Friday 3 November 2017

ನ್ಯಾನೊ ಕಥೆ ' ಭಗ್ನ ಕನಸು '


                                     
   ಭಗ್ನ ಕನಸು
.....  .....  .....  ....    

      ಹನ್ನೆರಡರ ಆ ಬಾಲೆ ಗೌರಿಯನ್ನು ಅವಳ ತಾಯಿ ಶಾಲೆ ಬಿಡಿಸಿ ಎಮ್ಮೆ ಮೇಯಿಸಲು ಕಳುಹಿಸಿದ್ದಳು. ಅದಕ್ಕೆ ಕಾರಣ ಎರಡು ತಿಂಗಳ ಹಿಂದೆ ಸಂಭವಿಸಿದ್ದ ಅವಳ ತಂದೆಯ ಆಕಸ್ಮಿಕ ಮರಣ.
       ರಸ್ತೆ ಬದಿಗೆ ಎಮ್ಮೆಯನ್ನು ತರುತ್ತಿದ್ದಂತೆ ಖಾಸಗಿ ಶಾಲಾ ವಾಹನವು ಹಾರ್ನ ಮಾಡುತ್ತ ಹೋಯಿತು. ಅದರಲ್ಲಿದ್ದ ಮಕ್ಕಳು ಗೌರಿಯನ್ನು ನೋಡಿ ಕೈ ಬೀಸಿದರು. ಪರಿಚಯದ ನಗೆಸೂಸಿ ಇವಳೂ ಕೈ ಬೀಸಿದಳು. ಕಣ್ಣಂಚಲ್ಲಿ ಮಾತ್ರ ನೀರು ತುಂಬಿತ್ತು. ಹಿಂದಿನ ವರ್ಷ ತಾನು ಐದನೇ ತರಗತಿಯಲ್ಲಿದ್ದಾಗಿನ ನೆನಪು ಕಣ್ಮುಂದೆ ಸುಳಿಯಿತು.
          ಆಗ ಗೌರಿಗೆ ಹನ್ನೋಂದು ವರ್ಷ. 'ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ' ಯ ಇಂಗ್ಲೀಷ ಕಂಠಪಾಠ ಸ್ಪರ್ಧೆಯಲ್ಲಿ ಗೌರಿಗೆ ಪ್ರಥಮ ಸ್ಥಾನ. ಅಲ್ಲಿ ಇದ್ದ ಆ ಖಾಸಗಿ ಶಾಲೆಯ ಮೂವರು ಮಕ್ಕಳು ಗೌರಿಯ ಸ್ಪಷ್ಟ ಉಚ್ಚಾರಣೆಗೆ ಅಚ್ಚರಿಯಿಂದ ಮೆಚ್ಚುಗೆ ಸೂಚಿಸಿದ್ದರು. ಅವರೇ ಈಗ ಗೌರಿಗೆ ಕೈ ಬೀಸಿದ್ದು.
       ಚೆನ್ನಾಗಿ ಓದಿ ಮುಂದೆ ಇಂಗ್ಲೀಷ್ ಭಾಷಾ ಶಿಕ್ಷಕಿಯಾಗಬೇಕೆಂದು ತಾನು ಕನಸು ಕಂಡಿದ್ದು ಭಗ್ನಗೂಂಡಿತ್ತು.ಇವಳ ತಾಯಿಯ ಮನವಲಿಸಲು ಮಾಡಿದ ಶಿಕ್ಷಕರ ಯತ್ನ ವಿಫಲವಾಗಿತ್ತು. ಅವನ್ನೆಲ್ಲ ಈಗ ನೆನೆದು ಅವಳ ಕಣ್ಣು ಮಂಜಾದವು. ಅವಳಿಗರಿವಿಲ್ಲದೇ ಕಂಬನಿಗಳು ಕೆನ್ನೆಮೇಲೆ ದಾರಿಮಾಡಿದವು.
     'ಏ.. ಗೌರೀ...ನಿನ್ ಎಮ್ಮಿ ಬದು ದಾಟಿ ಒಳಗ ಬಂದ ಬೆಳಿ ಮೇಯಾಕ್ಹತ್ತೈತಿ ಹೊಡಕೊ ಬಾ..' ಎಂದ ಶಾಂತವ್ವನ ಧ್ವನಿ ಕೇಳಿದ   ಗೌರಿ 'ಬಂದ್ನಿ ರೀ..' ಎಂದು ದೌಡಾಯಿಸಿದಳು.
..... ..... .... .... ......
  ✍..ತ್ರಿನೇತ್ರಜ.
  ಶಿವಕುಮಾರ.ಹಿರೇಮಠ.

No comments:

Post a Comment