Sunday 31 December 2017

*ಬನ್ನಿರೆಲ್ಲ ಶಾಲೆಗೆ* ಕವನ

*ಬನ್ನಿರೆಲ್ಲ ಶಾಲೆಗೆ* 

ಬನ್ನಿರಿ ಬನ್ನಿರಿ ಶಾಲೆಯ ಕಡೆಗೆ
ಸಾಗೋಣ ಒಟ್ಟಾಗಿ ಬೆಳಕಿನ ಕಡೆಗೆ.|ಪ|

ವಿದ್ಯೆಯಿಲ್ಲದ ಬಾಳು
 ಹದ್ದಿಗಿಂತಕಡೆ.
ಕಲಿಯೋಣ ಅಕ್ಷರವ
ಶಾಲೆಯೆಡೆಗೆ ನಡೆ.
ಸಾಕಿನ್ನು ಮೋಸಹೋಗೊ
ದಡ್ಡತನದ ಬಾಳು.
ಜ್ಞಾನವಂತರಾದರೆ ಇರದು
ಇಂಥ ಗೋಳು.|೧|

ಶಾಲೆಯಿದು ಸರ್ವಧರ್ಮ ದೇವಾಲಯವಣ್ಣ
ಶ್ರದ್ಧೆಯಿಂದ ವಿದ್ಯೆಯ ಕೃಪೆ ಪಡೆಯೋಣವಣ್ಣ
ನಲಿಯೋಣ ಕಲಿಯೋಣ
ಎಲ್ಲ ಬನ್ನಿರಿಲ್ಲಿ
ಸುಶಿಕ್ಷಿತರಾದರೆ ಕಷ್ಟಗಳಿನ್ನೆಲ್ಲಿ.|೨|

✍🏼 _ತ್ರಿನೇತ್ರಜ_

ಶಿವಕುಮಾರ.ಹಿರೇಮಠ.
9945915780
ಸಹ ಶಿಕ್ಷಕರು

Friday 22 December 2017

ಕಮರಿತು ಮೊಗ್ಗು


       ವಿಜಯಪುರದ ನಿರ್ಭಯಾಳಿಗೆ ನುಡಿ ನಮನ

       ಕಮರಿತು ಮೊಗ್ಗು

ಮೊಗ್ಗೊಂದು ಅರಳುವ ಮುನ್ನ
ಕಿತ್ತು ದುಷ್ಟರು ಯಮನಿಗಿತ್ತರು.
ಜಗವ ಅರಿಯುವ ಮುನ್ನವೆ
ಕಿತ್ತುತಿಂದು ತೀಟೆಗೆ ಕೊಂದರು.

ನಿಷೇಧಿಸಿದ ಗಾಂಜಾನಶೆಯು
ಗುಮ್ಮಟನಗರದಿ ನುಸುಳಿದೆ.
ರಕ್ಕಸರ ರಕ್ತದಲಿ ಬೆರೆತುಹೋಗಿ
ಕಾಮದಾಸೆಯ ಹುಚ್ಚಾಗಿಸಿದೆ.

ಕಲಿವ ಆಸೆಯ ಹೆಗಲಿಗೇರಿಸಿ
ಬಾಲೆ ಸಖಿಯೊಡನೆ ಸಾಗಿರಲು.
ಬುದ್ದಿಹೀನ ಕ್ರೂರ ಕಂಸರು
ಹೊತ್ತೋಯ್ದು ಹೊಸಕಿದರು.

ತಮ್ಮ ಮನೆಯ ಹೆಣ್ಣಂತೆಯೆ
ಇವಳೂ ಎಂಬುದ ಮರೆತರು.
ಹರಿಣಿಯ ಮೇಲೆ ಹಂದಿಗಳಂತೆ
ಆರ್ಭಟಿಸಿ ಉಸಿರ ಅಳಿಸಿದರು.

ಮಾನವರೇಕಾದರೋ ಇವರು
ನಾಯಿಜನ್ಮವೆಷ್ಟೋ ವಾಸಿ.
ನಗರಮಧ್ಯ ಗಲ್ಲುಗೈದರೂ
ಬದುಕಿ ಬಂದಾಳೆ ಸತ್ತ ಅರಸಿ?

✍🏼 ತ್ರಿನೇತ್ರಜ.

ಶಿವಕುಮಾರ. ಹಿರೇಮಠ.
ಸಹ ಶಿಕ್ಷಕರು
ಅನವಾಲ
ಬಾಗಲಕೋಟೆ.
[22/12, 5:09 p.m.] Shivakumara Hiremath:


Tuesday 5 December 2017

ಕಿರುಗಥೆ
......................
      *_ಪಾಪ ಪ್ರಜ್ಞೆ*_

      ತಡರಾತ್ರಿ ಪಟ್ಟಣದತ್ತ ಬೈಕ್ ಏರಿ ಬರುತ್ತಿದ್ದ ಕಾಮೇಶನಿಗೆ ದಾರಿಯಲ್ಲಿ ಮಹಿಳೆಯರ ಬ್ಯಾಗೊಂದು ಬಿದ್ದಿದ್ದು ಕಾಣಿಸಿತು.
ಯಾರೋ ಬೀಳಿಸಿಕೊಂಡು ಹೋಗಿದ್ದ ಬ್ಯಾಗಲ್ಲಿ ಲಕ್ಷ ಹಣ! ಗಾಡಿ ಬಾಕ್ಸನಲ್ಲಿ ಇಟ್ಟುಕೊಂಡು ಮನೆಗೆ ಬಂದ. ಒಳಗೆ ತರಲು ಅಳುಕಿ ಗಾಡಿಯಲ್ಲೇ ಬ್ಯಾಗ್ ಬಿಟ್ಟು ಒಳ ನಡೆದ.ರಾತ್ರಿ ನಿದ್ರೆ ಬರದೆ ಹೊರಳಾಡುತ್ತಲೇ ಇದ್ದ.
       ಹೆಂಗಸೊಬ್ಬಳು ಹಣ ಕಳೆದುಕೊಂಡದ್ದಕ್ಕೆ ನೊಂದು ಆತ್ಮಹತ್ಯೆಗೆ ರೈಲುಕಂಬಿ ಮಧ್ಯೆ ನಡೆಯುತ್ತಿದ್ದದ್ದ ಕಂಡ ಕಾಮೇಶ ಗಾಡಿ ಇಳಿದು ಅವಳತ್ತ ಓಡತೊಡಗಿದ.ರೈಲು ಬಂದೇಬಿಟ್ಟಿತು.
   " ಏ... ನಿಲ್ಲು.. ನಿಲ್ಲು.." ಕಾಮೇಶ ಕೂಗಿದ. "ನಿಂತಿದ್ದೀನಿ, ಅದೇನ್ ಹೇಳ್ರೀ".. ಧ್ವನಿ ಕೇಳಿ ಕಣ್ಣು  ಬಿಟ್ಟರೆ ಎದುರಿಗೆ ಹೆಂಡತಿ!!
ಬೆಳಕಾಗಿತ್ತು.
        ಬೇಗ ಬೇಗ ಸಿದ್ದನಾಗಿ ಪೋಲಿಸ್ ಠಾಣೆಯತ್ತ ಗಾಡಿ ಓಡಿಸಿದ. ಠಾಣೆ ಬಳಿ ಗಾಡಿ ಇಳಿದು ಬ್ಯಾಗ್ ಜೊತೆ ಒಳಗೆ ಹೋಗುವಾಗ ಎದುರಿಗೆ ಬಂದ ಮಹಿಳೆ " ಅರೇ..ಇದು ನನ್ನ ಬ್ಯಾಗ್, ನಿನ್ನೆ ಕಳೆದುಕೊಂಡಿದ್ದೆ.
ಈಗತಾನೆ ದೂರು ಕೊಟ್ಬಂದೆ" ಎಂದಳು. ಕಾಮೇಶನಿಗೆ ಅವನಿಗರಿವಿಲ್ಲದೆ ನಿಟ್ಟುಸಿರೊಂದು ಹೊರಬಿತ್ತು.
------------------
..‍✒ತ್ರಿನೇತ್ರಜ.
ಸ್ಪೂರ್ತಿ
          -------
ಬಣ್ಣದೊಡನೆ ಕುಂಚ ಆಡಲು
ಬೇಕೊಂದು ಚೆಲುವ ಸ್ಪೂರ್ತಿ.
ಕವಿ ಪ್ರಣಯ ಕವಿತೆಯಾಗಲು
ಬೇಕೊಂದು ಒಲವ ಸ್ಪೂರ್ತಿ.

ಕೊಳದ ತಾವರೆ ಅರಳಿ ನಗಲು
ಉದಯರವಿ ಕಿರಣ ಸ್ಪೂರ್ತಿ.
ಗಿರಿನವಿಲು ನಲಿದು ನರ್ತಿಸಲು
ಮಳೆಯ ಮೇಘವೆ ಸ್ಪೂರ್ತಿ.

ಮೌನದೊಲವ ಮಧುರಗಾನಕೆ
ಕಣ್ಣಂಚಿನ ಕುಡಿನೋಟವೆ ಸ್ಪೂರ್ತಿ.
ದೇಹ ಸೋಕಿ ಮನ ಬೆಸೆಯಲು
ಹೃದಯದ ಮಿಡಿತವೇ ಸ್ಪೂರ್ತಿ.

ಆಸಕ್ತಿ- ಕೌತುಕಗಳೆ ಮನುಜನ
ಜ್ಞಾನಾರ್ಜನೆಯ ಮೂಲಸ್ಪೂರ್ತಿ.
ದೇವನಿಟ್ಟಿಹ ನಿಗೂಢರಹಸ್ಯವೆ
ವಿಜ್ಞಾನ- ಶೊಧನೆಯ ಸ್ಪೂರ್ತಿ.
------------------------
✍.. ತ್ರಿನೇತ್ರಜ.

Monday 4 December 2017

ಲೇಖನ ಸ್ಪರ್ಧೆಗಾಗಿ

     ಕಸಬರಿಗೆಯ ವಿಶ್ವರೂಪ
    ------------------
      ಮನೆ ಎಂದ ಮೇಲೆ ಕಸಬರಿಗೆ ಇರಲೇಬೇಕಲ್ಲವೇ.ಹಾಂ! ಕಸಬರಿಗೆ ಎಂದ ತಕ್ಷಣ ಉದಾಸೀನದಿಂದ ಮುಖತಿರುವಬೇಡಿ. ಅದರ ಬಗ್ಗೆ ತಿಳಿಯಬೇಕಾದುದು ಬಹಳಷ್ಟು ಇದೆ.
          ಪೊರಕೆ, ಪರಕೆ, ಪರ್ಕಿ,ಕೈಸೂಡಿ, ಹಿಡಿಸೂಡಿ..ಇವು ಕಸಬರಿಗೆಯ ಸಮಾನಾರ್ಥಕ ಪದಗಳು.ಸಾವಿರಾರು ವರ್ಷಗಳ ಇತಿಹಾಸವಿರುವ ಇದರ ಬಗ್ಗೆ ಶಾಸ್ತ್ರ ಪುರಾಣ ಅಷ್ಟೆಯಾಕೆ ಬೈಬಲ್ ನಲ್ಲೂ ಉಲ್ಲೇಖ ಇದೆ. ತೆಂಗಿನ ಗರಿ,ಅಡಿಕೆ ಸೋದೆ,ಉದ್ದ ಹುಲ್ಲು,ಈಚಲು ಗರಿ ಇತ್ಯಾದಿ ಬಳಸಿ ಪೊರಕೆ ತಯಾರಿಸುತ್ತಾರೆ.ಒಣಗಿದ  ತೊಗರಿ ಗಿಡಗಳ ಒಗ್ಗೂಡಿಸಿ ಕಟ್ಟಿ ತಯಾರಿಸಿದ್ದಕ್ಕೆ ' ಬರ್ಲು' ಎನ್ನುತ್ತಾರೆ. ಗುಡ್ಡದಲ್ಲಿ ಬೆಳೆಯುವ ಒಂದು ಜಾತಿಯ ಗಿಡಗಳಿಂದ 'ಸಗಣಿ(ಹೆಂಡಿ) ಕಸಬರಿಗೆಯನ್ನು ಉತ್ತರ ಕರ್ನಾಟಕ ರೈತಾಪಿಜನ ಬಳಸುತ್ತಾರೆ.
     18ನೇ ಶತಮಾನದಲ್ಲಿ   ಆಧುನಿಕ ಕಸಬರಿಗೆಗಳನ್ನು ಪರಿಚಯಿಸಿವನು ಮೆಸಾಚುಸೆಟ್ ಪ್ರಾಂತ್ಯದ 'ಲೆವಿ ಡಿಕನ್ಸನ್' ಎಂದು ದಾಖಲೆ ಇದೆ.19ನೇ ಶತಮಾನದಲ್ಲಿ ಅಮೆರಿಕದ ಕ್ರಿಶ್ಚಿಯನ್ ಸಮುದಾಯದವರು 'ಚಪ್ಪಟೆ ಆಕಾರದಲ್ಲಿ ಪೊರಕೆಗಳನ್ನು ಪರಿಚಯಿಸಿದರು.20ನೇ ಶತಮಾನಕ್ಕೆ ಕೃತಕ ನಾರು ಪ್ಲಾಸ್ಟಿಕ್ ನಾರು ಬಳಸಿ ತಂತ್ರದಿಂದ ಪೊರಕೆಗಳು ತಯಾರಿ ಆರಂಭವಾಯಿತು.
 ಭಾರತದ ವಿಚಾರಕ್ಕೆ ಬಂದರೆ ಪೊರಕೆ ಕುರಿತು'ಶುಭಾಶುಭ ಶಾಸ್ತ್ರ' ದಲ್ಲಿ ಹಲವು ವಿಚಾರಗಳನ್ನು ತಿಳಿಸಿದ್ದಾರೆ.ಪೂರಕೆಯನ್ನು ಈಶಾನ್ಯದಲ್ಲಿ ಇಡಬಾರದು, ಗುಡಿಸುವವರು ಭಾಗ ಮೇಲ್ಮಾಡಿ ಇಡಬಾರದು, ಕಾಲಲ್ಲಿ ತುಳಿಯಬಾರದು, ತುಳಿದರೆ ಲಕ್ಷ್ಮಿಸ್ವರೂಪವೆಂದು ನಮಸ್ಕರಿಸಬೇಕು,...
ಮುಂತಾದ ವಿಷಯಗಳನ್ನು ತಿಳಿಸಲಾಗಿದೆ. ಇದನ್ನು ದೃಷ್ಟಿತೆಗೆಯಲು ಕೂಡ ಬಳಸುತ್ತಾರೆ. ಅನಾಚಾರಿಗಳಿಗೆ ಕಸಬರಿಗೆಯಿಂದ ಹೊಡೆದು ಸನ್ಮಾನಿಸುವುದೂ ಉಂಟು.
ಒಟ್ಟಿನಲ್ಲಿ ಪೂರಕೆಯು ಸಾಮಾನ್ಯ ಜನ(ಆಮ್  ಆದ್ಮಿ) ರಿಂದ (ಸ್ವಚ್ಛ) ಭಾರತದ ಎಲ್ಲರಿಗೂ ತನ್ನ ಮಹತ್ವ ತೋರಿದೆ.ಹಾಂ, ಅಂದಹಾಗೆ ಮನೆಯಲ್ಲಿ ಕಸಬರಿಗೆ ಬೇರೆಯವರಿಗೆ ಕಾಣದಂತಿರಿಸಲು ಮರೆಯದಿರಿ.
....   ....   .....   ...... ......
✍ತ್ರಿನೇತ್ರಜ.
 ಶಿವಕುಮಾರ.ಹಿರೇಮಠ.

Tuesday 28 November 2017



ಶಿವರೋದನ
 -- -- -- -- -- --
ನಿರಾಡಂಬರನ ಮೆಚ್ಚಿ ವರಿಸಿದ್ದ
ಅರ್ಧಾಂಗಿನಿ, ನನ್ನ ಹೃದ್ಯಮಣಿ.
ದುರುಳಪಿತನ ಯಜ್ಞಕುಂಡಕೆ.
ಧುಮುಕಿದ ಸತಿ ದಾಕ್ಷಾಯಿಣಿ.

ಹರಡಿಹುದು ಅಗ್ನಿಜ್ವಾಲೆಯು
ಇದೋ ನನ್ನಯ ಹೃದಯಕೆ.
ತಂಪನೆರೆಯಲಾರದೆ ಸೋತಿತು
ಮಂದ ಮಾರುತವೂ ಮನಕೆ.

ಅಲೆಯುತಿಹೆನು ಬುವಿಯುದ್ದಕು
ದಾರಿಯದೇಕೋ ಸಾಗದಾಯ್ತು.
ಏಕಾಂತವನ್ನರಸಿ ಹೊರಟಿಹೆನು
ವಿರಾಮವೇ ಬೇಡದಂತಾಯ್ತು.

ಲೋಕ ಕೈಂಕರ್ಯ ನನಗೆ ಸಾಕು;
ಶೂನ್ಯನಾದೆ ಭಾವನೆಗಳು ಕಮರಿ.
ಗಿಡ,ಮರ-ಬಳ್ಳಿ ,ಗಿರಿ-ಕಂದರಗಳೆ
ಎನಗೆನ್ನ ಪ್ರೀಯಸತಿಯ ತೋರಿರಿ.
--------------------------
✍..ತ್ರಿನೇತ್ರಜ.
ಶಿವಕುಮಾರ.ಹಿರೇಮಠ.

Monday 20 November 2017

ಅಕ್ಕಮಹಾದೇವಿ ಕುರಿತು ಕವನ


       

                  ಉಡುತಡಿಯ ದೀಪ್ತಿ

                  ------------------------

ಅಂಗದ ಭಂಗವ ಗೆದ್ದ ಅಕ್ಕಮಹಾದೇವಿ,
ಸಿರಿಗನ್ನಡಕ್ಕುಣಿಸಿದೆ ವಚನಾಮೃತದ ಸವಿ.

ಉಡುತಡಿಯಲ್ಲುದಯಿಸಿದ ಸದ್ಗುಣ ಶೀಲೆ.
ಓಂಕಾರಶೆಟ್ಟಿ-ಲಿಂಗಮ್ಮರ ಪ್ರೀತಿಯ ಬಾಲೆ.

ವಚನ ಭಂಗಕೆ ಕೌಶಿಕನ ಅರಮನೆ ತೊರೆದೆ.
ಸ್ತ್ರೀ ಸ್ವಾತಂತ್ರ್ಯಕೆ ಅಂದೇ ಮನ್ನುಡಿ ಬರೆದೆ.

ಮಾಯೆ ಮುಟ್ಟದ ದೀಪ್ತಿ ಹಾಗೆ ದಿಗಂಬರೆ.
ಕಾಮ ಕೆಡಿಸದ ವಿರಕ್ತಳು ನೀ ಕೇಶಾಂಬರೆ.

ಶಿವಾನುಭವದಲಿ ಜೀವದ ಭಂಗವ ಗೆದ್ದೆ.
ಅನುಭವಮಂಟಪದಲಿ ಸತ್ವಪರೀಕ್ಷೆ ಗೆದ್ದೆ.

ಶ್ರೀಚೆನ್ನಮಲ್ಲಿಕಾರ್ಜುನನೇ ಪತಿ ಎಂದಾಕೆ
ಕಡಿದು ತೇದರು ಕಂಪುಬಿಡದ ಚಂದನಚಕ್ಕೆ.

ನಿಂದಕರಿಗಳುಕದೆ ಮುನ್ನಡೆದ ಛಲಗಾರ್ತಿ
ಕರುನಾಡಿನ ಮೊಟ್ಟ ಮೊದಲ ವಚನಗಾರ್ತಿ

ಭಾವಶುದ್ಧಿಯಲಿ ಕರಗಲು ನಿನ್ನಯ ತನುಮನ
ನಿನ್ನಲ್ಲಿ ಕರಸ್ಥಲಗೊಂಡ ಚೆನ್ನಮಲ್ಲಿಕಾರ್ಜುನ
..... ..... ..... ..... ..... ..... ..... ..... ..... .....
✍...ತ್ರಿನೇತ್ರಜ.
    ಶಿವಕುಮಾರ.ಹಿರೇಮಠ.9945915780

Sunday 19 November 2017

ಕವನ " ಸತ್ಯ ದರ್ಶನ".


       ಸತ್ಯ ದರ್ಶನ

ನದಿದಡದಲಿ ಆಲಯದೆದುರು
ಅರಳಿಹ ಪಾರಿಜಾತ ನಾ.
ದೂರದಲಿ ಕಾಣುವ ಬೆಟ್ಟದ
ಅಂದಕೆ ಮರುಳಾಗಿಹೆ ನಾ.
ಅಲ್ಲಿಗೆನ್ನ ಕರೆದೊಯ್ಯಲು
ಕೇಳಿದೆ ವಾಯುವನು.
ಒಪ್ಪಿದ ಅವನಿಗೆ ಸವರಿದೆ
ನನ್ನ ಸುಗಂಧವನು.
ಗಾಳಿಯನೇರಿ ಸಾಗಿದೆ ನಾನು
ಬೆಟ್ಟದಾ ಬಳಿ ಕಾತುರದೆ.
ಕಲ್ಲು, ಪೊದೆ, ಮುಳ್ಳು, ಮಣ್ಣಿನ
ರಾಶಿ ನೋಡಿ ಅವಾಕ್ಕಾದೆ!!
'ಪವನನನೇ ತಡೆಯುವೆ'
ಎನ್ನುವನು ಆ ಹುಂಬ.
ಚಿಕ್ಕ ಪುಟ್ಟ ಹೂಗಳಿಗೋ
ಇನ್ನಿಲ್ಲದ ಒಣ ಜಂಭ.
ಬಂದ ದಾರಿಗೆ ಸುಂಕವಿಲ್ಲ!
ಮತ್ತೆ ಗಾಳಿಯ ಕೇಳಿದೆ.
'ನದಿ ಮೇಲೆ ಬಿಡು ನನ್ನ
ಆಲಯದ ದಡ ಸೇರುವೆ',                   "ಎಲ್ಲೂ ಇಲ್ಲದ್ದು ಅಲ್ಲೇಇದೆ".         ..... .... ..... .....
ತ್ರಿನೇತ್ರಜ.

ಕವನ 'ಗುರುನಮನ'

ಗುರುನಮನ

ಜ್ಞಾನದ ಕಡಲಲಿ ಈಜಲು ಕಲಿಸಿಹ
ಗುರುದೈವಕೆ ನಮನ.
ಬಾಳಿನದಾರಿಯ ಸುಗಮಗೂಳಿಸಿಹ
ಶಿಕ್ಷಕರಿಗೆ ನಮನ.

ಬೊಧನಾಕುಂಚದಿ ಹಲವು ಬಣ್ಣಗಳ
ಬಳಿದು ನಮ್ಮಯ ಬಾಳಿಗೆ,
ಸುಂದರ ಚಿತ್ತಾರ ಮಾಡಿದಿರೆಮ್ಮನು,
ತೋರಿಸಿದಿರಿ ಈ ಜಗದೆಡೆಗೆ.
ಜ್ಞಾನವ ನೀಡಿ, ಬೆಂಬಲ ತೋರಿ
ಶಿಲೆಯಲಿ ಕಲೆಯ ತುಂಬಿದಿರಿ

ಯಾವ ವೃತ್ತಿಯೂ ಕೈಗೂಡಲಾರದು
ಗುರುವೃತ್ತಿಯು ಕೃಪೆತೋರದಿರೆ.
ಯಾವ ಮನುಜನೂ ಸಾಧಿಸಲಾರನು
ಸುಗಮಕಾರರು ಜೊತೆಗಿರದಿರೆ.
ಹರ ಮುನಿದರೆ ಗುರು ಕಾಯುವರು.
ಶಿಕ್ಷಕ ಭಾಗ್ಯವ ತೋರುವರು.
..... ..... ...... ...... ..... ..... ..... ....
✍ತ್ರಿನೇತ್ರಜ.
ಶಿವಕುಮಾರ.ಹಿರೇಮಠ.

Friday 10 November 2017

ಭಾವಗೀತೆ. 'ನಗದಿರು ಚಂದ್ರಮ'

 ಭಾವಗೀತೆ.

       ನಗದಿರು ಚಂದ್ರಮ
🌙✨🌙✨🌙✨🌙
     
ಏಕೆ ನಗುವೆ ನನ್ನ ನೋಡಿ
ತಾರೆಯೊಡನೆ ಚಂದ್ರಮ?
ಅರಿಯದಾಗಿ, ಕೇಳುತಿಹೆನು
ಏಕೆ ನಿನಗೀ ಸಂಭ್ರಮ..?|ಪ|

ಏಕೋ ನಿನ್ನ ನಗೆಯೊಳಗೆ
ಕುಹಕ ಕಂಡೆ ಈ ದಿನ.
ಶೂಲದಂತೆ ನಾಟುತಿವೆ
ರಜತ ನೋಟದ ಬಾಣ.
ನೊಂದ ಮನಕೆ ನೋವನೀವೆ
ತರವೆ ನಿನ್ನೀ ವರ್ತನ.
ಮೋಡಗಳಲಿ ಮರೆಯಾಗು        
ಬೇಡ ನಿನ್ನ ಸ್ಪಂದನ......|೧|

ನಲ್ಲೆಯ ಮನವ ಅರಿಯದಾದೆ
ಬೇಸರವನು ತಂದೆನಾ.
ಅವಳಿಲ್ಲದೆನಗೇನಿದೇ
ಬೇಸರವೀ ಜೀವನಾ.
ಒಂಟಿತನವು ಮೂಡಿಸಿದೆ
ಎದೆಯಲೇನೋ ತಲ್ಲಣ.
ಮುನಿಸು ಮರೆತು ಬಾರಳೇ
ಕರೆವೆ ಹೇಳಿ ಕಾರಣ......|೨|

✍..ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

Monday 6 November 2017

ಕಥನ ಕವನ 'ಬೇಸತ್ತವಳು'

ಕಥನ ಕವನ.

    ಬೇಸತ್ತವಳು
.... ...... ..... .....
ಯಾಕರ ಹೆಣ್ಣುಜಲುಮ
ಕೊಟ್ಟೆಯೋ? ಶಿವನೇ! |
ಸಾಕಪ್ಪಾ ; ನಿನ್ನ ಪಾದಕ
ಸೇರಿಸಿಕೋ  ಬೇಗನೆ ||

ಕಟ್ಟಿಕೊಂಡವ ಕುಡುಕ ಗಂಡ,
ಜೂಜಿನ್ಯಾಗೇ ಮಳುಗೊ ಭಂಡ;
ಇವ್ನ ಚಟಕ ಹೊಲಮನಿ ದಂಡ,
ನಗತಾರ ಜನಾ ಬಾಳೇವ ಕಂಡ ||

ಮುಪ್ಪಾಗ್ಯಾರ ನನ್ನ ಅತ್ತಿ-ಮಾವ,
ಅವರಿಗಂತ ನಾ ಹಿಡದೀನಿ ಜೀವ;
ಸೋಮಾರಿಗಂಡ ದುಡಿಲಾರದವ,
ಯಾರಿಗಿ ಹೇಳಲಿ ನನ್ನ ನೋವ ||

ಬೆನ್ಹಿಂದ ಬಂಜಿ ಅನ್ನತಾರ ಜನ,
ವಾರಿಗೇರು ನಕ್ಕು ತೆಗಿತಾರ ಮಾನ;
ಆದರೂ ಎಲ್ಲಾ ಸಹಿಸಿಕೋತೇನ,
ಬಡ್ತನಕ ಮಕ್ಳು ಬ್ಯಾಡೋ ಶಿವನ ||

ಆಗ ಕಲಿಲಿಲ್ಲ ನಾನೂ ನಾಲ್ಕಕ್ಷರ.
ಈಗ ಅರಿವಾತು; ಬಾಳೇ ಬೇಸರ.
ಮುಂದಿನ ಜನ್ಮ ಅಂತ ಇದ್ದರ
ಹೆಣ್ಣಾಗಿ ಹುಟ್ಟಿಸಬ್ಯಾಡೊ ಹರ ||

✍.. ತ್ರಿನೇತ್ರಜ.    
              ಶಿವಕುಮಾರ.ಹಿರೇಮಠ.

*ಕಥನ ಕವನ ಸ್ಪರ್ಧೆ -ದಿ||೩/೧೧/೨೦೧೭ ರ ಫಲಿತಾಂಶ*
%$%$%$%$%$%$%$%$%$%$%$
*ಪ್ರಥಮ ಸ್ಥಾನ:-*ತ್ರಿನೇತ್ರಜ.(ಬೇಸತ್ತವಳು).
@-ತ್ರಿನೇತ್ರಜರವರು ಕಥನವನ್ನು ಚೆನ್ನಾಗಿ ಹೆಣೆದಿದ್ದಾರೆ.ಪ್ರಾಸಗಳನ್ನು ಸಂದರ್ಭೋಚಿತವಾಗಿ ಹೊಂದಿಸಿದ್ದಾರೆ.ಪ್ರಾಸವು ಕಥನ ಕವನಕ್ಕೆ ಮೆರುಗು ನೀಡುತ್ತವೆ ಜೊತೆಗೆ ಕುಟುಂಬದ ಬವಣೆಯನ್ನು ವಿವರಿಸುವುದರೊಂದಿಗೆ ಹೆಣ್ಣಿಗೆ ಶಿಕ್ಷಣದ ಮಹತ್ವವನ್ನುಸಾರಿದ್ದಾರೆ ಹೀಗಾಗಿ ಅದು ಓದುಗರ ಮನಸ್ಸಿಗೆ ಹಿಡಿಸುತ್ತದೆ ಎಂದು ನನ್ನ ಅನಿಸಿಕೆ.

*ದ್ವಿತೀಯ ಸ್ಥಾನ:-*ಗಿರಿಜಾ ಇಟಗಿ.(ಜೀವನ್ಮುಕ್ತಿ)
@-ಗಿರಿಜಾ ಇಟಗಿಯವರು ಕೂಡ ಕಥನವನ್ನು ಮನಮುಟ್ಟುವಂತೆ,ಪ್ರಾಸಬದ್ಧವಾಗಿ ಮತ್ತು ಕೆಲವೊಂದು ಹಿತನುಡಿಯಂತಹ ಮಾತುಗಳನ್ನು ಸಂದರ್ಭೋಚಿತವಾಗಿ ಬಳಸಿದ್ದಾರೆ.ಉತ್ತಮ ಪ್ರಯತ್ನ.

*ತೃತೀಯ ಸ್ಥಾನ:-*ಡಾ|| ಸುರೇಶ ನೆಳಗುಳಿ.(ಸೋಮಾರಿ ಮಗನ ಕಥೆ-ವ್ಯಥೆ).
@-ಡಾ.ಸುರೇಶ ನೆಳಗುಳಿಯವರು ಸಂಕಷ್ಟ ಕುಟುಂಬದ ಎಲ್ಲ ಆಯಾಮಗಳನ್ನು ಪರಿಚಯಿಸಿದ್ದಾರೆ ಹಾಗೂ ಕವನವನ್ನು ಓದಿಸಿಕೊಂಡು ಹೋಗುವಂತೆ ರಚಿಸಿದ್ದಾರೆ.
:::::::::::;::::::::::::::::;;;;;;:::::;:;:;;;;;;;;;;;;;;;;;
*ಮನದ ಮಾತು*
ಈ ಬಾರಿ ಕಥನ ಕವನಕ್ಕೆ ೮ ಕವನಗಳು ಬಂದಿದ್ದು ಎಲ್ಲಾ ಕವನಗಳನ್ನು ನಮ್ಮ ಕವಿಗಳು ಮತ್ತು ಕವಯಿತ್ರಿಯರು ಬಹಳ ಚನ್ನಾಗಿ ನಾ ಮೇಲು ತಾ ಮೇಲು ಎನ್ನುವಂತೆ ರಚಿಸಿದ್ದಾರೆ.ಹಿಂದಿನ ಸ್ಪರ್ಧೆಯ ಕಥನ ಕವನಗಳಿಗಿಂತ ಈ ಬಾರಿಯ ಕವನಗಳು ಮಾತ್ರ ಪ್ರಶಂಶನೀಯವಾಗಿವೆ,ಹೀಗಾಗಿ ನಿರ್ಣಯ ಮಾಡಲು ನನಗೆ ಬಹಳ ಕಷ್ಟವಾಯಿತು.ಎಲ್ಲ ಕವನಗಳು ಆಯ್ಕೆಯ ಕವನಗಳೇ ಆದರೆ ಸ್ಪರ್ಧಾ ದೃಷ್ಟಿಯಿಂದ ಕೆಲವು ಮಾನದಂಡಗಳನ್ನು ಉಪಯೋಗಿಸಿ ಆಯ್ಕೆ ಮಾಡಿರುವೆ.
..................‌..
* ಪಿ.ಎಸ್.ಮಳಗಿ.
  ತಾವರಗೇರಾ.
  ನಿರ್ಣಾಯಕರು.

Friday 3 November 2017

ನ್ಯಾನೊ ಕಥೆ ' ಭಗ್ನ ಕನಸು '


                                     
   ಭಗ್ನ ಕನಸು
.....  .....  .....  ....    

      ಹನ್ನೆರಡರ ಆ ಬಾಲೆ ಗೌರಿಯನ್ನು ಅವಳ ತಾಯಿ ಶಾಲೆ ಬಿಡಿಸಿ ಎಮ್ಮೆ ಮೇಯಿಸಲು ಕಳುಹಿಸಿದ್ದಳು. ಅದಕ್ಕೆ ಕಾರಣ ಎರಡು ತಿಂಗಳ ಹಿಂದೆ ಸಂಭವಿಸಿದ್ದ ಅವಳ ತಂದೆಯ ಆಕಸ್ಮಿಕ ಮರಣ.
       ರಸ್ತೆ ಬದಿಗೆ ಎಮ್ಮೆಯನ್ನು ತರುತ್ತಿದ್ದಂತೆ ಖಾಸಗಿ ಶಾಲಾ ವಾಹನವು ಹಾರ್ನ ಮಾಡುತ್ತ ಹೋಯಿತು. ಅದರಲ್ಲಿದ್ದ ಮಕ್ಕಳು ಗೌರಿಯನ್ನು ನೋಡಿ ಕೈ ಬೀಸಿದರು. ಪರಿಚಯದ ನಗೆಸೂಸಿ ಇವಳೂ ಕೈ ಬೀಸಿದಳು. ಕಣ್ಣಂಚಲ್ಲಿ ಮಾತ್ರ ನೀರು ತುಂಬಿತ್ತು. ಹಿಂದಿನ ವರ್ಷ ತಾನು ಐದನೇ ತರಗತಿಯಲ್ಲಿದ್ದಾಗಿನ ನೆನಪು ಕಣ್ಮುಂದೆ ಸುಳಿಯಿತು.
          ಆಗ ಗೌರಿಗೆ ಹನ್ನೋಂದು ವರ್ಷ. 'ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ' ಯ ಇಂಗ್ಲೀಷ ಕಂಠಪಾಠ ಸ್ಪರ್ಧೆಯಲ್ಲಿ ಗೌರಿಗೆ ಪ್ರಥಮ ಸ್ಥಾನ. ಅಲ್ಲಿ ಇದ್ದ ಆ ಖಾಸಗಿ ಶಾಲೆಯ ಮೂವರು ಮಕ್ಕಳು ಗೌರಿಯ ಸ್ಪಷ್ಟ ಉಚ್ಚಾರಣೆಗೆ ಅಚ್ಚರಿಯಿಂದ ಮೆಚ್ಚುಗೆ ಸೂಚಿಸಿದ್ದರು. ಅವರೇ ಈಗ ಗೌರಿಗೆ ಕೈ ಬೀಸಿದ್ದು.
       ಚೆನ್ನಾಗಿ ಓದಿ ಮುಂದೆ ಇಂಗ್ಲೀಷ್ ಭಾಷಾ ಶಿಕ್ಷಕಿಯಾಗಬೇಕೆಂದು ತಾನು ಕನಸು ಕಂಡಿದ್ದು ಭಗ್ನಗೂಂಡಿತ್ತು.ಇವಳ ತಾಯಿಯ ಮನವಲಿಸಲು ಮಾಡಿದ ಶಿಕ್ಷಕರ ಯತ್ನ ವಿಫಲವಾಗಿತ್ತು. ಅವನ್ನೆಲ್ಲ ಈಗ ನೆನೆದು ಅವಳ ಕಣ್ಣು ಮಂಜಾದವು. ಅವಳಿಗರಿವಿಲ್ಲದೇ ಕಂಬನಿಗಳು ಕೆನ್ನೆಮೇಲೆ ದಾರಿಮಾಡಿದವು.
     'ಏ.. ಗೌರೀ...ನಿನ್ ಎಮ್ಮಿ ಬದು ದಾಟಿ ಒಳಗ ಬಂದ ಬೆಳಿ ಮೇಯಾಕ್ಹತ್ತೈತಿ ಹೊಡಕೊ ಬಾ..' ಎಂದ ಶಾಂತವ್ವನ ಧ್ವನಿ ಕೇಳಿದ   ಗೌರಿ 'ಬಂದ್ನಿ ರೀ..' ಎಂದು ದೌಡಾಯಿಸಿದಳು.
..... ..... .... .... ......
  ✍..ತ್ರಿನೇತ್ರಜ.
  ಶಿವಕುಮಾರ.ಹಿರೇಮಠ.

Thursday 2 November 2017

ಕವನ 'ಕಾಲಚಕ್ರದೊಳು'


ಕಾಲಚಕ್ರದೊಳು 

..... ..... ..... .....
ಕಾಲ ಕೆಟ್ಟ್ಹೋಯಿತೋ ತ್ರಿನೇತ್ರಜ
ಕಾಲಚಕ್ರದಲಿ ಅಧರ್ಮವತೋರಿ
ತಲೆಕೆಳಗಾಗಿ ಬಾಳುತಿರುವೆವೊ.

ಧನಸಂಗ್ರಹದ ದಾಹಿಗಳಾಗಿ,
ನ್ಯಾಯ ನೀತಿಯ ಮರೆತವರಾಗಿ,
ಮೇಲೇರುವವರ ಕಾಲೆಳವರಾಗಿ,
ಸ್ವಾರ್ಥ ಸಾಧನೆಗಳಿಗೆ ನಾವು
ತಲೆಕೆಳಗಾಗಿ ಬಾಳುತಿರುವೆವು.

ಹಾರ ತುರಾಯಿಗೆ ಸೋತವರಾಗಿ,
ಬಹುಪರಾಕಿನ ಭಟ್ಟಂಗಿಗಳಾಗಿ,
ನೇರ ನುಡಿಗಾರರ ದೂಷಿಪರಾಗಿ,
ಎಲ್ಲಬಲ್ಲೆವೆಂಬ ಅಹಂಕಾರದಲಿ
ತಲೆಕೆಳಗಾಗಿ ಬಾಳುತಿರುವೆವು.

ತಿರುಗುವ ಚಕ್ರ ನಿಲ್ಲದೋ ಮನುಜ
ಮೇಲ್ಬಂದಾಗ ಧರ್ಮ, ಮಾಡಿದ
ಕರ್ಮಫಲ ಅನುಭವಿಸುವೆವೊ.
.... .... .... .... ....
✍  ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

Wednesday 1 November 2017

ಲೇಖನ 'ಮುರಿದು ಹೋದ ಪ್ರೀತಿ ಹೂತ್ತು ತರುವ ನೆನಪುಗಳು'

    ಮುರಿದು ಹೋದ ಪ್ರೀತಿ ಹೂತ್ತು 
             ತರುವ ನೆನಪುಗಳು .
...............     ............     ..........   ........

         

         ನಿಜ; ಪ್ರೀತಿ ಕುರುಡು.ಆದರೆ ಕಣ್ಣಿರದೆ ಇದ್ದರೇನಂತೆ ಹೃದಯವಿದೆಯಲ್ಲ ಇದಕ್ಕೆ!ಅಷ್ಟು ಸಾಕು.ಪುಟ್ಟ ಎದೆಗೂಡಿನ ತುಂಬಾ ನೂರಾರು ಬಣ್ಣದ ಕನಸುಗಳನ್ನು ತುಂಬಿಬಿಡುತ್ತದೆ. ಒಂದೊಮ್ಮೆ ಆ ಬಂಧನ ಮುರಿದರೂ, ಆ ನೆನಪುಗಳು ಮಾತ್ರ ಹಸಿಗೋಡೆಯಲ್ಲಿ ನೆಟ್ಟ ಹರಳಿನಂತೆ ಹಾಗೇ ಉಳಿಯುತ್ತವೆ. 
       ಈ ಪ್ರೀತಿಯೇ ಹೀಗೆ. ಬರುವಾಗ ಹೇಳದು,ಮಾತೂ ಕೇಳದು; ಹೋಗುವಾಗ ಮನಸ್ಸಿಗೆ ಘಾಸಿ ಮಾಡಿ ಹೋಗುವುದು. ಇಷ್ಟೇ ಆದರೆ ಅಡ್ಡಿಯಿಲ್ಲ. ಒಮ್ಮೊಮ್ಮೆ ದ್ವೇಷದ ಬೀಜ ಬಿತ್ತಿಬಿಡುವುದು.ಫಲ ಮಾತ್ರ ಕಾರ್ಕೂಟಕ ವಿಷ. ನೆಮ್ಮದಿಯನ್ನೇ ಕಸಿಯುವ ಹೃದಯದ ಕಸವಾಗುತ್ತದೆ.
        ಮುರಿದು ಹೋದ ಪ್ರೀತಿಯ ಪ್ರಭಾವ ಅಷ್ಟಿಷ್ಟಲ್ಲ. ಏಕಾಂಗಿಯಾದಾಗ, ಅಭದ್ರತೆ   ಕಾಡಿದಾಗ, ಅತೃಪವಾದಾಗ, ಪುನರ್ ಭೇಟಿಯಾದಾಗ,ಆ ಸ್ಥಳಕ್ಕೆ ಹೋದಾಗ, ಮತ್ತೆ ವಸಂತ ಬಂದಾಗ,ಮಾಗಿಯ ಚಳಿಯಾದಾಗ...ಕಸದ ಲಾರಿಯಂತೆ ಬೇಡವಾದ,ಹಳತಾದ,ಕೊಳೆತ ಹಳೆಯ ನೆನಪುಗಳ ರಾಶಿಯನ್ನು ಮನದ ಸ್ಮೃತಿಗೆ
ಹೊತ್ತು ತರುತ್ತದೆ. ಕೆಲವರಿಗೆ ಮುದ,ಮತ್ತೆ ಹಲವರಿಗೆ ನೋವು ತುಂಬಿಬಿಡುತ್ತದೆ.
      ಗುಂಡಿಗೆ ಗಟ್ಟಿಯಾಗಿದ್ದವರು ಸಹಿಸಿಕೊಳ್ಳುವರು.ಇಲ್ಲದಿದ್ದವರು ಇಹಲೋಕ ತೊರೆದ ಉದಾಹರಣೆಗಳು ಅದೆಷ್ಟೋ.ಬದುಕಿದ್ದರೆ ಪ್ರೀತಿಯ ಹತ್ತು ಹಲವು ಮಜಲುಗಳು ಬಾಳಿನುದ್ದಕೂ ಬಂದೇ ಬರುತ್ತವೆ. ಹೆಣ್ಣು-ಗಂಡಿನ ನಡುವಣ ಪ್ರೀತಿ ಅವುಗಳಲ್ಲಿನ ಒಂದು ಅಧ್ಯಾಯ ಮಾತ್ರ. ಆ ಪ್ರೀತಿ ಸಿಗದಿರೆ ಬದುಕೇಕೆ ಕೊನೆಯಾಗಬೇಕು? ಆ ಪ್ರೀತಿಗಿಂತ ಬದುಕು ಮುಖ್ಯ.
       ಅದೇನೇ ಇರಲಿ ಮುರಿದು ಹೋದ ಪ್ರೀತಿ ಹೊತ್ತು ತರುವ ನೆನಪುಗಳನ್ನು ಹಳೆಯ ಕನಸುಗಳೆಂದು ಭಾವಿಸುವುದೇ ಸೂಕ್ತ. ಬದುಕನ್ನು ಪ್ರೀತಿಸೋಣ.

✍....ತ್ರಿನೇತ್ರಜ್.

 ಶಿವಕುಮಾರ.ಹಿರೇಮಠ.
ಪ್ರೌ.ಶಾ.ಸಹಶಿಕ್ಷಕರು
ಗೌರಿಬಿದನೂರು
  9945915780
shivakumarh13@gmail.com

Tuesday 31 October 2017

ಕವನ 'ಪ್ರಾಪ್ತೆಯ ಅಂತ್ಯೋಕ್ತಿ'


ಪ್ರಾಪ್ತೆಯ ಅಂತ್ಯೋಕ್ತಿ 


ಎದೆಯೂಳು ಬೆಂಕಿಯ ಕಡಲು;
ಉರಿಯೊಳು ಬೆಂದಿದೆ ಒಡಲು.
ಬಾಳುವ ಬಯಕೆ ಇನ್ನೆಲ್ಲಿ? 
ಹರೆಯದ ಕನಸು ಹರಿದಿರಲು;
ದುರುಳರು ದುಃಸ್ವಪ್ನ ರಾಚಿರಲು
ಕಾಣಲೇನುಳಿದಿಲ್ಲ ಜೀವನದಲ್ಲಿ. 

ವಾಂಛೆಗಳಿಗೆ ಮನ ಜಾರಿತ್ತು.
ನಂಬಿಕೆಯೇ ಮೋಸಗೈದಿತ್ತು.
ಮಾಸದ ಗಾಯ ಹೃದಯದಲ್ಲಿ.
ಇದೋ ವಿದಾಯ ಪರ್ವತವೇ,
ಧನ್ಯವಾದಗಳು ಪವನವೇ,
ಹರಸಿ; ಪ್ರಾಪ್ತೆಯ ಅಂತ್ಯದಲ್ಲಿ.

ಬಾಡಿ ಬರಡಾಗಿಹೆನು ನಾನು.
ಮಲಗಲು ಬರುತಿರುವೆನು
ಚಿರನಿದ್ರೆಗೆ ನಿನ್ನ ಭೂಮಡಿಲಲ್ಲಿ.
ಎದೆಗಪ್ಪಿಕೊಂಡು ಸಂತೈಸು;
ಮುಕುತಿಯನ್ನು ಕರುಣಿಸು.
ಹುದುಗಿಸೆನ್ನನು ನಿನ್ನೆದೆಯಲ್ಲಿ.
     .....     ......    .....
ತ್ರಿನೇತ್ರಜ.
ಶಿವಕುಮಾರ.ಹಿರೇಮಠ.


Friday 27 October 2017

ಕವನ "ದಾರಿ ತೋರುಬಾ ಬೆಳಕೆ"



 ದಾರಿತೋರು ಬಾ  ಬೆಳಕೆ

ಕವಿಯುತಿಹ ಕತ್ತಲೆಯು
ಕಣ್ಣ ಕುರುಡಾಗಿಸಿಹುದು
ನನ್ನನ್ನು ಭಯಪಡಿಸುತಲಿ.
ದಣಿದ ರವಿಯದೋ
ಅತ್ತ ಮರೆಯಾಗುತಿಹನು
ವಿರಾಮವನು ಬಯಸುತಲಿ.

ಹರೆಯದ ಮರುಳ ಮಬ್ಬು
ಮೈದುಂಬಿರಲು, ರಾತ್ರಿಯ
ಆತಂಕ ನನ್ನಾವರಿಸುತ್ತಿದೆ.
ಸಂಸ್ಕಾರದ ನಂದಾದೀಪವೇ,
ಇರುಳೆಲ್ಲಾ ನೀನುರಿಯುತ
ಬೆಳಕೆನಗೆ ತೋರಬೇಕಿದೆ.

ನನ್ನ ಪುಟ್ಟ ಮನೆಯೊಳು,
ಮುಗುದತೆಯ ಹೊಸಕಲು
ನಿಶೆಯ ನಶೆ ನುಸುಳಬಹುದು.
ನಿನ್ನಯ ಸಾಂಗತ್ಯವಿರಲು
ನನಗದೆಷ್ಟೋ ನೆಮ್ಮದಿಯು,
ನಾ ಸುಖನಿದ್ರೆಗೈಯಬಹದು.

ನನ್ನ ಜೊತೆಯಾಗಿರು ಸಾಕು,
ನಿನ್ನನ್ನೇ ನಾ ನಂಬಿಹೆನು.
ನೀನಿರದೆ ನಾನು ಬದುಕೆ.
ಅಂಧಕಾರವನು ಅಳಿಸಿ,
ನೆಮ್ಮದಿಯನು ಕರುಣಿಸಿ,
ದಾರಿತೋರು ಬಾ ಬೆಳಕೆ.
  ..... ..... ..... ..... .....
✍  ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

Thursday 26 October 2017

"ಕವನವಿಶೇಷ"

            . ಕಾವ್ಯ ವಿಶೇಷ. 

ಕವನವು ಕಂಡ ಕಂಡವರು
ಗೀಚಬಲ್ಲ ಸಾಲುಗಳಲ್ಲ.
ಕವಿಋಷಿಯು ಭಾವದಲಿ
ಕಂಡ ಅನುಭವ ಜ್ಞಾನಫಲ.

ಅವರಿವರು ಬಯಸಿದಾಗ

ಗೆರೆಗಳ ಎಳೆವ ಚಿತ್ರವಲ್ಲ. 
ಕವಿ ಪದಗಳಲ್ಲುಕ್ಕಿಸೋ
ಆ ಕ್ಷಣದ ಭಾವನೆಗಳ ಜಲ

ಕವಿ ಬರೆದು ಮುಂದಿಟ್ಟರೆ
ಸಾಕೇ? ಇಲ್ಲ. ಶುದ್ಧ ತಪ್ಪು. 
ವಿಮರ್ಶೆಯ ಮೂಸೆಯಲದ್ದಿ
ಓದುಗ ಹೇಳಬೇಕು ತಪ್ಪು ಓಪ್ಪು.
          ..... ...... ...... ......
✍  ತ್ರಿನೇತ್ರಜ.

Tuesday 24 October 2017

ಕವನ "ಸಂಕಲ್ಪಿತ".

        ಸಂಕಲ್ಪಿತ

ಕಾಲೊಂದಿಲ್ಲದಿರೆ ಏನಂತೆ? ನಾನಿನ್ನ ಕಾಪಾಡುವೆ.
ಕಾಡುವ ಬಡತನವ ಎದುರಿಸಿ ಬಡಿದೋಡಿಸುವೆ.
ಕಾಲವಾದರು ಹೆತ್ತವರು ನಿನ್ನೆನಗೆ ಕರುಣಿಸಿ.
ಕಾಣಿಕೆ ಎಂದೇ ಭಾವಿಸಿ, ಬೆಳೆಸುವೆ ಬೆವರಿಳಿಸಿ.

ಅಂಗವೊಂದಿಲ್ಲದಿರೆ ಏನಂತೆ? ಆತ್ಮವಿಶ್ವಾಸವಿದೆ.
ಅಂಜಿಕೆಯ ಅಂಜಿಸುವ ಬಲವಾದ ಛಲವಿದೆ.
ಅಂಬೆಯು ತುಂಬಿರುವ ಅಕ್ಕರತೆಯ ಒರತೆಯಿದೆ.
ಅಂಕುರಿಸೋ ನಿನ್ನಾಸೆಗಳ ನನಸಾಗಿಸೊ ಆಸೆ ಇದೆ. 

ಕಾಲಿಲ್ಲದಿರೆ ಏನಂತೆ? ಇದ್ದವರ ನಾ ಮೀರಿಸುವೆ.

ಕಾಲ ಉರುಳಿದಂತೆ ನೀನು ಎನ್ನ ಬಲವಾಗುವೆ.
ಅನಂತಕಾಲ ನಿನ್ನ ಜೊತೆ ನೆರಳಾಗಿ ನಾ ಬಾಳುವೆ.
ಅಂತೆಯೇ ಹಣ್ಣುಮಾರಿ ಹಣ ಸಂಪಾದಿಸುತಿರುವೆ.
              .......   ........    ........   ........
    ✍  ತ್ರಿನೇತ್ರಜ.

Sunday 22 October 2017

Poem " Frustration".

                     Frustration     

Cut the trees; burn the forest.
Don't leave them for the rest.     
Dig the ground ; blast the hills. 
It's granted for vicious wills.

Run the mills; pollute the sky.
Next generation? Let them cry.  
Chemicalize all fruit & grain.
But you can't pure them again.
  
Drain the water; spoil the river;
Keep nothing good for future.
Sail the seas; kill my marine; 
Shout aloud,"Earth is mine".

Don't take me just as a treasure.
And only for your lustful desire
Not even just as rocks & mud.
All lives are my heart & blood.

No any feeling, except patience.
Waiting for your big ignorance.
Many Giants rumbled & extinct.
Beware; you're not so distinct.
           .....     .....     ......    ......
                ✍ Thrinethraja.


Shivakumara.Hiremath.

Saturday 21 October 2017

Poem ''To Centipede''

   
      

        To Centipede

I want now to count your feet,
But how?,you are too speed.
I'm not dangerous or a threat,
Are you shy or really worried? 
I wanted to catch you for play
when I was kid- just three.
Grandpa stopped and told me,
I shouldn't ever touch thee. 
Asked the reason to my mom,
And learnt;'you're venomous'.
I told the same to my chum.
He showed me your fangs. 
Now I dare to count your legs.
Stand before me centipede.
Don't go so quick you moron;
Where ever you hide,I'll find.
      ✍ Thrinethraja.
           (Shivakumara Hiremath)

Friday 20 October 2017

ಹನಿಗವನಗಳು.

               ಹನಿಗವನಗಳು

 *ಹನಿಯಿಂದ ಹಾನಿ*      
ಹೊಸದರಲ್ಲಿ ಈಕೆ ಎಂದರೆ    
ನನಗೋ ಸಿಹಿಜೇನ ಹನಿ.
ವರುಷ ಉರುಳಿದಂತೆ
ಬದಲಾದಳು ನನ್ನ ಹನಿ.
ಬೇಡಿಕೆಗಳಿಟ್ಟು, ಒಪ್ಪದಿರೆ
ಸುರಿಸುವಳು ಕಣ್ಣೀರ ಹನಿ
ಕರಗಿ ನಾನು ಒಪ್ಪಲು
ಜೇಬಿಗೆ ಭಾರೀ ಹಾನಿ.
✍🏼ತ್ರಿನೇತ್ರಜ.
----     ----     ----    ----    ----     ----
          ನದಿ
ಮೇಘಗಳಾವರಿಸಿದ
ಮೇರುಪರ್ವತದಲ್ಲುದಯಿಸಿ,
ಇಳೆಯ ಇಳಿಜಾರಲಿ ಇಳಿದು,
ಸಾಗರ ಸಖನ ಸೇರಲು,
ಹಾತೋರೆದು ಹರಿವವಳು.
       -------     ------      ------
          ವೈಷ್ಣವಿ
   ಆಂಗ್ಲ ದಲಿ ತನ್ನ ಹೆಸರು
   ಬರೆಯೆಂದಳು ವೈಷ್ಣವಿ.
   ಅಮೇರಿಕಾ ಗಂಡ ಬರೆದು
   ಕೊಟ್ಟ -whysnowwe.
----    ----     ----   ---   ---   ----
       ✍ತ್ರಿನೇತ್ರಜ
                 (ಶಿವಕುಮಾರ.ಹಿರೇಮಠ)

Wednesday 18 October 2017

ಕನ್ನಡ ಕವನ 'ದೀಪಾವಳಿ ಆಶಯ'

              ದೀಪಾವಳಿ  ಆಶಯ                         


ಹಣತೆಯ ಹಚ್ಚುತ ತಮಸ್ಸನು ತೊರೆವಾ 
ಬನ್ನಿ ಭಾರತದ ಬಂಧುಗಳೆ.
ಸಮತೆ ಸಾರುತ ಸಿಹಿಯನು ಹಂಚುವಾ;
ಸುರಿಸಿ ಪ್ರೀತಿಯ ಹೂಮಳೆ.

ಮತ್ತೇಕೆ ತಡವಿನ್ನು? ತನ್ನಿರಿ ಹಣತೆಗಳನು,
ಮನಸಿಚ್ಚೆ ಬೆಳಗಿ ಮನೆ-ಮನಗಳನು.
ಮನವಿಟ್ಟು ಕೋರುವೆ ನರಕ ಚತುರ್ದಶಿಗೆ, 
ಮತ್ತೆ ದೀಪಾವಳಿಗೆ ಶುಭಾಶಯಗಳನು.

ಸದ್ದನು ಮಾಡುತಾ ಸುಡದಿರಿ ಮದ್ದನು
ಸಾಕೆಮಗೆ ದೀಪದ ಹೊಂಬೆಳಕು.
ಸಡಗರದ ನೆಪದಿ ಪರಿಸರವ ಕೆಡಿಸದಿರಿ.
ಸದ್ದುಗದ್ದಲ ನಾವು ತಡೆಯಬೇಕು.

ತ್ರಿನೇತ್ರಜ.
............ಶಿವಕುಮಾರ.ಹಿರೇಮಠ.
               ಸರ್ಕಾರಿ ಪ್ರೌಢಶಾಲಾ ಶಿಕ್ಷಕರು.




Tuesday 17 October 2017

ಕನ್ನಡ ಕವನ 'ಮರಳಲ್ಲಿ ಮುರಳಿ '

ಮರಳಲಿ ಮುರಳಿ

ಮರಳಲಿ ಮೂಡಿಹ ಮುರಳಿಯ 
ಮಧುರವಾದ ಜೋಗುಳ.
ಮರಳಿ ತೋರಿ ನಂದಗೋಕುಲವ;
ಮಾಧವ ಕರೆದಿಹ ಗೋವುಗಳ.

ಮರಳಲ್ಲವೋ ಇದು ಮರುಳ,
ದ್ವಾಪರದ ತಿರುಳೋ;
ಮರಳಿ ಕಲಿಯುಗಕೆ ಬಂದಿಹ
ಮುಕುಂದನ ಮೋಡಿಗಳೋ.

ಮರಳೇ ನೀನು ಮರಳದಿರು,
ಸಾಗರನಲಿ ಸೇರದಿರು.
ಮತ್ತೆ ಬೃಂದಾವನದ ತೆರದಿ
ಮೋಹನನ ತೋರುತಿರು.

ಮರಳ ಕಣಕಣದಿ ಕಂಡಿದೆ 
ಮನ್ವಂತರದ ಕುರುಹು.
ಮರಳಿ ಅಲೆ ದಡವೇರದೆ?
   ಮರಳುಗಾರ ನೀ ಅರುಹು.
👁()👁
ತ್ರಿನೇತ್ರಜ.

ಶಿವಕುಮಾರ.ಹಿರೇಮಠ.
ಸರ್ಕಾರಿ ಪ್ರೌಢಶಾಲಾ ಶಿಕ್ಷಕರು.



Sunday 15 October 2017

ಕನ್ನಡ ಕವನ 'ಉತ್ತರ ಪಿನಾಕಿನಿ' .

              ಉತ್ತರ  ಪಿನಾಕಿನಿ

             

ಅಂತರ್ಜಲವೆಲ್ಲ ಸಾವಿರಾರು ಅಡಿಕುಸಿದಿದ.    ಆವಲ-ನಂದಿಬೆಟ್ಟಗಳ ನಾಡು ಕಾತರಿಸುತಿದೆ.  ಇತ್ತ ಆ ಎತ್ತಿನಹೊಳೆ ನಿಧಾನಗತಿ ತೋರುತಿದೆ.   ಊಹೆ ಮೀರಿ  ಈ ಬಾರಿ ಹಿಂಗಾರು ಹಾರೈಸಿದೆ.     ಹಲ ವರ್ಷಗಳಿಂದ ನಿನ್ನ ರಹದಾರಿ ಬಣಬಣ.    ನೀನುಕ್ಕಿಹರಿದರೆ  ಶ್ರೀನಿವಾಸ ಸಾಗರವು ಗೌಣ.     ಈ  ಬಾರಿ ದಾಟಿಬರಲು ತೊಡು ನೀನಿನ್ನು ಪಣ.        ಹರಸಲು ಕಾಯುತಿದೆ ವಿಧುರಾಶ್ವತ್ಥ ದೈವತಾಣ.      ಹರಿದು ಬಾರೆ ನೀ ಗಾಮಿನಿ. ಗಜಗಾಮಿನಿ.    ಅತಿ ಅಪರೂಪದ ಉತ್ತರ ಪಿನಾಕಿನಿ.                                ......                          ಶಿವಕುಮಾರ. ಹಿರೇಮಠ.                          ಸರ್ಕಾರಿ ಪ್ರೌಢಶಾಲಾ ಶಿಕ್ಷಕರು.

Saturday 14 October 2017

ಕನ್ನಡ ಕವನ 'ಮರೆಯಲಾರೆ '.


ಮರೆಯಲಾರೆ 

ಆ  ಹರೆಯದ ದಿನಗಳ 
ಮಧುರ ರೋಮಾಂಚನಗಳ 
ಹೊಸ ಬಗೆಯ ಅನುಭವಗಳ
ನಾ ಮರೆಯಲಾರೆ. 

ಜಗವ ನೋಡುವ ಪರಿ,
ತಪ್ಪದ ಹರಟೆ ಕಟ್ಟೆ ಹಾಜರಿ,
ಕಣ್ಮನ ಸೆಳೆಯುತಿದ್ದ ಪೋರಿ,
ನಾ ಮರೆಯಲಾರೆ.

ಸ್ಪರ್ಧೆಗೆ ಸಿದ್ದವಾಗುತ್ತಿದ್ದ ರೀತಿ 
ಪ್ರೋತ್ಸಾಹಿಸಿದ ಗೆಳೆಯರ ಪ್ರೀತಿ
ಗೆದ್ದ ಹಲವು ಬಹುಮಾನ, ಪ್ರಶಸ್ತಿ
ನಾ ಮರೆಯಲಾರೆ. 

ಚಿತ್ರಮಂಜರಿಗಾಗಿ ಕಾತರ
'ಮಹಾಭಾರತ'ಕ್ಕಾಗಿ ಆತುರ
ಕ್ರಿಕೆಟ್, ಸಿನಿಮಾ ಲೋಕವಿಹಾರ
ನಾ ಮರೆಯಲಾರೆ. 

ಪರೀಕ್ಷೆಗೆ ಪಟ್ಟ ಪ್ರಯಾಸ
ದೇವರುಗಳ ಮೇಲಿಟ್ಟ ವಿಶ್ವಾಸ 
ಫಲಿತಾಂಶದಿಂದುಂಟಾದ ಸಂತಸ
ನಾ ಮರೆಯಲಾರೆ. 

ಇತಿಹಾಸಕ್ಕಿಳಿದ ಪುಟಗಳು 
ಆ ಅಚ್ಚಳಿಯದ ನೆನಪುಗಳು.
ಬಣ್ಣ ಮಾಸಿದ ಅಂದದ ಚಿತ್ರಗಳು  
ಆ  ಹರೆಯದ ದಿನಗಳು.

ಶಿವಕುಮಾರ. ಹಿರೇಮಠ.
ಸರ್ಕಾರಿ ಪ್ರೌಢಶಾಲಾ ಶಿಕ್ಷಕರು.



Thursday 12 October 2017

ಕನ್ನಡ ಕವನ "ಬಾ ಬಾಲ್ಯವೇ".

                      

                  ಬಾ ಬಾಲ್ಯವೇ


        ಕೇಳಿದ್ದನ್ನು ಕೊಡುವೆ ನಾ
        ಬಾ ಮರಳಿ ಬಾಲ್ಯವೇ; 
        ಮನಸುಮಾಡೊಮ್ಮೆ,ನಿನ್ನ 
        ಮರಳಿ ಹೊಂದಬಯಸುವೆ.

        ಹದವಾಗಿ, ಮುದವಾಗಿ, ಬಲು 
        ಮೋಜು ಮಜವಾಗಿ ಜೊತೆಗಿದ್ದೆ.
        ಹಿತ್ತಲ ಗಿಡವೆಂಬಂತೆ ನಾ ಅಂದು
        ನಿನಗೆ  ನಿರ್ಲಕ್ಷ್ಯವ ತೋರಿದ್ದೆ.

       ಬೆಳೆಯಬೇಕು, ಕಲಿಯಬೇಕು;
       ಕಾಣದ ಗುರಿಯ ನಾ ಬೆಂಬತ್ತಿದ್ದೆ.
       ಬೇಗ ದೊಡ್ಡವ ನಾನಾಗಬೇಕು
       ಎಂದೆಲ್ಲಾ  ಆಗ ಹಂಬಲಿಸುತ್ತಿದ್ದೆ.

        ಓದಿ ಪದವಿಗಳ ನಾ ಗೆದ್ದು
       ಉದ್ಯೋಗ ಹೊಂದಿ ಬೀಗಿದೆ.
       ಸಂಸಾರಸಾಗರಕೆ ಆಸೆಬಿದ್ದು 
       ಮಡದಿ ಮಕ್ಕಳನೂ ಪಡೆದೆ.   

       ಒತ್ತಡ-ಖಿನ್ನತೆ,ಆತಂಕಾದಿಯಾಗಿ;
       ನುಗ್ಗುತಿವೆ ನನ್ನ ಸೋಲಿಸೋಕೆ.
       ಎದುರಿಸಿ ಗೆಲ್ಲುವೆ; ಬಳಲಿರುವೆ;
        ಜಗದ ಓಟಕೆ, ನಿತ್ಯ ಜಂಜಾಟಕೆ.

       ಮಕ್ಕಳ ಬಾಲ್ಯವ ನೋಡುತಲಿ
       ಮತ್ತೆ ನಾ ಮಗುವಾಗಬಯಸುವೆ.
       ಮನದ ಆಸೆ ತಣಿಸಲಿನ್ನೊಮ್ಮೆ,
       ಮರಳಿ ಬರಲಾರೆಯಾ ಬಾಲ್ಯವೆ?

                                     ಶಿವಕುಮಾರ. ಹಿರೇಮಠ.
                                           ಸರ್ಕಾರಿ ಪ್ರೌಢಶಾಲಾ  ಶಿಕ್ಷಕರು.




       

     



       






Saturday 7 October 2017

ಕನ್ನಡ ಕವನ "ಬೆಂ ಮಳೆ"

            ಬೆಂಮಳೆ             

       ನದಿ ಹರಿಯದೂರಲ್ಲಿ
      ರಸ್ತೆಯಲ್ಲೇ ನೀರಹೊಳೆ,
      ಲೆಕ್ಕತಪ್ಪಿ ಸುರಿಯುತ್ತಿದೆ 
       ಕುಂಭದ್ರೋಣ ಮಳೆ.

             ಕಾಂಕ್ರೀಟ್ ಬೆಂಗಳೂರಲ್ಲಿ 
             ಕೆರೆಗಳು ಕಳವು ಆಗುತಿರೆ;
             ಭೂಮಿಗೆ ಬರೆ ಎಳೆದಂತೆ
             ಟಾರು ರಸ್ತೆಗಳು ಹರಡಿರೆ;

      ಕೊಚ್ಚೆನೀರು ಹುಚ್ಚೆದ್ದು
      ನೊರೆಯುಕ್ಕಿ ಹರಿಯುತಿರೆ,
      ಕಾಣದ ಗುಂಡಿಹೊಂಡಗಳು
      ಬಲಿಗಾಗಿ ಬಾಯ್ತೆರೆದಿರೆ,

            ಕಾರು,ಬಾರು ಪ್ರೀಯರೇ,
            ಹುಷಾರು, ಪಾದಚಾರಿಗಳೇ.
            ಎಚ್ಚರ! ಎರಡ್ಗಾಲಿಯವರೆ.
            ಆಯತಪ್ಪೆ, ಬಾಳುಗೋಳೇ. 

      ಗುಡಿ - ಮನೆಗಳೆನ್ನದೆ 
      ಓಳ ನುಗ್ಗತ್ತಿದೆ ನೀರು.
      ಹಟ ಬಿಡು ಮಳೆರಾಯ,
      ಸುಸ್ತಾಗಿಹರು ಜನರು.
                    
                 ಶಿವಕುಮಾರ್.ಹಿರೇಮಠ್.
                   ಪ್ರೌಢ ಶಾಲಾ ಶಿಕ್ಷಕರು.

                                      
                           

             








Tuesday 3 October 2017

ಕನ್ನಡ ಕವನ 'ಕರಿಮಾಯಿ'.

                    ಕರಿಮಾಯಿ 


      ಕಾಳಧನವೆಂಬ ಕರಿಮಾಯಿ,
      ಖೂಳರ ಶಿರವನೇರಿರಲು;
      ಶ್ವೇತಲಕ್ಷ್ಮೀ ಕಠಿಣಾಮಯಿ,
      ಬಡವನ ಬೆವರಿಳಿಸುತಿರಲು;
      ಬಡರಾಜ ಪರಿತಪಿಸಿ ಭಜಿಸುತಿಹ
      'ನಮೋನಮೋ'  'ನಮೋನಮೋ'.

           ಸ್ವಂತತೆಯ ಬಲ ಬಂದೊದಗಿ
           ಸಪ್ತ ದಶಕಗಳು ಕಳೆದಿರಲು;
           ಗಲ್ಲಿಗಲ್ಲಿಗೂ ಕರಿಮಾಯಿ ನುಗ್ಗಿ, 
           ಭ್ರಷ್ಟ ಬಾಹುಗಳ ಚಾಚಿರಲು;
           ಮತದಾರ ದೀನನಾಗಿ ಕೂಗಿಹ
           'ನಮೋನಮೋ'  'ನಮೋನಮೋ'.

     ಸ್ವೇಚ್ಛೆಯು ಬಲ್ಲಿದರಿಗಾಗಿ
     ಸೆರಗಹಾಸಿ, ಸೆಳೆಯುತಿರಲು;
     ಸರ್ವಸುಖಸೌಖ್ಯಗಳಿಗಾಗಿ
     ಕರಿಮಾಯಿ, ಕನಸಬಿತ್ತುತಿರಲು;
     ಭರತವಾಸಿ ನಂಬಿ ಕರೆಯುತಿಹ 
     'ನಮೋನಮೋ'  'ನಮೋನಮೋ.
                        
                    ಶಿವಕುಮಾರ.ಹಿರೇಮಠ.   
                    ಪ್ರೌಢಶಾಲಾ ಆಂಗ್ಲ ಶಿಕ್ಷಕರು