*ಅವಲೋಕನ*
ಕಡಲನೆ ಸೀಳುತ ಚುಕ್ಕಿಯ ಕುಕ್ಕುತ
ಸಾಗಿದೆ ಮನುಕುಲ ದಿಗಂತದೆಡೆ
ಇಂದ್ರಪದವಿಯ ಭ್ರಾಂತಿಯ ಹೊತ್ತು
ನುಗ್ಗಿದೆ ಮಾಯಾಲೋಕದೆಡೆ
ಮಹಡಿ ಮಹಲುಗಳು ಮತ್ತು ರತ್ನಗಳು
ರಂಭೋರ್ವಶಿಯರ ವೈಯ್ಯಾರ
ಅಂತರ್ಜಾಲದೊಳು ಜಗವೇ ಕೈಯಲಿ
ದಿನದಿನವೂ ನವೀನ ಅವಿಷ್ಕಾರ
ಭೂಗರ್ಭದ ಗತ ಜೈವಿಕ ದ್ರವವನು
ಹೀರಿ ಉರಿಸುತಾ ಯಂತ್ರದಲಿ
ಜಲವನೆ ಧಣಿಸಿ ಮಿಂಚು ಮಾಲೆಯ
ಹೊಂಚಿ ಹರಿಸುತ ತಂತಿಯಲಿ
ಪ್ರೀತಿಯ ಮಾರುತ ಸ್ನೇಹವ ತೂರುತ
ಮರೆತು ಮಾನವತೆಯ ಬೇರನ್ನು
ಛೇದಿಸಿ ಅಣುವನೆ ಆಸ್ಪೋಟಿಸುತಲಿ
ಬೆಂಬತ್ತಿದೆ ಮಾಯಾ ಜಿಂಕೆಯನು
ಏನಿದು ಏನಿದು ತಾಂತ್ರಿಕ ಮಾಯೆ
ವಿಷವನು ಉಕ್ಕಿಸೋ ಆವೇಗ !
ನಶಿಸುತ ಕುಸಿದಿದೆ ಹಸಿರಿನ ಲೋಕ
ಬುವಿಗೆ ಹೆಚ್ಚಿದೆಯೋ ಉದ್ವೇಗ
ಬೇಡವೋ ಬೇಡವೋ ದುಸ್ಸಾಹಸವು
ಪ್ರಗತಿಯ ನೆಪದೊಳು ಅವಸಾನ
ಇರುವುದೊಂದೆಯೆ ಉಸಿರಿನ ಲೋಕ
ಉಳಿಸಲು ಹರಿಸೋಣ ವ್ಯವಧಾನ
*ಶಿವಕುಮಾರ ಹಿರೇಮಠ*
ದಾವಣಗೆರೆ
9945915780