Tuesday 5 December 2017

ಕಿರುಗಥೆ
......................
      *_ಪಾಪ ಪ್ರಜ್ಞೆ*_

      ತಡರಾತ್ರಿ ಪಟ್ಟಣದತ್ತ ಬೈಕ್ ಏರಿ ಬರುತ್ತಿದ್ದ ಕಾಮೇಶನಿಗೆ ದಾರಿಯಲ್ಲಿ ಮಹಿಳೆಯರ ಬ್ಯಾಗೊಂದು ಬಿದ್ದಿದ್ದು ಕಾಣಿಸಿತು.
ಯಾರೋ ಬೀಳಿಸಿಕೊಂಡು ಹೋಗಿದ್ದ ಬ್ಯಾಗಲ್ಲಿ ಲಕ್ಷ ಹಣ! ಗಾಡಿ ಬಾಕ್ಸನಲ್ಲಿ ಇಟ್ಟುಕೊಂಡು ಮನೆಗೆ ಬಂದ. ಒಳಗೆ ತರಲು ಅಳುಕಿ ಗಾಡಿಯಲ್ಲೇ ಬ್ಯಾಗ್ ಬಿಟ್ಟು ಒಳ ನಡೆದ.ರಾತ್ರಿ ನಿದ್ರೆ ಬರದೆ ಹೊರಳಾಡುತ್ತಲೇ ಇದ್ದ.
       ಹೆಂಗಸೊಬ್ಬಳು ಹಣ ಕಳೆದುಕೊಂಡದ್ದಕ್ಕೆ ನೊಂದು ಆತ್ಮಹತ್ಯೆಗೆ ರೈಲುಕಂಬಿ ಮಧ್ಯೆ ನಡೆಯುತ್ತಿದ್ದದ್ದ ಕಂಡ ಕಾಮೇಶ ಗಾಡಿ ಇಳಿದು ಅವಳತ್ತ ಓಡತೊಡಗಿದ.ರೈಲು ಬಂದೇಬಿಟ್ಟಿತು.
   " ಏ... ನಿಲ್ಲು.. ನಿಲ್ಲು.." ಕಾಮೇಶ ಕೂಗಿದ. "ನಿಂತಿದ್ದೀನಿ, ಅದೇನ್ ಹೇಳ್ರೀ".. ಧ್ವನಿ ಕೇಳಿ ಕಣ್ಣು  ಬಿಟ್ಟರೆ ಎದುರಿಗೆ ಹೆಂಡತಿ!!
ಬೆಳಕಾಗಿತ್ತು.
        ಬೇಗ ಬೇಗ ಸಿದ್ದನಾಗಿ ಪೋಲಿಸ್ ಠಾಣೆಯತ್ತ ಗಾಡಿ ಓಡಿಸಿದ. ಠಾಣೆ ಬಳಿ ಗಾಡಿ ಇಳಿದು ಬ್ಯಾಗ್ ಜೊತೆ ಒಳಗೆ ಹೋಗುವಾಗ ಎದುರಿಗೆ ಬಂದ ಮಹಿಳೆ " ಅರೇ..ಇದು ನನ್ನ ಬ್ಯಾಗ್, ನಿನ್ನೆ ಕಳೆದುಕೊಂಡಿದ್ದೆ.
ಈಗತಾನೆ ದೂರು ಕೊಟ್ಬಂದೆ" ಎಂದಳು. ಕಾಮೇಶನಿಗೆ ಅವನಿಗರಿವಿಲ್ಲದೆ ನಿಟ್ಟುಸಿರೊಂದು ಹೊರಬಿತ್ತು.
------------------
..‍✒ತ್ರಿನೇತ್ರಜ.

No comments:

Post a Comment