*ಜ್ಞಾನೋದಯ*
ರಗಳೆ
ಆದಿಯೋಳ್ ನಮಿಸುತಾ ಗಣೇಶಂಗೆ ಮನದಲಿ
ಮೊದಲಕ್ಷರ ಕಲಿಸಿಹ ಅಮ್ಮಗೂ ನಮಿಸುತಲಿ
ರಚಿಸಿದೆನಿದ ನಿಮಗಾಗಿ ರಗಳೆಯ ನಿಯಮದೊಳ್
ವಾಚಿಸಿ ಖುಷಿ ಪಡಲೆಂದ್ಸವಿಗನ್ನಡ ನುಡಿಯೋಳ್ ||೪||
ಅರಸುತಲಿ ತಾ ಜ್ಞಾನವನು ಬೋಧಿಸಲು ಜಗಕೆ
ಅರಮನೆಯ ತೊರೆದು ಬಂದನೀತ ಜಗದ ಹಿತಕೆ
ಹಲವರೆಡೆಗೆ ಅಲೆದಲೆದಾ ಗೌತಮನು ಕೊನೆಗೆ
ಬಳಲಿ ಬಂದು ಕುಳಿತನು ಬೋಧಿ ವೃಕ್ಷದ ಕೆಳಗೆ ||೮||
ಒಡನೆ ಮೂಡಿ ನಿಂದಿಹ ತನ್ನ ರೂಪವ ಕಂಡು
ನೋಡುತಲೆವೆಯಿಕ್ಕದೆ ಬಹಳೆ ಅಚ್ಚರಿಗೊಂಡು
ಕೇಳಿದನು ತವಕದಲಿ ನೀನ್ ಅದಾರೆಂದು ಪೇಳ್
ಉಲಿಯಿತದು ಅರಿವು ನಾ ನಿನ್ನಂತರಾತ್ಮದೋಳ್ ||೧೨||
ಅರಿಯದೆಯೆ ನಿನ್ನ ನೀಂ ಹೊರಟೆಯೋ ಹುಡುಕಿ ಬರಿ
ಗುರಿಯನೊಂದೆ ಅರಸುತ ನೊಂದೆ ನೀನು ಈ ಪರಿ
ನಿನ್ನೊಳವನರಿ ಅರಿವ ಮುನ್ನವೀ ಲೋಕವನು
ನಿನ್ನರಿವು ನಾ ತೋರ್ವೆ ಬೆಳಕಿನೆಡೆ ದಾರಿಯನು ||೧೬||
ಅರಿವಾಯಿತಾಗವಗೆ ತಾನೇನನೋ ಅರಸಿ
ತಿರುತಿರುಗಿ ಪಡೆಯಲೇ ಬೇಕೆಂದು ಬಯಬಯಸಿ
ಗಸಣಿಗೊಳಗಾದೆ ಅಃ ನನ್ನೆ ನಾನು ಅರಿಯದೆ
ಆಸೆಯನು ತೊರೆಯದೆ ಸರಿ ಮಾರ್ಗವನು ತಿಳಿಯದೆ ||೧೮||
ಎಂದು ನಕ್ಕನು ಮನದಿ ಗೌತಮನು ಹರ್ಷದೋಳ್
ಮಿಂದು ತೇಲಿತಣಿದನು ತಿಳಿವಿನ ತಿಳಿಗೊಳದೋಳ್
ನೀಡಿದನು ಬೆಳಕ ಅಷ್ಟಾಂಗ ಬೋಧಿಸುತ
ಜಗದ ದೃಷ್ಟಿಯೊಳು ಗೌತಮನಾದ ತಥಾಗತ. ||೨೦||
**************
*ತ್ರಿನೇತ್ರಜ್*