ಬಲ್ಲಿದರಿಗಾಗಿ
     ಸೆರಗಹಾಸಿ, ಸೆಳೆಯುತಿರಲು;
     ಸರ್ವಸುಖಸೌಖ್ಯಗಳಿಗಾಗಿ
     ಕರಿಮಾಯಿ, ಕನಸಬಿತ್ತುತಿರಲು;
     ಭರತವಾಸಿ ನಂಬಿ ಕರೆಯುತಿಹ 
     'ನಮೋನಮೋ'  'ನಮೋನಮೋ.
                        
                    ಶಿವಕುಮಾರ.ಹಿರೇಮಠ.   
                    ಪ್ರೌಢಶಾಲಾ ಆಂಗ್ಲ ಶಿಕ್ಷಕರು