Sunday, 15 April 2018

ಮನಃಶಾಂತಿ ಅರಸಿ

[03/04, 10:49 p.m.]

     *ಮನಃಶಾಂತಿ ಅರಸಿ*
ಸದ್ದು ಗದ್ದಲದ ಜಗದಲ್ಲಿ
ಏಕೋ ನೆಮ್ಮದಿ ಕಾಣೆ
ಎಲ್ಲೆಡೆ ಎಲ್ಲರ ಪೂತ್ಕಾರ
ಚೀತ್ಕಾರ ಹಾಹಾಕಾರ
ಕೆಲವೆಡೆ ಕೆಲವರಿಗೆ
ಜೈಕಾರ ,ಮಣ ಹಾರ:
ಎದುರಾಡಿ ವಿರೋಧವ
ಕಟ್ಟಿಕೊಂಡರೆ ದಿಕ್ಕಾರ!
ಇಲ್ಲ ,ಇಲ್ಲೆಲ್ಲೂ ಸಿಗುತ್ತಿಲ್ಲ
ಸಹನೆಯ ಮಂದಾರ
ಹಿಡಿಯಷ್ಟು ಹೃದಯಕ್ಕೆ
ತಂಪೆರೆವ ಮಮಕಾರ
ಮಾನವತೆಯ ಮರೆತಲ್ಲಿ
ಸ್ವಾರ್ಥದ ಸಾಕ್ಷಾತ್ಕಾರ
ಹೊರಟೇ ಹೋಯಿತು
ಆತ್ಮ ವು ಕೂಗಿ ದಿಕ್ಕಾರ
ಮನಶಾಂತಿಯ ಹುಡುಕಿ
ಈ ಜಗದಿಂದಲೇ ದೂರ
✍ ತ್ರಿನೇತ್ರಜ
ಶಿವಕುಮಾರ. ಹಿರೇಮಠ.
,,....,
[04/04, 10:05 a.m.] 
ಕೂರ್ಮಪುತ್ರಿ
ಟೈಟಾನಿಕ್
ಹಿರೋಯಿನ್?
ಅಲ್ಲ, ಕೈಟಾಗಿ
ಕ್ಲೌಡಿನ ಮಡಿಲ
ಸೇರಬಯಸುವ
ಕೂರ್ಮಪುತ್ರಿ
ಟಾರ್ಟಾಯಿನ್.
ತ್ರಿನೇತ್ರಜ

Sunday, 1 April 2018

ಸಿದ್ದಗಂಗಾ ಕಣ್ಮಣಿ




ಸಿದ್ದಗಂಗಾ  ಡಾ.ಶಿವಕುಮಾರ ಸ್ವಾಮಿಜಿಯವರ 111ನೇ ಜನ್ಮದಿನಾಚರಣೆ ನಿಮಿತ್ಯ

*ಸಿದ್ದಗಂಗಾ ಕಣ್ಮಣಿ*

ಗಂಧದ ಗುಡಿಯಲಿ
ನೆಲೆಸಿಹ ಶರಣರು
ಸಿದ್ದಗಂಗಾ ಶ್ರೀ ಗಳು
ನಡೆದಾಡುವ ದೇವರು ||ಪ||

ತ್ರಿವಿಧ ದಾಸೋಹ
ನಡೆಸುತ ಸಾಗಿಹ
ಕನ್ನಡ ನಾಡಿನ ಹಿರಿಮೆಯೆ
ಧರ್ಮ ಸಾರುವ
ಶಿಕ್ಷಣ ಬೀರುವ
ಸಿದ್ದಗಂಗೆಯ ಕಣ್ಮಣಿಯೆ
ಭಕ್ತರ ಪಾಲಿಗೆ
ಕರುಣಾಂಬುದಿಯೆ ||೧||

ಕಾಯಕದಲೆ
ಕೈಲಾಸವೆಂಬುದು
ಸಿದ್ದಗಂಗೆಯಲಿ ಕಾಣುವುದು
ಶತಾಯುಷಿಗಳ
ಪಾದ ಸ್ಪರ್ಷವೇ
ಧನ್ಯ ಭಾವವ ತುಂಬುವುದು
ಅಹಂ ಭಾವವು
ಕಳೆಯುವುದು ||೨||

ಕರ್ನಾಟಕ ರತ್ನ
ಪದ್ಮಭೂಷಣ
ಶ್ರೀ ಗಳ ಮುಕುಟ ಮಣಿಗಳು
ಭಾರತ ದೇಶದ
ಅನುಪಮ ರತುನ
ಶ್ರೀ ಶಿವಕುಮಾರ ಗುರುಗಳು
ತಮಗೆ ಸಾವಿರದ
ನಮನಗಳು||೩||

✍🏼 ತ್ರಿನೇತ್ರಜ್.

ಶ್ರೀ. ಶಿವಕುಮಾರ. ಹಿರೇಮಠ.

*ಎಲ್ಲರಂತೆ ನಾನು*



 *ಎಲ್ಲರಂತೆ ನಾನು*

ಎಲ್ಲರೊಳೊಂದಾಗುವುದು
ಈ ಜಗದ ಧರ್ಮ
ಧರ್ಮದಂತೆ ನಡೆಯೋದೆ
ಇಲ್ಲಿ ನನ್ನ ಕರ್ಮ
ನಿಸ್ವಾರ್ಥ ಜಗದೊಳು ಸ್ವಾರ್ಥಿಯಾಗಲಾರೆ
ನಿಷ್ಕಪಟ ಜನರ ಮಧ್ಯೆ
ಕಪಟಿ ನಾನಾಗಲಾರೆ ||ಪ||

ತೇಯ್ದಷ್ಟು ಕಂಪನು
ಬೀರುವುದು ಗಂಧ
ದೇವನ ನೊಸಲನು
ಸೇರೇ ಇನ್ನೂ ಚಂದ
ಗಂಧ ನಿರ್ಜೀವಿ ತಾನು
ಮನುಜ ಜೀವಿ ನಾನು ||೧||

ಪರರಿತ್ತ ನಾತಹೊತ್ತು
ಸಾಗುತಿಹುದು ಗಾಳಿ
ಬೀಸದಿರೆ ತಾ ಜಗಕೆಲ್ಲ
ತಪ್ಪಲಾರದು ಕವಳಿ
ನೋವು ನಲಿವು ಗಾಳಿಗಿಲ್ಲ
ಮನುಜ ನಾ ಗಾಳಿಯಲ್ಲ||೨||

✍🏼 ತ್ರಿನೇತ್ರಜ್

ಶಿವಕುಮಾರ ಹಿರೇಮಠ

Tuesday, 20 March 2018

ಗಝಲ್ ೨೨

ಗಝಲ್-೨೨

ನರಮನ್ಸಾ ಶಾನೆ ಬೆಳ್ಕೊಂಡ್ಬಿಟ್ಟೆ ಪಾಪಿ , ಹದ್ಮೀರಿದ್ ನಿನ್ ದುಷ್ಟ್ಬುದ್ದಿಗೆಂದೂ ಕೊನೆಯಿಲ್ಲ
ಪರಪಂಚಾನೆ ಹಾಳಾಗ್ಹೊ ದ್ರು ಯೊಚ್ನೆ ಗೀಚ್ನೆ ಯಾವ್ದುಇಲ್ಲ ,ನಿನ್ ಹುಚ್ಚಾಟಕ್ಕೆಂದೂ ಕೊನೆಯಿಲ್ಲ

ಹುಯ್ಯೋ ಮಳೆನೀರೆಲ್ಲಾ ಸೇರ್ಕೊಂಡ ತಗ್ಗಿಗ್ಹರಿಯೋದ ನಿಯಮ,ಇನ್ನೇನ್ ದಿನ್ನೆ ಹತ್ತತ್ತಾ.
ಕೆರೆಗಳ್ನುಂಗಿ ಮನೆ ಕಟ್ಕೊಂಡೆ, ನೀರ್ನುಗ್ಗಿದ್ಕೆ ಬಾಯ್ ಬಡ್ಕಳ್ಳೊ ನಾಟ್ಕಕ್ಕೆಂದೂ ಕೊನೆಯಿಲ್ಲ.

ಮರಗಳ್ನೆಲ್ಲ ಕಡ್ದಹಾಕ್ಬಿಟ್ಟೆ,ಕಾಡಿದ್ರೇನೆ ಮಳೆ ಸುರಿಯೋದು, ಇನ್ನೇನ್ ನಿನ್ ಮುಸುಡಿ ನೋಡ್ಕೊಂಡಾ
ಭೂಮಿ ಬಗ್ದು ನೀರ್ ತೆಗ್ದಾಯ್ತು ,ಕುಡಿಯೋ ನೀರ್ಗೆ ಬಡದಾಡ್ಕೊಳ್ಳೊ ದುರ್ಗತಿಗೆಂದೂ ಕೊನೆಯಿಲ್ಲ

ಕಷ್ಟಪಟ್ಟು ಸ್ವತಂತ್ರ ತಂದಿದ್ ಈ ದೇಶ ಬೇಳಸ್ಬೇಕಂತಾ, ಇನ್ನೇನ್ ಬಡವರ್ನ ಸುಲಿಯೋಕಂತಾನಾ.
ಬದುಕೊಕ್ ಲಂಚ ಸತ್ತ್ರೂ ಲಂಚ ,ದೇವ್ರ ದರ್ಷ್ನನೂ ಕಷ್ಟಾಗೋಯ್ತು ಬ್ರಷ್ಟಾಚಾರಕೆಂದೂ ಕೊನೆಯಿಲ್ಲ

ತ್ರಿನೇತ್ರಜ ಇಷ್ಟೆಲ್ಲ ಅಕ್ಷ್ರ ಗೀಚೋದು ವಸಿ ಎಚ್ರ ಮೂಡ್ಲಿ ಅಂತಾ, ಇನ್ನೆನ್ ಕೆಲ್ಸ ಇಲ್ಲಂತಾನಾ.
ಇರೊಳೊಬ್ಳೆ ಭೂಮ್ತಾಯಿ, ನಾಶಕ್ಮೊದ್ಲೆ ಎಚ್ಚೆತ್ಗೊಂಡ್ರೆ ನನ್ ಸಂತೋಷಕ್ಕೆಂದೂ ಕೊನೆಯಿಲ್ಲ.
----------------------
✍🏼 ತ್ರಿನೇತ್ರಜ್

 ಶಿವಕುಮಾರ. ಹಿರೇಮಠ.

Sunday, 18 March 2018

ಬಾರಯ್ಯಾ ಯುಗಾದಿ ಬಾ

ಕವನ
*ಬಾಯ್ಯಾ ಯುಗಾದಿ ಬಾ*




ನೆನಪಾಯಿತೇನು ಮತ್ತೆ
ಬುವಿಯತ್ತಣದ ಹಾದಿ
ಇಳೆಗೆ ಹಸಿರ ತುಂಬಲು
ಬಂದೆಯಾ ಯುಗಾದಿ

ಗಂಧ ಪೂಸೆ ಬಂದೆಯಾ
ಮಾವು ತೋಪಿನ ತುಂಬ?
ಮಕರಂದವ ಸುರಿದೆಯಾ
ದುಂಬಿಗಳಿಗದೇನು ಜಂಭ!

ವಧುವಾದಳು ಇಳೆಯು
ಶುಭದೊಸಗೆ ಎಂದಳು
ನಿಮ್ಮಾಟಕೆ ಕುಪಿತ ರವಿ
ಉರಿದರೆಮಗೆ ಗೋಳು

ಮುನಿಸಿನಿಂದ ಹಾಗೆಂದೆ
ಇರಲಿ ಬಾ ಇದ್ದದ್ದೆ ಇದೆಲ್ಲ
ನಿನಗಾಗಿಯೇ ಕಾದಿಹೆವು
ಅಭಿಮಾನದಿಂದ ನಾವೆಲ್ಲ

ತಳಿರು ತೋರಣಗಳಿಂದ
ಮನೆಯ ಸಿಂಗರಿಸಿಹೆವು
ಅಭ್ಯಂಜನಗೈದು ನವವಸ್ತ್ರ
ಧರಿಸಿ ಸ್ವಾಗತ ಕೋರಿಹೆವು

ನುಸುಳಿ ಬರಲಿ ಸುಳಿಗಾಳಿ
ಹೊಂಗೆ ನೆರಳಲಿ ತಂಪಾಗಿ
ಸಿಹಿಯುಂಡು ಮಧ್ಯಾಹ್ನ
ನಿದ್ರಿಸುವೆವು ಸೊಂಪಾಗಿ

ಬರದು ಬಾರದು ಬಯಸೆ
ಬರುವುದಂತೂ ತಪ್ಪದು
ಬೇವು ಬೆಲ್ಲ ಸೇರಿದ ಸವಿ
ಬದುಕಿಗೆ ರುಚಿ ತರುವುದು
🌳🌴🌳🌱🌿☘🌳🌴🌳
✍🏼 ತ್ರಿನೇತ್ರಜ್.

Saturday, 17 March 2018

ಯುಗಾದಿಯಾಗಮನ

ಯುಗಾದಿಯಾಗಮನ

ಮತ್ತೆ ಬಂತು ಯುಗಾದಿ
ನವ ಸಂವತ್ಸರದಾದಿ ||ಪ||

ಚೈತ್ರನಿತ್ತ ಉಡುಗೊರೆ
ವನಸಿರಿಗೆ ಹೊಸಸೀರೆ
ವರುಷದಷ್ಟು ಹಳೆ ಎಲೆಗಳ
ಕಳೆದು ನಿಂತಳು ಇಳೆ
ಮತ್ತೆ ಜವ್ವನದ ಕಳೆ||೧||
ಶುಕ ಪಿಕಗಳ ಹಿಮ್ಮೇಳ

ಉಸಿರೇರಿಸುವ ಝಳ
ವಸಂತ ಬಂದ ಸಂಭ್ರಮಿಸಿ
ಚಿಗುರೆಲೆಗಳ ಚುಂಬಿಸಿ
ತರುಲತೆ ಮೈ ಪುಳಕಿಸಿ||೨||

ಪ್ರತಿ ವರುಷ ಹೊಸ ಹರುಷ
ತೊಡೆವುದು ಹಳೆ ಕಲ್ಮಷ
ಕಹಿಯ ಮರೆವ ನಾವೆಲ್ಲ
ಭವಿತವನು ಬಲ್ಲವರಿಲ್ಲ
ಬೇವುಬೆಲ್ಲ ಸಮ ಎಲ್ಲ||೩||

✍ ತ್ರಿನೇತ್ರಜ

ಶಿವಕುಮಾರ. ಹಿರೇಮಠ.

ಮರೆತೆಯಾ?

ಭಾವಗೀತೆ


      *ಮರೆತೆಯಾ?*
ತಾಯ ಮಮತೆ ಪ್ರೀತಿಯನ್ನೆ
ಮರೆತು ಹೋದೆಯಾ.
ಮಡದಿ ಸೆರಗ ಹಿಡಿದು ಅಲೆವ ದಾಸನಾದೆಯಾ.
ಹೊತ್ತು ಹೆತ್ತ ದೇವತೆಯ
ಕಾಲೊತ್ತಲೆಲ್ಲಿದೆ ಸಮಯ
ಅಂದ ಚಂದ ತುಂಬಿ ನಿಂತ
ಅಮ್ಮಾವ್ರಗಂಡ ಆದೆಯಾ
ತೆರೆಯೊ ಒಳಗಿನಾ ಕಣ್ಣು
ಅವ್ವ ಜೀವ ಕೊಟ್ಟ ಹೆಣ್ಣು||೧||
ಸಂಸಾರ ಒಂದು ತಕ್ಕಡಿ
ಸಮದೂಗಿಸಿ ನೀ ಹಿಡಿ
ಹೆತ್ತಮ್ಮಗೆ ನೋವ ನೀಡಿ
ನರಕ ಬೇಡಬೇಡಾ ಕೋಡಿ‌
ಮನದ ಹಿಡಿತ ಸಾಧಿಸು
ಅರಿತು ಬಾಳ ಸಾಗಿಸು ||೨||
********************
✍ ತ್ರಿನೇತ್ರಜ್.
ಶಿವಕುಮಾರ. ಹಿರೇಮಠ.

ಗುಟ್ಟು ರಟ್ಟಾದಾಗ

ನೀಳ್ಗತೆ ಸ್ಪರ್ಧೆಗೆ

*ಗುಟ್ಟು ರಟ್ಟಾದಾಗ*
    ಬೆಳಿಗ್ಗೆಯೇ ಪಟ್ಟಣಕ್ಕೆ ಬಂದ ರಾಮಣ್ಣ ಮಗಳ ಮನೆ ತಲುಪುವಷ್ಟರಲ್ಲಿ ಗಂಟೆ ಹನ್ನೊಂದಾಗಿತ್ತು. ಕುಡಿಯಲು ಕಾಫಿ ಕೊಟ್ಟ ಮಗಳು ನೇರವಾಗಿ ಕೇಳಿಯೇ ಬಿಟ್ಟಳು 
   "ಏನಪ್ಪಾ , ಈಗ ಬಂದ ವಿಷಯ "
           ಕೊಂಚ ಇರುಸು ಮುರುಸಾದರೂ ಅನಿವಾರ್ಯವಾಗಿದ್ದರಿಂದ ಸಾವರಿಸಿಕೊಂಡ ರಾಮಣ್ಣ ಮೆಲು ಧ್ವನಿಯಲ್ಲೇ ಹೇಳಿದ." ನಿಮ್ಮ ಅಮ್ಮನಿಗೆ ಹುಷಾರಿಲ್ಲಮ್ಮ , ತುರ್ತಾಗಿ ಆಪರೇಷನ್ ಮಾಡಿಸಬೇಕಾಗಿದೆ. ಸ್ವಲ್ಪ ಹಣ ಕಡಿಮೆಯಾಗಿತ್ತು. ಅದಕ್ಕೆ ,ಅಳಿಯಂದಿರ ಹತ್ತಿರ.."
         ಅರ್ಧಕ್ಕೆ ಬಾಯಿ ಹಾಕಿದ ಮಗಳು "ಅಯ್ಯೋ ಅಪ್ಪ! ನಮ್ ಹತ್ರ ಈಗ ಎಲ್ಲಿ ಹಣವಿದೆ? ಅಪ್ಪ ,ನಮ್ಮ ಮನೆ ಆಲ್ಟ್ರೇಷನ್  ಮಾಡಿಸೋದಿದೆ. ನಮಗೇ ನೂರಾರು ತಾಪತ್ರಯಗಳಿವೆ. ಅಲ್ಲದೇ, ಬೀಗರ ಹತ್ತಿರ ಹಣ ಕೇಳಿದರೆ ಏನು ಚೆನ್ನ ನೀನೇ ಯೋಚ್ನೆ ಮಾಡು. ನನ್ನ ಪುಣ್ಯ, ನಮ್ಮ ಯಜಮಾನ್ರು ವರದಕ್ಷಿಣೆ  ಗಿರದಕ್ಷಿಣೆ ಅಂತ ಪೀಡಿಸಿ ನನ್ನ ತವರು ಮನೆಗೆ ದಬ್ಬೋದಿಲ್ಲ.ಹಾಗಂತ ಅವರ ಹತ್ತಿರ ಹಣ ಕೇಳುವುದು ಎಷ್ಟು ಸರಿ"? ಎಂದುಬಿಟ್ಟಳು.
            ರಾಮಣ್ಣನ ಬಾಯಲ್ಲಿ ತೇವ ಆರಿತು. ‍"ಹಾಗೇನಿಲ್ಲ ತಾಯಿ, ಬೇರೆ ಕಡೆಗೂ ಪ್ರಯತ್ನ ಮಾಡಿದ್ದೇನೆ. ಏನೋ, ಒಂದು ಮಾತು ಇರಲಿ ಅಂತ ನಿನ್ನ ಹತ್ತಿರ ಕೇಳಿದೆ ಅಷ್ಟೇ.ಬೇಜಾರಾಗ್ಬೇಡಮ್ಮ" ಎಂದು ಹೇಳಿ ಹೊರಡಲು ಅನುವಾದ.
     "ಇರಪ್ಪ , ಸ್ವಲ್ಪ ತಿಂಡಿ ತಿಂದು ಹೋಗುವಿಯಂತೆ" ಎಂದು ಮಗಳು ಅಡುಗೆ ಮನೆಯತ್ತ ನಡೆದಳು. ತಿಂಡಿಯ ತಟ್ಟೆಯೊಂದಿಗೆ ಹೊರಬರುವಷ್ಟರಲ್ಲಿ ರಾಮಣ್ಣ ಅಲ್ಲಿರಲಿಲ್ಲ.
      "ಸುಕನ್ಯಾ" , ಹೆಸರಿಗೆ ತಕ್ಕಂತೆ ಸುಂದರ ಹೆಣ್ಣಾಗಿದ್ದಳು. ರಾಮಣ್ಣ- ಪುಟ್ಟಮ್ಮ ದಂಪತಿಗಳ ಒಬ್ಬಳೇ ಮಗಳು. ಬಣ್ಣದ ಲ್ಲಾಗಲಿ ಹೋಲಿಕೆ ಯಲ್ಲಾಗಲಿ ಇವಳು ಅವರಿಬ್ಬರಲ್ಲಿ ಯಾರನ್ನೂ ಹೋಲುತ್ತಿರಲಿಲ್ಲ. ರೈತನಾಗಿದ್ದ ರಾಮಣ್ಣನು ಇದ್ದ ಎರಡು ಎಕರೆ ಜಮೀನಿನಲ್ಲಿ  ಒಣ ಬೇಸಾಯ ಮಾಡಿಕೊಂಡು ಬಂದುದರಲ್ಲೇ ಅಚ್ಚುಕಟ್ಟಾಗಿ ಸಂಸಾರ ಸಾಗಿಸುತ್ತಿದ್ದನು. ಇದ್ದೂರಲ್ಲಿ ಮಗಳನ್ನು ಶಾಲೆಗೆ ಕಳುಹಿಸಿ, ಓದಲು ಪ್ರೋತ್ಸಾಹ ನೀಡಿದ್ದ. ನಂತರ ಅವಳು ,ಪಟ್ಟಣದ ಕಾಲೇಜಿಗೆ ಸೇರಲು ಬಯಸಿದಾಗ ಪುಟ್ಟಮ್ಮನ ವಿರೋಧವ ಲೆಕ್ಕಿಸದೆ ಅದಕ್ಕೂ ಒಪ್ಪಿದ್ದ. ಕಂಪ್ಯೂಟರ್ ಕೋರ್ಸ್‌ ಮಾಡುತ್ತೇನೆ ಎಂದಾಗಲೂ ಬೇಡವೆನ್ನಲಿಲ್ಲ. ಮಗಳ ಮೇಲೆ ಅಷ್ಟೊಂದು ಅಕ್ಕರತೆ ಅವನಿಗೆ.
      ಕಂಪ್ಯೂಟರ್ ಕೋರ್ಸ್‌ಗೆ ಸೇರಿದ ಮೇಲೆ ಸುಕನ್ಯಾಳ ಜೀವನದಲ್ಲಿ ಮಹತ್ತರವಾದ ಬದಲಾವಣೆಯ ಗಾಳಿ ಬೀಸಿತು. ಆ ಕಂಪ್ಯೂಟರ್  ತರಬೇತಿ ಕೇಂದ್ರ ನಡೆಸುತ್ತಿದ್ದವನು ಮನೋಹರ ಎಂಬ ಅವಿವಾಹಿತ,ಸ್ಪುರದ್ರೂಪಿ ಯುವಕ. ಬುದ್ಧಿವಂತಳೂ, ಸುಂದರಿಯೂ ಆಗಿದ್ದ ಸುಕನ್ಯಾ ಅವನಿಗೆ ತುಂಬಾ  ಇಷ್ಟವಾಗಿದ್ದಳು.ಕ್ರಮೇಣ ಅವಳ ಸ್ನೇಹ ಸಂಪಾದಿಸಿ  ಸಲುಗೆ ಬೆಳೆಸಿ ಹತ್ತಿರವಾದ. ಒಂದು ವರ್ಷದ ನಂತರ ಧೈರ್ಯ ಮಾಡಿ ಒಂದು ದಿನ "ಸುಕನ್ಯಾ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ. ನೀನು ಒಪ್ಪಿದರೆ ಮದುವೆಯಾಗಬೇಕೆಂದಿರುವೆ" ಎಂದು ಅವಳ ಮುಂದೆ ಹೇಳಿದಾಗ ಸುಕನ್ಯಾ ನಾಚಿ  ನೀರಾಗಿದ್ದಳು.    ಸದಾಕಾಲ ಶ್ರೀಮಂತಿಕೆಯ ‌‌‌ಕನಸು ಕಾಣುತ್ತಿದ್ದ ಅವಳಿಗೆ,'ಬಯಸಿದ ಬಳ್ಳಿ ಕಾಲಿಗೆ ತೊಡರಿದಂತೆ' ಎನಿಸಿತ್ತು.ಮುಂದಾರು ತಿಂಗಳುಗಳು ಪ್ರೀತಿ ಪ್ರಣಯದಲ್ಲಿ ಕಳೆದು ಹೋದವು. ಅವರಿವರಿಂದ ರಾಮಣ್ಣನ ಕಿವಿಗೆ ಈ ವಿಷಯ ತಲುಪುವಷ್ಟರಲ್ಲಿ ತುಂಬಾ ತಡವಾಗಿತ್ತು.
       "ನಾವು ಬಡವರಮ್ಮ ; ಶ್ರೀಮಂತರ ಮನೆತನದ ಸಂಬಂಧ ನಮ್ಮಿಂದ ಆಗದ ಮಾತು ತಾಯೆ.  ನಮ್ಮ ಗೌರವ ಗಾಳಿಗೆ ತೂರಬೇಡಮ್ಮ" ಎಂದು ಮಗಳಿಗೆ ಬುದ್ದಿ ಹೇಳಿದ್ದು 'ನೀರಲ್ಲಿ ಹೋಮ ಮಾಡಿದಂಗೆ' ಆಗಿತ್ತು.ಅವಳು ಮನೋಹರನ ಧ್ಯಾನ ನಿಲ್ಲಿಸಲಿಲ್ಲ. ಕಾಲೇಜಿಗೆ ಹೋಗದಂತೆ ಪುಟ್ಟಮ್ಮನೂ ಮಗಳಿಗೆ ತಾಕೀತು ಮಾಡಿ ಮನೆಯಲ್ಲೇ ಉಳಿಸಿಕೊಂಡಳು. ಪರೀಕ್ಷೆಗೆ, ಮಗಳ ಬೆಂಗಾವಲಾಗಿ ತಾನೂ ಹೋಗಿ ಬಂದಳು. ಪರಿಣಾಮ ಮಾತ್ರ ಉತ್ತಮವಾಗಿರಲಿಲ್ಲ‌. ಪರೀಕ್ಷೆಯಲ್ಲಿ ಎರಡು ವಿಷಯಗಳಷ್ಟೇ ಪಾಸಾದವು.
          ಸುಕನ್ಯಾಳ ಅದೃಷ್ಟ ಗಟ್ಟಿಯಾಗಿತ್ತು.ಮನೋಹರನ ಮನೆಯಿಂದ ಇವರ ಮದುವೆಗೆ ಗ್ರೀನ್ ಸಿಗ್ನಲ್ ಸಿಕ್ಕಿಬಿಟ್ಟಿತ್ತು. ಹತ್ತಾರು ಜನ ಸೇರಿ ರಾಮಣ್ಣನನ್ನು ಒಪ್ಪಿಸಿಯೇಬಿಟ್ಟರು.
          ಶ್ರೀಮಂತರ ಸಂಬಂಧ ಬಂದಿದ್ದಕ್ಕೆ ರಾಮಣ್ಣನಿಗೆ ಒಂದು ಕಡೆ ಸಂತೋಷವಾದರೂ, ಅವರಿಗೆ ತಕ್ಕಂತೆ ಮದುವೆ ಮಾಡಿಕೊಡಲು ಆಗುವ ಖರ್ಚು ವೆಚ್ಚದ ಚಿಂತೆ ಕಾಡತೊಡಗಿತು.ಜಮೀನಿನ ಮೇಲಿನ ಸಾಲ ತೀರದೆ, ಸರ್ಕಾರ ಸಾಲ ಮನ್ನಾ ಮಾಡೀತೆಂದು ಕಾಯುತ್ತಿದ್ದವನಿಗೆ ಮಗಳ ಮದುವೆ ಹೇಗೆ ಮಾಡಬೇಕೆಂಬುದೇ ಹಗಲು-ರಾತ್ರಿಯ ಆಲೋಚನೆಯಾಗಿಬಿಟ್ಟಿತ್ತು.
    
        ಗಂಡನಿಗೆ ಧೈರ್ಯ ತುಂಬಿದ ಪುಟ್ಟಮ್ಮ,  "ಬೇಕಾದರೆ ಮನೆ ಅಡವಿಟ್ಟು ಮಗಳ ಮದುವೆ ಮಾಡಿ ಬಿಡೋಣ.ನಮ್ಮ ಅದೃಷ್ಟಕ್ಕೆ ಒಳ್ಳೆಯ ಸಂಬಂಧವೇ ಮನೆ ಬಾಗಿಲಿಗೆ ಬಂದಿದೆ. ಎಲ್ಲಾ ಆ ದೇವರ ಕೃಪೆ.ನಾಳೆಯೇ ಬ್ಯಾಂಕಿಗೆ ಹೋಗಿ ವಿಚಾರಿಸಿ" ಎಂದು ಹುರುದುಂಬಿಸಿದಳು.  
         ಮನೆಯನ್ನು ಅಡವಿಟ್ಟು , ಹಲವೆಡೆ ಸಾಲ ಸೋಲ ಮಾಡಿದ, ದಂಪತಿಗಳು , ಪಟ್ಟಣದ ಕಲ್ಯಾಣ ಮಂಟಪವೊಂದರಲ್ಲಿ ಚೆಂದವಾಗಿ ಮದುವೆ ಮಾಡಿಕೊಟ್ಟರು.ಕನ್ಯಾದಾನ ಮಾಡಿದ ತೃಪ್ತಿ ಯಾಯಿತು ಆ ಎರಡೂ ಹಿರಿಯ ಜೀವಗಳಿಗೆ.
      ಗಂಡನ ಮನೆ ಸೇರಿದ ಸುಕನ್ಯಾ ತುಂಬಾ ಬದಲಾಗಿ ಹೋದಳು. ದೀಪಾವಳಿ ಹಬ್ಬಕ್ಕೆ ತವರು ಮನೆಗೆ ಬರಲೂ ನಿರಾಕರಿಸಿಬಿಟ್ಟಳು.
     ಇತ್ತ ಪುಟ್ಟಮ್ಮನ ಆರೋಗ್ಯ ದಿನೇದಿನೇ ಕ್ಷೀಣಿಸತೊಡಗಿತು. ಸಣ್ಣಪುಟ್ಟ ಚಿಕಿತ್ಸೆಗಳಿಂದ ಏನೂ ಪ್ರಯೋಜನವಾಗಲಿಲ್ಲ. ಅಲ್ಪಸ್ವಲ್ಪ ಹಣ ಜೋಡಿಸಿ ದೊಡ್ಡ ಆಸ್ಪತ್ರೆಗೆ ತೋರಿಸಿದಾಗ ರಾಮಣ್ಣನಿಗೆ ಆಘಾತ ಕಾದಿತ್ತು. ವೈದ್ಯರು "ಗರ್ಭಕೋಶ ಕ್ಯಾನ್ಸರ್ ಆಗಿದೆ. ಆದಷ್ಟು ಬೇಗ ಆಪರೇಷನ್ ಮಾಡಿಸದಿದ್ದರೆ ಅಪಾಯವಿದೆ" ಎಂದಿದ್ದರು. ಹಳೆಯ ಸಾಲವೇ ತೀರದಿರುವಾಗ ಈಗ ಎಲ್ಲಿಂದ ಹಣ ತರುವುದೆಂದು ರಾಮಣ್ಣನಿಗೆ ತಿಳಿಯದಾಗಿತ್ತು.ಅದಕ್ಕೆ ಇಂದು ಮಗಳ ಮನೆ ಬಾಗಿಲು ತಟ್ಟಿದ್ದ.ಮುಂದೆ ಜಮೀನು ಮಾರಿ ಹಣ ತೀರಿಸಿದರಾಯಿತು ಎಂದುಕೊಂಡಿದ್ದ.
       ನಿರಾಶೆಯಿಂದ ಬಸ್ ನಿಲ್ದಾಣದತ್ತ ಬರುತ್ತಿರುವಾಗ ಎದುರಿಗೆ ಬಂದ ರಾಮಣ್ಣನ ಆಪ್ತ ನಾಗಣ್ಣ ,ಇವನ ಸಪ್ಪೆ ಮೋರೆ ನೋಡಿ, ವಿಷಯ ಏನೆಂದು ವಿಚಾರಿಸಿದ. 
     ದುಃಖ ತಾಳಲಾಗದೆ ರಾಮಣ್ಣ ಎಲ್ಲವನ್ನು ಅರುಹಿ ಅತ್ತುಬಿಟ್ಟ. ಅವನನ್ನು ಸಮಾಧಾನ ಪಡಿಸಿದ ನಾಗಣ್ಣ , "ದೇವರಿದ್ದಾನೆ ,ಎಲ್ಲ ಸರಿ ಹೋಗುತ್ತೆ; ಚಿಂತಿಸಬೇಡ. ನೀನೀಗ ಊರಿಗೆ ಹೋಗು.ನಾನು ಸಂಜೆಗೆ ಭೇಟಿಯಾಗುತ್ತೇನೆ.ಏನಾದರೂ ಮಾಡಿದರಾಯಿತು.ಧೈರ್ಯವಾಗಿರು" ಎಂದು ಕಳುಹಿಸಿಕೊಟ್ಟ.
      ಅಲ್ಲಿಂದ ನಾಗಣ್ಣ ನೇರವಾಗಿ ಸೌಜನ್ಯಾಳ ಮನೆಗೆ ಬಂದ.
"ಓಹೋ! ಅಪ್ಪ ಈಗ ಹಣ ಕೇಳಲೆಂದು  ನಿನ್ನನ್ನು ಕಳಿಸಿದರೇನು?" ಎಂದು ಸುಕನ್ಯಾ ಖಾರವಾಗಿಯೇ  ಕೇಳಿದಳು.
         "ಅದಕ್ಕಲ್ಲಮ್ಮ , ನಿನಗೊಂದು ವಿಷಯ ಹೇಳುವುದಿತ್ತು. ಅದಕ್ಕೆ ಬಂದೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬರಗಾಲ ಬಂದು ನಮ್ಮ ಊರಿನ ಅನೇಕರು ಗೋವಾಕ್ಕೆ ದುಡಿಯಲೆಂದು ಗುಳೆ ಹೋಗಿದ್ದೆವು.ಕೆಲವು ತಿಂಗಳ ನಂತರ ಉಳಿದವರು ಊರಿಗೆ ಮರಳಿದರು. ಆದರೆ ನಾನು , ನನ್ನ ಹೆಂಡತಿ, ನಿಮ್ಮ ಅಪ್ಪ-ಅಮ್ಮ ಅಲ್ಲಿಯೇ ದುಡಿದರಾಯಿತು ಎಂದು ಉಳಿದುಕೊಂಡೆವು. ಒಂದು ರಾತ್ರಿ ನಾವು ಗುಡಿಸಲಿನಲ್ಲಿ ಮಲಗಿದ್ದಾಗ ಜೋರಾಗಿ ಅಳುತ್ತಿರುವ ಮಗುವಿನ ಧ್ವನಿ ಕೇಳಿಸಿತು. ನಾನು  ಹೊರಗೆ ಬಂದು ನಿಮ್ಮಪ್ಪನನ್ನ ಕರೆದೆ.ಇಬ್ಬರು ಬಂದು  ನೋಡಿದಾಗ, ಯಾರೋ ಮಗುವನ್ನು ಕಸದ ತೊಟ್ಟಿಯಲ್ಲಿ ಹಾಕಿ ಹೋಗಿದ್ದರು. ಮಗುವನ್ನೆತ್ತಿಕೊಂಡ ನಿಮ್ಮಪ್ಪ ಗುಡಿಸಲಿಗೆ ತಂದಾಗ,ಮಕ್ಕಳಿಲ್ಲದ ಪುಟ್ಟಮ್ಮ ತಾನೇ ಸಾಕುತ್ತೇನೆಂದಳು. ಒಂದು ವರ್ಷ ಅಲ್ಲೇ ಕಳೆದು ಊರಿಗೆ ಬಂದೆವು. ಈ ವಿಷಯ ನಮ್ಮನ್ನು ಬಿಟ್ಟು ಇನ್ನಾರಿಗೂ ಗೊತ್ತಿಲ್ಲ.ಆ ಅನಾಥ ಮಗು ನೀನೇ ಕಣಮ್ಮ .ಇಂದು ನೀನು ರಾಮಣ್ಣನ ಮನಸ್ಸು ನೋಯಿಸಿದ್ದು ನನಗೆ ತುಂಬಾ ಬೇಸರ ತರಿಸಿತು. ಹಣವಿಲ್ಲದಿದ್ದರೂ ಒಂದೆರಡು ಒಳ್ಳೆಯ ಮಾತು ಮಾತಾದರೂ ನಿನ್ನ ಬಳಿ ಇಲ್ಲವಲ್ಲ. ನಿನ್ನ ತಪ್ಪಿಗೆ ಮೊದಲು ಅವರ ಕಾಲಿಗೆ ಬಿದ್ದು ಕ್ಷಮೆ ಕೇಳು"   ಎಂದು ನಾಗಣ್ಣ ಮಾತು ಮುಗಿಸಿದಾಗ ಸೌಜನ್ಯಾಳಿಗೆ ನೂರು ಸಿಡಿಲು ಒಂದೇ ಬಾರಿಗೆ ಬಡಿದಂತಾಗಿತ್ತು.
.....................................
✍ ಶಿವಕುಮಾರ. ಹಿರೇಮಠ.
ಗೌರಿಬಿದನೂರು.

*ಸಾಗರೋಲ್ಲಂಘನ*

*ಸಾಗರೋಲ್ಲಂಘನ*
[04/02, 1:59 p.m.]


ಲಂಕೆಯ ತಲುಪುವ ಯತ್ನಕೆ
ಸಾಗರನಾದನು ಅಡ್ಡಿ
ವಾನರ ಬಳಗ ಮಂಕಾಯಿತು
ಮನದಿ ಶಂಕೆಯು ಮೂಡಿ

ರಾಮನ ಸೇವೆಗೆ ಆತುರ ಮನದಿ
ದೃಷ್ಟಿಗೆ ನಿಲುಕದೆ ಹರಡಿದೆ ಶರಧಿ
ಸಂಶಯ ಮೂಡಿತು ಮೋಡದ ತೆರದಿ
ಯೋಚಿಸಿ ನಿಂತನು ಸಾಗರ ತಟದಿ

ಜಾಬವಂತನು ತುಂಬಲು ಧೈರ್ಯ
ನೆನಪಿಸಿಕೊಂಡನು ಬಾಲ್ಯದ ಶೌರ್ಯ
ಬೆಳೆದು ನಿಂತನು ವೀರ ಕಪಿವರ್ಯ
ಅಣಿಯಾದ ನೆನೆದು ಸ್ವಾಮಿಕಾರ್ಯ

ಛಾಂಗನೆ ಹಾರಿದ ಹನುಮಂತ
ಸೀಮೋಲಂಘಿಸಿ ಧೀಮಂತ
ಸೀತೆಯ ಅರಸಲು ಶರವೇಗದಲಿ
ಬಾನಿಗೆ ಚಿಮ್ಮಿದ ಬಲವಂತ

✍🏼 ತ್ರಿನೇತ್ರಜ

 ಶಿವಕುಮಾರ. ಹಿರೇಮಠ.

ನೀಡೆನಗೆ ಅಭಯ




*ನೀಡೆನಗೆ ಅಭಯ*

ಇದೆಂತ ಮೋಹ
ನಿನ್ನ ಮನದಲಿ
ಮುದ್ರೆಯಾಯಿತು
ಅದೆಂತ ಶಕ್ತಿ
ನಿನ್ನ ಎದೆಯಲಿ
ಹಚ್ಚೆಯಾಯಿತು||ಪ||

ಸೀತಾ ರಾಮರ
ಇರುವ ತೋರಿದೆ
ಎದೆಯನೆ ತೋಡಿ
ರಾಮ ನಾಮವೆ
ಸಾಕೆಂದೆನುವೆ
ಅದೇನು ಮೋಡಿ||೧||
ನಿನ್ನಂತೆನಗೆ
ಆಗಲಾಸೆಯು
ನೀಡೆನಗೆ ಅಭಯ
ಮನ ನಿನ್ನನ್ನೆ
ತುಂಬಿಕೊಳ್ಳಲು
ಹರಸು ಆಂಜನೇಯ||೨||
✍ ತ್ರಿನೇತ್ರಜ್
ಶಿವಕುಮಾರ ಹಿರೇಮಠ

Tuesday, 13 March 2018

*ಅವಸರಿಸು ನೇಸರ *


*ಅವಸರಿಸು ನೇಸರ*
[17/12/2017, 8:17 p.m.]

ಅವಸರಿಸು ನೇಸರ
ಏಕಿಷ್ಟು ನಿಧಾನ..
ಸುಸ್ತಾಗಿಹರೆಲ್ಲ ಅಲ್ಲಿ
ದುಡಿದು ಹರಿಸಿ ಬೆವರ.
ನಿಂತಿದೆ ನಭದಲಿ
ಹಕ್ಕಿಗಳ ಸಂಚಾರ..

ಮರೆಯಾಗು, ಬೇಗನಡಿ
ನಿನ್ನಿಂದಾಗಿ ಬೆನ್ನು ಸುಟ್ಟಿದೆ.
ಉರಿದೆಯಲ್ಲ ಬೆಂಕಿಯಂದದಿ,
ನಿನ್ನಿಂದ ಬುವಿ ಬಿರಿದಿದೆ.
ಕಪ್ಪಿಟ್ಟ ಬಡ ಚರುಮದಿಂದ
ಕಷ್ಟದ ಬೆವರು ಹರಿದಿದೆ.

ಹಾರದೆ ಕುಂತಿವೆ ಪಕ್ಷಿಗಳು
ತೊರೆದು ಬದುಕ ಬಾನನೆ.
ಕತ್ತಲೆ ಬರಲಿ ದಾರಿ ಬಿಡು
ಹೊಳೆಯಲಿ ಚುಕ್ಕಿ ಒಡನೆ.
ಆವಿಯಾಯ್ತು ಬೆಂದ ನೀರು
ಹೋಗು ಭಾಸ್ಕರ ಬೇಗನೆ.

ಶಪಿಸಿ ನಿಲ್ಲದಿರು ಬೇಸರದಿ
ತಂಪಾದಿತು ನೀನಿಲ್ಲದಾಗಸವು.
ನೀ ಹೊರಡೆ ಬಂದು ಚಂದ್ರ
ತಡೆವ ದುಡಿವವರ ಅಳುವು
ವೈಶಾಖದ ಮೂಢತೆಗೆ
ಜಲಚರದಳಿವು
ಬೇಗ ಜಾರು ಹುಡುಕಬೇಕಿದೆ
ಗಾಳಿಯ ಸುಳಿವು


✍🏼 ತ್ರಿನೇತ್ರಜ.

ಶಿವಕುಮಾರ. ಹಿರೇಮಠ.

Monday, 12 March 2018

*ಅವಳ ಕೆಣಕು*


*ಅವಳ ಕೆಣಕು*

ನನ್ನ ಕಾಲ್ಗೆಜ್ಜೆಯ
ನಾದಕೆ ಕಿವಿಗೊಡದ
ಒಲವಿನರಿವೇ ಇಲ್ಲದ
ಅರಸಿಕ ನೀನಾರೋ?
ತುಂಬಿದ ಹರೆಯವ
ಕಣ್ಣಂಚಲೂ ಅಳೆಯದೆ
ಕಲ್ಲುಮನದ ಅಲ್ಪ
ಅಮಾಯಕ ನೀನಾರೋ?
ನವ ವಸಂತನ ಸೆಳೆಯಲು
ಹಸಿರ ಹೊದ್ದು ನಿಂತ ಇಳೆ
ನನ್ನನೊಮ್ಮೆ ನೋಡಿ
ಅಸೂಯೆಯಲಿ ಬೆಂದಳು
ನೈದಿಲೆಯ ನಾಚಿಸುವ
ನನ್ನ ಮುಖಾರವಿಂದಕೆ
ಸಮವಾಗದೆ ಮಂಕಾಯ್ತು
ಚಂದಿರನ ಬೆಳದಿಂಗಳು.
ಲತೆಯನು ಹೋಲುವ 
ಮೈ ಮಾಟದ ಬಳುಕು
ನಾಗವೇಣಿಯ ಥಳುಕು
ಪ್ರೇಮ ಸೂಸಿಹ ಕಂಗಳು
ರುಚಿಸದೆ ನಿನಗೀ ಉಕ್ಕುವ
ಅನುಪಮ ರೂಪರಾಶಿ?
ನಿಸ್ಸಂದೇಹವಾಗಿ ಹೇಳುವೆ
ನೀನದಾರೋ ಸ್ತ್ರೀ ದ್ವೇಷಿ.
✍ ತ್ರಿನೇತ್ರಜ್.

Wednesday, 7 March 2018

*ಬೇಕು ಮೌನ*


    *ಬೇಕು ಮೌನ*



ಇಳಿಹೊತ್ತಲಿ ಏಕಾಂತದಿ
ನಿನ್ನ ಸಂಗಡವಿರಲು
ಬೇಡವಾಯ್ತು ಎನಗೆ
ಹೊತ್ತುಕಳೆವ ಮಾತು||

ಕತ್ತಲಾಗುವವರೆಗೂ
ಕಣ್ಣಲ್ಲಿ ಕಣ್ಣಿಟ್ಟು
ನಿನ್ನೊಳು ಕಾಣುವೆನು
ನನ್ನೆ ನಾ ಮೈಮರೆತು||

ಕಾಲ ಕಟ್ಟಳೆ ದಬ್ಬಿ
ಪ್ರೇಮ ಲತೆಯು ಹಬ್ಬಿ
ಮೌನದಲಿ ಬೆಸೆದಿದೆ
ನಮ್ಮಿಬ್ಬರನು ತಬ್ಬಿ||

ಒಲವು ಅರಳುವ ಹೊತ್ತು
ಅಧರ ಕೇಳಲು ಮುತ್ತು
ಮೌನಕೆ ಶರಣಾಗುವ ಬಾ
ಇನ್ನು ನಮಗೇಕೀ ಮಾತು||

✍🏼 ತ್ರಿನೇತ್ರಜ್

 ಶಿವಕುಮಾರ ಹಿರೇಮಠ

Monday, 5 March 2018

ಆಸೆ ನಿರಾಸೆ


ಆಸೆ ನಿರಾಸೆ

06/12/2017, 8:49 p.m.*
....... ..... ..... ..... ....
ಎತ್ತರ ಎತ್ತರವೆಂದರೆ
ಅದೇನೊ ಆಸೆ ನನಗೆ.
ಏರಿ ಏರಿ,ಕಂಬ ಸೇತುವೆ
ಮಧ್ಯ ಕುಳಿತೆ, ಸುಸ್ತಾಗೆ.

ಮುತ್ತಿಕೊಂಡಿವೆ ಮೋಡ
ರವಿಯ ಓಟವ ತಡೆದು.
ಓಕುಳಿಯಾಡಲು ಭಾನು
ಬಾನೆಲ್ಲ ರಂಗಾಗಿಹುದು.

ಬಣ್ಣದಾಸೆಗೆ ಹಾರಿಹವು
ಖಗಗಳು ರೆಕ್ಕೆಬಡಿದು.
ಗಗನದತ್ತ ಹಾರುವಾಸೆ
ಮನದಲಿ ಬಂದಿಹುದು.

ಕೈಗಳೆರಡ ಬೀಸುತಲಿ
ಒಮ್ಮೆಲೆ ಪುಟಿನೆಗೆದು,
ಬಳಿಸಾರಿ ರಂಗಿನಾಟವ
ನೋಡುವಾಸೆ ನಿಲ್ಲದು.

ತಾತನ ತಲೆಯಂತಹ
ಬೆಟ್ಟ ಮೂಗುಮುರಿದು,
'ನಿನ್ನ ಕೈಲಿ ಇಷ್ಟೇ ಸಾಧ್ಯ'
ಎಂದಂತೆ ಅನಿಸಿಹುದು.
...... ...... ..... ..... .....
..✍🏼 *ತ್ರಿನೇತ್ರಜ.*
ಶಿವಕುಮಾರ. ಹಿರೇಮಠ.

ದೋಣಿಯಾಟ



 _*ದೋಣಿಯಾಟ*_


ಬೆಳ್ಳಿ ಮೋಡ ಮೆಲ್ಲನೆ ಕರಗಿ
ಮುತ್ತಿನಾ ಮಳೆ ಸುರಿಸಲು
ನೆಲವ ನೆನೆಸಿ ನೆರೆದ ಹನಿಗಳು
ಕೂಡಿ ಕಿರುತೊರೆ ಹರಿಯಲು

ಪುಟ್ಟ ಕಂದನ ಮನದಿ ಹುಟ್ಟಿತು
ಮಳೆಯಲಾಡುವ ಆಸೆಯು
ಅಪ್ಪನ ಕೈಯಲಿ ಮೂಡಿಬಂತು
ಕಾಗದದ ಪುಟ್ಟ ದೋಣಿಯು

ಮರ್ಸಾನ್ ಎಲೆ ಛತ್ರಿ ಹಿಡಿದು
ಮಳೆಯ ತುಂತುರು ನಡುವಲಿ
ಬಯಲ ನೀರಲಿ ದೋಣಿ ಬಿಡೆ
ಹರುಷ ಹರಿಯಿತು ಮೊಗದಲಿ.

ಬಾಲ್ಯದಾ ಸಿಹಿ ನೆನಪು ಮರಳಿ
ಅಪ್ಪನು ಮತ್ತೆ ಮಗುವಾದರು
ಅಮ್ಮ ನೋಡಿ ಕೋಪತಾಳಲು
ಇಬ್ಬರೂ ನಟಿಸುತ ನಕ್ಕರು.

.... ... ... .... .... ....
✍🏼 ತ್ರಿನೇತ್ರಜ್
5-3-18
ಶಿವಕುಮಾರ. ಹಿರೇಮಠ.

Friday, 2 March 2018

*ಚುನಾವಣೆ*


[02/03, 5:46 p.m.]
ಕವನ

 
*ಚುನಾವಣೆ*

ಬಂತು ಚುನಾವಣೆ ಮತ್ತೆ
ಸ್ವಾಗತ ಸುಸ್ವಾಗತ
ನಾಸಿಕಕೆ ನವನೀತ ನಾತ
ಇದು ಅವರಿಗೆ ಕರಗತ

ಮನ ಮನೆಗಳ ಒಡೆಯುವ
ಧ್ವಜಗಳ ಹಾರಾಟ
ಜಿದ್ದಾಜಿದ್ದಿಗೆ ಬಲಿಎಷ್ಟೋ
ಅಧಿಕಾರಕ್ಕೆ ಹೊರಾಟ

ಹಳ್ಳಿ ಹಳ್ಳಿಗೂ ಸಾಂಕ್ರಾಮಿಕ
ಬಾಂಧವ್ಯದ ಬಿರುಕು
ಪಾರ್ಟಿಗಳ ಪೈಪೋಟಿಗೆ
ಸಂಬಂಧದಿ ಒಡಕು

ಜನಸೇವಕರಿವರು ಅದ್ಹೇಗೆ
ನಾಯಕರಾಗಿ ನಿಂತರು?
ಜನಬಲಕೆ ಕಣಕ್ಕಿಳಿದರು
ಕೋಟಿಗಳ ಸಿರಿವಂತರು

ಪ್ರಜಾಸೇವೆಗೆಂದೇ ಹಾಕಿ
ನಿಷ್ಠೆಯ ಮುಖವಾಡ
ತೋರುವರು ಗೆದ್ದಮೇಲೆ
ಸ್ವಾಭಿವೃದ್ಧಿಯ ಪವಾಡ

ಪ್ರಜೆಯನ್ನು ಪ್ರಭು ಎನ್ನುವ
ಕಾಲವೂ ಬಂದೀತೆ?
ಮುಗಿಯಲೊಮ್ಮೆ ಚುನಾವಣೆ
ನಮ್ಮ ಬವಣೆ ತಪ್ಪೀತೆ?
.... .... ..... .... ....
✍🏼  ತ್ರಿನೇತ್ರಜ್

ಶಿವಕುಮಾರ. ಹಿರೇಮಠ


Tuesday, 27 February 2018

*ಹುಸಿಕೋಪ*

   

*ಹುಸಿಕೋಪ*
[06/12/2017, 8:50 p.m.]
.... .... .... .... ....
ಕೆಲ ತಿಂಗ್ಳು ಸುಮ್ಮ್ನಿದ್ದೆ,
ಇದ್ದಂತೆ ಮಾತಿನಲ್ಲಿ ಓಟೆ.
ಜಾಸ್ತಿಯಾಗಿದೆ ಇತ್ತೀಚೆಗೆ
ಅದೇಕೊ ನಿನ್ನ ಗಲಾಟೆ!!

ಊಟಕೆ ತಡವಾದರಷ್ಟೇ!
ಶುರು ಮಾಡುವೆ ಗಲಾಟೆ.
ನನ್ನ ಊಟವಾಗೋತನಕ
ನಿಲ್ಲಲಾರದು ನಿನ್ನ ತಂಟೆ.

ಎನೇನೋ ಬೇಕೆಂಬ ನಿನ್ನ
ಉದ್ದುದ್ದದ ಆಸೆ,ಬೇಡಿಕೆ.
ನಿನ್ನಿಂದ ನನಗೆ ಹೆಚ್ಚುತ್ತಿವೆ
ದಿನವೂ ನೂರು ಬಯಕೆ.

ಆಟವಂತೆ ಆಟ! ಆಡುತ್ತ
ಕೊಡುತ್ತೀಯ ಈ ಒದಿಕೆ.
ಮುದ್ದಿಕ್ಕಿ ಗುದ್ದು ಕೊಡುವೆ
ಬಾ ಮೊದಲು ಹೊರಕ್ಕೆ.
..... .... ..... ..... ..... ...
..✍🏼 ತ್ರಿನೇತ್ರಜ.
ಶಿವಕುಮಾರ. ಹಿರೇಮಠ.

ಪ್ರಾಣಸಖಿ


     
       ಪ್ರಾಣಸಖಿ
      ---------------
ಬಾಲ್ಯದಲಿ ಜೊತೆಯಾದೆ,
ಪ್ರಾಣಸಖಿ ಎನಗಾದೆ .
ಏಕಾಂಗಿತನವನು ನೀ
ಬಂದು ನೀಗಿದೆ.
ಎನ್ನಯ ಒಡನಾಡಿಯಾದೆ.
ನೆಚ್ಚಿನ ಒಡನಾಡಿಯಾದೆ.|ಪ|

ಪಾಠದಲಿ ಜೊತೆಯಾದೆ,
ಆಟದಲೂ ಬಲವಾದೆ;
ರಂಗೋಲಿ ಕಲಿಸಿದೆ,
ಜೋಕಾಲಿ ಜೀಕಿದೆ.
ನನ್ನಮ್ಮ ಬೈದಾಗ
ಬೆನ್ನಸವರಿ ರಮಿಸಿದೆ.
ಕೈಗೆನಗೆ ಮದರಂಗಿಯ
ಹಾಕಿ ನೀ ಸಂಭ್ರಮಿಸಿದ್ದೆ.|೧|

ನನ್ನ ಮದುವೆಯಲ್ಲಿ
ಕುಣಿದು,ದಣಿದು;
ನನ್ನ ಸಿಂಗರಿಸಿ,
ನಕ್ಕೂ ನಲಿದು;
ಪತಿಮನೆಗೆ ಹೊರಟಾಗ
ಇಲ್ಲದ ನಗುತಂದು,
ಮನದಲ್ಲೆ ಅಳುವ ನುಂಗಿದೆ.
ಬಿಟ್ಟಿರಲು ನಾನೂ ನೊಂದೆ.|೨|

ಉಸಿರಿರುವ ವರೆಗೂ
ನಿನ್ನನೆಂದೂ ಮರೆಯೆ.
ಸಾಯುವ ಮುನ್ನ
ನಿನ್ನಕಾಣ ಬಯಸುವೆ.
ಮತ್ತೊಂದು ಜನ್ಮದಲೂ
ಮನ ನಿನ್ನ ಬಯಸಿದೆ.
ಈ ಜೀವದ ಗೆಳತಿಯಾದೆ.|೩|

... ... ... ... ... ... ... ... ...
✍...ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

ಸಬಲೆ


 
         ಸಬಲೆ
ನವಭಾವಗಳ ಬೆನ್ನೇರಿ,
ಸದಾ ನನ್ನ ಕಾಡಿಬೇಡಿ;
ಪ್ರೀತಿಯ ಸೂರೆಗೈದು
ಹಚ್ಚಿಟ್ಟೆ ಒಡಲಲಿ ಕಿಡಿ.

ಕನಸ ನೂರು ತೋರಿ,
ಮನದಣಿಯೆ ಈಜಾಡಿ;
ಈಗೆನ್ನ ತೊರೆದು ನೀ
ಹೊರಟೆಯಾ? ಹೇಡಿ!

ಜಾರದಿರು ನೀ ನೇಸರ.
ಬಂದು ಬೆಳಗೀ ಬಾಳು.
ಮುನಿದು ಸಾಗೆ ದೂರ.
ನನ್ನಂತೆ ಭುವಿ ನೂಂದಾಳು.

ಪ್ರೀತಿಕೊಂದವ ಇವನು,
ಛೀ! ಅಲ್ಲೆನಗೆ ಸರಿಜೋಡಿ
ಕಡಲೇ ಬಾ ಮೇಲೇರಿ.
ಬರುವೆ ನಿನ್ನೊಡಗೂಡಿ.

ಛೇ! ಛೇ!ನಾನೆಂಥ ಕ್ರೂರಿ?
ಜನಿಸಬೇಕು ನನ್ನೊಡಲಕುಡಿ.
ದಿಟ್ಟೆ ನಾ; ಸಾಧಿಸಿತೋರುವೆ.
ಜಗ ನಗುವುದು ನಿನ್ನ ನೋಡಿ.
    .... .... ..... .... ..... ....
 ✍.. ತ್ರಿನೇತ್ರಜ.
        ಶಿವಕುಮಾರ.ಹಿರೇಮಠ.

ಹತ್ತು ಹನಿಗವನಗಳು-೧

ಹನಿಗವನ-1

 ಸಮರಸ
----'''''----
ಪತಿತೆಯೊಡನೆ ಸರಸಕ್ಕಿಂತ
ಸತಿಯೊಡನೆ ವಿರಸ
ಸಮರವೇ ಲೇಸು.
ಸೋತರೂ ಗೆದ್ದರೂ
ಸಮರಸವೇ ಆಗುವುದು ಬಾಳು.
..... ...... ....... .......

ಹನಿಗವನ-2

          ಬಂಧಿ
-------'''-----
ಸರಸವನ್ನರಸಿ ನಿನ್ನ
ತೋಳಸೆರೆಯಲಿ ಸೇರಿದ
ಸಮಯದಿಂದ ನಾ
ಸದ್ದಿಲ್ಲದೆ ನನ್ನ ಸ್ವಂತಿಕೆಗೆ
ತೋರಿದೆ ಸಾವಿನೂರ.
ತಾಯಿಯಾದಳು ದೂರ,
ಬದುಕೀಗ ಬಲುಬೇಸರ.
...... ..... ..... .... .....
✍..ತ್ರಿನೇತ್ರಜ.

ಹನಿಗವನ -3

[19/11, 6:59 p.m.]
       ಸತ್ಯ ಕಹಿ
..... ...... ..... ......
'ಮುಖ ಪುಸ್ತಕ'ದಲ್ಲಿನ  
ಭಾವಚಿತ್ರಕೆ ಸೋತು👩🏻
'ಪ್ರೀತ್ಸೊಣ ಬಾ' ಎಂದ್ಬುಟ್ಟೆ.
ಮನೆಗ್ಬಂದ್ಬುಟ್ಟು, ನಿನ್ನ  👧🏾
ಮುಖತೋರ್ಸಿ ನನ್ನ
ಹೃದಯಾನೇ ಒಡದ್ಬುಟ್ಟೆ.😳🤢😭

ಹನಿಗವನ -4
[19/11, 8:46 p.m.]

     ಏಕೆ ಹೀಗಾಯ್ತೊ?
...........................

ಪ್ರೇಮಿಗಳ ದಿನ ಅವಳೆಂದಳು
'ಸೆಲ್ ಒಂದು ತಂದುಕೊಡಿ'.
ಒಂದೇ ಏಕೆಂದು ಎರಡು
ಎವರೆಡಿ ತಂದು ಕೊಟ್ಟೆ ನೋಡಿ.
ಅಂದಿನಿಂದ ದೂರಾದಳಲ್ಲ! ನನ್ನ ಹೃದಯವಾಯ್ತು ಒಡೆದ ಕನ್ನಡಿ.
...   ...   ...   ...   ...   ...   ... ...
✍..ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

ಹನಿಗವನ -5
[20/11, 8:45 p.m.]
.... ... ... .... .... .... ... ....
         ಅರ್ಥ ಆಯ್ತು ಬಿಡಿ!!    
        ----------------
ಜಪಾನ್ ಅಲ್ಲ ಇದು ನಮ್ಮ  ಭಾರತ.
ಮತ್ಯಾಕೆ ಇವರಿಗೆ ಈ ಧಾವಂತ?
ತಾಲೀಮು ನಡೆಸಿ ಸಜ್ಜಾಗುತ್ತಿದ್ದಾರೆ  ಇವರುಗಳು.
ಆಗಲು ನಮ್ಮ ದೇಶದ ಭಾವಿ
ಅಧಿಕಾರಿಗಳು!!
ತಪ್ಪಿದ್ರೆ ದೇಶೊದ್ಧಾರಕ ಭಾವಿ
ರಾಜಕಾರಣಿಗಳು!!!
 ...   ...   ...   ...   ...   ...   ... ...
✍..ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

ಹನಿಗವನ -6
[26/11, 8:42 p.m.]
........................
    ಪರಿಸರ ಬಂಧು
..........................
"ದುಡ್ಡೇ ದೊಡ್ಡಪ್ಪ" ಎಂಬ
ಮಾತೀಗ ಹಳತಾಯ್ತು.
ಪರಿಸರವೇ ಪ್ರಾಣಮೂಲ
ಎಂಬುದು ಮನನವಾಯ್ತು.
ತಿಮ್ಮಕ್ಕನ ಕಾರ್ಯಕ್ಕೆ
ತಲೆಬಾಗುವಂತಾಯ್ತು.
ಖಗಕೆ ನೆಲೆ,ಮೃಗಕೆ ಛಾಯೆ;
ಕೀರ್ತಿ ಅಜರಾಮರವಾಯ್ತು.
... ..  ...  ...  ...  ... ...
✍.. ತ್ರಿನೇತ್ರಜ.

ಹನಿಗವನ -7
[27/11, 7:08 p.m.]

  ಕನ್ನಡಿಗನಾಸೆ

ಹೆಸರಾಯಿತು, ಉಸಿರಾಯಿತು;
ಜಗದ ಹಸಿರಾಗಲಿ ನಮ್ಮ ಕನ್ನಡ.
ನುಡಿಯಾಯ್ತು,ಬರಹವಾಯ್ತು;
ಹಾಸುಹೊಕ್ಕಾಗಬೇಕಿದೆ ಕನ್ನಡ.
............................
✍..ತ್ರಿನೇತ್ರಜ.


[27/11, 9:00 p.m.]
ಹನಿಗವನ -8
ಕ್ಷಮಿಸಿಸಲ್ಲ.
................
ಕನ್ನಡ ಎನೆ ಎದೆ ಉಬ್ಬುವುದಿಲ್ಲ?
ಕನ್ನಡ ಎನೆ ಕಿವಿ ನಿಮಿರುವುದಿಲ್ಲ?
ನಿನ್ನದೊಂದು ಜನ್ಮವೇ ಅಲ್ಲ.
ಅನ್ಯಭಾಷೆಯ
ದಾಸ್ಯಕೆ ಜಾರಿಹರನ್ನ
ಕನ್ನಡಾಂಬೆ ಕ್ಷಮಿಸುವುದೂ ಇಲ್ಲ.
................
✍..ತ್ರಿನೇತ್ರಜ

ಹನಿಗವನ -9

 *ಪರೀಕ್ಷೆ* 
ಕಾದೆ, ಕಾದು ಸಾಕಾದೆ
ಆದರೂ ಇದೆ ನಿರೀಕ್ಷೆ
ಜಿಡ್ಡುಗಟ್ಟಿದೀ ಮನಕೆ
ನೀಡು ಕೊಂಚ ದೀಕ್ಷೆ
ಈಜಿ ಸಾಧಿಸಲೇಬೇಕು
ದೇವರಿಟ್ಟ ಈ ಪರೀಕ್ಷೆ
        ............
✍🏼 ತ್ರಿನೇತ್ರಜ್

 ಶಿವಕುಮಾರ. ಹಿರೇಮಠ

ಹನಿಗವನ -10
ಆಹಾ!   ಕನ್ನಡ..
......................
ಹೃದಯಕ್ಕೆ ಹಗುರ,
ಅಧರಕ್ಕೆ ಮಧುರ,
ಕನ್ನಡದ ನುಡಿಸಾರ,
ಹೀರೇ; ಪಂಡಿತನಂತೆ
ಈ ಪಾಮರ!

ಬರೆದರೆ ಬಂಗಾರ,
ಜ್ಞಾನಪೀಠ ಹಂದರ,
ಕರುನಾಡ ಶೃಂಗಾರ,
ಕನ್ನಡ ಸವಿನುಡಿಯು
ಸವಿ ನಾದಸ್ವರ.
.....................
✍..ತ್ರಿನೇತ್ರಜ
ಶಿವಕುಮಾರ.ಹಿರೇಮಠ.

Wednesday, 21 February 2018

*ಯಾರಿಗಾಗಿ?*


*ಯಾರಿಗಾಗಿ?*
09/12/2017, 1:57 p.m.

   

ದೇಶದ ಬೆನ್ನೆಲುಬುಗಳ
ಏಣಿಮಾಡಿ ಏರುತಿರುವವರೆ
ಯಾರಿಗಾಗಿ? ನಿಮ್ಮಾಟ
ಯಾರಿಗಾಗಿ?

ಚಿಂತೆಯಿಲ್ಲದ ನಾಯಕರು
ಮತ ಹಬ್ಬಗಳು ಬಂದಾಗ,
ಮೊಸಳೆ ಕಣ್ಣೀರಿಂದ ಖಾಲಿ
ನಡೆಸುವ ಸಂವಾದ ಯಾರಿಗಾಗಿ?

ಒಣಗಿದ ತೆಳು ಮೋಡಗಳು
ನೋಡಿ ನೋಡದಂತೆ ಸಾಗುವಾಗ ,
ತಾಸುಗಟ್ಟಲೆ ಅರಚುವ
ಚಿಂತಕರ ಸಂವಾದ ಯಾರಿಗಾಗಿ?

ಸೆಟೆದುಹೋದ ಪೈರನು
ನೋಡಲಾಗದ ಬಡದೇಹ
ಒಣಮರಕೆ ನೇತಾಡುವಾಗ,
ಬುದ್ಧಿಗಳ ಸಂವಾದ ಯಾರಿಗಾಗಿ?
----------------
..✍🏼 ತ್ರಿನೇತ್ರಜ.
ಶಿವಕುಮಾರ. ಹಿರೇಮಠ.

*ದಾಹ*

‌‌‌‌ಭಾವಗೀತೆ
       *ದಾಹ*
[12/12/2017, 7:24 p.m.] 
ದಾಹವೆಂಬ ಭಾವನಾದವು
ತುಂಬಿಕೊಂಡು ತನುಮನ
ತಣಿಯದಂತ ತುಡಿತದಿಂದ ತಳಮಳಿಸಿಹುದು ಜೀವನ.

ತೋಟದಲ್ಲಿ ತುಂಬಿದೆ
ಅಗಣಿತಕಲ್ಪ ಸಿಹಿ ಫಲ.
ಕೈಗೆಟುಕದ ಎತ್ತರಕ್ಕಿದೆ!
ಯತ್ನಿಸದಿರೆ ಏನುಫಲ?

ಹಸಿವ ನೀಗಲು ಕುಡಿದೆನು
ಮನದಣಿಯೇ ಜ್ಞಾನ ಜಲ.
ಎತ್ತರೆತ್ತರಕ್ಕೆ ಏರಲು ಎನಗೆ
ಕೂಡಿಬರಲಿ ಬೇಗನೆ ಕಾಲ.

ಶ್ರೇಷ್ಠರು ನೀಡಿಹೋಗಿಹ
ಜ್ಞಾನಕಣಜವೇ ಬೆನ್ನಿಗಿದೆ.
ಸಾಧಕರ ಶಿಖರವನೇರೊ
ಆಸೆ ಎದೆಯ ತುಂಬಿದೆ.

ಹಾರೈಕೆ ಹೆತ್ತವರದು
ಸದಾ ರಕ್ಷೆಯ ನೀಡಿದೆ.
ಗುರಿಯು ಬಲು ಎತ್ತರ
ಸಾಧಿಸುವೆ ಛಲಬಿಡದೆ.
~~~~~~~~~~~~~~
..✍🏼 ತ್ರಿನೇತ್ರಜ.
ಶಿವಕುಮಾರ. ಹಿರೇಮಠ.

*ಬನ್ನಿರೆಲ್ಲ ಶಾಲೆಗೆ*


 *ಬನ್ನಿರೆಲ್ಲ ಶಾಲೆಗೆ*
[29/5/2017, 10:54 a.m.]
   

ವಿದ್ಯೆಯೆ ಬಾಳಿನ ಬೆಳಕು
ಸಾಕ್ಷರರಾಗಿ ಜಗದೊಡನೆ ಮುನ್ನಡೆಯಬೇಕು.
ಬನ್ನಿರಿ ಬನ್ನಿರಿ ಶಾಲೆಯ ಕಡೆಗೆ
ಸಾಗೋಣ ಒಟ್ಟಾಗಿ ಬೆಳಕಿನ ಕಡೆಗೆ.|ಪ|

ವಿದ್ಯೆಯಿಲ್ಲದ ಬಾಳು ಹದ್ದಿಗಿಂತಕಡೆ.
ಕಲಿಯೋಣ ಅಕ್ಷರವ ಶಾಲೆಯೆಡೆಗೆ ನಡೆ.
ಸಾಕಿನ್ನು ಮೋಸಹೋಗೊ
ದಡ್ಡತನದ ಬಾಳು.
ಜ್ಞಾನವಂತರಾದರೆ ಇರದು
ಇಂಥ ಗೋಳು.|೧|

ಶಾಲೆಯಿದು ಸರ್ವಧರ್ಮ ದೇವಾಲಯವಣ್ಣ
ಶ್ರದ್ಧೆಯಿಂದ ವಿದ್ಯೆಯ ಕೃಪೆ ಪಡೆಯೋಣವಣ್ಣ
ನಲಿಯೋಣ ಕಲಿಯೋಣ
ಎಲ್ಲ ಬನ್ನಿರಿಲ್ಲಿ
ಸುಶಿಕ್ಷಿತರಾದರೆ ಕಷ್ಟಗಳಿನ್ನೆಲ್ಲಿ.|೨|

✍🏼 _ತ್ರಿನೇತ್ರಜ_

ಶಿವಕುಮಾರ.ಹಿರೇಮಠ.

ಕನ್ನಡವೆಮ್ಮ ನುಡಿಸಿರಿ

29/12/2017, 10:34 p.m.
 ಭಾವಗೀತೆ

ಕನ್ನಡವೆಮ್ಮನುಡಿಸಿರಿ


ಕನ್ನಡವೆಮ್ಮ ನುಡಿಸಿರಿ
ಕರುನಾಡೆ ನಮ್ಮ ಐಸಿರಿ|ಪ|

ಮಲೆನಾಡಿನ ಮಧುರ ಕನ್ನಡ

ಮಂಜುಳ ಗಾನದಂತೆ.
ಬಯಲುಸೀವೆಯ ಗಟ್ಟಿ ಕನ್ನಡ
ಫಿರಂಗಿ ಗುಂಡಿನಂತೆ.
ಮೈಸೂರಿನ ಮುದ್ದು ಕನ್ನಡ
ಮಲ್ಲಿಗೆಯು ಅರಳಿದಂತೆ.
ಗಡಿನಾಡಿನಲಿ ಉಲಿವ ಕನ್ನಡ
ಜೇನ್ ಬೆರೆತ ಹಾಲಿನಂತೆ...|೧|

ರನ್ನ,ಪೊನ್ನರ,ಪಂಪ ಜನ್ನರ
ಜೀವವಾಣಿ ಈ ನುಡಿಯು.
ಕುಮಾರವ್ಯಾಸರು ರಾಘವಾಂಕರು 
ಹಾಡಿಹ ರಸಝರಿಯು.
ಶರಣರ ವಚನ ದಾಸರ ಪದಗಳ, 
ಜನಪದ ಸಾಹಿತ್ಯದ ಬೀಡು
ಅಷ್ಟ ಜ್ಞಾನಪೀಠ ಗೌರವ ಪಡೆದಿಹ 
ಭುವನೇಶ್ವರಿಯ  ಹೊನ್ನಾಡು.|೨|

✍🏼 _ತ್ರಿನೇತ್ರಜ_

ಶಿವಕುಮಾರ.ಹಿರೇಮಠ.




✍🏼 ತ್ರಿನೇತ್ರಜ


ಶ್ರೀ ಶಿವಕುಮಾರ. ಹಿರೇಮಠ.
ಬಾಗಲಕೋಟೆ.
shivakumarh13 @gmail.com

*ಏಕಾಂಗಿನಿ*


      *ಏಕಾಂಗಿನಿ*
02/01, 8:42 p.m.
     

ದೂರತೀರವು ಆಸೆ ತೋರುತ
ದಿನವೂ ನನ್ನ ಸೆಳೆದಿದೆ.
ನೀರ ತೊರೆದು ಬಾನಿನೊಡನೆ
ಬೆರೆತ ಹಾಗೆ ತೋರಿದೆ.

ಬಂಧನದ ಬದುಕೇಕೊ
ಉಸಿರ ಕಿತ್ತುಕೊಳುತಿದೆ.
ಬತ್ತುತಿರುವ ಲಜ್ಜೆಯೇಕೊ
ದೂರದೂರ ಬಯಸಿದೆ.

ನಿಂತ ನೀರು ಈಜಲೆನಗೆ
ಒತ್ತಾಸೆಯ ತುಂಬಿದೆ.
ಕಂಬಿಕಿತ್ತ ಕಿಟಕಿಯೊಂದು
ಪರದೆ ಸರಿಸಿ ಕರೆದಿದೆ.

ವಿರಹದಿರಿತ ಸಹಿಸಲೆಂತು
ಮನಕೆ ತಿಳಿಯದಾಗಿದೆ.
ಹೃದಯಾಳದ ಸುಪ್ತ ಪ್ರಜ್ಞೆ
ದುಡುಕದಂತೆ ತಡೆದಿದೆ.

✍🏼 ತ್ರಿನೇತ್ರಜ

 ಶಿವಕುಮಾರ. ಹಿರೇಮಠ.

*ಮೂಕವೇದನೆ*



      *ಮೂಕವೇದನೆ* 
   
ಎಳಸು ಎಸಳುಗಳುಗಳಿಗೆ
ಚೀತ್ಕಾರ ತರುವ ನೋವು
ಎದೆ ಮೇಲೆ ಕ್ಷಣ ಕ್ಷಣವೂ
ಬಂದೆರಗಿದಂತೆಯೆ ಸಾವು

ದುಷ್ಟ ಹಾಸಿಗೆಯ ನಗು
ಹುಚ್ಚಾಟ ಹೊರಳಾಟ
ನಲುಗುವ ದಿಂಬುಗಳು
ಹೊಸಕಾಟ ಗೋಳಾಟ

ಸುಕೊಮಲ ಕುಸುಮಕೆ
ಏಕಿಂಥ ಈಟಿಯ ತಿವಿತ
ಕುದಿವ ಎದೆಯ ಬಿಸಿಗೆ
ಬೆಂದ ಮೈ ಬೆವರ ನಾತ

ಆಯಾಸದ ನಿದ್ರೆಯಲ್ಲೂ
ಮತ್ತದೇ ಕೆಟ್ಟ ಕೆಟ್ಟ ಕನಸು
ಕನಸೋ ಇಲ್ಲ ನಿಜವೋ
ಅರಿಯದಂತಹ ವಯಸು

ಬಾನಾಡಿಯಾಗಿ ಹಾರುವ
ಕನಸುಗಳೆಲ್ಲ ಸುಟ್ಟವು
ಬೇಡವಾದ ಬವಣೆಗಳ
ಭಾರಕ್ಕೆ ಕಾಲು ಕುಸಿದವು

ಗಿಡುಗನಿಗೆ ಸಿಕ್ಕ ಗುಬ್ಬಚ್ಚಿ
ಒದ್ದಾಡುವಂತಹ ಹಿಡಿತ
ತಿಂಗಳಾದರೂ ನೆತ್ತರು
ಕಾಣದಿರೆ ಭಯ ಆಘಾತ

ಹದಿನಾರರ ಹರಯಕೆ
ಬೇಡವಮ್ಮ ನರಕ ಶಿಕ್ಷೆ
ಕೇಳದೆ ಕೊರಳಿಗೆಬಿದ್ದ
ಭಿಕ್ಷೆ ಮಾಂಗಲ್ಯದ ರಕ್ಷೆ

✍🏼 ತ್ರಿನೇತ್ರಜ್

 ಶಿವಕುಮಾರ ಹಿರೇಮಠ

Monday, 19 February 2018

ಓ ನನ್ನ ನಲ್ಲೆ

ಓ ನನ್ನ ನಲ್ಲೆ

         
💗💗💗💖💗💗💗
     
ಕುಣಿವಾ ಬಾ ಎನ್ನ ಚೆಲುವೆ.
ಬೇಡ, ನಮಗ್ಯಾರ ಪರಿವೆ.
ಸೆಳೆದಿದೆ ನಿನ್ನಯ ಒಲವು .
ಸೋತಿದೆ ಪ್ರಕೃತಿಗೆ ಮನವು.

ಇಳೆಗೆ ಮನಸೋತ ಭಾನು,
ಬಾನಲಿ ಚಿತ್ರ ಬಳಿದಿಹನು.
ಆ ನೇರಳೆ, ತಿಳಿಹಸಿರನ್ನು
ಹರಡಿ ಹಿನ್ನೆಲೆ ನೀಡಿಹನು.
'ಮಿಲನಕೆ ಮುನ್ನುಡಿಯಂತಿದೆ ನೋಡು, ಲಾಸ್ಯವಾಡು' ಎನುತಿಹನು.

ಮನದ ದುಗುಡನು ತೊರೆದು,
ಚಿಂತೆಯ ಕಾರ್ಮೋಡ ಕಳೆದು,
ಜಗವೆದುರಿಸೋ ಛಲವ ತಳೆದು
ನರ್ತನ ಗೈಯೋಣ ಬಾ ಇಂದು.
ಜೊತೆಯಲೆ ಸಾಗುವೆ ಓ ನನ್ನ ನಲ್ಲೆಯೆ
ನಿನ್ನ ಕೈಹಿಡಿದು ಎಂದೆದು.
..... .... .... .... ..... ..... ....
✍..ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

*ಗಮನೆ *

*ಗಮನೆ *
          
[09/02, 11:09 a.m.]
     
ತಾಳದೆ,ತೋಳಲಾಡಿದೆ
ಆಸೆಭರಿತ ಭಾವನೆ
ಕಲ್ಪಿಸಲಾಗದ ಕಲ್ಪನೆ
ಸರಿದೂಗದಾ ಸ್ಪಷ್ಟಣೆ
ಹರೆಯವು ಮೈದುಂಬಿ
ಬಂದೆ ನಾ ದೈವವ ನಂಬಿ

ಜನನಕಾಲದಿಂ ಎದೆಯ ಗೂಡಲಿ
ಮೂಡಿಹುದಿದೊಂದು ಹೆಬ್ಬಯಕೆ
ಅದಮ್ಯವಾದ ಆಸೆಯು ಎದ್ದಿದೆ
ತಾಳ್ಮೆಯೆ ಬೇಡ ಈ ಮನಕೆ
ಈಡೇರುವುದೆಂದೋ ನಾ ಕಾಣೆ
ಈ ವೇದನೆಗೆ ಯಾರು ಹೊಣೆ
ನರನಾಡಿಯೊಳೆಲ್ಲ ನುಡಿದಿದೆ
ಝೇಂಕರಿಸುತಾ ರುದ್ರ ವೀಣೆ

ಇಳಿದೆ, ಇಳೆಯ ಸೆರಗಲಾಡಿ
ತೊರೆದೆ ತವರನು ಓಡಿದೆ
ತಂದೆ ಸುರಿದ ಪ್ರೀತಿಯ ಮಳೆಗೆ
ಉಬ್ಬಿದೆ ಹಬ್ಬಿದೆ ತುಳುಕಾಡಿ
ಸೊರಗಿದೆ ಸಣ್ಣಾದೆ
ರವಿಯ ಸುಡುತಾಪಕೆ
ಬೆಂದುಹೋದೆ ಬತ್ತಿಹೋದೆ
ಆಸೆಯ ಮಾತ್ರ ಬಿಡದಾದೆ

ಬೇರುಗಳ ಸವಿ ಹೀರುತ ಬನದಲಿ
ಬಳುಕಿದೆ ಬಂಡೆಗಳ ಸವೆಸುತಲಿ
ಕಾರ್ಗತ್ತಲಲಿ ಬೆಚ್ಚಿದೆ ನಾ ಭಯದಿ
ಅವಡುಗಚ್ಚಿ ಸಾಗಿದೆ ಮೌನದಲಿ
ಹುಡುಕುವೆ ಹೊಸಹಾದಿ
ಹೇಗಿದ್ದರೂ ನಾ ನದಿ
ಸಾಗುತಿರುವೆ ಅರಸಿ ಭರದಿ
ಹುಡುಕಿ ಬೆರೆಯವೇ ಸಾಗರದಿ
*** *** **** **** ****
✍🏼 ತ್ರಿನೇತ್ರಜ್

 ಶಿವಕುಮಾರ. ಹಿರೇಮಠ.

Sunday, 18 February 2018

ಲಾಲಿ ಹಾಡು

ಲಾಲಿ ಹಾಡು
         
ನಯವಾಗಿ ಕಣ್ಸೇರಲು
ನಿದಿರಾದೇವಿ ಬಂದಿಹಳು|
ಹೊಂಗನಸ ತೋರಲು
ನಿನ್ನ ಕರೆದೊಯ್ಯುವಳು|

ಮಲಗೆನ್ನ ಮಗುವೆ,
ನಾ ಲಾಲಿ ಹಾಡುವೆ.
ಲಾಲಿ ಜೊ ಜೊ ಲಾಲಿ||ಪ||

ಗೆಜ್ಜೆಕಾಲು ಕುಣಿದು ಸುಸ್ತಾಗಿವೆ.
ನೋಟವಾಡಿ ನಯನ ದಣಿದಿವೆ.
ಅಮೃತವ ಹೀರಿದ ಅಧರಗಳು
ವಿಶ್ರಾಂತಿಯನ್ನು ಬಯಸಿವೆ.
ಮಲಗೆನ್ನ ಸಿರಿಯೆ, ತಾರೆಗಳ
ದೊರೆಯೆ||೧||

ಪರಿಪೂರ್ಣ ಜೀವನ ನಾಕಂಡೆ.
ತಾಯ್ತನ ಸುಖವ ನಾನುಂಡೆ.
ನಿನ್ನ ಮುಗುಳುನಗೆಯೊಂದೆ
ಹಿಗ್ಗಿನ ಹೊನಲೆಂದು ಮನಗಂಡೆ.
ತೆಕ್ಕೆಯೊಳು ಹಾಯಾಗಿರು ಒಲವಿನ ಗಿಣಿಯೆ||೨||

ನಿನ್ನಿಂದ ಮನೆ ಸಗ್ಗಾಯಿತು,
ಹಗ್ಗಿನ ಹೊನಲು ಹರಿದಾಡಿತು.
ಮನೆಯ ಕೀರ್ತಿ ಕಲಶ ನೀನಾಗು
ಈ ಜಗಕೆ ನೀ ಮಾಡು ಒಳಿತು.
ಮನೆಗೆ ನಂದಾದೀಪ  ಓ ಕಂದ
ನಿನ್ನೀ ರೂಪ||೩||
.... ..... .... .... .... ... ....
..✍ತ್ರಿನೇತ್ರಜ.

ಅನುಬಂಧ

 ಕವನ
ಅನುಬಂಧ
             


ಊರುತಾ ಬೇರುಗಳ
ನನ್ನೆದೆಯ ಅಂತರಾಳಕೆ,
ಚಿಗುರೊಡೆದು ಬೆಳೆಯಲು
ನಿನ್ನ ಹೊಸ ನೂರಾಸೆ;
ಆಸರೆಯಾಗುವೆ ನಾನು,
ಭರವಸೆಯು ನನ್ನ ಮೇಲಿರಲಿ.

ಪ್ರೇಮದಿಂದಲಿ ನೀ ನೀಡಿದ
ಕೈ ಹಿಡಿದಿರುವೆ,ಅಳುಕದಿರು.
ಚಾಚುತ್ತ ಬೆಳೆ ನವಿರಾಗಿ
ಹಚ್ಚ ಹಸಿರಿನ ಕನಸುಗಳ
ಆ ನೀಲಿಯ ಬಾನೆತ್ತರಕೆ;
ನಿನಗೆನ್ನದೆಲ್ಲವೂ ಮೀಸಲಿರಲಿ.

ಸುರಿವ ಮಳೆ ನೀರನು
ಹೀರಿ ಒಡಲಾಳದೊಳು
ಕಾಯ್ದಿರಿಸುವೆ ಎಂದಿಗೂ,
ಬಾಡದಿರು ನೀನು ತೃಷೆಗೆ.
ಅಂಜದಿರು ಗಾಳಿ ರಭಸಕ್ಕೆ
ನಂಬಿಕೆಯು ಭದ್ರವಾಗಿರಲಿ.

ನಿನ್ನ ಹೂವೊಳು ಅರಳಿ
ಫಲಗಳಲಿ ಸಿಹಿರಸವಾಗಿ
ಬೆರೆತು ಒಂದಾಗುವೆನು.
ನನ್ನ ತೋಳಿಗೆ ಬಂದಿಳಿವ
ನಿನ್ನರೂಪಗಳ ಬಚ್ಚಿಡುವೆ;
ಇಂಥ ಕೈಸೇರಿ ನಿನ್ನಂತಾಗಲಿ.
 ... .... .... .... .... ...
✍..ತ್ರಿನೇತ್ರಜ.

ಬಾ ಹೋಗೋಣ ಶಾಲೆಗೆ


         
     ಬಾ ಹೋಗೋಣ ಶಾಲೆಗೆ

'ಅಕ್ಕ ನೋಡೆ ಶಾಲೆದಿರಿಸಲಿ
ಹೇಗೆ ಒನಪಾಗಿ ಹೋರಟಿಹರು!
ಅವರು ನಮ್ಮಯ ಸ್ಥಿತಿ ನೋಡಿ
ಗೇಲಿಯ ಮಾಡಿ ನಕ್ಕಾರು'..?

ಸಂತೈಸಲು ತಮ್ಮನಿಗೆಂದಳು,
'ಅವರತ್ತ ನೀ ನೋಡದಿರು.
ನಮ್ಮ ಭಾಗ್ಯವಿರುವುದಿಷ್ಟೇ,
ತರುವ ಬಾ ಕೆರೆಯ ನೀರು.

ಇವರ ಕಂಡು ಮರುಕಗೊಂಡು
ಬಾಲೆಯರು ಇವರ ತಡೆದರು.
'ಶಾಲೆಬಿಟ್ಟು ಎತ್ತ ಹೊರಟಿರಿ'?
ಎಂದವರನು ಕೇಳಿದರು.

ಅಕ್ಕ ತಮ್ಮ ಮುಖನೋಡಿಕೊಂಡು
ಬೇಸರದಿಂದಲೆ ನುಡಿದರು.
'ಶಾಲೆಗೆ ಎಂದೂ ಹೋಗೇ ಇಲ್ಲ.
ನಾವು ಕೂಲಿಮಾಡೋ ಬಡವರು'.

ಚಿಂತಿಸದಿರಿ ನಿಮ್ಮವರಿಗೆ
ತಿಳಿಹೇಳ್ವೆವೆಂದರಾ ಬಾಲೆಯರು.
ಶಾಲೆಗಾಗಿ ನಾವು ನೀವು;
ನಿಮ್ಮ ಹಕ್ಕು ಕೊಡೆಸುವೆಂದರು.

ಶಾಲೆಗೆ ಸೇರಿಸುವರೆಂದು ಅರಿತು
ಮಕ್ಕಳು ಸಂತಸಗೊಂಡರು.
ಕೂಲಿ ತೊರೆದು ಶಾಲೆ ಸೇರಿ
ಓದಲು ಉತ್ಸುಕರಾದರು.
..... ...... ...... ...... ..... ...
✍... ತ್ರಿನೇತ್ರಜ.
        ಶಿವಕುಮಾರ. ಹಿರೇಮಠ.


ಕಾಯಕಯೋಗಿ


          ಕಾಯಕಯೋಗಿ
            
ಹಚ್ಚಿದ ದೀಪ
ಹೆಚ್ಚೊತ್ತು ಇರದೆ
ತಿಳಿಗಾಳಿಯನೂ
ತಾ ತಾಳದೆ ಆರಿದೆ.

ಕತ್ತಲೇನಿಲ್ಲ ದೀಪದ
ಕೆಳಗೂ, ಸುತ್ತಲೂ;
ಸ್ಪಷ್ಟ ಬೆಳಕಿದೆಯಲ್ಲಾ
ಅತ್ತ-ಇತ್ತ ಎತ್ತೆತ್ತಲೂ!

ಆದರೂ ಹತ್ತುವೆ
ಮತ್ತೆ ಮತ್ತೆ ಹಚ್ಚಲು.
ಅದು ಬೆಳಗಬೇಕೆಂದು,
ಬೆಳಕನಿನ್ನೂ ಹೆಚ್ಚಿಸಲು.

'ಮೆದು-ಮೇಣದಬತ್ತಿ'
ಎಂಬುದದರ ಹೆಸರು.
ತಲೆ ಇರುವ ನನಗೆ
'ದೀಪದಕಡ್ಡಿ'ಎನ್ನುವರು.

ನನ್ನಂಥವರೆ ನನ್ನ
ಹತ್ತಿಸಿ ಉತ್ತೇಜಿಸಿದ್ದು.
ನನ್ನವರ ಕೊಡುಗೆಯೇ
ನನಗೆ ಏಣಿಯಾಗಿದ್ದು.

ದೀಪಗಳ ಹಚ್ಚುವುದೇ
ಸದಾ ನನ್ನ ಕಾಯಕ.
ಜ್ಞಾನದ ಬೆಳಕಿಗಾಗಿಯೇ
ಹುಟ್ಟಿ-ಸಾಯ್ವ ಶಿಕ್ಷಕ.
...   ...   ...   ...   ...   ...   ... ...
✍..ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

*ಕವಿಭಾವ*


*ಕವಿಭಾವ*
[30/01, 8:55 p.m.]

ಮರಳುತಿಹನದೋ ರವಿ
ಮಾಡಿ ಜಗದ ಯಾತ್ರೆಯ
ಮರಳಿದೆವು ನಾವೂ ಸಹ
ಮುಗಿಸಿ ದೇವರ ಜಾತ್ರೆಯ

ಸೂರ್ಯ ರಂಗು ಹರಡಲು
ನಾಚಿ ನಿಂತಿಹುದು ಬಾನು
ಹೃದಯದೊಳು ಬಂಧಿಸಲು
ಹವಣಿಸುತಿತ್ತು ಬಲೂನು

ಮೆಲ್ಲಗೆ ಆಡಿಹವು ಅಲೆಗಳು
ಗಗನದ ಅಂದವ ಮೆಚ್ಚುತ
ನಮ್ಮ ಹೊತ್ತು ಸಾಗಿದೆ ದೋಣಿ
ಅಲೆಗಳೊಡನೆ ಸರಸವಾಡುತ

ಜಗದಂದವನೆಲ್ಲ ನೋಟದಿ
ಸೂರೆಗೊಂಡೆನೆಂದ ರವಿ
ರವಿ ಕಾಣದುದನೂ ಸಹ
ತಾನು ಕಂಡಿಹೆನೆಂದನು ಕವಿ
✍🏼 ತ್ರಿನೇತ್ರಜ



ಈ ಕ್ಷಣವನು ಬದುಕಿಕೊ

ಕವನ
               
 *ಈ ಕ್ಷಣವನು ಬದುಕಿಕೊ.*

[17/02, 11:32 a.m.]

ಹಣೆಬರಹವನು ಬಲ್ಲವರಿಲ್ಲ
ನಾಳೇನೆಂಬುದ ಕಂಡವರಿಲ್ಲ
ಕಾಣದ ಭವಿತವ
ಚಿಂತಿಸಿ ಚಿಂತಿಸಿ ಇಂದನು
ಸವೆಸುವ ಹುಚ್ಚೇಕೆ?
ನೆಮ್ಮದಿಯಿಂದ ನೆಮ್ಮದಿಗಾಗಿ
ಜಗಕ್ಕೆ ನೆಮ್ಮದಿ ನೀಡಲು
ಯೋಚನೆ ನಿಲ್ಲಿಸು ಮನುಜ.
ಈ ಕ್ಷಣವನು ಬದುಕಿಕೊ

ಅವರಿವರೊಂದಿಗೆ ನಿನ್ನ
ಅಳೆಯುವೆಯೇಕೆ
ನೀನು ನೀನೆ ಎಂಬುದ
ಮರೆಯುವೆಯೇಕೆ
ಮರುಳಾಗದಿರು ಪರರ
ಸತ್ತು ಹೊತ್ತೊಯ್ಯದ
ಸ್ವತ್ತು ಆಡಂಬರಕೆ,
ಯೋಚನೆ ನಿಲ್ಲಿಸು ಮನುಜ.
ಈ ಕ್ಷಣವನು ಬದುಕಿಕೊ.

ಯೋಚಸಲೇಬೇಕೆಂದರೆ
ದೀನ ದುರ್ಬಲರ ಏಳ್ಗೆಗೆ,
ಖಗ ಮೃಗಗಳ ಬಾಳಿಗೆ
ಹಸಿರು ಸೊರಗಿಹ ಭೂಮಿಗೆ
ಮನಕುಲದ ಉಳಿವಿಗೆ
ನೀನೇನು ಮಾಡಬಲ್ಲೆಯೆಂದು ಯೋಚಿಸು.ಅದಾಗದಿರೆ
ಯೋಚನೆ ನಿಲ್ಲಿಸು ಮನುಜ.
ಈ ಕ್ಷಣವನು ಬದುಕಿಕೊ.

ಬದುಕು ಚಿಕ್ಕ ಯಾತ್ರೆ
ಸ್ವಾರ್ಥ ಚಿಂತನೆಗಳ ಬಿಡು
ದುಡಿದು ಉಂಡುಟ್ಟು
ಬದುಕು,ಅದನೆ
ಮಕ್ಕಳಿಗೂ ಕಲಿಸು
ಆತ್ಮ ಸುಡುವ ಚಿಂತೆಯನಟ್ಟಿ
ಪರಮಾತ್ಮನೆಡೆಗೆ ಮನವಿಡು
ಯೋಚನೆ ನಿಲ್ಲಿಸು ಮನುಜ.
ಈ ಕ್ಷಣವನು ಬದುಕಿಕೊ.
🤘🏼🤘🏼🤘🏼🤘🏼🤘🏼🤘🏼🤘🏼🤘🏼🤘🏼
✍🏼 ತ್ರಿನೇತ್ರಜ

 ಶಿವಕುಮಾರ. ಹಿರೇಮಠ

*ಶಿವಾರಾಧನೆ*

*ಶಿವಾರಾಧನೆ*
[13/02, 3:06 p.m.]
       
ಜಟಾಧಾರಿ ನೀಲಕಂಠ
ಜಯ ಜಯ ಶಿವ ಶಂಕರ
ಕೈಲಾಸಪ್ರಿಯ ಜಯ ತ್ರಿನೇಶ್ವರ
ಪಾಪಹರ ಕರುಣಾಕರ

ಅಭಿಷೇಕ ಪ್ರಿಯ ನಂದಿಸವಾರ
ಕರುಣಾಸಾಗರ ತ್ರಿಶೂಲ ಧರ
ಬಿಲ್ವಾರ್ಪಣೆಗೆ ಸಂತಸಪಡುವ
ನಿರಾಡಂಬರ ನಾಗಧರ ||೧||

ರುದ್ರಾಕ್ಷಿ ಪ್ರಿಯ ಗಜಚರ್ಮಾಂಬರ
ಧ್ಯಾನ ಪ್ರೀಯ ಗೌರೀವರ
ಢೀಂಢೀಂ ಡಮರುಗ ನಾದಪ್ರಿಯ
ಶ್ರೀ ಚಂದ್ರಮೌಳಿ ಘೃಷ್ಣೇಶ್ವರ ||೨||

ಸಾಂಬಸದಾಶಿವ ಶಂಭೋ ಹರಹರ
ಮಹಾದೇವ ಪ್ರಳಯಾಂತಕರ
ಸರ್ವಾಭಿಷ್ಟವನೀಡೇರಿಸುವವ
ಮೃತ್ಯುಂಜಯ ಅಭಯಂಕರ ||೩||

ಲಿಂಗ ರೂಪಧರ ಓಂಕಾರೇಶ್ವರ
ಮಹಾರುದ್ರ ಜಗದೀಶ್ವರ
ಬಕುತಿಗೆ ಒಲಿವ ಬಸ್ಮಧರ
ಪಾರ್ವತಿ ಪತಿ ಗಂಗಾಧರ ||೪||
🕉🕉🕉🕉🕉🕉🕉🕉🕉
✍🏼.. ತ್ರಿನೇತ್ರಜ

 ಶಿವಕುಮಾರ. ಹಿರೇಮಠ.

*ಚಂದದ ಮೂನು*

*ಚಂದದ ಮೂನು*
[01/02, 6:46 p.m.]
🌔🌓🌒🌑🌘🌗🌖🌕
ಜನವರಿ ಮೂವತ್ತೊಂದು
ಹದಿನೆಂಟನೆ ಇಸ್ವಿಯಂದು

ನಭ ನೀಡಿ ವಿಸ್ಮಯವನು
ತಂತು ಚಂದ್ರ ಗ್ರಹಣವನು

ಚಂದ್ರಂಗಂದು ಗ್ರಸ್ತೋದಯ
ನಾಲ್ಕು ರಾಶಿಗೆ ಕೊಂಚ ಭಯ

ಗಗನದಿ ಕಾಣುತ ಬ್ಲಡ್ಮೂನು
ಬಲು ಚಕಿತಗೊಂಡೆನು ನಾನು

ಮಾಸದಿ ದ್ವಿ ಹುಣ್ಣಿಮೆ ಈಸಾರಿ
ಬ್ಲೂಮೂನ್ಗೆ ಆದೆ ನಾ ಆಭಾರಿ

ತೋರಿ ಜಗಕೆ ಸೂಪರ್ ಮೂನು
ಎಲ್ಲರ ಗಮನ ಸೆಳೆಯಿತು ಬಾನು


✍🏼 ತ್ರಿನೇತ್ರಜ

ಶಿವಕುಮಾರ.ಹಿರೇಮಠ

*ರವಿ ಸ್ತುತಿ*

ಭಕ್ತಿ ಗೀತೆ
[25/01, 9:59 a.m.]
 🌞🌞 *ರವಿ ಸ್ತುತಿ* 🌞🌞
ಭಾಗ್ಯವ ನೀಡೋ ಭಾಸ್ಕರ
ದಿನಕರ
ಶಕ್ತಿಯ ಆಕರ ಪ್ರಭಾಕರ ||ಪ||

ಸಂದ್ಯಾ ಛಾಯೆಯ ಅನುರೂಪದವರ
ಅಂಧಕಾರವ ಕಳೆಯುವ ನೇಸರ
ಹನುಮಗೆ ಗುರುವಾದ ಕರುಣಾಸಾಗರ
ಮೂಡಿಸೋ ಎನ್ನಲಿ ಜ್ಞಾನದ ಸಾಕಾರ ||೧||

ಯಮ ಯಮಿ ಶನಿಗೆ ಜನುಮದಾತನೆ
ಅಶ್ವಿನಿ ಕುಮಾರರ ಸೃಜಿಸಿದವನೆ
ಸಪ್ತಾಶ್ವದ ರಥಾರೂಢ ಪ್ರಖರನೆ
ಬಾಳನು ಬೆಳಗು ಬಾ ಆದಿತ್ಯನೇ||೨||
☀☀☀☀☀☀☀☀☀
✍🏼 ತ್ರಿನೇತ್ರಜ್

*ಕಾಲನಿಗೆ ಮನವಿ*

*ಕಾಲನಿಗೆ ಮನವಿ*
[23/01, 8:18 p.m.]

ಓಡು ಓಡು ಓಡು
ಓ ಸಮಯವೇ
ನಿಲ್ಲದಿರು ಎಂದಿಗೂ
ನಿನ್ನೊಡನೆ ಬರುವೆ

ಏನೇ ಆಗಲಿ ನೀ
ಚಲಿಸದಿರು ಹಿಂದೆ
ಕಾಲನ ನಿಯಮವ
ಮರಿಬೇಡ ಮೌನದೆ

ಮೇಲೇರುತ ಇರು
ನೀ ಎಂದಿನಂತೆಯೆ
ನಾನೂ ಮೇಲೆರುವೆ
ನೋಡು ನಿನ್ನಂತೆಯೆ

ಒಮ್ಮೆ ನೀ ಕೆಳಗಿಳಿದರೆ
ಈ ಲೊಕಕೆಲ್ಲಾ ಫಜೀತಿ
ನನ್ನ ಪಾಡಂತೂ ಅಷ್ಟೇ
ಇನ್ನೇನು ದೇವರೇ ಗತಿ!

✍🏼.. ತ್ರಿನೇತ್ರಜ್

Sunday, 11 February 2018

ನಾ ನೀನಾಗೆನಾ?

ನಾ ನೀನಾಗೆನಾ?
----------------

ನಿದ್ರೆಯಿಂದೆದ್ದ ನನ್ನ
ಮುದ್ದು ಕಂದ.
ಆಕಳಿಸುತಿರೆ ನೀ
ನೋಡಲೆಷ್ಟು ಚಂದ!

ತಿಳಿಗುಲಾಬಿ ನಿನ್ನೀ
ನಾಜೂಕು ಅಧರಕೆ,
ಅಮೃತಧಾರೆ ನೀಡಲು
ಕಾತರವೆನ್ನ ಮನಕೆ.

ಕುಡಿಹುಬ್ಬಿನಲೋ
ಬಿಲ್ಲೊಂದು ಬಾಗಿದೆ.
ಬಾಯ್ತೆರೆದುದ ನೋಡೆ
ಕೃಷ್ಣನನ್ನು ನೆನಪಿಸಿದೆ.

ಅಕ್ಷಿಗಳೋ ಕಮಲ,
ನಾಸಿಕವು ಸಂಪಿಗೆ
ಬೆಳ್ಮೋಡ ಸವರಿಹ
ಚಂದ್ರನಂದದಿ ಮುಖ.

ನಿನ್ನೊಡನೆ ಬೇಗನೆ
ಮಾತಾಡುವ ಬಯಕೆ.
ಹೆಜ್ಜೆಗಳಿಟ್ಟು ಓಡು ಬಾ
ಬರುವೆನು ಹಿಡಿಯೋಕೆ.

ನಿಷ್ಕಲ್ಮಶ ಮೊಗದಲಿ
ಮಗ್ದತೆಯು ಮಿನುಗಿದೆ.
ನಿನ್ನಂತೆ ನಾನಾಗೆನೆಂದು
ನೆನೆನೆನೆದು ಮರುಗಿದೆ.
  ..... .... ... ..... ....
✍ತ್ರಿನೇತ್ರಜ

    ಶಿವಕುಮಾರ. ಹಿರೇಮಠ.

Tuesday, 23 January 2018

ದೇಶಭಕ್ತಿ ಗೀತೆ

ದೇಶಭಕ್ತಿ ಗೀತೆ

ವಂದಿಸುವೆ ಭಾರತಾಂಬೆಗೆ
-------------------
ವಂದಿಸುವೆ ಭಾರತಾಂಬೆಗೆ
ಶಾಂತಶೀಲ ಪ್ರತಿರೂಪಿಣಿಗೆ

ಘಟ್ಟಗಳ ಕೈಚಾಚಿಹ
ನದಿನಾಡಿಗಳ ಹರಿಸಿಹ
ಬಹುಭಾಷಾ ಹೂಗಳಿಂದ
ಕುವರಿಯರ ಸಿಂಗರಿಸಿಹ
ಹಸಿರನುಟ್ಟ ಹರಿದ್ವರ್ಣಿಗೆ
ಉಪಖಂಡ ನಾಮಾಂಕಿತೆಗೆ.|ಪ|

ಹಿಮಾಲಯವೆ ನಿನ್ನ ಹೆಳಲು
ಬೈತಲೆ ಆ ಕಣಿವೆಗಳು
ಅಲೆಯ ಸೇವೆ ನೀಡುತಿಹವು
ಸಾಗರ, ದ್ವಿಜಲಧಿಗಳು
ಕಲೆಸಿರಿಯೆ ನಿನ್ನಾಭರಣ
ಕವಿಕಾವ್ಯವೆ ಮಂಜುಳಗಾನ|೧|

ಬೇಡಿ ಬಂದ ಮನುಜರಿಗೆ
ನೆಲೆಯಿಟ್ಟು ಪೊರೆದಾಕೆ
ನಿನ್ನ ಮೌಲ್ಯ ಅರಿತವರಿಗೆ
ಜ್ಞಾನ ಧಾರೆ ಎರೆದಾಕೆ
ಶೂನ್ಯವೆ ಪರಿಪೂರ್ಣವೆಂದು
ಜಗದಗಲಕೂ ತೋರಿದಾಕೆ.|೨|
..... ..... ..... ..... ....

✍..ತ್ರಿನೇತ್ರಜ್

ಶಿವಕುಮಾರ. ಹಿರೇಮಠ.

Sunday, 31 December 2017

*ಬನ್ನಿರೆಲ್ಲ ಶಾಲೆಗೆ* ಕವನ

*ಬನ್ನಿರೆಲ್ಲ ಶಾಲೆಗೆ* 

ಬನ್ನಿರಿ ಬನ್ನಿರಿ ಶಾಲೆಯ ಕಡೆಗೆ
ಸಾಗೋಣ ಒಟ್ಟಾಗಿ ಬೆಳಕಿನ ಕಡೆಗೆ.|ಪ|

ವಿದ್ಯೆಯಿಲ್ಲದ ಬಾಳು
 ಹದ್ದಿಗಿಂತಕಡೆ.
ಕಲಿಯೋಣ ಅಕ್ಷರವ
ಶಾಲೆಯೆಡೆಗೆ ನಡೆ.
ಸಾಕಿನ್ನು ಮೋಸಹೋಗೊ
ದಡ್ಡತನದ ಬಾಳು.
ಜ್ಞಾನವಂತರಾದರೆ ಇರದು
ಇಂಥ ಗೋಳು.|೧|

ಶಾಲೆಯಿದು ಸರ್ವಧರ್ಮ ದೇವಾಲಯವಣ್ಣ
ಶ್ರದ್ಧೆಯಿಂದ ವಿದ್ಯೆಯ ಕೃಪೆ ಪಡೆಯೋಣವಣ್ಣ
ನಲಿಯೋಣ ಕಲಿಯೋಣ
ಎಲ್ಲ ಬನ್ನಿರಿಲ್ಲಿ
ಸುಶಿಕ್ಷಿತರಾದರೆ ಕಷ್ಟಗಳಿನ್ನೆಲ್ಲಿ.|೨|

✍🏼 _ತ್ರಿನೇತ್ರಜ_

ಶಿವಕುಮಾರ.ಹಿರೇಮಠ.
9945915780
ಸಹ ಶಿಕ್ಷಕರು

Friday, 22 December 2017

ಕಮರಿತು ಮೊಗ್ಗು


       ವಿಜಯಪುರದ ನಿರ್ಭಯಾಳಿಗೆ ನುಡಿ ನಮನ

       ಕಮರಿತು ಮೊಗ್ಗು

ಮೊಗ್ಗೊಂದು ಅರಳುವ ಮುನ್ನ
ಕಿತ್ತು ದುಷ್ಟರು ಯಮನಿಗಿತ್ತರು.
ಜಗವ ಅರಿಯುವ ಮುನ್ನವೆ
ಕಿತ್ತುತಿಂದು ತೀಟೆಗೆ ಕೊಂದರು.

ನಿಷೇಧಿಸಿದ ಗಾಂಜಾನಶೆಯು
ಗುಮ್ಮಟನಗರದಿ ನುಸುಳಿದೆ.
ರಕ್ಕಸರ ರಕ್ತದಲಿ ಬೆರೆತುಹೋಗಿ
ಕಾಮದಾಸೆಯ ಹುಚ್ಚಾಗಿಸಿದೆ.

ಕಲಿವ ಆಸೆಯ ಹೆಗಲಿಗೇರಿಸಿ
ಬಾಲೆ ಸಖಿಯೊಡನೆ ಸಾಗಿರಲು.
ಬುದ್ದಿಹೀನ ಕ್ರೂರ ಕಂಸರು
ಹೊತ್ತೋಯ್ದು ಹೊಸಕಿದರು.

ತಮ್ಮ ಮನೆಯ ಹೆಣ್ಣಂತೆಯೆ
ಇವಳೂ ಎಂಬುದ ಮರೆತರು.
ಹರಿಣಿಯ ಮೇಲೆ ಹಂದಿಗಳಂತೆ
ಆರ್ಭಟಿಸಿ ಉಸಿರ ಅಳಿಸಿದರು.

ಮಾನವರೇಕಾದರೋ ಇವರು
ನಾಯಿಜನ್ಮವೆಷ್ಟೋ ವಾಸಿ.
ನಗರಮಧ್ಯ ಗಲ್ಲುಗೈದರೂ
ಬದುಕಿ ಬಂದಾಳೆ ಸತ್ತ ಅರಸಿ?

✍🏼 ತ್ರಿನೇತ್ರಜ.

ಶಿವಕುಮಾರ. ಹಿರೇಮಠ.
ಸಹ ಶಿಕ್ಷಕರು
ಅನವಾಲ
ಬಾಗಲಕೋಟೆ.
[22/12, 5:09 p.m.] Shivakumara Hiremath:


Tuesday, 5 December 2017

ಕಿರುಗಥೆ
......................
      *_ಪಾಪ ಪ್ರಜ್ಞೆ*_

      ತಡರಾತ್ರಿ ಪಟ್ಟಣದತ್ತ ಬೈಕ್ ಏರಿ ಬರುತ್ತಿದ್ದ ಕಾಮೇಶನಿಗೆ ದಾರಿಯಲ್ಲಿ ಮಹಿಳೆಯರ ಬ್ಯಾಗೊಂದು ಬಿದ್ದಿದ್ದು ಕಾಣಿಸಿತು.
ಯಾರೋ ಬೀಳಿಸಿಕೊಂಡು ಹೋಗಿದ್ದ ಬ್ಯಾಗಲ್ಲಿ ಲಕ್ಷ ಹಣ! ಗಾಡಿ ಬಾಕ್ಸನಲ್ಲಿ ಇಟ್ಟುಕೊಂಡು ಮನೆಗೆ ಬಂದ. ಒಳಗೆ ತರಲು ಅಳುಕಿ ಗಾಡಿಯಲ್ಲೇ ಬ್ಯಾಗ್ ಬಿಟ್ಟು ಒಳ ನಡೆದ.ರಾತ್ರಿ ನಿದ್ರೆ ಬರದೆ ಹೊರಳಾಡುತ್ತಲೇ ಇದ್ದ.
       ಹೆಂಗಸೊಬ್ಬಳು ಹಣ ಕಳೆದುಕೊಂಡದ್ದಕ್ಕೆ ನೊಂದು ಆತ್ಮಹತ್ಯೆಗೆ ರೈಲುಕಂಬಿ ಮಧ್ಯೆ ನಡೆಯುತ್ತಿದ್ದದ್ದ ಕಂಡ ಕಾಮೇಶ ಗಾಡಿ ಇಳಿದು ಅವಳತ್ತ ಓಡತೊಡಗಿದ.ರೈಲು ಬಂದೇಬಿಟ್ಟಿತು.
   " ಏ... ನಿಲ್ಲು.. ನಿಲ್ಲು.." ಕಾಮೇಶ ಕೂಗಿದ. "ನಿಂತಿದ್ದೀನಿ, ಅದೇನ್ ಹೇಳ್ರೀ".. ಧ್ವನಿ ಕೇಳಿ ಕಣ್ಣು  ಬಿಟ್ಟರೆ ಎದುರಿಗೆ ಹೆಂಡತಿ!!
ಬೆಳಕಾಗಿತ್ತು.
        ಬೇಗ ಬೇಗ ಸಿದ್ದನಾಗಿ ಪೋಲಿಸ್ ಠಾಣೆಯತ್ತ ಗಾಡಿ ಓಡಿಸಿದ. ಠಾಣೆ ಬಳಿ ಗಾಡಿ ಇಳಿದು ಬ್ಯಾಗ್ ಜೊತೆ ಒಳಗೆ ಹೋಗುವಾಗ ಎದುರಿಗೆ ಬಂದ ಮಹಿಳೆ " ಅರೇ..ಇದು ನನ್ನ ಬ್ಯಾಗ್, ನಿನ್ನೆ ಕಳೆದುಕೊಂಡಿದ್ದೆ.
ಈಗತಾನೆ ದೂರು ಕೊಟ್ಬಂದೆ" ಎಂದಳು. ಕಾಮೇಶನಿಗೆ ಅವನಿಗರಿವಿಲ್ಲದೆ ನಿಟ್ಟುಸಿರೊಂದು ಹೊರಬಿತ್ತು.
------------------
..‍✒ತ್ರಿನೇತ್ರಜ.
ಸ್ಪೂರ್ತಿ
          -------
ಬಣ್ಣದೊಡನೆ ಕುಂಚ ಆಡಲು
ಬೇಕೊಂದು ಚೆಲುವ ಸ್ಪೂರ್ತಿ.
ಕವಿ ಪ್ರಣಯ ಕವಿತೆಯಾಗಲು
ಬೇಕೊಂದು ಒಲವ ಸ್ಪೂರ್ತಿ.

ಕೊಳದ ತಾವರೆ ಅರಳಿ ನಗಲು
ಉದಯರವಿ ಕಿರಣ ಸ್ಪೂರ್ತಿ.
ಗಿರಿನವಿಲು ನಲಿದು ನರ್ತಿಸಲು
ಮಳೆಯ ಮೇಘವೆ ಸ್ಪೂರ್ತಿ.

ಮೌನದೊಲವ ಮಧುರಗಾನಕೆ
ಕಣ್ಣಂಚಿನ ಕುಡಿನೋಟವೆ ಸ್ಪೂರ್ತಿ.
ದೇಹ ಸೋಕಿ ಮನ ಬೆಸೆಯಲು
ಹೃದಯದ ಮಿಡಿತವೇ ಸ್ಪೂರ್ತಿ.

ಆಸಕ್ತಿ- ಕೌತುಕಗಳೆ ಮನುಜನ
ಜ್ಞಾನಾರ್ಜನೆಯ ಮೂಲಸ್ಪೂರ್ತಿ.
ದೇವನಿಟ್ಟಿಹ ನಿಗೂಢರಹಸ್ಯವೆ
ವಿಜ್ಞಾನ- ಶೊಧನೆಯ ಸ್ಪೂರ್ತಿ.
------------------------
✍.. ತ್ರಿನೇತ್ರಜ.

Monday, 4 December 2017

ಲೇಖನ ಸ್ಪರ್ಧೆಗಾಗಿ

     ಕಸಬರಿಗೆಯ ವಿಶ್ವರೂಪ
    ------------------
      ಮನೆ ಎಂದ ಮೇಲೆ ಕಸಬರಿಗೆ ಇರಲೇಬೇಕಲ್ಲವೇ.ಹಾಂ! ಕಸಬರಿಗೆ ಎಂದ ತಕ್ಷಣ ಉದಾಸೀನದಿಂದ ಮುಖತಿರುವಬೇಡಿ. ಅದರ ಬಗ್ಗೆ ತಿಳಿಯಬೇಕಾದುದು ಬಹಳಷ್ಟು ಇದೆ.
          ಪೊರಕೆ, ಪರಕೆ, ಪರ್ಕಿ,ಕೈಸೂಡಿ, ಹಿಡಿಸೂಡಿ..ಇವು ಕಸಬರಿಗೆಯ ಸಮಾನಾರ್ಥಕ ಪದಗಳು.ಸಾವಿರಾರು ವರ್ಷಗಳ ಇತಿಹಾಸವಿರುವ ಇದರ ಬಗ್ಗೆ ಶಾಸ್ತ್ರ ಪುರಾಣ ಅಷ್ಟೆಯಾಕೆ ಬೈಬಲ್ ನಲ್ಲೂ ಉಲ್ಲೇಖ ಇದೆ. ತೆಂಗಿನ ಗರಿ,ಅಡಿಕೆ ಸೋದೆ,ಉದ್ದ ಹುಲ್ಲು,ಈಚಲು ಗರಿ ಇತ್ಯಾದಿ ಬಳಸಿ ಪೊರಕೆ ತಯಾರಿಸುತ್ತಾರೆ.ಒಣಗಿದ  ತೊಗರಿ ಗಿಡಗಳ ಒಗ್ಗೂಡಿಸಿ ಕಟ್ಟಿ ತಯಾರಿಸಿದ್ದಕ್ಕೆ ' ಬರ್ಲು' ಎನ್ನುತ್ತಾರೆ. ಗುಡ್ಡದಲ್ಲಿ ಬೆಳೆಯುವ ಒಂದು ಜಾತಿಯ ಗಿಡಗಳಿಂದ 'ಸಗಣಿ(ಹೆಂಡಿ) ಕಸಬರಿಗೆಯನ್ನು ಉತ್ತರ ಕರ್ನಾಟಕ ರೈತಾಪಿಜನ ಬಳಸುತ್ತಾರೆ.
     18ನೇ ಶತಮಾನದಲ್ಲಿ   ಆಧುನಿಕ ಕಸಬರಿಗೆಗಳನ್ನು ಪರಿಚಯಿಸಿವನು ಮೆಸಾಚುಸೆಟ್ ಪ್ರಾಂತ್ಯದ 'ಲೆವಿ ಡಿಕನ್ಸನ್' ಎಂದು ದಾಖಲೆ ಇದೆ.19ನೇ ಶತಮಾನದಲ್ಲಿ ಅಮೆರಿಕದ ಕ್ರಿಶ್ಚಿಯನ್ ಸಮುದಾಯದವರು 'ಚಪ್ಪಟೆ ಆಕಾರದಲ್ಲಿ ಪೊರಕೆಗಳನ್ನು ಪರಿಚಯಿಸಿದರು.20ನೇ ಶತಮಾನಕ್ಕೆ ಕೃತಕ ನಾರು ಪ್ಲಾಸ್ಟಿಕ್ ನಾರು ಬಳಸಿ ತಂತ್ರದಿಂದ ಪೊರಕೆಗಳು ತಯಾರಿ ಆರಂಭವಾಯಿತು.
 ಭಾರತದ ವಿಚಾರಕ್ಕೆ ಬಂದರೆ ಪೊರಕೆ ಕುರಿತು'ಶುಭಾಶುಭ ಶಾಸ್ತ್ರ' ದಲ್ಲಿ ಹಲವು ವಿಚಾರಗಳನ್ನು ತಿಳಿಸಿದ್ದಾರೆ.ಪೂರಕೆಯನ್ನು ಈಶಾನ್ಯದಲ್ಲಿ ಇಡಬಾರದು, ಗುಡಿಸುವವರು ಭಾಗ ಮೇಲ್ಮಾಡಿ ಇಡಬಾರದು, ಕಾಲಲ್ಲಿ ತುಳಿಯಬಾರದು, ತುಳಿದರೆ ಲಕ್ಷ್ಮಿಸ್ವರೂಪವೆಂದು ನಮಸ್ಕರಿಸಬೇಕು,...
ಮುಂತಾದ ವಿಷಯಗಳನ್ನು ತಿಳಿಸಲಾಗಿದೆ. ಇದನ್ನು ದೃಷ್ಟಿತೆಗೆಯಲು ಕೂಡ ಬಳಸುತ್ತಾರೆ. ಅನಾಚಾರಿಗಳಿಗೆ ಕಸಬರಿಗೆಯಿಂದ ಹೊಡೆದು ಸನ್ಮಾನಿಸುವುದೂ ಉಂಟು.
ಒಟ್ಟಿನಲ್ಲಿ ಪೂರಕೆಯು ಸಾಮಾನ್ಯ ಜನ(ಆಮ್  ಆದ್ಮಿ) ರಿಂದ (ಸ್ವಚ್ಛ) ಭಾರತದ ಎಲ್ಲರಿಗೂ ತನ್ನ ಮಹತ್ವ ತೋರಿದೆ.ಹಾಂ, ಅಂದಹಾಗೆ ಮನೆಯಲ್ಲಿ ಕಸಬರಿಗೆ ಬೇರೆಯವರಿಗೆ ಕಾಣದಂತಿರಿಸಲು ಮರೆಯದಿರಿ.
....   ....   .....   ...... ......
✍ತ್ರಿನೇತ್ರಜ.
 ಶಿವಕುಮಾರ.ಹಿರೇಮಠ.

Tuesday, 28 November 2017



ಶಿವರೋದನ
 -- -- -- -- -- --
ನಿರಾಡಂಬರನ ಮೆಚ್ಚಿ ವರಿಸಿದ್ದ
ಅರ್ಧಾಂಗಿನಿ, ನನ್ನ ಹೃದ್ಯಮಣಿ.
ದುರುಳಪಿತನ ಯಜ್ಞಕುಂಡಕೆ.
ಧುಮುಕಿದ ಸತಿ ದಾಕ್ಷಾಯಿಣಿ.

ಹರಡಿಹುದು ಅಗ್ನಿಜ್ವಾಲೆಯು
ಇದೋ ನನ್ನಯ ಹೃದಯಕೆ.
ತಂಪನೆರೆಯಲಾರದೆ ಸೋತಿತು
ಮಂದ ಮಾರುತವೂ ಮನಕೆ.

ಅಲೆಯುತಿಹೆನು ಬುವಿಯುದ್ದಕು
ದಾರಿಯದೇಕೋ ಸಾಗದಾಯ್ತು.
ಏಕಾಂತವನ್ನರಸಿ ಹೊರಟಿಹೆನು
ವಿರಾಮವೇ ಬೇಡದಂತಾಯ್ತು.

ಲೋಕ ಕೈಂಕರ್ಯ ನನಗೆ ಸಾಕು;
ಶೂನ್ಯನಾದೆ ಭಾವನೆಗಳು ಕಮರಿ.
ಗಿಡ,ಮರ-ಬಳ್ಳಿ ,ಗಿರಿ-ಕಂದರಗಳೆ
ಎನಗೆನ್ನ ಪ್ರೀಯಸತಿಯ ತೋರಿರಿ.
--------------------------
✍..ತ್ರಿನೇತ್ರಜ.
ಶಿವಕುಮಾರ.ಹಿರೇಮಠ.

Monday, 20 November 2017

ಅಕ್ಕಮಹಾದೇವಿ ಕುರಿತು ಕವನ


       

                  ಉಡುತಡಿಯ ದೀಪ್ತಿ

                  ------------------------

ಅಂಗದ ಭಂಗವ ಗೆದ್ದ ಅಕ್ಕಮಹಾದೇವಿ,
ಸಿರಿಗನ್ನಡಕ್ಕುಣಿಸಿದೆ ವಚನಾಮೃತದ ಸವಿ.

ಉಡುತಡಿಯಲ್ಲುದಯಿಸಿದ ಸದ್ಗುಣ ಶೀಲೆ.
ಓಂಕಾರಶೆಟ್ಟಿ-ಲಿಂಗಮ್ಮರ ಪ್ರೀತಿಯ ಬಾಲೆ.

ವಚನ ಭಂಗಕೆ ಕೌಶಿಕನ ಅರಮನೆ ತೊರೆದೆ.
ಸ್ತ್ರೀ ಸ್ವಾತಂತ್ರ್ಯಕೆ ಅಂದೇ ಮನ್ನುಡಿ ಬರೆದೆ.

ಮಾಯೆ ಮುಟ್ಟದ ದೀಪ್ತಿ ಹಾಗೆ ದಿಗಂಬರೆ.
ಕಾಮ ಕೆಡಿಸದ ವಿರಕ್ತಳು ನೀ ಕೇಶಾಂಬರೆ.

ಶಿವಾನುಭವದಲಿ ಜೀವದ ಭಂಗವ ಗೆದ್ದೆ.
ಅನುಭವಮಂಟಪದಲಿ ಸತ್ವಪರೀಕ್ಷೆ ಗೆದ್ದೆ.

ಶ್ರೀಚೆನ್ನಮಲ್ಲಿಕಾರ್ಜುನನೇ ಪತಿ ಎಂದಾಕೆ
ಕಡಿದು ತೇದರು ಕಂಪುಬಿಡದ ಚಂದನಚಕ್ಕೆ.

ನಿಂದಕರಿಗಳುಕದೆ ಮುನ್ನಡೆದ ಛಲಗಾರ್ತಿ
ಕರುನಾಡಿನ ಮೊಟ್ಟ ಮೊದಲ ವಚನಗಾರ್ತಿ

ಭಾವಶುದ್ಧಿಯಲಿ ಕರಗಲು ನಿನ್ನಯ ತನುಮನ
ನಿನ್ನಲ್ಲಿ ಕರಸ್ಥಲಗೊಂಡ ಚೆನ್ನಮಲ್ಲಿಕಾರ್ಜುನ
..... ..... ..... ..... ..... ..... ..... ..... ..... .....
✍...ತ್ರಿನೇತ್ರಜ.
    ಶಿವಕುಮಾರ.ಹಿರೇಮಠ.9945915780

Sunday, 19 November 2017

ಕವನ " ಸತ್ಯ ದರ್ಶನ".


       ಸತ್ಯ ದರ್ಶನ

ನದಿದಡದಲಿ ಆಲಯದೆದುರು
ಅರಳಿಹ ಪಾರಿಜಾತ ನಾ.
ದೂರದಲಿ ಕಾಣುವ ಬೆಟ್ಟದ
ಅಂದಕೆ ಮರುಳಾಗಿಹೆ ನಾ.
ಅಲ್ಲಿಗೆನ್ನ ಕರೆದೊಯ್ಯಲು
ಕೇಳಿದೆ ವಾಯುವನು.
ಒಪ್ಪಿದ ಅವನಿಗೆ ಸವರಿದೆ
ನನ್ನ ಸುಗಂಧವನು.
ಗಾಳಿಯನೇರಿ ಸಾಗಿದೆ ನಾನು
ಬೆಟ್ಟದಾ ಬಳಿ ಕಾತುರದೆ.
ಕಲ್ಲು, ಪೊದೆ, ಮುಳ್ಳು, ಮಣ್ಣಿನ
ರಾಶಿ ನೋಡಿ ಅವಾಕ್ಕಾದೆ!!
'ಪವನನನೇ ತಡೆಯುವೆ'
ಎನ್ನುವನು ಆ ಹುಂಬ.
ಚಿಕ್ಕ ಪುಟ್ಟ ಹೂಗಳಿಗೋ
ಇನ್ನಿಲ್ಲದ ಒಣ ಜಂಭ.
ಬಂದ ದಾರಿಗೆ ಸುಂಕವಿಲ್ಲ!
ಮತ್ತೆ ಗಾಳಿಯ ಕೇಳಿದೆ.
'ನದಿ ಮೇಲೆ ಬಿಡು ನನ್ನ
ಆಲಯದ ದಡ ಸೇರುವೆ',                   "ಎಲ್ಲೂ ಇಲ್ಲದ್ದು ಅಲ್ಲೇಇದೆ".         ..... .... ..... .....
ತ್ರಿನೇತ್ರಜ.

ಕವನ 'ಗುರುನಮನ'

ಗುರುನಮನ

ಜ್ಞಾನದ ಕಡಲಲಿ ಈಜಲು ಕಲಿಸಿಹ
ಗುರುದೈವಕೆ ನಮನ.
ಬಾಳಿನದಾರಿಯ ಸುಗಮಗೂಳಿಸಿಹ
ಶಿಕ್ಷಕರಿಗೆ ನಮನ.

ಬೊಧನಾಕುಂಚದಿ ಹಲವು ಬಣ್ಣಗಳ
ಬಳಿದು ನಮ್ಮಯ ಬಾಳಿಗೆ,
ಸುಂದರ ಚಿತ್ತಾರ ಮಾಡಿದಿರೆಮ್ಮನು,
ತೋರಿಸಿದಿರಿ ಈ ಜಗದೆಡೆಗೆ.
ಜ್ಞಾನವ ನೀಡಿ, ಬೆಂಬಲ ತೋರಿ
ಶಿಲೆಯಲಿ ಕಲೆಯ ತುಂಬಿದಿರಿ

ಯಾವ ವೃತ್ತಿಯೂ ಕೈಗೂಡಲಾರದು
ಗುರುವೃತ್ತಿಯು ಕೃಪೆತೋರದಿರೆ.
ಯಾವ ಮನುಜನೂ ಸಾಧಿಸಲಾರನು
ಸುಗಮಕಾರರು ಜೊತೆಗಿರದಿರೆ.
ಹರ ಮುನಿದರೆ ಗುರು ಕಾಯುವರು.
ಶಿಕ್ಷಕ ಭಾಗ್ಯವ ತೋರುವರು.
..... ..... ...... ...... ..... ..... ..... ....
✍ತ್ರಿನೇತ್ರಜ.
ಶಿವಕುಮಾರ.ಹಿರೇಮಠ.

Friday, 10 November 2017

ಭಾವಗೀತೆ. 'ನಗದಿರು ಚಂದ್ರಮ'

 ಭಾವಗೀತೆ.

       ನಗದಿರು ಚಂದ್ರಮ
🌙✨🌙✨🌙✨🌙
     
ಏಕೆ ನಗುವೆ ನನ್ನ ನೋಡಿ
ತಾರೆಯೊಡನೆ ಚಂದ್ರಮ?
ಅರಿಯದಾಗಿ, ಕೇಳುತಿಹೆನು
ಏಕೆ ನಿನಗೀ ಸಂಭ್ರಮ..?|ಪ|

ಏಕೋ ನಿನ್ನ ನಗೆಯೊಳಗೆ
ಕುಹಕ ಕಂಡೆ ಈ ದಿನ.
ಶೂಲದಂತೆ ನಾಟುತಿವೆ
ರಜತ ನೋಟದ ಬಾಣ.
ನೊಂದ ಮನಕೆ ನೋವನೀವೆ
ತರವೆ ನಿನ್ನೀ ವರ್ತನ.
ಮೋಡಗಳಲಿ ಮರೆಯಾಗು        
ಬೇಡ ನಿನ್ನ ಸ್ಪಂದನ......|೧|

ನಲ್ಲೆಯ ಮನವ ಅರಿಯದಾದೆ
ಬೇಸರವನು ತಂದೆನಾ.
ಅವಳಿಲ್ಲದೆನಗೇನಿದೇ
ಬೇಸರವೀ ಜೀವನಾ.
ಒಂಟಿತನವು ಮೂಡಿಸಿದೆ
ಎದೆಯಲೇನೋ ತಲ್ಲಣ.
ಮುನಿಸು ಮರೆತು ಬಾರಳೇ
ಕರೆವೆ ಹೇಳಿ ಕಾರಣ......|೨|

✍..ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

Monday, 6 November 2017

ಕಥನ ಕವನ 'ಬೇಸತ್ತವಳು'

ಕಥನ ಕವನ.

    ಬೇಸತ್ತವಳು
.... ...... ..... .....
ಯಾಕರ ಹೆಣ್ಣುಜಲುಮ
ಕೊಟ್ಟೆಯೋ? ಶಿವನೇ! |
ಸಾಕಪ್ಪಾ ; ನಿನ್ನ ಪಾದಕ
ಸೇರಿಸಿಕೋ  ಬೇಗನೆ ||

ಕಟ್ಟಿಕೊಂಡವ ಕುಡುಕ ಗಂಡ,
ಜೂಜಿನ್ಯಾಗೇ ಮಳುಗೊ ಭಂಡ;
ಇವ್ನ ಚಟಕ ಹೊಲಮನಿ ದಂಡ,
ನಗತಾರ ಜನಾ ಬಾಳೇವ ಕಂಡ ||

ಮುಪ್ಪಾಗ್ಯಾರ ನನ್ನ ಅತ್ತಿ-ಮಾವ,
ಅವರಿಗಂತ ನಾ ಹಿಡದೀನಿ ಜೀವ;
ಸೋಮಾರಿಗಂಡ ದುಡಿಲಾರದವ,
ಯಾರಿಗಿ ಹೇಳಲಿ ನನ್ನ ನೋವ ||

ಬೆನ್ಹಿಂದ ಬಂಜಿ ಅನ್ನತಾರ ಜನ,
ವಾರಿಗೇರು ನಕ್ಕು ತೆಗಿತಾರ ಮಾನ;
ಆದರೂ ಎಲ್ಲಾ ಸಹಿಸಿಕೋತೇನ,
ಬಡ್ತನಕ ಮಕ್ಳು ಬ್ಯಾಡೋ ಶಿವನ ||

ಆಗ ಕಲಿಲಿಲ್ಲ ನಾನೂ ನಾಲ್ಕಕ್ಷರ.
ಈಗ ಅರಿವಾತು; ಬಾಳೇ ಬೇಸರ.
ಮುಂದಿನ ಜನ್ಮ ಅಂತ ಇದ್ದರ
ಹೆಣ್ಣಾಗಿ ಹುಟ್ಟಿಸಬ್ಯಾಡೊ ಹರ ||

✍.. ತ್ರಿನೇತ್ರಜ.    
              ಶಿವಕುಮಾರ.ಹಿರೇಮಠ.

*ಕಥನ ಕವನ ಸ್ಪರ್ಧೆ -ದಿ||೩/೧೧/೨೦೧೭ ರ ಫಲಿತಾಂಶ*
%$%$%$%$%$%$%$%$%$%$%$
*ಪ್ರಥಮ ಸ್ಥಾನ:-*ತ್ರಿನೇತ್ರಜ.(ಬೇಸತ್ತವಳು).
@-ತ್ರಿನೇತ್ರಜರವರು ಕಥನವನ್ನು ಚೆನ್ನಾಗಿ ಹೆಣೆದಿದ್ದಾರೆ.ಪ್ರಾಸಗಳನ್ನು ಸಂದರ್ಭೋಚಿತವಾಗಿ ಹೊಂದಿಸಿದ್ದಾರೆ.ಪ್ರಾಸವು ಕಥನ ಕವನಕ್ಕೆ ಮೆರುಗು ನೀಡುತ್ತವೆ ಜೊತೆಗೆ ಕುಟುಂಬದ ಬವಣೆಯನ್ನು ವಿವರಿಸುವುದರೊಂದಿಗೆ ಹೆಣ್ಣಿಗೆ ಶಿಕ್ಷಣದ ಮಹತ್ವವನ್ನುಸಾರಿದ್ದಾರೆ ಹೀಗಾಗಿ ಅದು ಓದುಗರ ಮನಸ್ಸಿಗೆ ಹಿಡಿಸುತ್ತದೆ ಎಂದು ನನ್ನ ಅನಿಸಿಕೆ.

*ದ್ವಿತೀಯ ಸ್ಥಾನ:-*ಗಿರಿಜಾ ಇಟಗಿ.(ಜೀವನ್ಮುಕ್ತಿ)
@-ಗಿರಿಜಾ ಇಟಗಿಯವರು ಕೂಡ ಕಥನವನ್ನು ಮನಮುಟ್ಟುವಂತೆ,ಪ್ರಾಸಬದ್ಧವಾಗಿ ಮತ್ತು ಕೆಲವೊಂದು ಹಿತನುಡಿಯಂತಹ ಮಾತುಗಳನ್ನು ಸಂದರ್ಭೋಚಿತವಾಗಿ ಬಳಸಿದ್ದಾರೆ.ಉತ್ತಮ ಪ್ರಯತ್ನ.

*ತೃತೀಯ ಸ್ಥಾನ:-*ಡಾ|| ಸುರೇಶ ನೆಳಗುಳಿ.(ಸೋಮಾರಿ ಮಗನ ಕಥೆ-ವ್ಯಥೆ).
@-ಡಾ.ಸುರೇಶ ನೆಳಗುಳಿಯವರು ಸಂಕಷ್ಟ ಕುಟುಂಬದ ಎಲ್ಲ ಆಯಾಮಗಳನ್ನು ಪರಿಚಯಿಸಿದ್ದಾರೆ ಹಾಗೂ ಕವನವನ್ನು ಓದಿಸಿಕೊಂಡು ಹೋಗುವಂತೆ ರಚಿಸಿದ್ದಾರೆ.
:::::::::::;::::::::::::::::;;;;;;:::::;:;:;;;;;;;;;;;;;;;;;
*ಮನದ ಮಾತು*
ಈ ಬಾರಿ ಕಥನ ಕವನಕ್ಕೆ ೮ ಕವನಗಳು ಬಂದಿದ್ದು ಎಲ್ಲಾ ಕವನಗಳನ್ನು ನಮ್ಮ ಕವಿಗಳು ಮತ್ತು ಕವಯಿತ್ರಿಯರು ಬಹಳ ಚನ್ನಾಗಿ ನಾ ಮೇಲು ತಾ ಮೇಲು ಎನ್ನುವಂತೆ ರಚಿಸಿದ್ದಾರೆ.ಹಿಂದಿನ ಸ್ಪರ್ಧೆಯ ಕಥನ ಕವನಗಳಿಗಿಂತ ಈ ಬಾರಿಯ ಕವನಗಳು ಮಾತ್ರ ಪ್ರಶಂಶನೀಯವಾಗಿವೆ,ಹೀಗಾಗಿ ನಿರ್ಣಯ ಮಾಡಲು ನನಗೆ ಬಹಳ ಕಷ್ಟವಾಯಿತು.ಎಲ್ಲ ಕವನಗಳು ಆಯ್ಕೆಯ ಕವನಗಳೇ ಆದರೆ ಸ್ಪರ್ಧಾ ದೃಷ್ಟಿಯಿಂದ ಕೆಲವು ಮಾನದಂಡಗಳನ್ನು ಉಪಯೋಗಿಸಿ ಆಯ್ಕೆ ಮಾಡಿರುವೆ.
..................‌..
* ಪಿ.ಎಸ್.ಮಳಗಿ.
  ತಾವರಗೇರಾ.
  ನಿರ್ಣಾಯಕರು.

Friday, 3 November 2017

ನ್ಯಾನೊ ಕಥೆ ' ಭಗ್ನ ಕನಸು '


                                     
   ಭಗ್ನ ಕನಸು
.....  .....  .....  ....    

      ಹನ್ನೆರಡರ ಆ ಬಾಲೆ ಗೌರಿಯನ್ನು ಅವಳ ತಾಯಿ ಶಾಲೆ ಬಿಡಿಸಿ ಎಮ್ಮೆ ಮೇಯಿಸಲು ಕಳುಹಿಸಿದ್ದಳು. ಅದಕ್ಕೆ ಕಾರಣ ಎರಡು ತಿಂಗಳ ಹಿಂದೆ ಸಂಭವಿಸಿದ್ದ ಅವಳ ತಂದೆಯ ಆಕಸ್ಮಿಕ ಮರಣ.
       ರಸ್ತೆ ಬದಿಗೆ ಎಮ್ಮೆಯನ್ನು ತರುತ್ತಿದ್ದಂತೆ ಖಾಸಗಿ ಶಾಲಾ ವಾಹನವು ಹಾರ್ನ ಮಾಡುತ್ತ ಹೋಯಿತು. ಅದರಲ್ಲಿದ್ದ ಮಕ್ಕಳು ಗೌರಿಯನ್ನು ನೋಡಿ ಕೈ ಬೀಸಿದರು. ಪರಿಚಯದ ನಗೆಸೂಸಿ ಇವಳೂ ಕೈ ಬೀಸಿದಳು. ಕಣ್ಣಂಚಲ್ಲಿ ಮಾತ್ರ ನೀರು ತುಂಬಿತ್ತು. ಹಿಂದಿನ ವರ್ಷ ತಾನು ಐದನೇ ತರಗತಿಯಲ್ಲಿದ್ದಾಗಿನ ನೆನಪು ಕಣ್ಮುಂದೆ ಸುಳಿಯಿತು.
          ಆಗ ಗೌರಿಗೆ ಹನ್ನೋಂದು ವರ್ಷ. 'ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ' ಯ ಇಂಗ್ಲೀಷ ಕಂಠಪಾಠ ಸ್ಪರ್ಧೆಯಲ್ಲಿ ಗೌರಿಗೆ ಪ್ರಥಮ ಸ್ಥಾನ. ಅಲ್ಲಿ ಇದ್ದ ಆ ಖಾಸಗಿ ಶಾಲೆಯ ಮೂವರು ಮಕ್ಕಳು ಗೌರಿಯ ಸ್ಪಷ್ಟ ಉಚ್ಚಾರಣೆಗೆ ಅಚ್ಚರಿಯಿಂದ ಮೆಚ್ಚುಗೆ ಸೂಚಿಸಿದ್ದರು. ಅವರೇ ಈಗ ಗೌರಿಗೆ ಕೈ ಬೀಸಿದ್ದು.
       ಚೆನ್ನಾಗಿ ಓದಿ ಮುಂದೆ ಇಂಗ್ಲೀಷ್ ಭಾಷಾ ಶಿಕ್ಷಕಿಯಾಗಬೇಕೆಂದು ತಾನು ಕನಸು ಕಂಡಿದ್ದು ಭಗ್ನಗೂಂಡಿತ್ತು.ಇವಳ ತಾಯಿಯ ಮನವಲಿಸಲು ಮಾಡಿದ ಶಿಕ್ಷಕರ ಯತ್ನ ವಿಫಲವಾಗಿತ್ತು. ಅವನ್ನೆಲ್ಲ ಈಗ ನೆನೆದು ಅವಳ ಕಣ್ಣು ಮಂಜಾದವು. ಅವಳಿಗರಿವಿಲ್ಲದೇ ಕಂಬನಿಗಳು ಕೆನ್ನೆಮೇಲೆ ದಾರಿಮಾಡಿದವು.
     'ಏ.. ಗೌರೀ...ನಿನ್ ಎಮ್ಮಿ ಬದು ದಾಟಿ ಒಳಗ ಬಂದ ಬೆಳಿ ಮೇಯಾಕ್ಹತ್ತೈತಿ ಹೊಡಕೊ ಬಾ..' ಎಂದ ಶಾಂತವ್ವನ ಧ್ವನಿ ಕೇಳಿದ   ಗೌರಿ 'ಬಂದ್ನಿ ರೀ..' ಎಂದು ದೌಡಾಯಿಸಿದಳು.
..... ..... .... .... ......
  ✍..ತ್ರಿನೇತ್ರಜ.
  ಶಿವಕುಮಾರ.ಹಿರೇಮಠ.

Thursday, 2 November 2017

ಕವನ 'ಕಾಲಚಕ್ರದೊಳು'


ಕಾಲಚಕ್ರದೊಳು 

..... ..... ..... .....
ಕಾಲ ಕೆಟ್ಟ್ಹೋಯಿತೋ ತ್ರಿನೇತ್ರಜ
ಕಾಲಚಕ್ರದಲಿ ಅಧರ್ಮವತೋರಿ
ತಲೆಕೆಳಗಾಗಿ ಬಾಳುತಿರುವೆವೊ.

ಧನಸಂಗ್ರಹದ ದಾಹಿಗಳಾಗಿ,
ನ್ಯಾಯ ನೀತಿಯ ಮರೆತವರಾಗಿ,
ಮೇಲೇರುವವರ ಕಾಲೆಳವರಾಗಿ,
ಸ್ವಾರ್ಥ ಸಾಧನೆಗಳಿಗೆ ನಾವು
ತಲೆಕೆಳಗಾಗಿ ಬಾಳುತಿರುವೆವು.

ಹಾರ ತುರಾಯಿಗೆ ಸೋತವರಾಗಿ,
ಬಹುಪರಾಕಿನ ಭಟ್ಟಂಗಿಗಳಾಗಿ,
ನೇರ ನುಡಿಗಾರರ ದೂಷಿಪರಾಗಿ,
ಎಲ್ಲಬಲ್ಲೆವೆಂಬ ಅಹಂಕಾರದಲಿ
ತಲೆಕೆಳಗಾಗಿ ಬಾಳುತಿರುವೆವು.

ತಿರುಗುವ ಚಕ್ರ ನಿಲ್ಲದೋ ಮನುಜ
ಮೇಲ್ಬಂದಾಗ ಧರ್ಮ, ಮಾಡಿದ
ಕರ್ಮಫಲ ಅನುಭವಿಸುವೆವೊ.
.... .... .... .... ....
✍  ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

Wednesday, 1 November 2017

ಲೇಖನ 'ಮುರಿದು ಹೋದ ಪ್ರೀತಿ ಹೂತ್ತು ತರುವ ನೆನಪುಗಳು'

    ಮುರಿದು ಹೋದ ಪ್ರೀತಿ ಹೂತ್ತು 
             ತರುವ ನೆನಪುಗಳು .
...............     ............     ..........   ........

         

         ನಿಜ; ಪ್ರೀತಿ ಕುರುಡು.ಆದರೆ ಕಣ್ಣಿರದೆ ಇದ್ದರೇನಂತೆ ಹೃದಯವಿದೆಯಲ್ಲ ಇದಕ್ಕೆ!ಅಷ್ಟು ಸಾಕು.ಪುಟ್ಟ ಎದೆಗೂಡಿನ ತುಂಬಾ ನೂರಾರು ಬಣ್ಣದ ಕನಸುಗಳನ್ನು ತುಂಬಿಬಿಡುತ್ತದೆ. ಒಂದೊಮ್ಮೆ ಆ ಬಂಧನ ಮುರಿದರೂ, ಆ ನೆನಪುಗಳು ಮಾತ್ರ ಹಸಿಗೋಡೆಯಲ್ಲಿ ನೆಟ್ಟ ಹರಳಿನಂತೆ ಹಾಗೇ ಉಳಿಯುತ್ತವೆ. 
       ಈ ಪ್ರೀತಿಯೇ ಹೀಗೆ. ಬರುವಾಗ ಹೇಳದು,ಮಾತೂ ಕೇಳದು; ಹೋಗುವಾಗ ಮನಸ್ಸಿಗೆ ಘಾಸಿ ಮಾಡಿ ಹೋಗುವುದು. ಇಷ್ಟೇ ಆದರೆ ಅಡ್ಡಿಯಿಲ್ಲ. ಒಮ್ಮೊಮ್ಮೆ ದ್ವೇಷದ ಬೀಜ ಬಿತ್ತಿಬಿಡುವುದು.ಫಲ ಮಾತ್ರ ಕಾರ್ಕೂಟಕ ವಿಷ. ನೆಮ್ಮದಿಯನ್ನೇ ಕಸಿಯುವ ಹೃದಯದ ಕಸವಾಗುತ್ತದೆ.
        ಮುರಿದು ಹೋದ ಪ್ರೀತಿಯ ಪ್ರಭಾವ ಅಷ್ಟಿಷ್ಟಲ್ಲ. ಏಕಾಂಗಿಯಾದಾಗ, ಅಭದ್ರತೆ   ಕಾಡಿದಾಗ, ಅತೃಪವಾದಾಗ, ಪುನರ್ ಭೇಟಿಯಾದಾಗ,ಆ ಸ್ಥಳಕ್ಕೆ ಹೋದಾಗ, ಮತ್ತೆ ವಸಂತ ಬಂದಾಗ,ಮಾಗಿಯ ಚಳಿಯಾದಾಗ...ಕಸದ ಲಾರಿಯಂತೆ ಬೇಡವಾದ,ಹಳತಾದ,ಕೊಳೆತ ಹಳೆಯ ನೆನಪುಗಳ ರಾಶಿಯನ್ನು ಮನದ ಸ್ಮೃತಿಗೆ
ಹೊತ್ತು ತರುತ್ತದೆ. ಕೆಲವರಿಗೆ ಮುದ,ಮತ್ತೆ ಹಲವರಿಗೆ ನೋವು ತುಂಬಿಬಿಡುತ್ತದೆ.
      ಗುಂಡಿಗೆ ಗಟ್ಟಿಯಾಗಿದ್ದವರು ಸಹಿಸಿಕೊಳ್ಳುವರು.ಇಲ್ಲದಿದ್ದವರು ಇಹಲೋಕ ತೊರೆದ ಉದಾಹರಣೆಗಳು ಅದೆಷ್ಟೋ.ಬದುಕಿದ್ದರೆ ಪ್ರೀತಿಯ ಹತ್ತು ಹಲವು ಮಜಲುಗಳು ಬಾಳಿನುದ್ದಕೂ ಬಂದೇ ಬರುತ್ತವೆ. ಹೆಣ್ಣು-ಗಂಡಿನ ನಡುವಣ ಪ್ರೀತಿ ಅವುಗಳಲ್ಲಿನ ಒಂದು ಅಧ್ಯಾಯ ಮಾತ್ರ. ಆ ಪ್ರೀತಿ ಸಿಗದಿರೆ ಬದುಕೇಕೆ ಕೊನೆಯಾಗಬೇಕು? ಆ ಪ್ರೀತಿಗಿಂತ ಬದುಕು ಮುಖ್ಯ.
       ಅದೇನೇ ಇರಲಿ ಮುರಿದು ಹೋದ ಪ್ರೀತಿ ಹೊತ್ತು ತರುವ ನೆನಪುಗಳನ್ನು ಹಳೆಯ ಕನಸುಗಳೆಂದು ಭಾವಿಸುವುದೇ ಸೂಕ್ತ. ಬದುಕನ್ನು ಪ್ರೀತಿಸೋಣ.

✍....ತ್ರಿನೇತ್ರಜ್.

 ಶಿವಕುಮಾರ.ಹಿರೇಮಠ.
ಪ್ರೌ.ಶಾ.ಸಹಶಿಕ್ಷಕರು
ಗೌರಿಬಿದನೂರು
  9945915780
shivakumarh13@gmail.com

Tuesday, 31 October 2017

ಕವನ 'ಪ್ರಾಪ್ತೆಯ ಅಂತ್ಯೋಕ್ತಿ'


ಪ್ರಾಪ್ತೆಯ ಅಂತ್ಯೋಕ್ತಿ 


ಎದೆಯೂಳು ಬೆಂಕಿಯ ಕಡಲು;
ಉರಿಯೊಳು ಬೆಂದಿದೆ ಒಡಲು.
ಬಾಳುವ ಬಯಕೆ ಇನ್ನೆಲ್ಲಿ? 
ಹರೆಯದ ಕನಸು ಹರಿದಿರಲು;
ದುರುಳರು ದುಃಸ್ವಪ್ನ ರಾಚಿರಲು
ಕಾಣಲೇನುಳಿದಿಲ್ಲ ಜೀವನದಲ್ಲಿ. 

ವಾಂಛೆಗಳಿಗೆ ಮನ ಜಾರಿತ್ತು.
ನಂಬಿಕೆಯೇ ಮೋಸಗೈದಿತ್ತು.
ಮಾಸದ ಗಾಯ ಹೃದಯದಲ್ಲಿ.
ಇದೋ ವಿದಾಯ ಪರ್ವತವೇ,
ಧನ್ಯವಾದಗಳು ಪವನವೇ,
ಹರಸಿ; ಪ್ರಾಪ್ತೆಯ ಅಂತ್ಯದಲ್ಲಿ.

ಬಾಡಿ ಬರಡಾಗಿಹೆನು ನಾನು.
ಮಲಗಲು ಬರುತಿರುವೆನು
ಚಿರನಿದ್ರೆಗೆ ನಿನ್ನ ಭೂಮಡಿಲಲ್ಲಿ.
ಎದೆಗಪ್ಪಿಕೊಂಡು ಸಂತೈಸು;
ಮುಕುತಿಯನ್ನು ಕರುಣಿಸು.
ಹುದುಗಿಸೆನ್ನನು ನಿನ್ನೆದೆಯಲ್ಲಿ.
     .....     ......    .....
ತ್ರಿನೇತ್ರಜ.
ಶಿವಕುಮಾರ.ಹಿರೇಮಠ.


Friday, 27 October 2017

ಕವನ "ದಾರಿ ತೋರುಬಾ ಬೆಳಕೆ"



 ದಾರಿತೋರು ಬಾ  ಬೆಳಕೆ

ಕವಿಯುತಿಹ ಕತ್ತಲೆಯು
ಕಣ್ಣ ಕುರುಡಾಗಿಸಿಹುದು
ನನ್ನನ್ನು ಭಯಪಡಿಸುತಲಿ.
ದಣಿದ ರವಿಯದೋ
ಅತ್ತ ಮರೆಯಾಗುತಿಹನು
ವಿರಾಮವನು ಬಯಸುತಲಿ.

ಹರೆಯದ ಮರುಳ ಮಬ್ಬು
ಮೈದುಂಬಿರಲು, ರಾತ್ರಿಯ
ಆತಂಕ ನನ್ನಾವರಿಸುತ್ತಿದೆ.
ಸಂಸ್ಕಾರದ ನಂದಾದೀಪವೇ,
ಇರುಳೆಲ್ಲಾ ನೀನುರಿಯುತ
ಬೆಳಕೆನಗೆ ತೋರಬೇಕಿದೆ.

ನನ್ನ ಪುಟ್ಟ ಮನೆಯೊಳು,
ಮುಗುದತೆಯ ಹೊಸಕಲು
ನಿಶೆಯ ನಶೆ ನುಸುಳಬಹುದು.
ನಿನ್ನಯ ಸಾಂಗತ್ಯವಿರಲು
ನನಗದೆಷ್ಟೋ ನೆಮ್ಮದಿಯು,
ನಾ ಸುಖನಿದ್ರೆಗೈಯಬಹದು.

ನನ್ನ ಜೊತೆಯಾಗಿರು ಸಾಕು,
ನಿನ್ನನ್ನೇ ನಾ ನಂಬಿಹೆನು.
ನೀನಿರದೆ ನಾನು ಬದುಕೆ.
ಅಂಧಕಾರವನು ಅಳಿಸಿ,
ನೆಮ್ಮದಿಯನು ಕರುಣಿಸಿ,
ದಾರಿತೋರು ಬಾ ಬೆಳಕೆ.
  ..... ..... ..... ..... .....
✍  ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

Thursday, 26 October 2017

"ಕವನವಿಶೇಷ"

            . ಕಾವ್ಯ ವಿಶೇಷ. 

ಕವನವು ಕಂಡ ಕಂಡವರು
ಗೀಚಬಲ್ಲ ಸಾಲುಗಳಲ್ಲ.
ಕವಿಋಷಿಯು ಭಾವದಲಿ
ಕಂಡ ಅನುಭವ ಜ್ಞಾನಫಲ.

ಅವರಿವರು ಬಯಸಿದಾಗ

ಗೆರೆಗಳ ಎಳೆವ ಚಿತ್ರವಲ್ಲ. 
ಕವಿ ಪದಗಳಲ್ಲುಕ್ಕಿಸೋ
ಆ ಕ್ಷಣದ ಭಾವನೆಗಳ ಜಲ

ಕವಿ ಬರೆದು ಮುಂದಿಟ್ಟರೆ
ಸಾಕೇ? ಇಲ್ಲ. ಶುದ್ಧ ತಪ್ಪು. 
ವಿಮರ್ಶೆಯ ಮೂಸೆಯಲದ್ದಿ
ಓದುಗ ಹೇಳಬೇಕು ತಪ್ಪು ಓಪ್ಪು.
          ..... ...... ...... ......
✍  ತ್ರಿನೇತ್ರಜ.

Tuesday, 24 October 2017

ಕವನ "ಸಂಕಲ್ಪಿತ".

        ಸಂಕಲ್ಪಿತ

ಕಾಲೊಂದಿಲ್ಲದಿರೆ ಏನಂತೆ? ನಾನಿನ್ನ ಕಾಪಾಡುವೆ.
ಕಾಡುವ ಬಡತನವ ಎದುರಿಸಿ ಬಡಿದೋಡಿಸುವೆ.
ಕಾಲವಾದರು ಹೆತ್ತವರು ನಿನ್ನೆನಗೆ ಕರುಣಿಸಿ.
ಕಾಣಿಕೆ ಎಂದೇ ಭಾವಿಸಿ, ಬೆಳೆಸುವೆ ಬೆವರಿಳಿಸಿ.

ಅಂಗವೊಂದಿಲ್ಲದಿರೆ ಏನಂತೆ? ಆತ್ಮವಿಶ್ವಾಸವಿದೆ.
ಅಂಜಿಕೆಯ ಅಂಜಿಸುವ ಬಲವಾದ ಛಲವಿದೆ.
ಅಂಬೆಯು ತುಂಬಿರುವ ಅಕ್ಕರತೆಯ ಒರತೆಯಿದೆ.
ಅಂಕುರಿಸೋ ನಿನ್ನಾಸೆಗಳ ನನಸಾಗಿಸೊ ಆಸೆ ಇದೆ. 

ಕಾಲಿಲ್ಲದಿರೆ ಏನಂತೆ? ಇದ್ದವರ ನಾ ಮೀರಿಸುವೆ.

ಕಾಲ ಉರುಳಿದಂತೆ ನೀನು ಎನ್ನ ಬಲವಾಗುವೆ.
ಅನಂತಕಾಲ ನಿನ್ನ ಜೊತೆ ನೆರಳಾಗಿ ನಾ ಬಾಳುವೆ.
ಅಂತೆಯೇ ಹಣ್ಣುಮಾರಿ ಹಣ ಸಂಪಾದಿಸುತಿರುವೆ.
              .......   ........    ........   ........
    ✍  ತ್ರಿನೇತ್ರಜ.

Sunday, 22 October 2017

Poem " Frustration".

                     Frustration     

Cut the trees; burn the forest.
Don't leave them for the rest.     
Dig the ground ; blast the hills. 
It's granted for vicious wills.

Run the mills; pollute the sky.
Next generation? Let them cry.  
Chemicalize all fruit & grain.
But you can't pure them again.
  
Drain the water; spoil the river;
Keep nothing good for future.
Sail the seas; kill my marine; 
Shout aloud,"Earth is mine".

Don't take me just as a treasure.
And only for your lustful desire
Not even just as rocks & mud.
All lives are my heart & blood.

No any feeling, except patience.
Waiting for your big ignorance.
Many Giants rumbled & extinct.
Beware; you're not so distinct.
           .....     .....     ......    ......
                ✍ Thrinethraja.


Shivakumara.Hiremath.

Saturday, 21 October 2017

Poem ''To Centipede''

   
      

        To Centipede

I want now to count your feet,
But how?,you are too speed.
I'm not dangerous or a threat,
Are you shy or really worried? 
I wanted to catch you for play
when I was kid- just three.
Grandpa stopped and told me,
I shouldn't ever touch thee. 
Asked the reason to my mom,
And learnt;'you're venomous'.
I told the same to my chum.
He showed me your fangs. 
Now I dare to count your legs.
Stand before me centipede.
Don't go so quick you moron;
Where ever you hide,I'll find.
      ✍ Thrinethraja.
           (Shivakumara Hiremath)

Friday, 20 October 2017

ಹನಿಗವನಗಳು.

               ಹನಿಗವನಗಳು

 *ಹನಿಯಿಂದ ಹಾನಿ*      
ಹೊಸದರಲ್ಲಿ ಈಕೆ ಎಂದರೆ    
ನನಗೋ ಸಿಹಿಜೇನ ಹನಿ.
ವರುಷ ಉರುಳಿದಂತೆ
ಬದಲಾದಳು ನನ್ನ ಹನಿ.
ಬೇಡಿಕೆಗಳಿಟ್ಟು, ಒಪ್ಪದಿರೆ
ಸುರಿಸುವಳು ಕಣ್ಣೀರ ಹನಿ
ಕರಗಿ ನಾನು ಒಪ್ಪಲು
ಜೇಬಿಗೆ ಭಾರೀ ಹಾನಿ.
✍🏼ತ್ರಿನೇತ್ರಜ.
----     ----     ----    ----    ----     ----
          ನದಿ
ಮೇಘಗಳಾವರಿಸಿದ
ಮೇರುಪರ್ವತದಲ್ಲುದಯಿಸಿ,
ಇಳೆಯ ಇಳಿಜಾರಲಿ ಇಳಿದು,
ಸಾಗರ ಸಖನ ಸೇರಲು,
ಹಾತೋರೆದು ಹರಿವವಳು.
       -------     ------      ------
          ವೈಷ್ಣವಿ
   ಆಂಗ್ಲ ದಲಿ ತನ್ನ ಹೆಸರು
   ಬರೆಯೆಂದಳು ವೈಷ್ಣವಿ.
   ಅಮೇರಿಕಾ ಗಂಡ ಬರೆದು
   ಕೊಟ್ಟ -whysnowwe.
----    ----     ----   ---   ---   ----
       ✍ತ್ರಿನೇತ್ರಜ
                 (ಶಿವಕುಮಾರ.ಹಿರೇಮಠ)

Wednesday, 18 October 2017

ಕನ್ನಡ ಕವನ 'ದೀಪಾವಳಿ ಆಶಯ'

              ದೀಪಾವಳಿ  ಆಶಯ                         


ಹಣತೆಯ ಹಚ್ಚುತ ತಮಸ್ಸನು ತೊರೆವಾ 
ಬನ್ನಿ ಭಾರತದ ಬಂಧುಗಳೆ.
ಸಮತೆ ಸಾರುತ ಸಿಹಿಯನು ಹಂಚುವಾ;
ಸುರಿಸಿ ಪ್ರೀತಿಯ ಹೂಮಳೆ.

ಮತ್ತೇಕೆ ತಡವಿನ್ನು? ತನ್ನಿರಿ ಹಣತೆಗಳನು,
ಮನಸಿಚ್ಚೆ ಬೆಳಗಿ ಮನೆ-ಮನಗಳನು.
ಮನವಿಟ್ಟು ಕೋರುವೆ ನರಕ ಚತುರ್ದಶಿಗೆ, 
ಮತ್ತೆ ದೀಪಾವಳಿಗೆ ಶುಭಾಶಯಗಳನು.

ಸದ್ದನು ಮಾಡುತಾ ಸುಡದಿರಿ ಮದ್ದನು
ಸಾಕೆಮಗೆ ದೀಪದ ಹೊಂಬೆಳಕು.
ಸಡಗರದ ನೆಪದಿ ಪರಿಸರವ ಕೆಡಿಸದಿರಿ.
ಸದ್ದುಗದ್ದಲ ನಾವು ತಡೆಯಬೇಕು.

ತ್ರಿನೇತ್ರಜ.
............ಶಿವಕುಮಾರ.ಹಿರೇಮಠ.
               ಸರ್ಕಾರಿ ಪ್ರೌಢಶಾಲಾ ಶಿಕ್ಷಕರು.